ಬಸವನಬಾಗೇವಾಡಿ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎಲ್ಲ ವ್ಯಸನಗಳನ್ನು ತ್ಯಾಗ ಮಾಡುತ್ತೇನೆ ಎಂದು ಸಂಕಲ್ಪ ಮಾಡಿಕೊಂಡು ಪರಿಶುದ್ಧ ಬದುಕು ಸಾಗಿಸಬೇಕೆಂದು ಯರನಾಳ ವಿರಕ್ತಮಠದ ಗುರು ಸಂಗನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಯರನಾಳ ಗ್ರಾಮದ ವಿರಕ್ತಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಜಯಪುರದ ಅಖಿಲ
ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ಯರನಾಳದ ಜಗದ್ಗುರು ಪಂಪಾಪತಿ ಮಹಾ ಶಿವಯೋಗೀಶ್ವರ ವಿದ್ಯಾವರ್ಧಕ ಸಂಘ ಸೇರಿದಂತೆ ವಿವಿಧ ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ನಿಮ್ಮನ್ನು ಗುರುತಿಸುವಂತಹ ಮಹತ್ತರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಜೀವನವನ್ನು ಸನ್ಮಾರ್ಗದಲ್ಲಿ ಸಾಗಿಸಬೇಕೆಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲಬುರಗಿ ಪ್ರಾದೇಶಿಕ ಯೋಜನಾ ಅಧಿಕಾರಿ ರಾಜೇಶ ಮಾತನಾಡಿ, ಕುಡಿತದಿಂದ ಎಷ್ಟೋ ಮನೆಗಳು ಹಾಳಾಗಿವೆ. ಕುಡಿತದ ಚಟ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಕುಡಿತದ ನಶೆಯಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ. ಅಲ್ಲದೇ ಅಂತಹ ವ್ಯಕ್ತಿ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಲಾರದು. ವ್ಯಸನಮುಕ್ತರಾಗಿ ಸಮಾಜದಲ್ಲಿ ಸುಖ ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ಜೀವನವನ್ನು ಅರ್ಥ ಮಾಡಿಕೊಂಡಾಗ ಸದೃಢವಾಗಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಈ ಶಿಬಿರದಲ್ಲಿ ಏಳು ದಿನ ತರಬೇತಿ ಪಡೆದವರು ದೃಢ ಸಂಕಲ್ಪ ಮಾಡಿದರೆ ದುಶ್ಚಟಗಳು ತಮ್ಮ ಸುತ್ತ ಸುಳಿಯಲಾರವು ಎಂದು ಹೇಳಿದರು.
ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸೋಮನಗೌಡ ಪಾಟೀಲ, ವಕೀಲ ಮಹಮ್ಮದಗೌಸ ಹವಾಲ್ದಾರ, ಮದ್ಯವರ್ಜನಾ ಶಿಬಿರದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಬಸವರಾಜ ಬ್ಯಾಕೋಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಂತೋಷಕುಮಾರ ರೈ,ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಕೋಲಕಾರ, ಸಾವಿತ್ರಿ ಕಲ್ಯಾಣಶೆಟ್ಟಿ, ಕಾಶೀನಾಥ ಅವಟಿ, ಸಿದ್ದು ಸಜ್ಜನ, ರಾಮು ಒಂಟಗೂಡಿ, ಡಾ.ಅಮರೇಶ ಮಿಣಜಗಿ, ಪ್ರಕಾಶ ಕೋಲಕಾರ, ವಲಯ ಮೇಲ್ವಿಚಾರಕಿ ಅಂಬಿಕಾ ಪಾಟೀಲ, ಬಸವರಾಜ ಚಿಮ್ಮಲಗಿ, ಬಸವರಾಜ ಮರನೂರ, ಶಿಬಿರಾಧಿಕಾರಿ ನಂದಕುಮಾರ ಇದ್ದರು. ಭುವನೇಶ್ವರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳಿಗೆ ಅವರ ಪತ್ನಿಯರು ಪಾದಪೂಜೆ ಮಾಡಿ ಆರತಿ ಬೆಳಗಿದ್ದು ವಿಶೇಷ.
Subscribe to Updates
Get the latest creative news from FooBar about art, design and business.
Related Posts
Add A Comment

