ಯಡ್ರಾಮಿ ವಿರಕ್ತಮಠದಲ್ಲಿ ಪುಣ್ಯಾರಾಧನೆ | ಉಚಿತ ಆರೋಗ್ಯ ತಪಾಸಣೆ | ರಕ್ತದಾನ ಶಿಬಿರ
ಯಡ್ರಾಮಿ: ಜೀವನದಲ್ಲಿನ ಅನೇಕ ಬಗೆಯ ತೊಂದರೆಗಳನ್ನು ಹೊತ್ತುಕೊಂಡು ಬಂದ ಭಕ್ತರ ಪಾಲಿಗೆ ಲಿಂ. ಸಿದ್ದರಾಮ ಮಹಾಸ್ವಾಮಿಗಳು ಕಷ್ಟಗಳ ನೀಗಿಸುವ ವೈದ್ಯರಂತಿದ್ದರು ಎಂದು ಸೊನ್ನದ ಡಾ.ಶಿವಾನಂದ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಶ್ರೀ ಮುರುಘೇಂದ್ರ ಶಿವಯೋಗಿ ವಿರಕ್ತ ಮಠದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.ಸಿದ್ಧರಾಮ ಮಹಾಸ್ವಾಮಿಗಳವರ ತೃತೀಯ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಪೂಜ್ಯ ಸಿದ್ಧರಾಮ ಮಹಾಸ್ವಾಮಿಗಳು ಸರಳ ಮತ್ತು ಸೌಮ್ಯ ಸ್ವಭಾವದವರು. ಹಾಗೆಯೇ ತ್ರಿಕಾಲ ಲಿಂಗ ಪೂಜಾ ನಿಷ್ಠರು ಆಗಿದ್ದರು. ಯಾವ ಗದ್ದಲ ಗೋಜಲುಗಳಿಲ್ಲದೇ ತಮ್ಮ ಬಳಿ ಭಕ್ತಿಯಿಂದ ಬರುವ ಭಕ್ತರ ತೊಂದರೆಗಳನ್ನು ಸಮಾಧಾನದಿಂದಲೇ ಆಲಿಸಿ ಸೂಕ್ತ ಪರಿಹಾರಗಳನ್ನು ನೀಡುವುದರ ಮೂಲಕ ಭಕ್ತರ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆ ಸ್ಮರಣೀಯವಾಗಿದೆ ಎಂದರು.
ಅವರು ಹಾಕಿಕೊಟ್ಟ ಸುಮಾರ್ಗದಲ್ಲಿಯೇ ಸದ್ಯದ ಪೀಠಾಧಿಪತಿಗಳಾದ ಸಿದ್ಧಲಿಂಗ ಸ್ವಾಮಿಗಳು ಸಮಾಜೋ ಧಾರ್ಮಿಕ ಸೇವೆ ಮುಂದುವರಿಸಿಕೊಂಡು ಹೋಗುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಪುಣ್ಯಸ್ಮರಣೆಯ ನಿಮಿತ್ತವಾಗಿ ಶ್ರೀ ಮುರುಘೇಂದ್ರ ಶಿವಯೋಗಿ ಫೌಂಡೇಶನ್ ವತಿಯಿಂದ ಜೇವರ್ಗಿ, ಯಡ್ರಾಮಿ ತಾಲೂಕು ಆರೋಗ್ಯ ಕೇಂದ್ರ, ತಾಲೂಕು ಖಾಸಗಿ ವೈದ್ಯರ ಸಂಘ, ತಾಲೂಕು ಮೆಡಿಕಲ್ ಅಸೋಸಿಯೇಶನ್, ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ತಾಲೂಕು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ನೇತ್ರ ತಪಾಸಣಾ, ಪೊರೆ ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಸುತ್ತಲಿನ ವಿವಿಧ ಗ್ರಾಮಗಳಿಂದ ಶ್ರೀ ಮಠದ ಸಾವಿರಾರು ಭಕ್ತರು ಶಿಬಿರದ ಸದುಪಯೋಗ ಪಡೆದುಕೊಂಡರು. ಇದಕ್ಕೂ ಮುನ್ನ ಬೆಳಿಗ್ಗೆ ಲಿಂ. ಸಿದ್ದರಾಮ ಮಹಾಸ್ವಾಮೀಜಿಗಳ ಕತೃ ಗದ್ದುಗೆಗೆ ಮಹಾರುದ್ರಾಭೀಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ವಡ್ಡೊಡಗಿಯ ಪೂಜ್ಯರು, ಸುರಪುರದ ಕಡ್ಲೆಪ್ಪನವರ ಮಠದ ಪೂಜ್ಯರು ಸಾನಿಧ್ಯ ವಹಿಸಿದ್ದರು.
ಮಾಜಿ ಜಿಪಂ ಸದಸ್ಯ ಬಸವರಾಜಗೌಡ ಪಾಟೀಲ ನರಿಬೋಳ, ದಂಡಪ್ಪ ಸಾಹು ಕುಳಗೇರಿ, ರಾಜಶೇಖರ ಸಾಹು ಸೀರಿ, ರಮೇಶ್ ವಕೀಲ ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿ ಡಾ.ಸಿದ್ಧು ಪಾಟೀಲ, ಡಾ. ವೈ.ಎ.ಛಾಯಾಗೋಳ, ಜೇವರ್ಗಿ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿದ್ಧು ಅಂಗಡಿ, ಪಟ್ಟಣದ ಮುಖಂಡರು, ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.

” ಲಿಂ. ಸಿದ್ದರಾಮ ಮಹಾಸ್ವಾಮೀಜಿಗಳ ಜೀವನಾದರ್ಶ ಸಮಾಜಮುಖಿ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡಿದೆ. ಅವರ ತೃತೀಯ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 80 ಕ್ಕೂ ಹೆಚ್ಚು ಜನ ಸ್ವ ಆಸಕ್ತಿಯಿಂದ ರಕ್ತ ದಾನ ಮಾಡಿದ್ದು ಯುವಕರ ಸಾಮಾಜಿಕ ಕಾಳಜಿ ಎದ್ದು ಕಾಣುತ್ತದೆ. ಶ್ರೀಮಠವು ಭಕ್ತರ ಮಠವಾಗಿದ್ದು, ಸದಾ ಭಕ್ತರ ಪಾಲಿಗೆ ನೆಮ್ಮದಿಯ ತಾಣದಂತಿರುತ್ತದೆ. ಕಾರ್ಯಕ್ರಮ ಯಶಸ್ವಿಗೊಳಿಸಿದ ಶ್ರೀಮಠದ ಭಕ್ತವೃಂದಕ್ಕೆ ಶುಭವಾಗಲಿ.
– ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ
ವಿರಕ್ತಮಠ, ಯಡ್ರಾಮಿ.

