ತನಿಖಾ ತಂಡ ರಚಿಸಿ, ಮರು ಸಮೀಕ್ಷೆ ಮಾಡಿ ನಷ್ಟಗೊಂಡ ಎಲ್ಲರಿಗೂ ಪರಿಹಾರ ನೀಡುವಂತೆ ರೈತಸಂಘ ಆಗ್ರಹ

ವಿಜಯಪುರ: ಫಸಲ್ ಬಿಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಸರಕಾರದ ವತಿಯಿಂದ ತನಿಖಾ ತಂಡ ರಚಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಿ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಹಾಕುವುದರ ಮೂಲಕ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಸಂಖ್ಯಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡಬೇಕೆಂದು ರೈತರು ಪಟ್ಟು ಹಿಡಿದರು.
ಬೆಳಿಗ್ಗೆಯಿಂದಲೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕಡೆಗೆ ಜಮಾಯಿಸಿದ ರೈತರು ಮಧ್ಯಾಹ್ನದ ಹೊತ್ತಿಗೆ ನೂರಾರು ಜನ ಜಮಾಯಿಸಿ ಫಸಲ್ ಬಿಮಾ ಯೋಜನೆಯಲ್ಲಿ ಒಂದು ದೊಡ್ಡಮಟ್ಟದ ಅನ್ಯಾಯವಾಗಿದೆ, ರಾಜ್ಯ ಸರಕಾರವೇ ಬರಗಾಲ ಎಂದು ಘೋ಼ಷಣೆ ಮಾಡಿ ೪೩೧ ಕೋಟಿ ಪರಿಹಾರ ನೀಡಿದ್ದರು, ಫಸಲ್ ಭೀಮಾ ಯೋಜನೆಯಡಿ ಕೇವಲ ೧೩೧ ಕೋಟಿ ನೀಡಿದ್ದಾರೆ, ಇನ್ನು ಸಾವಿರಾರು ರೈತರಿಗೆ ಪರಿಹಾರ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡುತ್ತಾ, ಫಸಲ್ ಭೀಮಾ ಯೋಜನೆಯು ಅವೈಜ್ಞಾನಿಕವಾದದ್ದು, ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಪದ್ದತಿಯಲ್ಲಿ ರೈತರಿಗೆ ಅನ್ಯಾಯ ಮಾಡುವ ಪದ್ದತಿಯಾಗಿ ಇದು ಬದಲಾವಣೆಯಾಗಬೇಕು, ಪಂಚಾಯಿತಿ ವ್ಯಾಪ್ತಿಯಲ್ಲಿ ಯರ್ಯಾರು ನಷ್ಟಗೊಂಡಿರುತ್ತಾರೆ ಅವರೆಲ್ಲಗೂ ನ್ಯಾಯ ಸಿಗಬೇಕು, ಇಲ್ಲವಾದಲ್ಲಿ ಈ ಫಸಲ್ ಭೀಮಾ ಯೋಜನೆ ನಮ್ಮ ರಾಜ್ಯಕ್ಕೆ ಬೇಕಿಲ್ಲ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಮೆ ಕಂಪನಿಯ ಕಚೇರಿ ಆರಂಭಿಸಬೇಕು, ಇಲ್ಲ ಒಳ್ಳೆಯ ವಿಮೆ ಕಂಪನಿಗೆ ಅನುಮತಿ ನೀಡಿ ರೈತರ ಪರವಾಗಿ ನಿಲ್ಲಬೇಕು ಎಂದರು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡುತ್ತಾ, ಫಸಲ್ ಭೀಮೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ಕಟಾವೂ ಹಾಗೂ ಬೆಳೆ ಸಮೀಕ್ಷೆ ಮಾಡಿರುವ ವಿವಿಧ ಇಲಾಖೆಯ ಅಧಿಕಾರಿಗಳ ಮಾಹಿತಿ ಹಾಗೂ ರ್ಯಾಂಡಮ್ ಆಗಿ ಇಲಾಖೆಯಿಂದ ಆಗಮಿಸಿದ ಜಮೀನುಗಳ ಸರ್ವೇ ನಂಬರಗಳ ಮಾಹಿತಿ ಹಾಗೂ ಅದು ಯಾವಾಗ ಬಂದಿದೆ ಎಂಬುದರ ಮಾಹಿತಿ ನೀಡಬೇಕು ಹಾಗೂ ಸರಕಾರದಿಂದಲೇ ಒಂದು ತನಿಖಾ ತಂಡ ನೇಮಿಸಿ ಮರು ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಶಿ ಆನಂದ ಅವರು ಮನವಿ ಸ್ವೀಕರಿಸಿ ಮಾತನಾಡುತ್ತಾ, ನೀವು ಹೇಳುತ್ತಿರುವ ವಿಷಯಕ್ಕೆ ಸಂಭಂದಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ವಿಮೆಯಲ್ಲಿ ಆಗುತ್ತಿರುವ ಅವೈಜ್ಞಾನಿಕ ಹಾಗೂ ಪಾರದರ್ಶಕತೆ ಕೊರತೆ ಇದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಸರಳಿಕರಣಗೊಳಿಸಲು ನಿರ್ಣಯಿಸಲಾಗಿದೆ, ಇನ್ನೊಮ್ಮೆ ಎಲ್ಲಾ ಅಧಿಕಾರಿಗಳು ಸೇರಿಕೊಂಡು ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ಸಮಯಾವಕಾಶ ಬೇಕು, ನಾವೆಲ್ಲರೂ ರೈತರ ಪರವಾಗಿಯೇ ಕೆಲಸ ಮಾಡುತ್ತೇವೆ ಎಂದರು.
ಇದೇ ರೀತಿ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಹಾಗೂ ಕಂದಾಯ ಇಲಾಖೆಯ ಸಹಾಯಕ ಆಯುಕ್ತ ಬಸವರಾಜ ಕಲಶೆಟ್ಟಿ ಮಾತನಾಡಿ, ಇದು ವಿಮೆ ಕಂಪನಿಯ ಪಾಲಿಸಿಯ ಮೇರೆಗೆ ಪರಿಹಾರ ಬಂದಿರುತ್ತದೆ, ಕಳೆದ ೭ ವರ್ಷಗಳ ಸರಾಸರಿಯ ಮೇರೆಗೆ ಪರಿಹಾರದ ಪ್ರಮಾಣ ನಿಧ್ರಿಸಲಾಗುತ್ತದೆ, ಬರಗಾಲದಿಂದ ರೈತರಿಗಾಗಿರುವ ನಷ್ಟದಿಂದ ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿ ರೈತರಿದ್ದಾರೆ ಎಂದರು.
ಈ ವೇಳೆ ರೈತ ಮುಖಂಡರಾದ ದೇವಿಂದ್ರಪ್ಪಗೌಡ ಮಾಲಗತ್ತಿ, ಶಿವರಾಜ ಕಲಕೇರಿ, ದೇವರ ಹಿಪ್ಪರಗಿ ಅಧ್ಯಕ್ಷರಾದ ಈರಪ್ಪ ಕುಳೆಕುಮಟಗಿ, ಸುರೇಶ ಗರಸಂಗಿ, ಚಂದ್ರಕಾಂತ ಪ್ಯಾಠಿ, ಅನಿಮಿಶ ಜಮಖಂಡಿ, ಸಂಪತ್ತ ಜಮಾದಾರ, ಅಶೋಕ ಅಗಸಿಮನಿ, ಮಲ್ಲಿಕಾರ್ಜುನ ಬಿರಾದಾರ, ತಿಕೋಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಾನಂದಯ್ಯ ಹಿರೇಮಠ, ವಿಜಯಪುರ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ವಿಜಯಪುರ ತಾಲೂಕ ಅಧ್ಯಕ್ಷ ಮಹಾದೇವಪ್ಪ ತೇಲಿ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ನಿಡಗುಂದಿ ಅಧ್ಯಕ್ಷ ಕೆ.ಎಂ ಗುಡ್ನಾಳ ತಾಳಿಕೋಟಿ ಮಹಿಳಾ ಅಧ್ಯಕ್ಷೆ ಸುಜಾತಾ ಅವಟಿ, ಬಬಲೇಶ್ವರ ಅಧ್ಯಕ್ಷ ಮಕಬುಲ ಕೀಜಿ, ಶಾನೂರ ನಂದರಗಿ, ಅಲ್ಲಾಭಕ್ಷ ಲಷ್ಕರಿ, ಇಬ್ರಾಹಿಂ ಕಮತಗಿ, ಸಂಗಪ್ಪ ಟಕ್ಕೆ, ಮಹಿಬೂಬ ಬಾಷಾ ಮನಗೂಳಿ, ನಜೀರ ನಂದರಗಿ, ಸತ್ಯಪ್ಪ ಕುಲ್ಲೋಳ್ಳಿ, ವಿರೇಶ ಗೊಬ್ಬುರ, ಎಸ್.ಡಿ. ಹೆಬ್ಬಾಳ, ರಾಜುಗೌಡ ಬಿರಾದಾರ, ಸಂಗಮೆಶ ಹುಣಸಗಿ, ಶಾಂತಯ್ಯ ಗಣಾಚಾರಿ, ಅಶೋಕ ತಳವಾರ, ಸೇರಿದಂತೆ ಅನೇಕರು ಇದ್ದರು.
ಫಸಲ್ ವಿಮೆ ಹಣ ಬಾರದೇ ಚಿಂತೆಗಿಡಾದ ರೈತರು ಅಧಿಕಾರಿಗಳಿಗೆ ಕೇಳಿದರೆ ಮುಂಗಡ ವಿಮೆ ಹಣ ಶೇ ೨೫% ನೀಡಿದ್ದೇವೆ, ಉಳಿದ ಹಣ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಅಧಿಕಾರಿಗಳಿಗೆ ಕೇಳಿದರೆ ಒಬ್ಬರ ಮೇಲೆ ಒಬ್ಬರು ಹಾಕುತ್ತಾ ರೈತರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದಾರೆ, ಈ ವರ್ಷ ರಾಜ್ಯ ಸರಕಾರವೇ ಜಿಲ್ಲೆಯ ಎಲ್ಲಾ ೧೩ ತಾಲೂಕುಗಳು ಸಂಪೂರ್ಣ ಬರ ಎಂದು ಘೋಷಣೆ ಮಾಡಿರುತ್ತದೆ, ಆದರೆ ಫಸಲ ಭೀಮಾ ಯೋಜನೆಯಲ್ಲಿ ಅಧಿಕಾರಿಗಳು ವಿಮೆ ಕಂಪನಿಯವರ ಜೊತೆ ಸೇರಿ ರೈತರಿಗೆ ದೊಡ್ಡ ಮಟ್ಟದ ಮೊಸ ಮಾಡಿದ್ದಾರೆ, ಈ ಕುರಿತು ಸಂಪೂರ್ಣ ತನಿಖೆ ಮಾಡಬೇಕು, ನಷ್ಟಗೊಂಡ ಎಲ್ಲರಿಗೂ ಪರಿಹಾರ ನೀಡಬೇಕು.”
– ಸಂಗಮೇಶ ಸಗರ
ವಿಜಯಪುರ ಜಿಲ್ಲಾಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ

