ಗುರು-ಶಿಷ್ಯರ ಪವಿತ್ರ ಪರಂಪರೆಗೆ ಸಾಕ್ಷಿಯಾದ ಮಧುರ ಕ್ಷಣ | ಶಿಷ್ಯರಿಂದ ನಿವೃತ್ತ ಗುರುದ್ವಯರಿಗೆ ಸನ್ಮಾನ
ಚಿಕ್ಕಪಡಸಲಗಿ: ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಅಮೋಘ ಸೇವೆ ಸಲ್ಲಿಸಿ ಈಚೆಗೆ ಸೇವಾ ನಿವೃತ್ತರಾದ ಗುರುದ್ವಯರಿಗೆ ಹಳೆ ಶಿಷ್ಯ ಬಳಗ ಹೃದಯಸ್ಪರ್ಶಿ ಸನ್ಮಾನದೊಂದಿಗೆ ಗೌರವಿಸಿ ಧನ್ಯತಾಭಾವ ಮೆರೆದರು.
ಆಧುನಿಕತೆಯ ಸೊಗಡಿನಲ್ಲಿಂದು ದಿನೇದಿನೇ ಮರೆಯಾಗುತ್ತಿರುವ “ಗುರು-ಶಿಷ್ಯ” ಪವಿತ್ರ ಪರಂಪರೆ ಭಾವಕ್ಕೆ ಇಲ್ಲಿ ಹಳೆ ಶಿಷ್ಯ ಬಳಗ ಜೀವಕಳೆ ತಂದರು.
ಸುಮಾರು ಮೂರು,ನಾಲ್ಕು ದಶಕಗಳ ಕಾಲ ವಿದ್ಯಾರ್ಥಿಗಳ ಸಮೂಹಕ್ಕೆ ಕಲಿಕಾ ಜ್ಞಾನ ಧಾರೆ ಎರೆದು ಈಚೆಗೆ ವಯೋಸೇವಾ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಹಾಗೂ ಕನ್ನಡ ಪಂಡಿತ ಆರ್.ವಿ.ಕುಲಕರ್ಣಿ ಅವರಿಗೆ 1989-90 ನೇ ಸಾಲಿನ ಹಳೆ ಬ್ಯಾಚ್ ನಲ್ಲಿನ ಪ್ರಮುಖ ವಿದ್ಯಾರ್ಥಿಗಳು ಸೇರಿ ಕಲಿಸಿದ ಗುರುಗಳಿಗೆ ಕೃತಜ್ಞತೆ ಪೂರ್ವಕವಾಗಿ ಜಮಖಂಡಿ ನಗರದಲ್ಲಿ ಸನ್ಮಾನಿಸಿ ಗುರು ಪ್ರೇಮಭಾವ ತೋರಿದರು.
ಅಂದಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸವಿಕ್ಷಣಗಳ ರಸಧಾರೆಯಲ್ಲಿ ತೇಲಿದರು. ಉತ್ತಮ ಕಲಿಕಾಂಶಗಳ ಮೂಲಕ ನಮ್ಮಯ ಬದುಕಿನಲ್ಲಿ ಬೆಳಕು ಚೆಲ್ಲಿದ್ದಾರೆ. ಬದುಕು ರೂಪುಗೊಳ್ಳಲು ಪೂರಕವಾಗಿದ್ದಾರೆ. ಕ್ರಿಯಾಶೀಲ ಗುರುಗಳ ಸೇವೆ ಅನುಪಮವಾಗಿದೆ. ಸಾಮಾಜಿಕ ಹೊಣೆಗಾರಿಕೆ, ಚಿಂತನೆ, ಆಲೋಚನೆಗಳ ಮೂಲಕ ಜ್ಞಾನದ ಬೆಳಕು ಹೊಳೆಯುವಂತೆ ಮಾಡಿದ್ದಾರೆ. ಗುರುವೆಂಬ ಪದಗಳಿಗೆ ಮೌಲ್ಯಯುತ ಅರ್ಥ ಕಲ್ಪಿಸಿ ಪವಿತ್ರ ಕಾಯಕ ಗೈದಿದ್ದಾರೆ. ಶಾಲಾ ಮಕ್ಕಳಿಗೆ ಜೀವನ ನೀತಿ,ಆದರ್ಶ ರೀತಿ ಹೇಗಿರಬೇಕೆಂಬ ನೈತಿಕತೆಯ ಭಾವ ಬಿತ್ತಿ ಆದರ್ಶತನದ ಸನ್ಮಾರ್ಗ ಗುಣಗಳನ್ನು ಹೇಳಿಕೊಟ್ಟಿರುವ ಗುರುಗಳ ವಿಶ್ರಾಂತ ಜೀವನ ಆರೋಗ್ಯಕರವಾಗಿ ಸುಖಮಯವಾಗಿ ಸಾಗಲಿ ಎಂದು ಹಳೆ ಶಿಷ್ಯರು ತಮ್ಮ ಮೆಚ್ಚಿನ ಗುರುಗಳಿಗೆ ಶುಭ ಹಾರೈಸಿ ಪ್ರಸನ್ನತೆಯಿಂದ ಖುಷಿ ಹಂಚಿಕೊಂಡರು.
ಶಿಷ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಬಸವರಾಜ ಅನಂತಪುರ, ಹಳೆ ಶಿಷ್ಯರು ನೀಡಿದ ಪ್ರೀತಿ, ಅಭಿಮಾನದ ಸನ್ಮಾನ, ಗೌರವ ಮರೆಯಲಾಗದು. ನಿಮ್ಮಂಥ ಶಿಷ್ಯರು ಹೊಂದಿರುವ ಸದ್ಗುಣಗಳು ಇಂದಿನ ನವಪೀಳಿಗೆಗೆ ಮಾದರಿ. ಒಳ್ಳೆಯ ಗುಣಗಳನ್ನು ಹೊಂದಿರುವ ಜೀವಗಳಿಗೆ ಹಳೆಯ ನೆನಪುಗಳು ಕಾಡುವುದು ಸಹಜ. ಅದರಲ್ಲೂ ಬಾಲ್ಯದಲ್ಲಿನ ತುಂಟಾಟ, ಕಲಿತ ಅಕ್ಷರ ಜ್ಞಾನ, ಕಲಿಸಿದ ಗುರು,ಕಲಿತ ಶಾಲೆ,ಒಡನಾಡಿ ಸ್ನೇಹಿತರು ಹೀಗೆ ಹಳೆಯ ಸ್ಮರಣೀಯ ನೋಟಗಳು ಅಚ್ಚಳಿಯಾಗಿ ಉಳಿಸಿಕೊಂಡು ನೆನಪಿಸಿಕೊಳ್ಳುವದರಲ್ಲೇ ಒಂದು ರೀತಿಯ ಸಂತಸ, ನೆಮ್ಮದಿ, ರೋಮಾಂಚನ. ಮಾಸಿದ ಮೊಗಗಳಿಗೆ ನವಚೇತನ ನೀಡುತ್ತದೆ ಎಂದರು.
ಆರ್.ವ್ಹಿ. ಕುಲಕರ್ಣಿ ಮಾತನಾಡಿ, ಬಹುತೇಕ ಹಳೆಯ ವಿದ್ಯಾರ್ಥಿಗಳಲ್ಲಿ ವಿನಯತೆ, ಸದ್ಭಾವ ಗುಣಗಳು ಇನ್ನೂ ಜೀವಂತವಾಗಿವೆ. ಇಂಥ ಪ್ರಜ್ಞಾವಂತ,ವಿದ್ಯಾವಂತರೇ ಉತ್ತಮ ಸಮಾಜಕ್ಕೆ ಆಶಾಕಿರಣ. ಸಕಾರಾತ್ಮಕ, ಆದರ್ಶ ಗುಣಗಳ ವಿದ್ಯಾವಂತ ಯುವ ಸಮೂಹ ಇಂದಿನ ನಾಗರಿಕ ಸಮುದಾಯದ ಆಸ್ತಿ ಎಂದರು.
1989-90 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಳೆ ವಿದ್ಯಾರ್ಥಿಗಳಾದ ಲಕ್ಷ್ಮಣ ಬಡಿಗೇರ, ಸಿದ್ದು ಪಾಟೀಲ, ಶಬ್ಬಿರ ಮುಲ್ಲಾ, ಕಾಶೀನಾಥ್ ನಾವಿ, ಆರ್.ಎಂ.ಪಾಟೀಲ, ಸುರೇಶ ಕಡಕೋಳ,ಶ್ರೀಶೈಲ ಹರೋಲಿ, ಮೌನೇಶ್ ಬಡಿಗೇರ, ಗೋರೆಖಾನ ಸೇರಿದಂತೆ ಹಲ ಒಡನಾಡಿ ಆಪ್ತಮಿತ್ರ ಬಳಗ ಸೇರಿ ಅಭೂತಪೂರ್ವ ಸನ್ಮಾನ ಗುರುಗಳಿಗೆ ನೀಡಿ ಕೃತಜ್ಞತೆಯಿಂದ ಭಾವಪರಶರಾಗಿ ಧನ್ಯತೆ ಮೆರೆದರು. ಹಲವಾರು ಶಿಷ್ಯರು ನೆಚ್ಚಿನ ಗುರುಗಳ ಪಾದಗಳಿಗೆ ಶಿರಬಾಗಿ ನಮಸ್ಕರಿಸಿ ಗುರುಭಕ್ತಿ ತೋರಿದರು.

