ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಅಭಿಮತ
ಸಿಂದಗಿ: ಹಡಪದ ಅಪ್ಪಣ್ಣನವರ ವಚನಗಳು ಮನುಕುಲ ಉದ್ಧಾರಕ್ಕೆ ದಾರಿದೀಪ ಎಂದು ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.
ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ನಿಮಗ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಡಪದ ಅಪ್ಪಣ್ಣನವರು ತಮ್ಮ ಕಾಯಕ ನಿಷ್ಠೆ ಮತ್ತು ಮೌಲ್ಯಯುತ ವಚನಗಳಿಂದ ಬಸವಣ್ಣನವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಮಾಜದಲ್ಲಿನ ಅಜ್ಞಾನ, ಅಸಮಾನತೆ, ಜಾತಿ ಪದ್ಧತಿ, ಮೂಡನಂಬಿಕೆ ವಿರುದ್ಧ ಹೋರಾಡಿ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದರು. ಇವರ ಸಾಮಾಜಿಕ ಚಿಂತನೆಗಳು ವೈಚಾರಿಕ ಸಮಾಜಕ್ಕೆ ಚೈತನ್ಯ ನೀಡುತ್ತವೆ ಎಂದರು.
ಈ ವೇಳೆ ಶಿಕ್ಷಕಿ ಸೈನಾಬಿ ಮಸಳಿ ಮಾತನಾಡಿ, ಭಕ್ತಿ, ಶ್ರದ್ಧೆ ಮತ್ತು ಕಾಯಕವೆಂಬ ಮೌಲ್ಯಗಳಿಂದ ತಮ್ಮದೇಯಾದ ಸಮಾಜ ಸೇವೆಯನ್ನು ಸಲ್ಲಿಸಿದ ಶರಣ ಹಡಪದ ಅಪ್ಪಣ್ಣನವರು ಅಪ್ರತಿಮ ಕಾಯಕ ಯೋಗಿಯಾಗಿದ್ದರು. ಅಪ್ಪಣ್ಣ ಶರಣರು ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತ ನಾಮದೊಂದಿಗೆ ಹಲವಾರು ವಚನಗಳನ್ನು ರಚಿಸಿದ್ದಾರೆ. ತಮ್ಮ ಜೀವಿತದ ಅವಧಿಯವರೆಗೂ ಸೇವೆ ಮಾಡುತ್ತ ಲೌಕಿಕದಲ್ಲಿ ಮಾತ್ರವಲ್ಲದೇ ಪಾರಮಾರ್ಥಿಕ ವಿಷಯಗಳಲ್ಲಿಯೂ ಸಹಾಯಕರಾಗಿದ್ದರು ಎಂದು ತಿಳಿದು ಬರುತ್ತದೆ ಎಂದು ಹೇಳಿದರು.
ಈ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಹಡಪದ ಅಪ್ಪಣ್ಣ ಸಹಕಾರಿ ಬ್ಯಾಂಕಿನ್ ಅಧ್ಯಕ್ಷ ಶಿವಾನಂದ ಹಡಪದ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಕಂಠೇಪ್ಪ ಹಡಪದ, ಜಟ್ಟಪ್ಪ ಹಡಪದ, ಶಿವಶರಣ ಹಡಪದ, ಮಂಜುನಾಥ ಹಪಡದ, ಸುನಂದಾ ಯಂಪೂರೆ, ಶಿವಶರಣ ಬಂಕಲಗಿ, ಬಾಗೇಶ ದೇವೂರ, ಶರಣು ಬ್ಯಾಕೋಡ, ಸುಭಾನ ದೇವರಮನಿ, ಉಮೇಶ ನಾವಿ, ರಾಘವೇಂದ್ರ ನಾವಿ ಸೇರಿದಂತೆ ಕನ್ನಡ ಮನಸ್ಸುಗಳು, ಹಡಪದ ಅಪ್ಪಣ್ಣನವರ ಅನುಯಾಯಿಗಳು ಸಮಾಜ ಬಂಧುಗಳು ಉಪಸ್ಥಿತರಿದ್ದರು.

