ಇಂಡಿಯಲ್ಲಿ ‘ಹಳೇಬೇರು-ಹೊಸಚಿಗುರು’ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮ
ಇಂಡಿ: ಸಾಹಿತಿಯಾದವನು ಸಮಾಜದ ಆಗುಹೋಗುಗಳಿಗೆ ಪೂರಕವಾಗಿರುತ್ತಾನೆ, ಮೌಲ್ಯಯುತವಾದ ಬದುಕು ಮತ್ತು ಬರಹ ಇರುವ ಲೇಖಕ ಉತ್ತಮ ಸಮಾಜದ ನಿರ್ವಾಹಕನಾಗಿರುತ್ತಾನೆ ಎಂದು ಹಿರಿಯ ಕಾದಂಬರಿಕಾರ ಸಿದ್ಧರಾಮ ಉಪ್ಪಿನ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಶನಿವಾರ ಹಮ್ಮಿಕೊಂಡಿದ್ದ ‘ಹಳೇಬೇರು-ಹೊಸಚಿಗುರು’ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿದರು.
ಕಾದಂಬರಿಗಳಲ್ಲಿ ವಾಸ್ತವ ಪ್ರಜ್ಞೆಯನ್ನು ನಿರೂಪಿಸುವ ಸಂದರ್ಭದಲ್ಲಿ ಸತ್ಯದ ವಿಮುಖರಾಗಿ ಬರೆಯುವುದು ಸರಿಯಲ್ಲ, ಅನುಭವ ಮತ್ತು ಬರಹ ತಾಳೆಯಾಗುವಂತೆ ಲೇಖಕ ಬದುಕುಬೇಕಾಗುತ್ತದೆ ಎಂದರು.
ಯುವಕವಿ ದೇವೂ ಮಾಕೊಂಡ ಮಾತನಾಡಿ ಯುವಕವಿಗಳಿಗೆ ಕನ್ನಡ ಸಾಹಿತ್ಯದ ಪರಂಪರೆಯ ಬಗ್ಗೆ ಅರಿವು ಇರಬೇಕು, ಪಠ್ಯದೊಂದಿಗೆ ಸಾಹಿತ್ಯದ ಕೃತಿಗಳನ್ನು ವಿದ್ಯಾರ್ಥಿ ಹೆಚ್ಚು ಓದುವದನ್ನು ರೂಢಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಕತ್ತಿ ಮಾತನಾಡಿ ಹಳೆಬೇರು ಹೊಸಚಿಗುರು ಕಾರ್ಯಕ್ರಮವು ಹಿರಿಯರನ್ನು ಗೌರವಿಸೋದು ಮತ್ತು ಕಿರಿಯರನ್ನು ಪ್ರೋತ್ಸಾಹಿಸೋದು ಮುಖ್ಯ ಉದ್ದೇಶವಾಗಿದೆ. ಹಿರಿಯರ ಬದುಕು ಕಿರಿಯರಿಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದರು.
ಪ್ರಾಚಾರ್ಯ ಪ್ರೊ.ಆರ್.ಎಚ್.ರಮೇಶ್ ಅಧ್ಯಕ್ಷತೆವಹಿಸಿ ಮಾತನಾಡಿ “ಇಂತಹ ಕಾರ್ಯಕ್ರಮಗಳು ನಡೆಯುವದರಿಂದ ವಿದ್ಯಾರ್ಥಿಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ, ಇವುಗಳಲ್ಲಿ ಭಾಗವಹಿಸಿ ಲಾಭ ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಪಿಎಂ ಉಷಾ ಯೂನಿಟ್ ಸಂಯೋಜಕ ಪ್ರೊ.ಕಿರಣ ರೇವಣಕರ, ಐಕ್ಯೂಎಸಿ ಸಂಯೋಜಕರಾದ ಡಾ.ಶೀರಿನುಸುಲ್ತಾನ ಇನಾಂದಾರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ತ್ರಿವೇಣಿ ಬನಸೋಡೆ ಸ್ವಾಗತಿಸಿದರು. ಪ್ರೊ. ಆರ್.ಎಸ್.ಗೊರನಾಳ ವಂದಿಸಿದರು. ಪ್ರೊ. ಕಾಶೀನಾಥ ಜಾಧವ ನಿರೂಪಿಸಿದರು.

ಲೇಖಕರೊಂದಿಗೆ ಸಂವಾದ
ಹಿರಿಯ ಕಾದಂಬರಿಕಾರ ಸಿದ್ಧರಾಮ ಉಪ್ಪಿನ, ಯವಕವಿ ದೇವೂ ಮಾಕೊಂಡ ಅವರು “ಹಳೇಬೇರು-ಹೊಸಚಿಗುರು’ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಬಹಳ ಕುತೂಹಲದಿಂದ ಲೇಖಕರ ಬದುಕು, ಅವರ ಬಾಲ್ಯ, ಬರಹ ರಚನೆಗೆ ಪ್ರೇರಣೆ ಮೊದಲಾದವುಗಳನ್ನು ಕೇಳಿ ತಿಳಿದುಕೊಂಡರು.
ಸಾಹಿತ್ಯ ರಚನೆಗೆ ಇರಬೇಕಾದ ಪ್ರಾಥಮಿಕ ಸಂಗತಿ, ಬರಹ ಹೇಗೆ ರೂಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಇರ್ವ ಲೇಖಕರಿಂದ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳಾದ ಕು. ಪ್ರೀತಿ ನಾದ, ಪ್ರತಿಭಾ ಮಸಳಿ, ಛಾಯಾ ಹೂಗಾರ, ಬೀರು ನಂದಗೊಂಡ, ಬಸವರಾಜ ಪೂಜಾರಿ, ಈರಣ್ಣ ಆಲಮೇಲ, ಕಾವ್ಯ ಮೊದಲಾದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು.

