ಕಲುಷಿತ ನೀರು ಸೇವನೆಯಿಂದ ಹೆಚ್ಚಿದ ವಾಂತಿ ಬೇದಿ | ಮುದನೂರ ಗ್ರಾಪಂನಲ್ಲಿ ಘಟನೆ | ಪಿಡಿಓ ನಿರ್ಲಕ್ಷ್ಯ
– ಇಲ್ಯಾಸ್ ಪಟೇಲ್
ಯಾದಗಿರಿ: ಕಲುಷಿತ ನೀರು ಸೇವಿಸಿ 50ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಇಬ್ಬರು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 52 ಮಂದಿ ಸದ್ಯ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮುದನೂರು ಗ್ರಾಮದ ಜನತಾ ಕಾಲೋನಿಯ ನಿವಾಸಿಗಳು ಕಾಲುವೆ ಪಕ್ಕದ ಕೊಳವೆಬಾವಿಯ ನೀರು ಸೇವನೆ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಆದರೆ, ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಜನರಿಗೆ ವಾಂತಿ ಭೇದಿ ಉಂಟಾಗುತ್ತಿದ್ದಂತೆ ಕೆಲವರು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಇನ್ನೂ ಕೆಲವು ಜನ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲುಷಿತ ನೀರು ಸೇವನೆಯೇ ಕಾರಣ…?
ಜನತಾ ಕಾಲೋನಿಯ ನಿವಾಸಿಗಳಿಗೆ ವಾಂತಿ ಭೇದಿ ಉಂಟಾಗಲು ಕಾರಣ ಏನು ಎಂಬುದು ಪತ್ತೆಯಾಗಬೇಕಿದೆ. ನೀರು ಪೂರೈಸುವ ಕೊಳವೆ ಬಾವಿ ಕೃಷ್ಣಾ ಕಾಲುವೆಯ ಪಕ್ಕದಲ್ಲಿಯೇ ಇದೆ. ನಿನ್ನೆ ಕಾಲುವೆಗೆ ನೀರು ಬಿಟ್ಟಿದ್ದರಿಂದ ಕಲುಷಿತ ನೀರು ಕೊಳವೆ ಬಾವಿಯಲ್ಲಿ ಕೂಡಿ ವಾಂತಿ ಭೇದಿ ಆಗಿದೆ ಎಂಬುದು ಅಲ್ಲಿನ ಜನರ ಹೇಳಿಕೆಯಾಗಿದೆ. ಆರೋಗ್ಯ ಇಲಾಖೆ ನೀರನ್ನು ತಪಾಸಣೆಗೆ ಕಳುಹಿಸಿದೆ. ವರದಿ ಬಂದ ನಂತರವಷ್ಟೇ ಘಟನೆಗೆ ಕಾರಣ ತಿಳಿದು ಬರಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯತ್ತ ಅಧಿಕಾರಿಗಳ ದಂಡು..!
ಅಸ್ವಸ್ಥರು ಆಸ್ಪತ್ರೆಗೆ ದಾಖಲಾಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ, ಡಿಎಚ್ ಒ ಡಾ.ಪ್ರಭುಲಿಂಗ ಮಾನಕರ್, ಸುರಪುರ ಹಾಗೂ ಹುಣಸಗಿ ತಾಲೂಕು ಮಟ್ಟದ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿ ದಾಖಲಾದ ಎಲ್ಲ ರೋಗಿಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು.
ಸುರಪುರ ತಹಸೀಲ್ದಾರ ವಿಜಯಕುಮಾರ, ಹುಣಸಗಿ ತಹಸೀಲ್ದಾರ ಬಸಲಿಂಗಪ್ಪ ನಾಯ್ಯೋಡಿ, ಇಒ ಬಸವರಾಜ ಸ್ವಾಮಿ, ಡಾ.ಟಿಎಚ್ ಒ ಆರ್.ವಿ. ನಾಯಕ, ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಡಾ.ಸಿದ್ದು ನ್ಯಾಮಗೊಂಡ, ಡಾ.ಪ್ರಿಯಾಂಕಾ ಪಾಟೀಲ್, ಸುರಪುರ ಶಾಸಕರ ಸಹೋದರ ಸುಶಾಂತ ನಾಯಕ, ಹಾಗೂ ಮಾಜಿ ಶಾಸಕರಾದ ನರಸಿಂಹ ನಾಯಕ(ರಾಜುಗೌಡ ) ಅವರ ಸಹೋದರ ಬಬ್ಲುಗೌಡ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
“ಕಾಲುವೆಗೆ ಗುರುವಾರ ನೀರು ಬಂದಿದ್ದು, ಗ್ರಾಮದ ಜನತಾ ಕಾಲೋನಿಯ ನಿವಾಸಿಗಳು ದಿನನಿತ್ಯ ಸೇವಿಸುವ ಕೊಳವೆ ಬಾವಿಯಲ್ಲಿ ಕಾಲುವೆ ನೀರು ಮಿಶ್ರಣವಾದ ಪರಿಣಾಮ ಈ ಘಟನೆ ಸಂಭವಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾಯಿಸಿ ಆರಿಸಿದ ನೀರು ಕುಡಿಯುವಂತೆ ಕೋರಲಾಗಿದೆ.”
– ಬಸವರಾಜಸ್ವಾಮಿ ಹಿರೇಮಠ,
ತಾಪಂ ಇಒ, ಹುಣಸಗಿ

ವಾಂತಿ ಭೇದಿಗೆ ಹೌಹಾರಿದ ಜನತಾ ಕಾಲೋನಿ ಜನತೆ!
ಕೆಂಭಾವಿ: ಪಟ್ಟಣದ ಸಮೀಪವಿರುವ ಮುದನೂರು ಗ್ರಾಮದ ಜನತಾ ಕಾಲೋನಿಯ ಚಿಕ್ಕ ಮಕ್ಕಳು ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಜನ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಹೌಹಾರಿ ಕೆಂಭಾವಿ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ಸುದ್ದಿ ತಿಳಿದ ಆಸ್ಪತ್ರೆಗೆ ದೌಡಾಯಿಸಿದ ಯಾದಗಿರಿ ಜಿಲ್ಲಾಧಿಕಾರಿ ಡಾ ಸುಶೀಲ್ ಬಿ, ಸ್ಥಳದಲ್ಲಿದ್ದ ಡಿಎಚ್ಓ ಪ್ರಭುಲಿಂಗ ಮಾನಕರ್, ಹುಣಸಗಿ ಹಾಗೂ ಸುರಪುರ ತಾಲ್ಲೂಕಿನ ವೈದ್ಯಾಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಸುರಪುರ ತಹಸೀಲ್ದಾರ್ ವಿಜಯಕುಮಾರ, ಹುಣಸಗಿ ತಹಸೀಲ್ದಾರ್ ಬಸವಲಿಂಗಪ್ಪ ನಾಯ್ಕೊಡಿ, ತಾಲೂಕು ವೈದ್ಯಾಧಿಕಾರಿ ಡಾ ಆರ್ ವಿ ನಾಯಕ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಗಿರೀಶ್ ಕುಲ್ಕರ್ಣಿ, ಸುರಪುರ ಶಾಸಕರ ಸಹೋದರ ಸುಶಾಂತ ನಾಯಕ, ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿದರು.
ಘಟನೆಗೆ ಸ್ಪಷ್ಟ ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

