ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ನಡೆದಿದ್ದ ಅಹೋರಾತ್ರಿ ಧರಣಿ
ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಯ ಎದುರು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿವಿಧ ಭಾಗದ ರೈತರು ಸರ್ಕಾರ ರಾಜ್ಯದ ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಧರಣಿ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಳಶೆಟ್ಟಿ ಅವರು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಗ್ರೇಡ್-೨ ತಹಸೀಲ್ದಾರ ಜೆ.ಎಸ್.ನಾಯಕ ಅವರೊಂದಿಗೆ ಭೇಟಿ ನೀಡಿದರು.
ಗಂಭೀರವಾಗಿ ಇರುವ ದಾರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲಾಗುವದು. ಮುಂದೆ ತಾಲೂಕಿನಲ್ಲಿ ರೈತರ ಜಮೀನುಗಳ ದಾರಿ ಸಮಸ್ಯೆ ಇರುವ ಅರ್ಜಿಗಳನ್ನು ಹಂತ ಹಂತವಾಗಿ ಸರ್ಕಾರದ ಸುತ್ತೋಲೆಯಂತೆ ಬಗೆಹರಿಸಲಾಗುವುದು ಎಂದು ಕಂದಾಯ ಉಪವಿಭಾಗಧಿಕಾರಿ ಧರಣಿ ನಿರತರಿಗೆ ನೀಡಿದ ಭರವಸೆ ಮೇರೆಗೆ ಧರಣಿ ನಿರತರು ತಮ್ಮ ಧರಣಿಯನ್ನು ತಾತ್ಕಲಿಕವಾಗಿ ಹಿಂಪಡೆದುಕೊಂಡರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಲವಾರು ರೈತರ ಬಾಂಧವರಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇದೆ. ಇದರಿಂದಾಗಿ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಮೀನು ದಾರಿಗಾಗಿ ಅನೇಕ ಕಡೆಗಳಲ್ಲಿ ಜಗಳ, ಹೊಡೆದಾಟ, ಕೊಲೆ ಸಹ ನಡೆದಿವೆ. ಇದೊಂದು ರಾಜ್ಯದಲ್ಲಿ ಗಂಭೀರ ಸಮಸ್ಯೆಯಾಗಿದೆ. ಸರ್ಕಾರ ರೈತರ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಬೇಕಿದೆ. ರೈತರ ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ರೈತ ಸಂಘವು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಎಲ್ಲ ರೈತರ ಜಮೀನುಗಳಿಗೆ ಹೋಗಲು ಸರ್ಕಾರವೇ ನಕಾಶೆಯಲ್ಲಿ ದಾರಿ ಹಾಕಿಕೊಡುವಂತಾದರೇ ಈ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಬಹುದು ಎಂದರು.
ಸರ್ಕಾರದ ಸುತ್ತೋಲೆಯಂತೆ ಜಮೀನುಗಳಿಗೆ ಹೋಗಲು ಅನುಭೋಗದ ಹಕ್ಕಿನಡಿ ದಾರಿ ಮಾಡಿಕೊಡಬೇಕಿದೆ. ಸರ್ಕಾರದ ಸುತ್ತೋಲೆ ಕಾಟಾಚಾರಕ್ಕೆ ಎಂಬಂತಯಾಗಿದೆ. ದಾರಿ ಸಮಸ್ಯೆ ಬಗೆಹರಿಸುವ ಅಧಿಕಾರ ತಹಸೀಲ್ದಾರ ಅವರಿಗೆ ಕೂಡಲೇ ನೀಡುವಂತಾಗಬೇಕು. ಇದೀಗ ನಡೆಯುತ್ತಿರುವ ಅಧಿವೇಶನದಲ್ಲಿ ಈ ಸಮಸ್ಯೆ ಕುರಿತು ಸರ್ಕಾರ ಗಂಭೀರವಾಗಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಧರಣಿ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಗಂಭೀರ ಸಮಸ್ಯೆ ಇರುವದನ್ನು ತುರ್ತಾಗಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಹಂತ ಹಂತವಾಗಿ ಉಳಿದ ಸಮಸ್ಯೆಗಳನ್ನು ಬಗೆಹರಿಸುವದಾಗಿ ಹೇಳಿದ್ದಾರೆ. ಒಂದು ವೇಳೆ ಅಧಿಕಾರಿಗಳು ದಾರಿ ಸಮಸ್ಯೆ ಬಗೆಹರಿಸದೇ ಹೋದರೆ ಮತ್ತೇ ಹೋರಾಟ ಮಾಡಬೇಕಾಗುತ್ತದೆ ಎಂದರು.
ಧರಣಿಯಲ್ಲಿ ವಿಠ್ಠಲ ಬಿರಾದಾರ, ಈರಣ್ಣ ದೇವರಗುಡಿ, ಚಂದ್ರಶೇಖರ ಜಮ್ಮಲದಿನ್ನಿ, ಹಿರಗಪ್ಪ ಗಂಗೂರ, ಶೇಖಪ್ಪ ಸಜ್ಜನ, ರಾಜೇಸಾ ವಾಲೀಕಾರ, ರೇವಪ್ಪಗೌಡ ಪೊಲೇಸಿ, ಧರ್ಮಣ್ಣ ಬೂದಗೋಳ, ಶಿವಪ್ಪ ಮಂಗೋಂಡ, ಮಾದಪ್ಪ ಹೊರ್ತಿ, ಶ್ರೀಶೈಲ ಕೋಲಕಾರ, ಬಸಪ್ಪ ಮುಳವಾಳ, ಶರಣಗೌಡ ಪಾಟೀಲ, ಮಹಿಬೂಬ ಅವಟಿ, ಪ್ರಕಾಶ ಬಿರಾದಾರ, ರಾಜು ವಂದಾಲ, ಜಗದೀಶ ಲಿಂಗದಳ್ಳಿ, ಮಹಾದೇವಪ್ಪ ಮುತ್ತತ್ತಿ, ಬಸನಗೌಡ ಬಿರಾದಾರ, ಲಲಿತಾ ಕುರಣದ, ನಾಗಮ್ಮ ಕುರಣದ, ಭೀಮರಾಯ ದಳವಾಯಿ, ಶಾಂತವ್ವ ಬಾಲಗೋಳ, ಮಹೇಶ ಪತ್ತಾರ, ಕಲ್ಲಪ್ಪ ಕೋಲಕಾರ ಭಾಗವಹಿಸಿದ್ದರು.

