ಆ.೨೬ ರಿಂದ ಆರಂಭವಾಗುವ ಐತಿಹಾಸಿಕ ಬಸವೇಶ್ವರ ಜಾತ್ರಾಮಹೋತ್ಸವ
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನದ ಆವರಣದಲ್ಲಿ ಆಗಷ್ಟ್ ೨೬ ರಿಂದ ಆರಂಭವಾಗುವ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಜಾತ್ರಾಮಹೋತ್ಸವದ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಅಧ್ಯಕ್ಷರಾಗಿ ಗುರಲಿಂಗಪ್ಪ (ಮುದುಕು) ಬಸರಕೋಡ, ಉಪಾಧ್ಯಕ್ಷರಾಗಿ ಸಂಗಯ್ಯ ಒಡೆಯರ, ಬಸವರಾಜ ಅಳ್ಳಗಿ, ಪ್ರವೀಣ ಪೂಜಾರಿ, ಮುತ್ತು ಪತ್ತಾರ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ನಿಡಗುಂದಿ, ಖಜಾಂಚಿಯಾಗಿ ಎಂ.ಬಿ.ತೋಟದ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಾತ್ರಾಮಹೋತ್ಸವ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಮಂಡಳಿಯಿಂದ ಸಿದ್ದಲಿಂಗ ಸ್ವಾಮೀಜಿ ಸನ್ಮಾನಿಸಿದರು.
ಈ ವೇಳೆ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರುಗುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವವನ್ನು ಪ್ರತಿವರ್ಷ ಎಲ್ಲರ ಸಹಕಾರದೊಂದಿಗೆ ಸಂಭ್ರಮ,ಸಡಗರದಿಂದ ಆಚರಿಸುತ್ತಾ ಬರಲಾಗುತ್ತಿದೆ. ಈ ವರ್ಷ ಶ್ರಾವಣ ಮಾಸವು ಆಗಷ್ಟ್ ೪ ರಿಂದ ಆರಂಭವಾಗಲಿದೆ. ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ನಡೆಯುವ ಪ್ರವಚನಕ್ಕೆ ಯಲಬುರ್ಗಾ ತಾಲೂಕಿನ ಬಳೂಟಗಿಯ ಶಿವಪ್ರಕಾಶ ಸ್ವಾಮೀಜಿ ಆಗಮಿಸುವರು. ಪ್ರವಚನದ ಉದ್ಘಾಟನೆ ಆಗಷ್ಟ್ ೫ ರಂದು ಸಂಜೆ ೬ ಗಂಟೆಗೆ ನಡೆಯಲಿದೆ. ಪ್ರವಚನವು ಪ್ರತಿನಿತ್ಯ ಸಂಜೆ ೬.೩೦ ಗಂಟೆಗೆ ಆರಂಭವಾಗಲಿದೆ. ಇದರ ಸದುಪಯೋಗ ಜನತೆ ಪಡೆದುಕೊಳ್ಳಬೇಕು. ಕಳೆದ ವರ್ಷದಂತೆ ಈ ವರ್ಷದ ಜಾತ್ರಾಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಜಾತ್ರೆಯು ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು. ಮೂಲನಂದೀಶ್ವರನಿಗೆ ಬೆಳ್ಳಿ ಕವಚ ಮಾಡಲು ಈಗಾಗಲೇ ಅನೇಕ ಸದ್ಭಕ್ತರು ಬೆಳ್ಳಿ ನೀಡಿದ್ದಾರೆ. ಕೆಲವರು ಬೆಳ್ಳಿ ನೀಡಲು ವಾಗ್ದಾನ ಮಾಡಿದ್ದಾರೆ. ಬೆಳ್ಳಿ ಕವಚ ಮಾಡಲು ಧಾರವಾಡದ ಶಿಲ್ಪಿಗೆ ಈಗಾಗಲೇ ೩೦ ಕೆಜಿ ಬೆಳ್ಳಿ ನೀಡಲಾಗಿದೆ. ಉಳಿದ ಬೆಳ್ಳಿಯನ್ನು ನೀಡಬೇಕಿದೆ. ವಾಗ್ದಾನ ಮಾಡಿದ ಸದ್ಭಕ್ತರು ಬೆಳ್ಳಿಯನ್ನು ಆದಷ್ಟು ಬೇಗ ಕೊಡುವಂತಾಗಬೇಕು. ಜಾತ್ರಾಮಹೋತ್ಸವದಂಗವಾಗಿ ಪಟ್ಟಣದಲ್ಲಿ ಕಟ್ಟುವ ಕಟೌಟ್ಗಳು ವಾಹನ ಸಂಚಾರಕ್ಕೆ, ಜನರಿಗೆ ತೊಂದರೆಯಾಗದಂತೆ ಕಟ್ಟಬೇಕು. ಕಟೌಟ್ಗಳನ್ನು ಕಟ್ಟಲು ಪುರಸಭೆಯಿಂದ ಅನುಮತಿ ಪಡೆಯಬೇಕೆಂದು ಪುರಸಭೆ ಅಧಿಕಾರಿಗಳು ಜಾತ್ರಾಸೇವಾ ಸಮಿತಿಗೆ ಮನವಿ ಸಲ್ಲಿಸಿದ್ದಾರೆ. ಇದರ ಕುರಿತು ಗಮನಹರಿಸಬೇಕೆಂದರು.
ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಗುರಲಿಂಗಪ್ಪ ಬಸರಕೋಡ ಮಾತನಾಡಿ, ಈ ವರ್ಷದ ಜಾತ್ರೆಯನ್ನು ಪಟ್ಟಣದ ಎಲ್ಲ ಹಿರಿಯರ, ಮಂಡಳಿ, ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಎಲ್ಲರ ಮಾರ್ಗದರ್ಶನದೊಂದಿಗೆ ಸಮನ್ವಯತೆಯಿಂದ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. ಜಾತ್ರೆಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಮಾತನಾಡಿ, ಕಳೆದ ವರ್ಷದ ಜಾತ್ರಾಮಹೋತ್ಸವವನ್ನು ಜಾತ್ರಾಮಹೋತ್ಸವ ಸಮಿತಿ ಪದಾಧಿಕಾರಿಗಳು, ಪಟ್ಟಣದ ಹಿರಿಯರು ಸೇರಿದಂತೆ ಎಲ್ಲರೂ ಯಾವುದೇ ಅಹಿತಕರ ಘಟನೆಯಾಗದಂತೆ ಅತ್ಯಂತ ಸಂಭ್ರಮದಿಂದ ಜಾತ್ರೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಈ ವರ್ಷ ನಡೆಯುವ ಜಾತ್ರೆಯನ್ನು ಎಲ್ಲರೂ ಕೂಡಿಕೊಂಡು ಯಶಸ್ವಿಗೊಳಿಸಬೇಕು. ಜಾತ್ರೆಗೆ ಬೇಕಾದ ಸಹಾಯ-ಸಹಕಾರ ಮಂಡಳಿಯಿಂದ ನೀಡಲಾಗುವುದು ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವೇಶ್ವರ ಜಾತ್ರೆಯು ಐತಿಹಾಸಿಕವಾಗಿದೆ. ಇದನ್ನು ಶ್ರಧ್ಧಾಭಕ್ತಿಯಿಂದ ಮಾಡುವ ಮೂಲಕ ಬಸವೇಶ್ವರರ ಕೃಪೆಗೆ ಪಾತ್ರರಾಗಬೇಕು. ಜಾತ್ರೆಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಸಭೆಯಲ್ಲಿ ಹಿರಿಯರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ ಮಾತನಾಡಿದರು.ಸಭೆಯಲ್ಲಿ ಮಂಡಳಿ ತಹಸೀಲ್ದಾರ ಜೆ.ಎಸ್.ಚಿನಿವಾಲರ, ಮಂಡಳಿಯ ಲೆಕ್ಕ ಅಧೀಕ್ಷಕ ಬಿ.ಎಸ್.ಕಳ್ಳಿ. ಮುಖಂಡರಾದ ಅನಿಲ ಅಗರವಾಲ, ರವಿ ರಾಠೋಡ, ಸಂಗಮೇಶ ಓಲೇಕಾರ, ಉಮೇಶ ಹಾರಿವಾಳ, ರಮೇಶ ಯಳಮೇಲಿ, ಚಂದ್ರಶೇಖರ ಪಾಟೀಲ, ಸಂಕನಗೌಡ ಪಾಟೀಲ, ಶೇಖರ ಗೊಳಸಂಗಿ, ಬಸಣ್ಣ ಕಲ್ಲೂರ, ಸುರೇಶಗೌಡ ಪಾಟೀಲ, ಮೀರಾಸಾಬ ಕೊರಬು, ಸಂಗಯ್ಯ ಕಾಳಹಸ್ತೇಶ್ವರಮಠ, ಮುರಗೇಶ ನಾಯ್ಕೋಡಿ, ಸುಭಾಸ ಗಾಯಕವಾಡ, ರವಿಗೌಡ ಚಿಕ್ಕೊಂಡ, ಸುರೇಶ ಪಡಶೆಟ್ಟಿ, ಸೋಮಶೇಖರ ಪಟ್ಟಣಶೆಟ್ಟಿ, ಈರಣ್ಣ ವಂದಾಲ, ಭದ್ರು ಮಣ್ಣೂರ, ಶೇಖು ಪೂಜಾರಿ, ಶ್ರೀಕಾಂತ ಕೊಟ್ರಶೆಟ್ಟಿ, ನಿಂಗಪ್ಪ ಅವಟಿ, ವಿಶ್ವನಾಥ ಹಾರಿವಾಳ, ವಿನುತ ಕಲ್ಲೂರ, ದಸ್ತಗೀರ ವಜ್ಜಲ, ಶಿವಾನಂದ ತೋಳನೂರ, ಮಂಡಳಿಯ ಸಿಬ್ಬಂದಿ ಸೇರಿದಂತೆ ಇತರರು ಇದ್ದರು. ಎಂ.ಜಿ.ಆದಿಗೊಂಡ

