– ಜಯಶ್ರೀ.ಜೆ. ಅಬ್ಬಿಗೇರಿ,
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨
ಜಗತ್ತಿನ ಪ್ರಸಿದ್ಧ ಸಂಗೀತಗಾರ ಬಿಥೋವನ್ನ ಮಧುರ ಸಂಗೀತದ ಅಲೆಗಳನ್ನು ಕೇಳುತ್ತಿದ್ದರೆ ಆತನ ಕಿವುಡತನ ನೆನಪಾಗುವುದಿಲ್ಲ. ಪ್ರಕೃತಿ ಕವಿ ಎಂದೇ ಹೆಸರಾದ ಜಾನ್ ಮಿಲ್ಟನ್ನ ಸುಂದರ ಕವನಗಳನ್ನು ಓದುವಾಗ ಆತನ ಕುರುಡುತನ ನೆನಪಾಗುವುದಿಲ್ಲ. ಜಗತ್ತಿನ ಮಿಂಚಿನ ಓಟಗಾರ್ತಿ ಎಂಬ ಅಭಿಮಾನಕ್ಕೆ ಪಾತ್ರಳಾದ ವಿಲ್ಮಾ ರುಡಾಲ್ಫಳ ಸಾಹಸ ಕಥೆ ಕೇಳುವಾಗ ಅವಳೊಬ್ಬ ಪೋಲಿಯೋ ಪೀಡಿತಳು ಎನ್ನುವುದು ಅಚ್ಚರಿಯನ್ನು ಮೂಡಿಸುತ್ತದೆ. ಅವಮಾನವನ್ನು ಸನ್ಮಾನವನ್ನಾಗಿಸುವುದು ಇಂಥವರಿಂದ ಕಲಿಯಬೇಕು. ಅವಮಾನಿತನಾದ ಚಾಣಕ್ಯನು ಹೊಸದೊಂದು ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದನು. ಅವಮಾನವು ತಮ್ಮನ್ನು ದೃತಿಗೆಡಿಸಲು ಇವರು ಬಿಡಲಿಲ್ಲ. ಎಷ್ಟು ದೊಡ್ಡ ಸಾಧಕರೇ ಆಗಿರಲಿ ಯಾವುದೇ ಒಂದು ಹಂತದಲ್ಲಿ ಹಲವು ತರದ ಟೀಕೆಗಳಿಂದ ಅವಮಾನ ಅನುಭವಿಸಿಯೇ ಇರುತ್ತಾರೆ.
ಅವಮಾನವೆಂದರೆ..,?
ಅವಮಾನವು ಅಸಮರ್ಥ ಭಾವನೆ. ಇದೊಂದು ಶಕ್ತಿಯುತ,ಸಂಕೀರ್ಣ ಮತ್ತು ಸ್ವಯಂ ಪ್ರಜ್ಞೆಯ ಭಾವನೆಯಾಗಿದೆ. ವ್ಯಕ್ತಿ ತಮ್ಮ ಸ್ವಂತ ಮಾನದಂಡ ಅಥವಾ ಸಾಮಾಜಿಕ ಮಾನದಂಡಗಳಿಂದ ತಮ್ಮನ್ನು ತಾವು ಕಡಿಮೆ ಮಾಡಿಕೊಳ್ಳುವುದು. ಈ ಭಾವನೆಯು ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯದ ಮೆಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರೂ ಇದನ್ನು ವಿಭಿನ್ನವಾಗಿ ಅನುಭವಿಸುತ್ತಾರೆ. ದೀರ್ಘಕಾಲದ ಅವಮಾನವು ಬದುಕನ್ನು ಅಸಹನೀಯಗೊಳಿಸಬಹುದು.
ಇದು ಹೇಳಿ ಕೇಳಿ ಸ್ಪರ್ಧಾ ಯುಗ ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಂತ ಸಮಸ್ಯೆಗಳಿಗೆ ಸಲಹೆ ಸೂಚನೆಗಳು ಮಾರ್ಗದರ್ಶನ ಅತ್ಯುತ್ತಮ ಮಾರ್ಗದರ್ಶಕರಿಂದ ಮನೋವಿಜ್ಞಾನಿಗಳಿಂದ ಸಿಗುವುದಿಲ್ಲ ಅಂತೇನಿಲ್ಲ. ಅವರಿಂದ ಸಲಹೆ ಪಡೆದು ಅನುಷ್ಟಾನಕ್ಕೆ ತರುವುದರಿಂದ ನೆಮ್ಮದಿ ಪಡೆಯಬಹುದು. ಅವಮಾನವನ್ನು ನಿಭಾಯಿಸಲು ಕೆಲವು ಮಾರ್ಗಗಳು ಇಲ್ಲಿವೆ.
ಉದ್ದೇಶ ನಿರ್ಧರಿಸಿ
ಅವಮಾನಕರ ಹೇಳಿಕೆಯು ಅರ್ಥಪೂರ್ಣವಾಗಿದೆಯೇ? ಟೀಕೆಯು ಅವಮಾನಿಸುವ ಉದ್ದೇಶದಿಂದ ಕೂಡಿದೆಯೇ ಅಥವಾ ಲಘುವಾಗಿ ತೆಗೆದುಕೊಳ್ಳುವ ಹಾಗಿದೆಯೇ? ಲಘುವಾದ ಸಂಭಾಷಣೆಯಲ್ಲಿ ಹೇಳಲಾಗಿದೆಯೇ? ಪ್ರೀತಿಯ ರೂಪವಾಗಿ ಕೀಟಲೆ ಮಾಡುತ್ತಿದ್ದಾರೆಯೇ? ಬಿಸಿ ಚರ್ಚೆಯ ಮಧ್ಯದಲ್ಲಿ ಹೇಳಲಾಗಿದೆಯೇ? ಕ್ಷುಲ್ಲಕ ಹೇಳಿಕೆಯನ್ನು ಬಳಿಸಿದರೆ? ಎಂಬುದನ್ನು ನಿರ್ಧರಿಸಲು ಸಂದರ್ಭವು ನಿಮಗೆ ಸಹಾಯ ಮಾಡುತ್ತದೆ ನೆನಪಿರಲಿ: ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ನಿಮಗೆ ನಿಯಂತ್ರಣವಿಲ್ಲ ಆದರೆ ನೀವು ಹೇಗೆ ಪ್ರತಿಕಿಯಿಸಬೇಕು ಎಂಬುದು ನಿಮ್ಮ ನಿಯಂತ್ರಣದಲ್ಲಿದೆ.
ನೀವೇ ಮೆಚ್ಚಿಕೊಳ್ಳಿ
ನಾನು ತಪ್ಪಿದಾಗ ಅವಮಾನಿಸಲು ನಾ ನೀ ಎಂದು ಜನ ಮುಂದೆ ಬರುತ್ತಾರೆ. ಆದರೆ ನಾನು ಒಳ್ಳೆಯ ಕೆಲಸ ಮಾಡಿದಾಗ ಯಾರೂ ಗಮನಿಸುವುದಿಲ್ಲ. ಗಮನಿಸಿದರೂ ಎರಡು ಮೆಚ್ಚುಗೆ ಮಾತುಗಳನ್ನಾಡುವುದಿಲ್ಲ ಎಂಬ ಸಂಗತಿ ಮನಸ್ಸಿಗೆ ನೋವು ತರುತ್ತದೆ. ಬೇರೆಯವರು ನಮ್ಮನ್ನು ಮೆಚ್ಚಿಕೊಳ್ಳಬೇಕು ಎನ್ನುವುದು ಮನುಷ್ಯನ ಸಹಜ ಗುಣ. ನಿಮ್ಮನ್ನು ಯಾರಾದರೂ ಹುರದುಂಬಿಸಲಿ, ನಿಮ್ಮ ಕೆಲಸ ನೋಡಿ ಶಹಭಾಶ್ ಎನ್ನಲಿ ಎಂದು ಕಾಯುತ್ತ ಕುಳಿತುಕೊಳ್ಳಬೇಡಿ. ನಿಮಗಿಲ್ಲಿ ಒಂದು ಸಂಗತಿಯನ್ನು ಹೇಳಬೇಕು. ಅಲೆಗ್ಸಾಂಡರ್ ದೂಮಾ ಎನ್ನುವ ಕಾದಂಬರಿಕಾರ ಬರೆಯುವಾಗ ಒಂದೆರಡು ಪುಟ ಚೆನ್ನಾಗಿ ಬರೆದ ನಂತರ ಬರೆಯುವುದನ್ನು ನಿಲ್ಲಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದ್ದನಂತೆ, ಖುಷಿ ಪಡುತ್ತಿದ್ದನಂತೆ. ಇದು ಎಷ್ಟು ಚೆನ್ನ ಅಲ್ಲವೇ? ಇದರಿಂದ ನಾವು ಮಾಡುವ ಕೆಲಸಕ್ಕೆ ಹುರುಪು ಹುಮ್ಮಸ್ಸು ಸಿಗುತ್ತದೆ. ಅಲ್ಲದೇ ಅವಮಾನದ ಹಳಿಯಲ್ಲಿ ಸಿಲುಕದಂತೆ ಪಾರು ಮಾಡುತ್ತದೆ. ಆತ್ಮಸ್ಥೈರ್ಯ ಹೆಚ್ಚಿಸುತ್ತದೆ..
ಧನ್ಯವಾದ ಅರ್ಪಿಸಿ
‘ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ ಕಷ್ಟ. ‘ಎನ್ನುವ ಮಾತಿಗೆ ಮತ್ತೊಂದು ಮಾತನ್ನು ಜೋಡಿಸಬಹುದು. ಹುಟ್ಟಿದವರಿಗೆಲ್ಲ ಅವಮಾನ ಕಟ್ಟಿಟ್ಟ ಬುತ್ತಿ ಎಂದು ಅವಮಾನ ಎರಡು ವ್ಯಕ್ತಿಗಳಿಗೆ ಮಾತ್ರ ಇಲ್ಲ. ಇನ್ನೂ ಹುಟ್ಟದವನಿಗೆ ಮತ್ತು ಜೀವ ಬಿಟ್ಟವನಿಗೆ. ಇದರರ್ಥ ಜನರಿಂದ ಅವಮಾನ ಅನುಭವಿಸುವುದು ಅನಿವಾರ್ಯ. ಅವಮಾನವಾದಾಗ ತಂಪೆರೆಯುವ ಮಾತುಗಳನ್ನಾಡುವ ಜೀವ ಮಗ್ಗುಲದಲ್ಲಿದ್ದರೆ ಒಳಿತೆಂದು ಮನಸ್ಸು ಬಯಸುತ್ತದೆ. ಅವಮಾನದಲ್ಲಿ ಬೆಂದ ನಿಮಗೆ ಆತ್ಮಸ್ಥೆöÊರ್ಯ ತುಂಬಿದವರಿಗೆ ಧನ್ಯವಾದಗಳನ್ನು ಅರ್ಪಿಸುವುದು ಧನ್ಯತಾಭಾವದ ಸಂಕೇತವೆಂಬುದನ್ನು ಮರೆಯದಿರಿ

ಸ್ವಯಂ ಆರೈಕೆ
ಅವಮಾನಕ್ಕೆ ಕೊರಗುವುದು ಕರಬುವುದು ಸಾಮಾನ್ಯ. ಸ್ವಯಂ ಆರೈಕೆಯನ್ನು ಅಭ್ಯಾಸ ಮಾಡುವುದು ಅವಮಾನದಿಂದ ಭಾವನಾತ್ಮಕವಾಗಿ ಹಾನಿಗೊಳಗಾಗಬಹುದು. ಆದ್ದರಿಂದ ಒಂದನ್ನು ಅನುಭವಿಸಿದ ನಂತರ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಇದು ವ್ಯಾಯಾಮ, ಧ್ಯಾನ, ಚಿಕಿತ್ಸಕರೊಂದಿಗೆ ಮಾತನಾಡುವಂತಹ ವಿಷಯಗಳನ್ನು ಒಳಗೊಂಡಿರುತ್ತದೆ ಕೆಲವೊಮ್ಮೆ ಅವಮಾನದ ಬಗ್ಗೆ ವಿಶ್ವಾಸಾರ್ಹ ಸ್ನೇಹಿತ ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಮತ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದುರ ಕುರಿತು ಅವರ ದೃಷ್ಟಿಕೋನವನ್ನು ಪಡೆಯಲು ಸಹಾಯಕವಾಗುತ್ತದೆ.
ನಕ್ಕು ಪ್ರತಿಕ್ರಿಯಿಸಿ
ಹಲವು ಸಲ ಅವಮಾನವು ನಿರ್ಧಿಷ್ಟ ಪರಿಸ್ಥಿತಿ ಮತ್ತು ಅವಮಾನ ಮಾಡಿದ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಬೇಕಂತಲೇ ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮಗೆ ಸಮಯ ಕೊಡದೇ ಇರಬಹುದು. ಅವಮಾನವನ್ನು ನಿರ್ಲಕ್ಷಿಸುವುದು ಅಥವಾ ವಜಾಗೊಳಿಸುವುದು ನಿಮ್ಮ ಸಮಯ ಹಾಗೂ ಶಕ್ತಿಗೆ ಯೋಗ್ಯವಾಗಿಲ್ಲದಿದ್ದರೆ ನಿರ್ಲಕ್ಷಿಸುವುದು ಉತ್ತಮ ಆಯ್ಕೆಯಾಗಿದೆ. ಅವಮಾನವು ಗಂಭೀರವಾಗಿರದಿದ್ದರೆ ನೋವುಂಟು ಮಾಡದಿದ್ದರೆ ನೀವು ಉದ್ವೇಗಕ್ಕೆ ಒಳಗಾಗಿಲ್ಲ ಮತ್ತು ಅವಮಾನದಿಂದ ನೀವು ಪ್ರಭಾವಿತವಾಗಿಲ್ಲ ಎಂದು ತೋರಿಸಲು ನಕ್ಕು ಪ್ರತಿಕ್ರಿಯಿಸಬಹುದು. ಅವಮಾನವು ನಿಮ್ಮನ್ನು ಉದ್ದೇಶಿಸಿದ್ದರೆ ಮತ್ತು ನಿಮಗೆ ಗಂಭೀರ ನೋವುಂಟು ಮಾಡಿದರೆ ನೀವು ಅವಮಾನ ಉಂಟು ಮಾಡಿದ ವ್ಯಕ್ತಿಯನ್ನು ಎದುರಿಸಬಹುದು. ಮತ್ತು ಅವರ ಮಾತುಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ವ್ಯಕ್ತಪಡಿಸಬಹುದು.
ರಚನಾತ್ಮಕವಾಗಿ ಟೀಕಿಸಿ
ಕೆಲವು ಸಂದರ್ಭಗಳಲ್ಲಿ ನೀವು ಸ್ವಲ್ಪ ಕುಟುಕನ್ನು ಅನುಭವಿಸಿದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಬದಲು ರಚನಾತ್ಮಕ ಟೀಕೆಯಾಗಿ ಬಳಸಲು ಪ್ರಯತ್ನಿಸಿ. ಅವಮಾನವು ಚಿಕ್ಕದಾಗಿದೆ ಎಂದು ನೀವು ಭಾವಿಸಿದರೆ ಮಾತ್ರ ನೀವು ಅದನ್ನು ನಿರ್ಲಕ್ಷಿಸುತ್ತೀರಿ ಎಂಬುದನ್ನು ಗಮನಿಸಿ. ಅಸಭ್ಯ ಮತ್ತು ಆಕ್ಷೇಪಣಾರ್ಹ ಟೀಕೆಗಳನ್ನು ಸಹಿಸಬಾರದು. ಒಬ್ಬ ವ್ಯಕ್ತಿಯು ಪುನರಾವರ್ತಿತವಾಗಿ ಹೀಗೆ ಮಾಡಿದರೆ ನೀವು ಮಾತನಾಡಬೇಕು. ಅವಮಾನಕರ ಸನ್ನಿವೇಶದಲ್ಲಿ ನೋವಾಗುವುದು ಮುಜುಗರವಾಗುವುದು ನಾಚಿಕೆಪಡುವುದು ಸಹಜ. ನೀವು ಏನನ್ನು ಅನುಭವಿಸುತ್ತೀರೋ ಅದಕ್ಕೆ ಸಮಯ ತೆಗೆದುಕೊಳ್ಳುವುದು ಸರಿ. ನೀವು ಏನನ್ನು ಅನುಭವಿಸುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳಿ.
ಅರ್ಥೈಸಿಕೊಳ್ಳಿ
ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಮನುಷ್ಯರು ಎಲ್ಲ ಸಮಯದಲ್ಲೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ. ನೀವು ಉಕ್ಕಿನಿಂದ ಮಾಡಲ್ಪಟ್ಟಿಲ್ಲ ನಿಮ್ಮ ಪ್ರತಿಕ್ರಿಯೆಯನ್ನು ನಿರ್ಣಯಿಸುವ ಬದಲು, ಕೋಮಲ ಪ್ರೀತಿ ಮತ್ತು ದಯೆಯನ್ನು ಅಭ್ಯಾಸ ಮಾಡಿ. ನೆನಪಿಡಿ: ನೀವು ಅನುಮತಿಸದ ಹೊರತು ಅವಮಾನವು ನಿಮ್ಮನ್ನು ನೋಯಿಸುವುದಿಲ್ಲ. ಪ್ರತಿಕ್ರಿಯೆಯನ್ನು ಚಿಕ್ಕದಾಗಿ ಮತ್ತು ತ್ವರಿತವಾಗಿ ಮಾಡಿ ಇದರಿಂದ ನೀವು ತೊಡಗಿಸಿಕೊಳ್ಳುವುದಿಲ್ಲ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಸರಿ ಅಥವಾ ಅದಕ್ಕಾಗಿ ಧನ್ಯವಾದಗಳು ಎಂದು ಹೇಳಿ. ಅವಮಾನದಲ್ಲಿ ಯಾವುದೇ ಸತ್ಯವಿದೆ ಎಂದು ನೀವು ಭಾವಿಸಿದರೆ, ನಿಮ್ಮ ಬೆಳವಣಿಗೆಗೆ ಸಹಾಯಕವಾದ ಮಾಹಿತಿಯನ್ನು ಮಾತ್ರ ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಿ. ನಂತರ ಉಳಿದುದನ್ನು ನಿರ್ಲಕ್ಷಿಸಿ.

ಸಂಪರ್ಕಿಸಿ
ಜನರು ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರು ಒಂದೇ ವಿಷಯವನ್ನು ಪ್ರೀತಿಸುತ್ತಿದ್ದರೆ ಇಲ್ಲವೇ ದ್ವೇಷಿಸುತ್ತಿದ್ದರೆ ಪ್ರಪಂಚ ಆಸಕ್ತಿದಾಯಕವಾಗಿರುವುದಿಲ್ಲ. ಅಭಿಪ್ರಾಯದಲ್ಲಿನ ವ್ಯತ್ಯಾಸದ ಪರಿಣಾಮವಾಗಿ ಅವಮಾನಕರ ಹೇಳಿಕೆಯನ್ನು ಮಾಡಿದ್ದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದಿರಲು ಪ್ರಯತ್ನಿಸಿ. ಅವಮಾನಿಸಿದ ವ್ಯಕ್ತಿಗೆ ಎಷ್ಟೇ ತಿಳಿಹೇಳಿದರೂ ಅವಮಾನಕರ ಕಾಮೆಂಟ್ ಗಳನ್ನು ಮುಂದುವರೆಸಿದರೆ ನಿಮ್ಮ ದೂರುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ. ಅಂದರೆ ಶಿಕ್ಷಕರು ಪೋಷಕರು ಮೇಲ್ವಿಚಾರಕರು ಅಧಿಕಾರದಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಿ ಮತ್ತು ಅವಮಾನಕರ ಟೀಕೆಗಳ ಬಗ್ಗೆ ವಿವರಿಸಿ. ದೂರು ನೀಡುವುದು ತಪ್ಪೆಂದು ಭಾವಿಸಬೇಡಿ. ನೀವು ಆ ವ್ಯಕ್ತಿಯನ್ನು ನಿಲ್ಲಿಸಲು ಸಾಕಷ್ಟು ಅವಕಾಶವನ್ನು ನೀಡಿದ್ದೀರಿ.
ಕೊನೆ ಹನಿ
ಅವಮಾನಿಸಲು ಯಾರೂ ಅರ್ಹರಲ್ಲ. ಎನ್ನುವ ಸಂಗತಿಯನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಮತ್ತು ಯಾರಾದರೂ ನಿಮ್ಮನ್ನು ಅಗೌರವದಿಂದ ನೋಡಿದರೆ ನಡೆಸಿಕೊಂಡರೆ ನಿಮ್ಮ ಪರವಾಗಿ ನಿಲ್ಲುವ ಪೂರ್ಣ ಹಕ್ಕು ನಿಮಗಿದೆ. ‘ಲೋಕವನ್ನೆಲ್ಲ ಮೆಚ್ಚಿಸಲು ಪರಮೇಶ್ವರನಿಗೂ ಸಾಧ್ಯವಿಲ್ಲ.’ಎನ್ನುವಂತೆ ಯಾರು ಏನಾದರೂ ಅಂದುಕೊಳ್ಳಲಿ ನಾನು ಇರುವುದು ಹೀಗೆ ಎಂದುಕೊಂಡು ಗುರಿಯತ್ತ ಮುನ್ನಗ್ಗಿದರೆ ಅವಮಾನ ಸನ್ಮಾನವಾಗಿ ಹಿಂಬಾಲಿಸುತ್ತದೆ. ಅವಮಾನಿಸಿದವರೇ ಸನ್ಮಾನಿಸಲು ದುಂಬಾಲು ಬೀಳುತ್ತಾರೆ.

