-ಶಿವಕುಮಾರ ಲೇಖಕರು – ಪತ್ರಕರ್ತರು

ಅಪರ್ಣ ಇನ್ನಿಲ್ಲ ಎಂಬ ಸುದ್ಧಿ ಇಡೀ ಕನ್ನಡಿಗರನ್ನು ನೋವಿಗೆ ದೂಡಿದೆ. ಅಷ್ಟರ ಮಟ್ಟಿಗೆ ತನ್ನ ಅಧ್ಯಯನಶೀಲತೆಯಿಂದ ಭಾಷೆ ಸಂವೇದನೆಯ ಶಕ್ತಿಯನ್ನು ಸಿದ್ಧಿಸಿಕೊಂಡು ನಿರೂಪಣೆಯ ಕ್ಷೇತ್ರದಲ್ಲಿ ನಂಬರ್ ಒನ್ ಜನಪ್ರಿಯತೆ ಸಾಧಿಸಿದ್ದರು. ಸರ್ಕಾರದ ಯಾವುದೇ ಕಾರ್ಯಕ್ರಮವಿರಲಿ ಅಪರ್ಣರದೆ ನಿರೂಪಣೆಯಿಂದ ಕಳೆಗಟ್ಟುತಿತ್ತು. ಸ್ಪುಟವಾಗಿ ಸರಳವಾಗಿ ಉಚ್ಚಾರಣಾ ಶೈಲಿಯ ಜೊತೆ ತಕ್ಕ ಸಾಂಪ್ರದಾಯಿಕ ಉಡುಗೆಯೊಂದಿಗೆ ಗೌರವಿಸಲ್ಪಡುತ್ತಿದ್ದರು. ಅವರ ಪ್ರತಿಮಾತಿನಲ್ಲೂ ಸಾಹಿತ್ಯ ಸದಭಿರುಚಿ ಧ್ವನಿಸುತ್ತಿತ್ತು. ಅವರ ಸಹಜ ಮುಗ್ಧ ನಗುವಿನ ನಡವಳಿಕೆ ನಮ್ಮ ಮನೆ ಅಕ್ಕ ತಂಗಿ ಮಗಳಂತೆ ಆಪ್ತತೆ ಮೂಡಿಸುತ್ತಿದ್ದ ಅಪರ್ಣ, ಗಂಭೀರವಾಗಿ ಇರುವಂತೆಯೂ ಕಾಣುತ್ತಿದುಂಟು. ಆದರೆ ಮಜಾ ಟಾಕೀಸಿನ ಒನ್ ಅಂಡ್ ಒನ್ಲಿ ವರು-ವರಲಕ್ಷ್ಮಿ ಪಾತ್ರದ ಮೂಲಕ ತನ್ನೊಳಗಿನ ಅದ್ಭುತ ಹಾಸ್ಯ ಪ್ರತಿಭಾ ಪ್ರಜ್ಞೆಯನ್ನು ಪ್ರದರ್ಶಿಸಿದ್ದರು. ಈ ಮೂಲಕ ಕೋಟ್ಯಾಂತರ ಪ್ರೇಕ್ಷಕರನ್ನು ನಕ್ಕು ನಗಿಸಿ ಅಭಿಮಾನ ಸೂರೆಗೊಂಡಿದ್ದು ಅಪರ್ಣರ ಬಹುಮುಖ ಪ್ರತಿಭಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. ವಾಸ್ತವ ಬದುಕಿನಲ್ಲಿ ಹಲವು ಏರಿಳಿತದ ಅನುಭವಗಳನ್ನು ಕಂಡು ಮಾಗಿದ್ದ ಅಪರ್ಣರ ವ್ಯಕ್ತಿತ್ವದ ತೂಕವು ಅವರ ಮಾತಿನಲ್ಲಿ ವ್ಯಕ್ತವಾಗುತಿತ್ತು. ಸದಾಕಾಲವೂ ಕ್ರಿಯಾಶೀಲತೆಯಿಂದ ಭಾಷೆ, ನೆಲ ಹಾಗೂ ಸಾಂಸ್ಕೃತಿಕ ಪ್ರತಿನಿಧಿಯಾಗಿ ತೊಡಗಿಸಿಕೊಂಡು ಎಲ್ಲರೊಳಗೊಳ್ಳುತ್ತಿದ್ದರು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಮಾರ್ಗದರ್ಶನದಲ್ಲಿ ಅರಳಿದ ಕೂಸಾಗಿ ದಶಕಗಳ ಕಾಲ ತಮ್ಮದೇ ಆದ ಕನ್ನಡತನದ ಕಲಾ ಸೇವೆ ಮಾಡಿರುವ ಅಪರ್ಣ ಅವರದು ನಿಜಕ್ಕೂ ಸ್ಪೂರ್ತಿದಾಯಕ ಜೀವನ. ನಾನು ಅಪರ್ಣ ಅವರನ್ನು ಮೊದಲಿಗೆ ಕಂಡಿದ್ದು ಡಾ.ವಿಷ್ಣುವರ್ಧನ್ ಅವರ “ನಮ್ಮೂರ ರಾಜ” ಸಿನಿಮಾದಲ್ಲಿ. ಬಾಲ್ಯದಲ್ಲಿ ಅಪ್ಪನೊಂದಿಗೆ ಸಿನಿಮಾ ನೋಡುತ್ತಿದ್ದ ಕಾಲ. ಆಗಲೇ ಅವರ ಮುಗ್ಧ ಅಭಿನಯ ನನ್ನ ಮನಸ್ಸಿಗೆ ತಟ್ಟಿ ಬಹುದಿನಗಳ ಕಾಲ ಉಳಿಯುವಂತಾಗಿತ್ತು. ನಂತರ ನಾನು ನಕ್ಕು ಹಗುರಾಗುತ್ತಿದ್ದ ಮೆಚ್ಚಿನ ಕಾರ್ಯಕ್ರಮವಾದ ಮಜಾ ಟಾಕೀಸ್ ಅಪರ್ಣರ “ವರು” ಪಾತ್ರವಂತೂ ಅಧಿಕ ಅಭಿಮಾನ ಮೂಡಿಸಿತ್ತು. ಇಂತಹ ಬಹುಮುಖ ಪ್ರತಿಭಾನ್ವಿತೆಯನ್ನು ನಾಡಿನ ವಾಸ್ತು ಶಿಲ್ಪಿ ಹಾಗೂ ಚಿಂತನಾಶೀಲ ಬರಹಗಾರರಾದ ನಾಗರಾಜ ರಾಮಸ್ವಾಮಿ ವಸ್ತಾರೆ ಕೈಹಿಡಿದಿದ್ದರು. ವಸ್ತಾರೆ ಅವರನ್ನು “ನನ್ನ ಕನಸಿನ ಮನೆಗೆ ನಿಮ್ಮ ವಿನ್ಯಾಸ ಇರಲೆಂದು ಆಸೆ ಪಟ್ಟಿದ್ದೇನೆ ಸರ್ ” ಎಂದು ಮುಜುಗರದಿಂದಲೇ ವಿನಂತಿಸಿಕೊಂಡಿದ್ದೆ. ಸರಳ ಸಜ್ಜನ ವಸ್ತಾರೆ ತಮ್ಮ ಬನಶಂಕರಿಯಲ್ಲಿನ ಮನೆಗೆ ಕರೆಸಿಕೊಂಡು ಪ್ರೀತಿಯಿಂದ ಉಪಚರಿಸಿ ನನ್ನ ಆಸೆಯಂತೆ ತಮ್ಮ ಲೆಟರ್ ಲೆಡ್ ಲಿ ವಿನ್ಯಾಸ ಮಾಡಿ “ಶುಭವಾಗಲಿ” ಎಂದು ಆತ್ಮೀಯತೆ ಮೆರೆದಿದ್ದರು.
ಅಂದು ಮನೆಗೆ ಭೇಟಿ ನೀಡಿದ ಸಮಯದಲ್ಲಿ ಅವರ ಮನೆಯ ಪರಿಸರದಲ್ಲಿ ಮರಗಳು ಹೆಚ್ಚಿರುವುದರಿಂದ ಕೋತಿಗಳು ಸಾಕಷ್ಟು ಕಂಡವು. ಎರಡು ಕೋತಿಗಳು ಕಚ್ಚಾಡಿಕೊಂಡು ಕಿರುಚಿಕೊಂಡಿದ್ದು ಕೇಳಿದ ವಸ್ತಾರೆ ಅವರು ಅಯ್ಯೋ ಪಾಪ ಎಂದು ಮನುಷ್ಯತ್ವದಿಂದ ಮಿಡಿದು ತಮ್ಮ ಮನೆಯ ಹುಡುಗರಿಗೆ “ಏನಾಯ್ತು ನೋಡ್ರಪ್ಪ “ಎಂದಿದ್ದು ತಿಳಿದ ನನಗೆ ಅವರ ತುಂಬಾ ಸೂಕ್ಷ್ಮ ಸಂವೇದನೆಯ ಅಂತಃಕರಣಿ ಎಂದು ಮನದಟ್ಟಾಗಿತ್ತು. ಅಂದು ಅಪರ್ಣ ಯಾವುದೋ ಕಾರ್ಯಕ್ರಮ ಹೋಗಿದ್ದರಿಂದ ಕಾಣುವ ಅದೃಷ್ಟ ಸಿಗದೆ ನಿರಾಸೆಯಾಯ್ತು. ಇದನ್ನು ಅಪರ್ಣರಿಗೆ ಮೇಸೆಜ್ ಮೂಲಕ ತಿಳಿಸಿದೆ. “ಅಂದು ಕಾರ್ಯಕ್ರಮದ ಸಲುವಾಗಿ ಹೊರಗಡೆ ಇದ್ದೆ, ಮತ್ತೆ ಬನ್ನಿ ಸಿಗೋಣ” ಎಂದು ಆಪ್ತವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಇನ್ನೆಲ್ಲಿ ಸಿಗಲು ಸಾಧ್ಯ? ಕಳೆದ ವಾರದಲ್ಲೇ ಅಪರೂಪಕ್ಕೆ ಮೆಟ್ರೋ ರೈಲು ಹತ್ತಿ ಬರುವಾಗ, “ಮುಂದಿನ ನಿಲ್ದಾಣ” “ಬಲಗಡೆಯಿಂದ ಇಳಿದುಕೊಳ್ಳಿ” ಹೀಗೆ ಪರಿಚಿತ ಸ್ಪುಟವಾದ ಶುದ್ಧ ಬಾಗಿಲು ತೆರೆದುಕೊಳ್ಳುತ್ತದೆ. ಎಂಬ ಧ್ವನಿ ಪ್ರಯೋಗದಿಂದ ಇದು ಅಪರ್ಣರದೆ ಧ್ವನಿ ಎಂದು ಖುಷಿಪಟ್ಟಿದ್ದೆ. ಇದಾಗಿ ಕೆಲವೇ ದಿನಗಳಲ್ಲೆ ಅವರೇ ಇಲ್ಲ ಎಂಬ ಸುದ್ಧಿ ಮನಸ್ಸಿಗೆ ತೀವ್ರ ನೋವು ತಂದಿದೆ. ಅಪರ್ಣ ಇನ್ನೂ ಬಾಳಿ ಬದುಕಬೇಕಿದ್ದವರು, ಆದರೆ ದೈವಿಚ್ಚೆಗೆ ಎಲ್ಲರೂ ಶರಣಾಗ ಬೇಕಲ್ವೆ. ಏನೇ ಇರಲಿ ಮೊಟ್ಟಮೊದಲು ನಿರೂಪಣೆ ಕ್ಷೇತ್ರದ ಸಾಧಕಿಯೊಬ್ಬರಿಗೆ ರಾಜ್ಯದ ಮುಖ್ಯಮಂತ್ರಿಯೇ ಅಗಲಿಕೆಗೆ ಸಂತಾಪ ಸೂಚಿಸಿದ್ದಲ್ಲದೆ, ಸರ್ಕಾರದ ಗೌರವಗಳನ್ನು ಸಲ್ಲಿಸಿದ್ದು ಅಪರ್ಣರ ಬದುಕಿನ ಹೆಗ್ಗಳಿಕೆಯೇ ಸರಿ. ಒಟ್ಟಾರೆ ಶುದ್ಧ ಮುಗ್ಧ ಮನಸ್ಸಿನ ಸುಸಂಸ್ಕಾರದ ಸಾಧಕ ಜೀವಾತ್ಮಕ್ಕೆ ದೇವರು ಸದ್ಗತಿ ಕರುಣಿಸಲಿ.

– ಸಿದ್ದಾಪುರ ಶಿವಕುಮಾರ್
ಲೇಖಕರು – ಪತ್ರಕರ್ತರು

