ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಾಲೂಕಿನ ಹೈರಿಗೆ ಗ್ರಾಮದಲ್ಲಿ ಶ್ರೀ ರಣದಕಾಳಮ್ಮ ಜಾತ್ರಾ ಮಹೋತ್ಸವ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಾತ್ರೆ ಹಾಗೂ ಅಂಬೇಡ್ಕರ್ ಜಯಂತಿ ಮಹೋತ್ಸವ ಹಿನ್ನೆಲೆ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಸಿಗರಗೊಳಿಸಲಾಗಿತ್ತು. ಮನೆ ಮುಂದೆ ರಂಗೋಲಿ ಬಿಡಿಸಲಾಗಿತ್ತು. ರಾತ್ರಿ ವೇಳೆ ಪ್ರಮುಖ ಬೀದಿಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದವು. 3 ದಿನಗಳ ಕಾಲ ನಡೆದ ಈ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ, ದೇವಿಯ ಕೃಪೆಗೆ ಪಾತ್ರರಾದರು. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನಡೆದ್ರೆ, ರಾತ್ರಿ ದೇವಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಯಿತು. ಸತ್ತಿಗೆ ಸೂರಪಾನಿ, ತಮಟೆ ವಾದ್ಯ, ಅರಮನೆ ಬ್ಯಾಂಡ್ ಸೇರಿದಂತೆ ನಾನಾ ಕಲಾಪ್ರಕಾರಗಳು ಮೆರವಣಿಗೆಗೆ ಮೆರಗು ತಂದವು. ಭಕ್ತರು ರಸ್ತೆ ಇಕ್ಕೇಲುಗಳಲ್ಲಿ ನಿಂತು ದೇವಿಯ ವೈಭೋಗವನ್ನು ಕಣ್ತುಂಬಿಕೊಂಡರು.
ಅಂಬೇಡ್ಕರ್ ಜಯಂತಿ ಹಗು ಜಾತ್ರೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಪ್ರಭ, ಶಿವು, ಚಿಲ್ಲರ್ ಮಂಜು ಅವರ ಕಾಮಿಡಿಗೆ ಪ್ರೇಕ್ಷಕರು ಬಿದ್ದು ಬಿದ್ದು ನಗಾಡಿದರು. ಪ್ರಸಾದ್ ಜಾಕಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸಿತ್ತು. ಕ್ರಿಕೆಟ್ ಪಂದ್ಯಾವಳಿ ಜೊತೆಗೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಅಂಬೇಡ್ಕರ್ ಜಯಂತಿ ಆಚರಣೆ
ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೊದಲು ಶಾಲಾ ಮಕ್ಕಳು ಸಂವಿಧಾನ ಪೀಠಿಕೆ ಓದಿದರು. ಬಳಿಕ ನೆರೆದಿದ್ದ ಗಣ್ಯರು ಸಂವಿಧಾನ ಪೀಠಿಕೆ ವಾಚಿಸುವ ಮೂಲಕ ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಏಪ್ರಿಲ್ 14 ಕೇವಲ ಒಂದು ದಿನಾಂಕವಲ್ಲ. ಅದು ಭಾರತದ ನೆಲದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳು ನಿಜಾರ್ಥದಲ್ಲಿ ಮೊಳಕೆಯೊಡೆದ ದಿನ. ಏಪ್ರಿಲ್ 14, 1891ರಂದು ಮಧ್ಯಪ್ರದೇಶದ ಮಹೌ ಅನ್ನೋ ಪ್ರದೇಶದಲ್ಲಿ ಮಹಾರ್ ಎಂಬ ದಲಿತ ಸಮುದಾಯದಲ್ಲಿ ಮಗುವೊಂದರ ಜನನವಾಗುತ್ತೆ. ಆ ಮಗು ಮುಂದೊಮ್ಮೆ ಇಡೀ ಭಾರತದ ಯೋಚನಾ ಲಹರಿಯನ್ನೇ ಬದಲಾಯಿಸಿ, ಇಡೀ ದೇಶವನ್ನೇ ಪ್ರಬುದ್ಧ ರಾಷ್ಟ್ರವನ್ನಾಗಿ ಮಾಡುತ್ತೆ. ಆ ಮಗುವಿನ ಹೆಸರೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಇಂದು ನಾವು ನೀವೆಲ್ಲರೂ ಒಟ್ಟುಗೂಡಿ ನಿಂತು ಮಾತನಾಡುತ್ತಿರುವುದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಹೀಗಾಗಿ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಗಣ್ಯರು ಸಲಹೆ ನೀಡಿದರು.

