-ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಪ್ರತಿಷ್ಠಿತ ಬಗಾನ್ ಫುಟ್ಬಾಲ್ ತಂಡದಲ್ಲಿ ಹೃದಯ್ ಎನ್ನುವ ಯುವಕನೊಬ್ಬ ಹೆಚ್ಚುವರಿ ಆಟಗಾರನಾಗಿ ಇದ್ದ. ಹೃದಯ್ನನ್ನು ತಂಡದ ಆಡಳಿತ ಮಂಡಳಿಯು ಅಭ್ಯಾಸ ಪಂದ್ಯಗಳಲ್ಲಿ ಆಡಿಸುತ್ತಿತ್ತೇ ವಿನಃ ಎಂದಿಗೂ ಪ್ರಮುಖ ಪಂದ್ಯಗಳ ಹನ್ನೊಂದು ಮಂದಿಯ ತಂಡದಲ್ಲಿ ಆಟವಾಡಿಸುತ್ತಾ ಇರಲಿಲ್ಲ, ಹೃದಯ್ ಎಂದಿಗೂ ತಾನು ಕೇವಲ ಮೀಸಲು ಆಟಗಾರ ಮತ್ತು ಅಭ್ಯಾಸ ಪಂದ್ಯಗಳ ಆಟಗಾರ ಎನ್ನುವ ಬೇಸರವಿಲ್ಲದೆ ಪ್ರತಿನಿತ್ಯವೂ ತಪ್ಪಿಸದೇ ಅಭ್ಯಾಸಕ್ಕೆ ಆಗಮಿಸುತ್ತಿದ್ದ. ಹೃದಯ್ನ ಆಟವನ್ನು ಅಭ್ಯಾಸದ ಸಂದರ್ಭದಲ್ಲಿ ಆತನ ತಂದೆಯು ಮೈದಾನದ ಮೂಲೆಯಲ್ಲಿ ಕುಳಿತು ವೀಕ್ಷಿಸುತ್ತಾ ಇದ್ದರು. ಅದೊಂದು ದಿನ ಪ್ರಮುಖ ಪಂದ್ಯಾವಳಿ ಪ್ರಾರಂಭವಾಗಿ ಬಗಾನ್ ತಂಡವು ಎಲ್ಲಾ ಹಂತಗಳನ್ನೂ ದಾಟಿ ಉಪಾಂತ್ಯವನ್ನು ತಲುಪಿದಾಗಲೂ ಹೃದಯ್ ಆಡುವ ಬಳಗದಲ್ಲಿ ಎಲ್ಲೂ ಕಾಣಲೇ ಇಲ್ಲ. ಆದರೆ ತಂಡವು ಫೈನಲ್ ತಲುಪಿ ಪಂದ್ಯ ಇನ್ನೇನು ಪ್ರಾರಂಭ ಆಗಬೇಕು ಎನ್ನುವಾಗ ಹೃದಯ್ ಹಠಾತ್ತನೆ ತಂಡದ ತರಬೇತುದಾರನ ಬಳಿ ತೆರಳಿ, ಇದುವರೆಗೂ ‘ನೀವು ನನ್ನನ್ನು ಹೆಚ್ಚುವರಿ ಆಟಗಾರನಾಗಿ ಬಳಸಿಕೊಂಡಿದ್ದೀರೇ ವಿನಃ ಯಾವ ಪಂದ್ಯದಲ್ಲೂ ನನಗೆ ಆಡಲು ಅವಕಾಶ ನೀಡಿಲ್ಲ. ದಯವಿಟ್ಟು ಇಂದಾದರೂ ನನಗೊಂದು ಅವಕಾಶವನ್ನು ನೀಡಿರಿ’ ಎಂದು ಬೇಡಿಕೊಂಡ. ಆಗ ತರಬೇತುದಾರ, ‘ನಿನಗಿಂತಲೂ ಅತ್ಯುತ್ತಮವಾಗಿ ಆಟವನ್ನು ಆಡುವ ಆಟಗಾರರು ನಮ್ಮ ತಂಡದಲ್ಲಿ ಇದ್ದಾರೆ, ಅದೂ ಅಲ್ಲದೇ ನೇರವಾಗಿ ಫೈನಲ್ ಪಂದ್ಯದಲ್ಲಿ ನಾನು ಅಷ್ಟೊಂದು ದೊಡ್ಡ ಪ್ರಮಾಣದ ರಿಸ್ಕ್ ತೆಗೆದುಕೊಳ್ಳಲು ಸಿದ್ಧನಿಲ್ಲ’ ಎಂದು ಹೇಳಿದರು. ಆಗ ಹೃದಯ್, ‘ನೀವು ದಯವಿಟ್ಟು ಹಾಗೆ ಹೇಳಬೇಡಿ, ನನಗೊಂದು ಅವಕಾಶವನ್ನು ಕೊಟ್ಟು ನೋಡಿ; ನಿಮ್ಮ ನಿರೀಕ್ಷೆಗೂ ಮೀರಿದಂತಹ ಆಟವನ್ನು ಹಾಗೂ ಫಲಿತಾಂಶವನ್ನು ನಾನು ನಮ್ಮ ತಂಡಕ್ಕೆ ತಂದುಕೊಡುತ್ತೇನೆ’ ಎಂದು ಅಂಗಲಾಚಿ ಬೇಡಿಕೊಂಡನು. ಹೃದಯ್ನ ಪರಿಪರಿಯಾದ ಮನವಿಗೆ ಒಪ್ಪಿದ ತರಬೇತುದಾರ ‘ಸರಿ, ತಂಡದ ಪೂರ್ತಿ ಪ್ರತಿಷ್ಠೆಯನ್ನು ಇಂದು ಪಣಕ್ಕೆ ಇಟ್ಟು ನಿನ್ನನ್ನು ಆಡುವ ಬಳಗದ ಒಳಕ್ಕೆ ತೆಗೆದುಕೊಂಡು ನಿನ್ನನ್ನು ಆಡಿಸುತ್ತೇನೆ, ನನ್ನ ನಿರೀಕ್ಷೆಯನ್ನು ಹುಸಿಗೊಳಿಸಬೇಡ’ ಎಂದು ಹೇಳಿದರು.
ಟ್ರೆಡಿಯಂಟ್ ಮತ್ತು ಬಗಾನ್ ನಡುವಿನ ಫೈನಲ್ ಪಂದ್ಯದ ಆಟವು ಪ್ರಾರಂಭವಾಗಿತ್ತು, ಸಹ ಆಟಗಾರರು ನೀಡಿದ ಪಾಸ್ ಮೂಲಕ ಚೆಂಡು ಹೃದಯ್ನ ನಿಯಂತ್ರಣಕ್ಕೆ ಬಂದಾಗಲೆಲ್ಲಾ ನಿಖರವಾಗಿ ಗೋಲ್ ಮೇಲೆ ಗೋಲನ್ನು ಬಾರಿಸಿದ. ಅಂಗಣದಲ್ಲಿನ ಆತನ ಆಟದ ಚಲನೆಯಲ್ಲಿ ಮತ್ತು ಮೈದಾನದ ತುಂಬಾ ಓಟದಲ್ಲಿ ಮಿಂಚಿನ ಪ್ರಖರತೆ ಮತ್ತು ಉತ್ಸಾಹವು ಎದ್ದು ಕಾಣುತ್ತಿತ್ತು. ಅಂದಿನ ಆ ಪಂದ್ಯದಲ್ಲಿ ಅಂತಿಮವಾಗಿ ಬಗಾನ್ ತಂಡವು ಟ್ರೆಡಿಯಂಟ್ ತಂಡದ ವಿರುದ್ಧ ೨೦ ಗೋಲುಗಳ ಅಂತರದಿಂದ ಗೆದ್ದಿತು. ಅಂದಿನ ಅಮೋಘವಾದ ವಿಜಯಕ್ಕೆ ಹೃದಯ್ ಬಾರಿಸಿದ ನಿರಂತರ ಗೋಲ್ಗಳೇ ಪ್ರಮುಖ ಕಾರಣವಾಗಿ ಆತನೇ ಬೃಹತ್ ಗೆಲುವಿನ ಪ್ರಮುಖ ಕಾರಣಕರ್ತ ಆಗಿದ್ದ. ಹೃದಯ್ನ ಆಟವನ್ನು ಗಮನಿಸಿದ ತಂಡದ ತರಬೇತುದಾರ ಅತ್ಯಂತ ಖುಷಿಯಿಂದ ‘ಹೃದಯ್, ನಿನ್ನ ಆಟವು ನಿಜಕ್ಕೂ ಅತ್ಯದ್ಭುತವಾಗಿತ್ತು, ನಿನ್ನನ್ನು ಇಂದು ಒಂದು ವೇಳೆ ನಾನು ಆಡಿಸದೇ ಇದ್ದಿದ್ದರೆ ನನ್ನಿಂದ ಬಹುಶಃ ಬಹಳ ದೊಡ್ಡ ತಪ್ಪು ಆಗುತ್ತಿತ್ತು. ಇಂಥಹ ಒಂದು ಅಮೋಘವಾದ ಆಟ ನಿನ್ನಿಂದ ಹೇಗೆ ಸಾಧ್ಯವಾಯಿತು?’ ಎಂದು ಹೃದಯ್ನನ್ನು ಪ್ರಶ್ನಿಸಿದರು.

ತರಬೇತುದಾರರ ಈ ಮಾತಿಗೆ ಹೃದಯ್ ಅತ್ಯಂತ ವಿನೀತನಾಗಿ, ‘ನಾನು ಫೈನಲ್ ಪಂದ್ಯದ ಆಟ ಆಡುವುದನ್ನು ನನ್ನ ತಂದೆ ವೀಕ್ಷಿಸುತ್ತಾ ಇದ್ದರು’ ಎಂದು ಹೇಳಿದ. ಆಗ ತರಬೇತುದಾರ ಪ್ರತಿ ದಿನವೂ ಅಭ್ಯಾಸ ಪಂದ್ಯಗಳನ್ನು ಆಡುವಾಗ ಹೃದಯ್ನ ತಂದೆ ಕುಳಿತುಕೊಳ್ಳುತ್ತಿದ್ದ ಸ್ಥಳದ ಕಡೆಗೆ ನೋಡುತ್ತಾ, ‘ಅಲ್ಲಿ ನಿನ್ನ ತಂದೆ ಕಾಣಿಸುತ್ತಾ ಇಲ್ಲವಲ್ಲ?’ ಎಂದರು. ಆಗ ಒಂದು ಕ್ಷಣ ಯೋಚಿಸಿದ ಹೃದಯ್ನ ಕಣ್ಣಂಚಲ್ಲಿ ಕಣ್ಣೀರು ಜಿನುಗಿ, ‘ಸರ್, ನಿಮಗೆ ನಾನು ಒಂದು ವಿಚಾರವನ್ನು ಹೇಳಬೇಕಿದೆ, ನನ್ನ ತಂದೆಗೆ ಎರಡೂ ಕಣ್ಣುಗಳು ಕಾಣಿಸುತ್ತಿರಲಿಲ್ಲ; ಸುಮಾರು ಐದು ದಿನಗಳ ಹಿಂದೆ ಅವರು ತೀರಿಕೊಂಡರು. ನಾನು ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಆಟ ಆಡುವುದನ್ನು ಅವರು ಮೇಲಿಂದ ವೀಕ್ಷಿಸಿದರು’ ಎನ್ನುತ್ತಾ ತನ್ನೆರಡೂ ಕಣ್ಣುಗಳನ್ನು ಒರೆಸಿಕೊಂಡ.
ಪ್ರತಿಯೊಬ್ಬರ ಸಾಧನೆಯ ಹಿಂದಿರುವ ಶಕ್ತಿ ಮತ್ತು ಮುನ್ನುಡಿಯೇ ಸ್ವಯಂ ಪ್ರೇರಣೆ. ಅದು ಎಲ್ಲೆಲ್ಲೋ ಇರುವುದಿಲ್ಲ, ಅಥವಾ ಪ್ರೇರಣೆಯನ್ನು ಇನ್ನು ಎಲ್ಲಿಂದಲೋ ಖರೀದಿಸಿ ತರಬೇಕಿಲ್ಲ. ಪ್ರೇರಣೆಯು ನಮ್ಮ ಒಳಗಡೆಯೇ ಅಡಗಿರುತ್ತದೆ ಮತ್ತು ಅದನ್ನು ಸಮರ್ಪಕವಾಗಿ ಹೊರತರುವ ಕೆಲಸವಷ್ಟೇ ಸರಿಯಾಗಿ ಆಗಬೇಕಿದೆ. ತನ್ನೊಳಗೆ ಇರುವ ಪ್ರೇರಣೆಯನ್ನು ಅಗತ್ಯ ಇದ್ದಾಗ ವ್ಯಕ್ತಿಯೊಬ್ಬ ಸರಿಯಾಗಿ ಬಳಸಿಕೊಳ್ಳುವುದೇ ಜಾಣತನ. ಕಷ್ಟಕರ ಸನ್ನಿವೇಶಗಳನ್ನು ಎದುರಿಸಿ ಅದರಿಂದ ಹೊರಬರಲು ಪ್ರತಿಯೊಬ್ಬರಿಗೂ ಪ್ರೇರಣೆಯು ಹೆಚ್ಚು ನೆರವಾಗುತ್ತದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಕೆಲಸವನ್ನು ನಿರ್ವಹಿಸಿದರೆ ಅದು ಎಲ್ಲರ ಸಂತೋಷಕ್ಕೂ ಕಾರಣ ಆಗುತ್ತದೆ. ಸ್ವಯಂ ಪ್ರೇರಣೆಗೆ ಒಳಗಾಗುವ ವ್ಯಕ್ತಿಯು ವೀಣೆಯಂತೆ ಸದಾ ಸುಮಧುರವಾದ ನಾದವನ್ನು ಹೊರಹೊಮ್ಮಿಸುತ್ತಲೇ ಇರುತ್ತಾನೆ. ಸ್ವಯಂ ಪ್ರೇರಣೆಯ ಸಹಕಾರದಿಂದ ಜೀವನದ ಆಚೆಗೂ ಅಜರಾಮರರಾಗಿ ಉಳಿದ ಮಹಾನ್ ಸಾಧಕರು ಅನೇಕರಿದ್ದಾರೆ. ನಾವೂ ಸರ್ವಕಾಲಿಕ ಶ್ರೇಷ್ಠ ವ್ಯಕ್ತಿಗಳಾಗಲು ನೆರವನ್ನು ನೀಡುವ ಮತ್ತು ಬೆಳಕನ್ನು ನೀಡುವ ಪ್ರೇರಣೆಯನ್ನು ಸ್ವತಃ ಗಳಿಸಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ.
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

