“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಆ ಕುಟುಂಬ ತನ್ನ ಮನೆಯ ಯಜಮಾನನನ್ನು ಕಳೆದುಕೊಂಡಿತ್ತು, ಮತ್ತೊಂದು ಕುಟುಂಬ ತನ್ನ ಮನೆಯ ಪ್ರೀತಿಯ ಮಗನನ್ನು… ಒಬ್ಬ ಹೆಣ್ಣು ಮಗಳು ತಾನು ಮದುವೆಯಾದ ಪತಿಯನ್ನು ಕಳೆದುಕೊಂಡರೆ ಆ ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.
ಅದು ಸುಮಾರು ನಾಲ್ಕು ವರ್ಷಗಳ ಹಿಂದಿನ ದುರ್ಘಟನೆ. ಪೂರ್ವ ಮಿಜೋರಾಂನ ಗ್ಯಾಲ್ವನ್ ಕಣಿವೆಯಲ್ಲಿ ದುಷ್ಟ ಕೆಂಪು ಚೀನಿಯರ ಬರ್ಬರ ಕೃತ್ಯವು ಸುಮಾರು 20 ಜನ ಭಾರತೀಯ ಮಿಲಿಟರಿ ಪಡೆಯ ಯೋಧರನ್ನು ಬಲಿ ತೆಗೆದುಕೊಂಡ ಹೃದಯವಿದ್ರಾವಕ ಘಟನೆ ದೇಶದ ಜನರ ರಕ್ತವನ್ನು ಕುದಿಯುವಂತೆ ಮಾಡಿತ್ತು.
ಜೂನ್ 15 2020ರ ಮಧ್ಯರಾತ್ರಿ 4300 ಮೀಟರ್ ಎತ್ತರದ (14000ಫೀಟ್ ) ಎತ್ತರದಲ್ಲಿರುವ ಆಕ್ಸಿಜನ್ ಕೊರತೆ ಇರುವ, ಶೂನ್ಯ ತಾಪಮಾನವಿರುವ, ಕಡಿದಾದ ಕಲ್ಲು ಮತ್ತು ಹಿಮದ ಬೆಟ್ಟಗಳ, ವಿಚಿತ್ರ ತಿರುವುಗಳನ್ನು ಹೊಂದಿರುವ ಪರ್ವತ ಶ್ರೇಣಿಯ ಮಗ್ಗುಲಲ್ಲಿಯೇ ರಭಸವಾಗಿ ಹರಿಯುವ ಗ್ಯಾಲ್ವನ್ ನದಿಯ ಆಳವಾದ ಕಣಿವೆಯಲ್ಲಿ ಭಾರತೀಯ ಮಿಲಿಟರಿ ಪಡೆಯ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯವದು.
ಮೊಳೆಗಳನ್ನು ಹೊಡೆದು ತಯಾರಿಸಿದ್ದ ಕಬ್ಬಿಣದ ಸಲಾಕೆಗಳನ್ನು ಹಿಡಿದು ಬಂದ ಕ್ರೂರ ಕೆಂಪು ಚೀನೀ ಪಡೆ ನಿಶ್ಯಸ್ತ್ರರಾಗಿದ್ದ ಭಾರತೀಯ ಪಡೆಯ ಯೋಧರ ಮೇಲೆ ಮುಗಿಬಿದ್ದರು.ಅಪರಾತ್ರಿಯಲ್ಲಿ ತಮ್ಮ ಮೇಲೆ ಮುಗಿಬಿದ್ದ ಚೀನಿ ಪಡೆಯನ್ನು 20 ಜನ ಶೂರ ಭಾರತೀಯ ಯೋಧರು ತಮ್ಮ ಕೊನೆ ಉಸಿರಿನವರೆಗೆ ಧೀರೋದಾತ್ತವಾಗಿ ಎದುರಿಸಿದರು. ಅವರ ಪೈಶಾಚಿಕ ಆಕ್ರಮಣಕ್ಕೆ ತುತ್ತಾಗಿ ಗಾಯಗೊಂಡು ರಕ್ತಸಿಕ್ತವಾಗಿದ್ದ ಭಾರತೀಯ ಪಡೆಯ ಯೋಧರಲ್ಲಿ ಕೆಲವರು ಹೆಪ್ಪುಗಟ್ಟಿದ ಗ್ಯಾಲ್ವನ್ ನದಿ ಕಣಿವೆಯಲ್ಲಿ ದೂಡಲ್ಪಟ್ಟು ಪ್ರಾಣ ಕಳೆದುಕೊಂಡರು. ಕ್ರೌರ್ಯದ ಪರಮಾವಧಿ ಎಂದರೆ ಬಹುಶಃ ಇದೇ ಇರಬೇಕು.
LAC ಲೈನ್ ಆಫ್ ಎಕ್ಚುವಲ್ ಕಂಟ್ರೋಲ್… ಎಂಬುದು ಎರಡು ನ್ಯೂಕ್ಲಿಯರ್ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವೆ ಇರುವ ಗಡಿ ರೇಖೆಯಾಗಿದ್ದು ಈ 47 ವರ್ಷಗಳಲ್ಲಿ ಇದೇ ಮೊದಲ ಬಾರಿ ಇಂತಹ ಅಮಾನುಷ ಆಕ್ರಮಣ ನಡೆದುಹೋಯಿತು. ದುರದೃಷ್ಟಕ್ಕೆ ಚೀನಾ ಎಂದಿಗೂ ಗಡಿರೇಖೆಗಳನ್ನು ಗೌರವಿಸಿಲ್ಲ. ಶಾಂತಿ ಒಪ್ಪಂದವನ್ನು ತಿರಸ್ಕರಿಸುವ ಅವರು ಯಾವುದೇ ರೀತಿಯ ಪ್ರಚೋದನೆಗಳಿಲ್ಲದೆ ಇದ್ದಾಗಲೂ ಕೂಡ ನಮ್ಮ ಭಾರತೀಯ ಸೇನೆಯ ಮೇಲೆ ಆಕ್ರಮಣ ಮಾಡಿ ಅವರನ್ನು ಬರ್ಬರವಾಗಿ ಕೊಂದು ಹಾಕಿದರು.
ಈ ಕೃತ್ಯ ನಡೆದು ಸುಮಾರು ನಾಲ್ಕು ವರ್ಷಗಳೇ ಸಂದು ಹೋಗಿವೆ… ಆದರೂ ಕೂಡ ಯಾವುದೇ ರೀತಿಯ ಮಾತುಕತೆಗಳು ಈ ಎರಡೂ ರಾಷ್ಟ್ರಗಳ ನಡುವೆ ನಡೆದಿಲ್ಲ.
ಭಾರತೀಯ ಸೇನೆಯ ಆಯಕಟ್ಟಿನ ಹುದ್ದೆಗಳಲ್ಲಿರುವ ಮುಖ್ಯಸ್ಥರು ರಾಡ್ ಕ್ಲಿಫ್ ಲೈನ್ ಅಥವಾ ಮ್ಯಾಕ್ ಮೋಹನ್ ಗಡಿ ರೇಖೆ ಇಲ್ಲವೇ ಮತ್ಯಾವುದೇ ಗಡಿ ರೇಖೆಯಿರಲಿ, ಭೂಭಾಗದಲ್ಲಿರಲಿ ಇಲ್ಲವೇ ಸಮುದ್ರ ಮಾರ್ಗವೇ ಇರಲಿ, ಒಬ್ಬೇ ಒಬ್ಬ ಯೋಧನನ್ನು ಕಳೆದುಕೊಳ್ಳಲು ನಾವು ಸಿದ್ದರಿಲ್ಲ ಎಂದು ಆಕ್ರೋಶದಿಂದ ನುಡಿಯುತ್ತಾರೆ.
ಜೂನ್ 20, 2024ರ ಆ ದಿನ ಜೀವ ಕಳೆದುಕೊಂಡ ಆ ಧೀರ ಹೃದಯಗಳ ಸಾವು ವ್ಯರ್ಥವಾಗದಿರಲಿ. ಈ ವಿಷಯದಲ್ಲಿ ಭಾರತ ಸರ್ಕಾರವು ಹಿಂಜರಿಯದೆ ತಕ್ಕ ಕ್ರಮ ಕೈಗೊಳ್ಳಲಿ ಎಂಬುದು ಎಲ್ಲ ಭಾರತೀಯ ಯೋಧರ ಒಕ್ಕೊರಳಿನ ದನಿಯಾಗಿದೆ.
ಆ ದಿನ ಪ್ರಾಣ ಕಳೆದುಕೊಂಡ ಆ ಸೈನಿಕರು ಮತ್ತೆ ಹುಟ್ಟಿ ಬರಲಾರರು ನಿಜ… ಆದರೆ ಆ ಕುಟುಂಬಗಳು ತಮ್ಮ ಮನೆಯ ಮುಖ್ಯ ಸದಸ್ಯನನ್ನು ಕಳೆದುಕೊಂಡಿದ್ದು ಅವರ ನೋವಿನ ಆಳ ನಮಗೆ ಅರಿವಾಗಲು ಸಾಧ್ಯವೇ ಇಲ್ಲ.
ನಿಶ್ಯಸ್ತ್ರರಾಗಿರುವ ವೀರ ಯೋಧರ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಕೊಂದಿರುವ ಚೀನಿ ಸೇನೆಯ ಈ ಕ್ರಮ ಹೇಡಿತನದ್ದು ಮತ್ತು ನಿರ್ವೀರ್ಯವಾದುದು. ಓರ್ವ ಭಾರತೀಯ ಯೋಧನಾಗಿ ಈ ಘಟನೆಯನ್ನು ನೆನೆದಾಗ ನನ್ನ ರಕ್ತ ಕುದಿಯುತ್ತದೆ ಮತ್ತು ಅಗಲಿದ ಆ ವೀರ ಯೋಧರ ಶವ ಪೆಟ್ಟಿಗೆಗಳು ಲಡಾಕ್ ಗೆ ಒಂದರ ಹಿಂದೊಂದರಂತೆ ತರಲ್ಪಟ್ಟಾಗ ನನ್ನ ಹೃದಯ ನೋವಿನಿಂದ ಒದ್ದಾಡಿದೆ ಎಂದು ಸೇನಾ ಪಡೆಯ ಮುಖ್ಯಸ್ಥರು ತುಂಬಾ ನೋವಿನಿಂದ ಹೇಳಿದ ಮಾತುಗಳು ಪರಿಸ್ಥಿತಿಯ ಕ್ರೌರ್ಯವನ್ನು ತೋರುತ್ತವೆ.
ಇದೀಗ ಭವ್ಯ ಭಾರತದ 140 ಕೋಟಿ ಜನ ಭಾರತೀಯ ನಾಗರಿಕರಾಗಿ ನಮ್ಮ ಕರ್ತವ್ಯವೇನೆಂದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಭಾರತೀಯ ಸೇನಾ ಪಡೆಗಳು ಈ ಹೇಡಿ ಆಕ್ರಮಣಕ್ಕೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಭವಿಷ್ಯದಲ್ಲಿ ಭಾರತ ದೇಶದ ಮೇಲೆ ಮತ್ತೊಮ್ಮೆ ಆಕ್ರಮಣ ಮಾಡುವ ಮುನ್ನ ಚೀನಾ ದೇಶವು ಎರದೆರಡು ಬಾರಿ ಯೋಚಿಸುವಂತಹ ಪೆಟ್ಟು ನೀಡಬೇಕು.
ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವ ಹೊಣೆಗಾರಿಕೆ ಕೇವಲ ನಮ್ಮ ಸೇನಾ ಪಡೆಯ ಯೋಧರದು ಮಾತ್ರವಲ್ಲ… ನಾವು ಕೂಡ ನಮ್ಮ ಧ್ವನಿಯನ್ನು ಇಂತಹ ಹೇಡಿ ಕೃತ್ಯಗಳ ವಿರುದ್ಧ ಜೋರಾಗಿ ಎತ್ತುವ ಮೂಲಕ ವಿದೇಶಿ ಆಕ್ರಮಣಕಾರರ ಈ ಕೃತ್ಯವನ್ನು ಖಂಡಿಸುವ ಮೂಲಕ ಭವ್ಯ ಭಾರತದ ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ಪಾಲಿಸಬೇಕು. ಆಗ ಮಾತ್ರ ವೀರ ಮರಣ ಹೊಂದಿದ ನಮ್ಮ ಎಲ್ಲ ಸೈನಿಕರ ಆತ್ಮಗಳಿಗೆ ಶಾಂತಿ ದೊರೆಯುತ್ತದೆ.
ಜೈ ಹಿಂದ್
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

