ಆಲಮಟ್ಟಿ ಮಂಜಪ್ಪ ಹರ್ಡೇಕರ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ | ಅಣಕು ಮತದಾನ | ಚುನಾವಣೆ ನಿಯಮಗಳ ಪಾಲನೆ
ಆಲಮಟ್ಟಿ: ಇಂದಿನ ಯುವಜನತೆಯಲ್ಲಿ ಮಾನವೀಯ ಮೌಲ್ಯತೆಗಳುಳ್ಳ ಭಾವ ಮೊಳಕೆಯೊಡೆಯಬೇಕು ಜೊತೆಗೆ ಶ್ರೇಷ್ಠತೆಯ ನಾಯಕತ್ವದ ಗುಣಗಳು ಆಳವಡಿಸಿಕೊಳ್ಳಬೇಕು ಅಂದಾಗ ಭವಿಷ್ಯತ್ತಿನ ಆದರ್ಶತೆಗೊಂದು ನೈತಿಕತೆಯ ಮೌಲ್ಯಾಧಾರಿತದ ಮೆರುಗು ಬಂದಿತೆಂದು ಎಂದು ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು.
ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜರುಗಿದ ಪ್ರಸಕ್ತ ೨೦೨೪-೨೫ ನೇ ಸಾಲಿನ ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿನ ಅತ್ಯಂತ ಶಿಸ್ತುಬದ್ಧ ನಿಯಮಗಳನ್ನು ಇಲ್ಲಿ ಅನುಸರಿಸಿ ಚುನಾವಣಾ ಪ್ರಕ್ರಿಯೆ ಕೈಗೊಂಡು ಪಾರದರ್ಶಕತೆ ಅರಿವು ಮಕ್ಕಳಲ್ಲಿ ಮೂಡಿಸಲಾಗುತ್ತಿದೆ. ಅಣಕು ಮತದಾನ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಿ ದೇಶದ ಸಾರ್ವತ್ರಿಕ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬ ಸ್ಪಷ್ಟತೆಯ ಪರಿಕಲ್ಪನೆಯ ಅರಿವು ಮಕ್ಕಳಲ್ಲಿ ಮನದಟ್ಟು ಮಾಡಿಕೊಡಲಾಗುತ್ತಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಚುನಾವಣಾ ಪ್ರಕ್ರಿಯೆ, ಜನಪ್ರತಿನಿಧಿಗ ಆಯ್ಕೆ ಹೇಗೆ ನಡೆಯುತ್ತದೆ ಎಂಬ ಸ್ಪಷ್ಟ ಮಾದರಿ ಚಿತ್ರಣ ತೆರೆದಿಟ್ಟು ಸೂಕ್ತ ರೀತಿಯಲ್ಲಿ ಅರಿವಿನಾಂಶಗಳನ್ನು ತಮ್ಮ ಶಿಕ್ಷಕ ಸಮೂಹದವರು ಮಕ್ಕಳಿಗೆ ಮೂಡಿಸಿದ್ದಾರೆ ಎಂದರು.
ಇದು ಸ್ಪರ್ಧಾತ್ಮಕ ಯುಗಮಾನ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲೇ ಉತ್ತಮ ನಡುವಳಿಕೆ ಅತ್ಯಗತ್ಯ. ಅಲ್ಲದೇ ಇಂದಿನ ಮಕ್ಕಳಿಗೆ ಎಲ್ಲ ಸ್ತರದ ಅನುಭವ ಗುಣಮಟ್ಟದ ಶಿಕ್ಷಣ ಜೊತೆಗೆ ದೊರೆಯಬೇಕು. ಶಿಸ್ತು, ಶ್ರದ್ಧೆ, ಸಂಯಮ, ಸಹನೆ ತಾಳ್ಮೆ, ಉತ್ತಮ ಹವ್ಯಾಸ, ಕಠಿಣ ಪರಿಶ್ರಮ, ದೃಢ ಸಂಕಲ್ಪದ ದೃಷ್ಟಿಕೋನ, ಸಕಾರಾತ್ಮಕ ಧೋರಣೆ,ಆತ್ಮಬಲದ ಪ್ರಯತ್ನಗಳು ಯಶಸ್ವಿನ ಮೂಲ ಮಂತ್ರಗಳಾಗಿವೆ ಎಂದು ಗಿಡ್ಡಪ್ಪಗೋಳ ನುಡಿದರು.
ಚುನಾವಣೆ ಪ್ರಕ್ರಿಯೆ ಅಚ್ಚತನ : ಚುನಾವಣೆಯ ಅಧಿಸೂಚನೆ ಹೊರಡಿಸಿ ಹೆಸರು ನೊಂದಣಿಗೆ ಅವಕಾಶ ಕಲ್ಪಿಸಲಾಯಿತು. ನಾಮ ಪತ್ರ ಸಲ್ಲಿಸುವುದು ನಾಮ ಪತ್ರ ಪರಿಶೀಲನೆ ಅಂತಿಮ ಉಮೇದುವಾರರ ಪಟ್ಟಿ, ಚುನಾವಣಾ ಪ್ರಚಾರ ಈ ರೀತಿಯಾಗಿ ನಿಯಮಗಳನ್ನು ಪಾಲಿಸಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮೊಬೈಲ್ ನಲ್ಲಿ ಅಣಕು ಮತದಾನ, ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿಪ್ಯಾಡ್ ಬಳಸಿ ಶಾಲಾ ಸಂಸತ್ತು ಚುನಾವಣೆ ವಿಶೇಷತೆಯಿಂದ ಜರುಗಿಸಲಾಯಿತು.
ಮಕ್ಕಳು ಗುರುತಿನ ಚೀಟಿ ಆಧಾರಕಾರ್ಡದೊಂದಿಗೆ ತಮ್ಮ ಮತಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತು ಮತಗಟ್ಟೆ ಕೇಂದ್ರದೊಳಗಡೆ ತೆರಳಿ ಮತದಾನ ಮಾಡಿ ಖುಷಿಯಿಂದ ಹೊರಬಂದರು.
ಚುನಾವಣೆ ಅಧಿಕಾರಿಗಳಾಗಿ ಶಿಕ್ಷಕ ಎಂ.ಎಚ್.ಬಳಬಟ್ಟಿ, ಎಮ್.ಎಸ್.ಗಾಳಪ್ಪಗೋಳ,ಶಿಕ್ಷಕಿ ಸರಸ್ವತಿ ಈರಗಾರ, ಜಗದೇವಿ ಕೆ, ಜ್ಯೋತಿ ಹಡಪದ ಕಾರ್ಯನಿರ್ವಹಿಸಿದರು.
ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ, ಮಾರ್ಗದರ್ಶಕರಾಗಿ ಹಿರಿಯ ಶಿಕ್ಷಕ ಯು.ಎ.ಹಿರೇಮಠ, ಜಿ.ಎಂ.ಹಿರೇಮಠ,
ಪ್ರಿಸೈಡಿಂಗ್ ಅಧಿಕಾರಿಯಾಗಿ ಕುಮಾರಿ: ಸ್ನೇಹಾ ದಳವಾಯಿ, ಎ.ಪಿ.ಆರ್.ಓ. ನಿಶ್ಚಿತಾ ಕೊಪ್ಪನ್ನವರ, ಒಂದನೇ ಪೋಲಿಂಗ್ ಅಧಿಕಾರಿಯಾಗಿ ವಿಜಯಲಕ್ಷ್ಮೀ ತಳೂರ, ಎರಡನೇ ಪೋಲಿಂಗ್ ಅಧಿಕಾರಿ ಚಂದ್ರಿಕಾ ಹಿರೇಮಠ,ಮೂರನೇ ಪೋಲಿಂಗ್ ಅಧಿಕಾರಿಯಾಗಿ ರತ್ನಾ ಜಲ್ಲಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದರು.
ಮತದಾನದ ಬಳಿಕ ಮತ ಎಣಿಕೆ ಕಾರ್ಯನಡೆಯಿತು. ತದನಂತರ ಚುನಾವಣೆಯಲ್ಲಿ ವಿವಿಧ ಖಾತೆಗಳ ಆಯ್ಕೆ ಬಯಸಿ ಗೆಲುವು ಸಾಧಿಸಿ ಅಭ್ಯರ್ಥಿಗಳ ಹೆಸರನ್ನು ಶಾಲಾ ಚುನಾವಣಾ ಆಯೋಗದ ಮುಖ್ಯಸ್ಥರು ಪ್ರಕಟಿಸಿದರು.
ಪ್ರಧಾನ ಮಂತ್ರಿಯಾಗಿ ಆಕೀಬ ತಹಶೀಲ್ದಾರ, ಮಹಿಳಾ ಪ್ರಧಾನಿಯಾಗಿ ಫೈರೋಜ್ ಬಾಗಲಕೋಟ, ಉಪ ಪ್ರಧಾನಿಯಾಗಿ ಮದ್ವೇಶ ಕುಲಕರ್ಣಿ ಆಯ್ಕೆಯಾದರು. ಅದರಂತೆ ವಿನೋದ ಗುಳಬಾಳ ಕ್ರೀಡಾ ಮಂತ್ರಿ, ಸಮರ್ಥ ಭಲೇಶ್ವರ ಆರೋಗ್ಯ ಮಂತ್ರಿ, ಶಂಕ್ರಮ್ಮ ಹುಲ್ಲೂರ ವಾಚನಾಲಯ ಮಂತ್ರಿ, ಸಾನಿಯಾ ನದಾಫ್ ಸಾಂಸ್ಕೃತಿಕ ಮಂತ್ರಿ, ಮಲೀಕ ನದಾಫ್ ಪ್ರವಾಸ ಮಂತ್ರಿಯಾಗಿ ಆಯ್ಕೆಯಾದರು.

