ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ’ಪತ್ರಿಕಾ ದಿನಾಚರಣೆ’
ವಿಜಯಪುರ: ಪತ್ರಕರ್ತರು ಆಧುನಿಕ ಸಮಾಜದ ಕೈಗನ್ನಡಿಯಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಕಾರ್ಯನಿರತ ಪರ್ತಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.
ಸೋಮವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ’ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು “ಪತ್ರಕರ್ತರ ಜವಾಬ್ದಾರಿ ಮತ್ತು ಸವಾಲುಗಳು” ವಿಷಯ ಕುರಿತು ಉಪನ್ಯಾಸ ನೀಡಿದರು.
ಬರವಣಿಗೆಯ ಗುಣಮಟ್ಟವೇ ಪತ್ರಕರ್ತರ ಶಕ್ತಿ. ಅದಕ್ಕಾಗಿ ಸತತ ಅಧ್ಯಯಶೀಲರಾಗಿರಬೇಕು. ಸಂಕೀರ್ಣ ಸಮಸ್ಯೆಗಳನ್ನು ಸರಳಗೊಳಿಸಿ ಸ್ಪಷ್ಠತೆಯೊಂದಿಗೆ ಪ್ರಸ್ತುತಪಡಿಸಬೇಕು. ಮಾನವೀಯ ಮತ್ತು ಸಾಮಾಜಿಕ ಕಳಕಳಿಯ ವರದಿಗಳಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಪತ್ರಿಕೆ ಮತ್ತು ಮಾಧ್ಯಮಗಳು ಸಮಾಜ ಪರಿವರ್ತನೆಯ ಪ್ರಮುಖ ಅಂಗವಾಗಿವೆ. ನಮ್ಮ ಕೆಲಸದ ಜೊತೆಗೆ ಇತರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಸೇವೆಯ ಮೂಲಕವೇ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದರು.
ಮಾಧ್ಯಮ ಕ್ಷೇತ್ರ ತರ್ಕಕ್ಕೆ ನಿಲುಕದ ವೇಗದಲ್ಲಿ ಸಾಗುತ್ತಿದೆ. ಹೀಗಾಗಿ ಹಿಂದೆಂದಿಗಿಂತ ಇಂದು ಪತ್ರಕರ್ತರ ಮುಂದೆ ಸಾಲು ಸಾಲು ಸವಾಲುಗಳಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆದಾಗ ಮಾತ್ರ ಪತ್ರಕರ್ತನಾಗಿ ಯಶಸ್ಸು ಸಾಧಿಸಲು ಸಾಧ್ಯ. ಇಲ್ಲದಿದ್ದಲ್ಲಿ ಈ ಪೈಪೋಟಿಯ ಕ್ಷೇತ್ರದಲ್ಲಿ ಕಳೆದುಹೋಗುವ ಸಾಧ್ಯತೆ ಇರುತ್ತದೆಂದು ಇಂದುಶೇಖರ ಮಣೂರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಿರಿಯ ಆದರ್ಶ ಪತ್ರಕರ್ತರ ದಾರಿಯಲ್ಲಿ ಸಾಗಬೇಕು. ತಂತ್ರಜ್ಞಾನದ ಪ್ರಭಾವದಿಂದ ಪತ್ರಿಕೋದ್ಯಮ ಮೇಲೆತ್ತೆರಕ್ಕೆ ಬೆಳೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ವೃತ್ತಿಯಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ ಮಾತನಾಡಿ, ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಭಾಷಾಜ್ಞಾನದ ಅವಶ್ಯಕತೆ ಇದೆ, ನಿರಂತರ ಓದುವ ಹವ್ಯಾಸ ಮೈಗೂಡಿಸಿಕೊಂಡು ಪತ್ರಿಕೋದ್ಯಮ ವೃತ್ತಿ ಕ್ಷೇತ್ರದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಮಲಿಕ್.ಎಲ್.ಜಮಾದಾರ ಪ್ರಾಸ್ತಾವಿಕ ಮಾತನಾಡಿ, ಪತ್ರಿಕೋದ್ಯಮದ ಹುಟ್ಟು-ಬೆಳವಣಿಗೆ ಕುರಿತು ವಿವರಿಸಿದರಲ್ಲದೆ, ಪತ್ರಿಕಾ ದಿನಾಚರಣೆಯು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರನ್ನು ಗುರುತಿಸುವುದು ಮತ್ತು ಪತ್ರಿಕೋದ್ಯಮದ ಮಹತ್ವವನ್ನು ಅರಿಯುವುದಾಗಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ ವೇದಿಕೆ ಮೇಲಿದ್ದರು.
ಈ ವೇಳೆ ಡಾ.ತರನ್ನುಮ್ ಜಬೀನಖಾನ, ಡಾ.ಎಂ.ಬಿ.ಪಾಟೀಲ, ಪ್ರೊ.ಐ.ಎಸ್.ಹೂಗಾರ, ಪ್ರೊ.ಅಕ್ಷಯ ಜನಾಯ, ಪ್ರೊ. ಜೆ.ಬಿ.ಬಿರಾದಾರ ಮಹಾವಿದ್ಯಾಲಯದ ಬೋಧಕ & ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಲಕ್ಷ್ಮೀ ಅಂಗಡಿ ಮತ್ತು ಭಾವನಾ ದೇಶಪಾಂಡೆ ನೀರೂಪಿಸಿದರು, ಕು.ಪ್ರತಿಕ್ಷಾ ನಿಡೋಣಿ ಸ್ವಾಗತಿಸಿದರು, ಕು.ಸುಮನ್ ಪಾಟೀಲ ವಂದಿಸಿದರು.

ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ವತಿಯಿಂದ ’ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಅವರನ್ನು ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ ಅವರು ಸನ್ಮಾನಿಸಿ ಗೌರವಿಸಿದರು.

