– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

ಯಾರೋ ಒಬ್ಬ ಹೆಣ್ಣು ಮಗಳು ರೈಲು ಹಳಿಯ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋದಾಗ ರೈಲಿನ ಒಂದು ತೆರೆದ ಭಾಗ ಆಕೆಗೆ ಬಡಿದು ಆಕೆ ಕ್ಷಣಮಾತ್ರದಲ್ಲಿ ರೈಲಿನ ಗಾಲಿಗಳಡಿಯಲ್ಲಿ ಸಿಲುಕಿ ಸತ್ತುಹೋದಳು. ಆಕೆಯ ಹತ್ತಿರದ ಸ್ನೇಹಿತೆ ಜೋರಾಗಿ ಕಿರುಚಿ ಅಳುತ್ತಿದ್ದರೆ, ವಿಡಿಯೋ ರೆಕಾರ್ಡಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲು ಬಂದಿದ್ದ ಸ್ನೇಹಿತರ ಗುಂಪು ಆಕೆಯನ್ನು ರಕ್ಷಿಸಲು ಸಾಧ್ಯವಾಗದೆ ಅಸಹಾಯಕರಾಗಿ ನಿಂತು ನೋಡುತ್ತಿದ್ದರು.
ಮತ್ತೊಂದು ಘಟನೆಯಲ್ಲಿ ತನ್ನ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಹೋಗಿದ್ದ ಮಿಲಿಟರಿ ಯೋಧನೊಬ್ಬ ತನ್ನ ವಿಡಿಯೋ ಮಾಡಲು ಹೇಳಿ ಮಡುವಿನಲ್ಲಿ ಹಾರಿದನು. ಆದರೆ ನೀರಿನ ಆಳ, ಅಗಲ ಮತ್ತು ರಭಸದ ಅರಿವಿಲ್ಲದೆ ಪ್ರವಾಹದೊಂದಿಗೆ ತಳ್ಳಲ್ಪಟ್ಟಾಗ ಬಂಡೆಗಲ್ಲೊಂದನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗದೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಜಲ ಸಮಾಧಿಯಾದನು. ಪೊಲೀಸ್ ಇಲಾಖೆಯ ಸತತ ಪ್ರಯತ್ನದಿಂದ ಎರಡು ದಿನಗಳ ನಂತರ ಆತನ ಹೆಣ ದೊರೆಯಿತು.
ಮತ್ತೊಬ್ಬರು ಕಡಿದಾದ ಬೆಟ್ಟದ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಾರಿ ಬಿದ್ದು ಪ್ರಾಣವನ್ನೇ ತೆತ್ತ ಘಟನೆ ಇತ್ತೀಚೆಗೆ ನಡೆಯಿತು.
ಮತ್ತೋರ್ವ ಹೆಣ್ಣು ಮಗಳು ತನ್ನ ಮುಖದ ನರಗಳಲ್ಲಿ ಒಂದು ರೀತಿಯ ಅಸಹಜತೆಯನ್ನು ಅನುಭವಿಸಿ ವೈದ್ಯರಲ್ಲಿ ಈ ಕುರಿತು ಚಿಕಿತ್ಸೆ ಪಡೆಯಲು ಹೋದಾಗ ಆಕೆಯ ಅರಿವಿಗೆ ಬಂದದ್ದು ಆಕೆಯ ಅತಿಯಾದ ಸೆಲ್ಫಿ ಹುಚ್ಚು ಆಕೆಯ ಮುಖದ ಸ್ನಾಯುಗಳನ್ನು ಸಂಕುಚಿತಗೊಳಿಸಿರುವುದು.
ತಾನು ತೆಗೆದುಕೊಂಡ ಸೆಲ್ಫಿಗೆ ತಾನು ಬಯಸಿದಷ್ಟು ಲೈಕ್ ಗಳು ಬರಲಿಲ್ಲ ಎಂದು ಬಹು ಮಹಡಿ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ
ಹೀಗೆ ಸೆಲ್ಫಿಯ ಕುರಿತು ಮಾತನಾಡಿದರೆ ಸಾಲು ಸಾಲು ದುರ್ಘಟನೆಗಳು ಕಾಣಸಿಗುತ್ತವೆ, ಕೇಳ ಬರುತ್ತವೆ.
ಹಾಗೆಂದು ಸೆಲ್ಫಿ ತೆಗೆದುಕೊಳ್ಳುವುದು ತಪ್ಪು ಎಂದರ್ಥವಲ್ಲ, ಬದುಕಿನ ಸವಿಗಳಿಗೆಯಲ್ಲಿ ಜೊತೆಗಿದ್ದವರೊಂದಿಗೆ ತೆಗೆದುಕೊಳ್ಳುವ ಸೆಲ್ಫಿಗಳು, ಛಾಯಾ ಚಿತ್ರಗಳು ಮುಂದಿನ ಬದುಕಿನಲ್ಲಿ ಸವಿ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತವೆ. ಆದರೆ ಅಪಾಯವನ್ನು ಆಹ್ವಾನಿಸುವ ಸೆಲ್ಫಿಗಳಿಗೆ ನನ್ನ ವಿರೋಧವಿದೆ.
ಹಾಗಾದರೆ ಜಾಹೀರಾತುಗಳಲ್ಲಿ, ಅಪಾಯವನ್ನು ಎದುರಿಸುವ ರೀತಿಯಲ್ಲಿ ಫೋಟೋಗಳು, ವಿಡಿಯೋ ಚಿತ್ರೀಕರಣಗಳು ನಡೆಯುತ್ತವೆ ಎಂದು ನೀವೆನ್ನಬಹುದು…, ಆದರೆ ಅಲ್ಲಿ ಜೀವ ರಕ್ಷಕ ಸಾಧನಗಳ ದಂಡೇ ಇರುತ್ತದೆ. ಯಾವುದೇ ರೀತಿಯ ಅಪಾಯವಾಗದಂತೆ ಚಿತ್ರೀಕರಣ ಮಾಡುವ ಅವರು ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುತ್ತಾರೆ. ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪತ್ರವನ್ನು ಪಡೆದಿರುತ್ತಾರೆ.ಇಂತಹ ಚಿತ್ರೀಕರಣಗಳಲ್ಲಿ ಭಾಗವಹಿಸುವ ನಟರು ಕೂಡ ಜೀವರಕ್ಷಾ ಸಾಧನಗಳ ಬೆಂಬಲ ಹೊಂದಿರುತ್ತಾರೆ.
ಅಲ್ಲಿಯೂ ಕೂಡ ಎಷ್ಟೋ ಬಾರಿ ಆಯೋಜಕರ ನಿರ್ಲಕ್ಷದಿಂದ ಶಾಶ್ವತ ಅಂಗವಿಕಲತೆಯನ್ನು ಹೊಂದಿದವರು,ಜೀವ ಹಾನಿಗೊಳಪಟ್ಟವರು ಇದ್ದಾರೆ. ಆಗೆಲ್ಲ ಜನರ ಆಕ್ರೋಶ ಮುಗಿಲು ಮುಟ್ಟುತ್ತದೆ… ದಿನಗಳೆದಂತೆ ಘಟನೆಯ ಕಾವು ಆರಿ ಎಲ್ಲರೂ ಆ ದುರ್ಘಟನೆಯ ವಿಷಯವನ್ನು ಮರೆತುಬಿಡುತ್ತಾರೆ.
ಆದಾಗಿಯೂ ಕೈ ಕಾಲು ಮುರಿದುಕೊಂಡರೆ, ಜೀವ ಕಳೆದುಕೊಂಡರೆ ಸಂಬಂಧಪಟ್ಟ ಸಂಸ್ಥೆಯವರು ಸಾಕಷ್ಟು ಎಡತಾಕಿದ ಮೇಲೆ ಒಂದಷ್ಟು ಪರಿಹಾರವನ್ನು ನೀಡಿ ಕೈ ತೊಳೆದುಕೊಳ್ಳುತ್ತಾರೆ…. ತೊಂದರೆ ಅನುಭವಿಸುವವರು ದುರ್ಘಟನೆಗೆ ಈಡಾದ ವ್ಯಕ್ತಿಯ ಕುಟುಂಬದವರು ಮಾತ್ರ. ಇದು ಪರದೆಯ ಹಿಂದಿನ ಸತ್ಯ. ನಮಗೆ ಅಂತಹ ಯಾವ ರಕ್ಷಣೆಗಳು ಇರುತ್ತವೆ ಹೇಳಿ ನೋಡೋಣ!
ಕೆಲ ಸ್ಥಳಗಳು ಸೆಲ್ಫಿ ತೆಗೆದುಕೊಳ್ಳಲು ಅಪಾಯ ಎಂಬ ಅರಿವಿದ್ದು ಕೂಡ ತಮ್ಮ ಜೀವವನ್ನು ಒತ್ತೆ ಇಟ್ಟು ಸೆಲ್ಫಿ ತೆಗೆದುಕೊಳ್ಳುವ, ನಂತರ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಯುವ ಜನರ ದಂಡೇ ಇದೆ.
ನಾನು ಪ್ರೀತಿಸುತ್ತೇನೆ ಎಂದಿಗೂ ಕೈಬಿಡುವುದಿಲ್ಲ ಎಂಬ ಭಾವದಲ್ಲಿ ನೀವು ನಿಮ್ಮ ಜೊತೆಗಾರರೊಂದಿಗೆ ಇಂದು ಹಾಕಿರುವ ಸೆಲ್ಫಿ ಮುಂದೊಂದು ದಿನ ನಿಮ್ಮ ಬದುಕಿನ ದುಸ್ವಪ್ನವಾಗಿ ಕಾಡಬಹುದು.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬದುಕನ್ನು ಕಳೆದುಕೊಂಡವರ ಜೊತೆಗಿದ್ದವರು ಕೂಡ ಜೀವನಪರ್ಯಂತ ಮಾನಸಿಕವಾಗಿ ನೋಯಬಹುದು.
ನೀವು ಹಾಕುವ ಸ್ವಂತಿಗೆ ಬರುವ ಲೈಕ್ಸ್ ಗಳು ಕಮೆಂಟ್ಗಳು ನಿಮ್ಮ ಗುರಿಯತ್ತ ನಿಮ್ಮನ್ನು ತಲುಪಿಸಲಾರವು ಜೀವನದ ಯಶಸ್ಸನ್ನು ನಿರ್ಧರಿಸಲಾರವು. ನಿಮ್ಮ ಹೊಟ್ಟೆಗೆ ಆಹಾರ ಕೊಡಲಂತೂ ಸಾಧ್ಯವೇ ಇಲ್ಲ… ಅಂದಾಗ ಯಾಕೆ ಈ ರಿಸ್ಕ್? ಬೇರೆ ಯಾರೋ ನಿಮ್ಮ ಸಾಹಸವನ್ನು ಮೆಚ್ಚಿ ನಿಮ್ಮನ್ನು ಪ್ರಶಂಸಿಸಲು ಜೀವವನ್ನೇ ಒತ್ತೆ ಇಟ್ಟು ಸೆಲ್ಫಿ ತೆಗೆದುಕೊಳ್ಳುವ ಹುಚ್ಚೇಕೆ?
ಈ ಸೆಲ್ಫಿಯಿಂದ ನಿಮ್ಮ ಪ್ರಾಣ ಹೋದರೆ ಅದನ್ನು ಮರಳಿ ತರಲು ಸಾಧ್ಯವೇ?
ನಿಮ್ಮ ಪಾಲಕರ ಬದುಕಿನ ಆಶಾಕಿರಣ ನೀವು. ಭರವಸೆ ನೀವು. ಅಕಸ್ಮಾತ್ ತೊಂದರೆಗೆ ಈಡಾಗಿ ನಿಮಗೆ ಏನಾದರೂ ಆದರೆ ನಿಮ್ಮ ಹೆತ್ತವರ ಗತಿ ಏನು?
ಎಲ್ಲಕ್ಕಿಂತಲೂ ಮುಖ್ಯವಾಗಿ ಬದುಕು ಅಮೂಲ್ಯವಾದದು. ಕ್ಷುಲ್ಲಕ ಕಾರಣಕ್ಕಾಗಿ ಅದನ್ನು ಕಳೆದುಕೊಳ್ಳುವುದು ಅಕ್ಷರಶಃ ತಪ್ಪು.
ನಿಜವಾಗಿಯೂ ಬೇರೊಬ್ಬರು ನಿಮ್ಮನ್ನು ಗುರುತಿಸಬೇಕು, ನಿಮ್ಮ ಕಾರ್ಯವನ್ನು ಹೊಗಳಬೇಕು, ಲೈಕುಗಳ ಮಹಾಪೂರ ನಿಮಗೆ ದೊರೆಯಲೇಬೇಕು ಎಂದಾದರೆ
ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ತೆಗೆದು ಉದ್ಯೋಗ, ವ್ಯವಹಾರ, ಕೃಷಿ, ನಾಗರಿಕ ಸೇವೆ ಮುಂತಾದೆಡೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಮೂಲಕ ಆದಾಯ ಮಾರ್ಗವನ್ನು ರೂಪಿಸಿಕೊಂಡು ನಿಮ್ಮನ್ನು ಹೆತ್ತವರ, ಒಡಹುಟ್ಟಿದವರ ಸುತ್ತಣ ಸಮಾಜದ ಕಣ್ಣಿನ ಸೆಲ್ಫಿಯಲ್ಲಿ ಮೆಚ್ಚುಗೆಯಿಂದ ಬಂಧಿಯಾಗಿ.
ಬದುಕಿನ ದಾರಿಯಲ್ಲಿ ನಿಮಗಿಂತ ಕಡಿಮೆ ಮೂಲಭೂತ ಅವಶ್ಯಕತೆಗಳನ್ನು ಹೊಂದಿದ ಜನರಿಗೆ ಸಹಾಯಕವಾಗುವಂತಹ ಕೆಲಸಗಳಲ್ಲಿ ತೊಡಗಿಕೊಂಡು ಸಾಮಾಜಿಕ ಸೇವೆ ಮಾಡಿ.
ಅನಾಥರ, ಅಂಗವಿಕಲರ, ಅಸಹಾಯಕ ಮತ್ತು ವೃದ್ಧರ ಬದುಕನ್ನು ನೇರ್ಪಡಿಸಲು ಸಹಾಯ ಮಾಡಿ.
ನೊಂದವರ ಕಣ್ಣೀರೊರೆಸಿ ನಗೆಯನ್ನು ಚೆಲ್ಲಲು ಸಹಾಯ ಮಾಡಿ.
ಹಸಿದವರಿಗೆ ಒಂದು ತುತ್ತು ಅನ್ನ ಹಾಕಿ, ಸಾಧ್ಯವಾದರೆ ಅವರಿಗೊಂದು ಉದ್ಯೋಗ ಕಲ್ಪಿಸಿ ಸಹಾಯ ಮಾಡಿ.
ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಸ್ತುತ ಸಮಾಜದಲ್ಲಿ ಹೆಚ್ಚು ಹೆಚ್ಚು ಮಾನವೀಯ ಪ್ರಜ್ಞೆಯ ಅವಶ್ಯಕತೆ ಇದ್ದು ಅಂತಹ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಖುದ್ದು ಮುಂದಾಗಿ ಮತ್ತು ಇತರರನ್ನು ಪ್ರೋತ್ಸಾಹಿಸಿ.
ಮೇಲ್ಕಂಡ ಎಲ್ಲ ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಹೆತ್ತವರ ನೆರೆಹೊರೆಯ ಮತ್ತು ಸಮಾಜದ ಮೆಚ್ಚುಗೆ ದೊರೆಯುತ್ತದಲ್ಲದೇ ಬದುಕಿನಲ್ಲಿ ಮಹತ್ತರವಾದದನ್ನು ಸಾಧಿಸಿದ ಆತ್ಮ ತೃಪ್ತಿ ದೊರೆಯುತ್ತದೆ. ಆತ್ಮತೃಪ್ತಿಗಿಂತ ಮಿಗಿಲಾದ ಸೆಲ್ಫಿ ಎಲ್ಲಿದೆ ಹೇಳಿ!?
ಅಂತಿಮವಾಗಿ ಹೇಳುವುದಾದರೆ ನಿಮ್ಮ ಸ್ವಂತ ಬದುಕಿನ ಸೆಲ್ಫಿ ನಿಮ್ಮ ಕಣ್ಣು ಮತ್ತು ಮನಗಳಲ್ಲಿ ಅಚ್ಚಾಗಲಿ. ನಿಮ್ಮ ಕಳೆದ ದಿನಗಳಿಗಿಂತ ಮುಂದಿನ ದಿನಗಳನ್ನು ಉತ್ತಮವಾಗಿಸುವ ನಿಮ್ಮದೇ ಬದುಕಿನ ಸೆಲ್ಫಿಯಲ್ಲಿ ನಿಮ್ಮನ್ನು ನೀವು ಚಂದಗಾಣಿಸಿಕೊಂಡು ನೋಡಿ ಆನಂದಿಸಿ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

