ವಿಜಯಪುರ: ರೈತರು ಮಣ್ಣೆತ್ತಿನ ಅಮವಾಸ್ಯೆಯ ದಿನ ಕುಂಬಾರರು ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ತಂದು ಪೂಜಿಸುವ ದೃಶ್ಯ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಕಂಡುಬಂತು.
ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮಣ್ಣು ಕೂಡಾ ದೇವ ಸ್ವರೂಪಿ. ಎತ್ತುಗಳು ಜಮೀನಿನಲ್ಲಿ ರೈತನಿಗಾಗಿ ಹಗಲಿರಳು ದುಡಿದರೆ, ಭೂತಾಯಿ ರೈತನಿಗೆ ಅನ್ನ ನೀಡುತ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಮುಂಗಾರು ಮಳೆ ಪ್ರಾರಂಭದ ನಂತರ ಬರುವ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮಾವಾಸ್ಯೆಯಂದು ರೈತರು ತಮ್ಮ ನೋವು ನಲಿವುಗಳನ್ನು ಬದಿಗಿಟ್ಟು, ಎತ್ತುಗಳನ್ನು ಪೂಜಿಸಿ, ಸಂಭ್ರಮಿಸುವ ಪದ್ದತಿ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಈಗಲೂ ಚಾಲ್ತಿಯಲ್ಲಿದೆ.
ಕಪ್ಪುಎರೆ ಮಣ್ಣಿನಿಂದ ತಯಾರಿಸಿದ ಮಣ್ಣೆತ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ, ನಮ್ಮ ಬದುಕು ಕಷ್ಟಕರವಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್, ವೈಟ್ ಸಿಮೆಂಟ್ನ ಬಣ್ಣ ಬಣ್ಣದ ವಿವಿಧ ನಮೂನೆಯ ಚಿತ್ತಾಕರ್ಷಕ ಎತ್ತುಗಳ ಬೊಂಬೆಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಪರಿಸರ ಸ್ನೇಹಿ ಮಣ್ಣಿನ ಎತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಮಲ್ಲಿಕಾರ್ಜುನ ಕುಂಬಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಣ್ಣೆತ್ತಿನ ಅಮಾವಾಸ್ಯೆಯ ಎರಡು ತಿಂಗಳ ಮುಂಚೆ
ಜೇಡಿ ಮಣ್ಣು, ಕಪ್ಪು ಎರೆ ಮಣ್ಣು ತಂದು, ಹದ ಮಾಡಿ ಮನೆಯ ಎಲ್ಲ ಸದಸ್ಯರು ಸೇರಿ ನೂರಾರು ಮಣ್ಣಿನ ಎತ್ತುಗಳನ್ನು ತಯಾರಿಸಿ ಮನೆಯಂಗಳದ ಖಾಲಿ ಜಾಗದಲ್ಲಿ ಆರಲು ಇಡುತ್ತಿದ್ದೆವು. ಗ್ರಾಮಸ್ತರು ಮುಗಿಬಿದ್ದು ಮಣ್ಣಿನ ಎತ್ತುಗಳನ್ನು ಒಯ್ಯುತ್ತಿದ್ದರು. ಆದರೆ ಈಗ ಆ ದೃಶ್ಯ ಅಪರೂಪ ಎನಿಸಿದೆ ಎಂದು ರಾಜು ಕುಂಬಾರ ತಿಳಿಸಿದರು.
ಮಣ್ಣಿನಿಂದ ಮಾಡಿದ ಎತ್ತುಗಳ ಜೋಡಿಗೆ ಕೇವಲ 100 ರೂ. ಬೆಲೆಯಿದ್ದು, ಮಣ್ಣಿನ ಎತ್ತುಗಳನ್ನು ಕೊಂಡುಕೊಳ್ಳಲು ಹಿಂಜರಿಯುತ್ತಿರುವುದು ವಿಪರ್ಯಾಸ ಎಂದು ಪದ್ಮಾವತಿ ಕುಂಬಾರ ಬೇಸರ ವ್ಯಕ್ತಪಡಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

