-ಕಬೂಲ್ ಕೊಕಟನೂರ,ಶಿಕ್ಷಕ-ಸಾಹಿತಿ, ದೇವರಹಿಪ್ಪರಗಿ (ವಿಜಯಪುರ)
ಭಕ್ತಿಭಾವಗಳ ಸಂಗಮವಾಗಿರುವ ವಿಜಯಪುರ ಜಿಲ್ಲೆ ಭಾವೈಕ್ಯತೆಯ ತಾಣವಾಗಿದೆ. ಆಧ್ಯಾತ್ಮಿಕ ನೆಲೆಗಟ್ಟಿನ ತವರೂರಾಗಿದೆ. ವಿಶೇಷವಾಗಿ ಬಂಜಾರಾ ಸಮುದಾಯದಲ್ಲಿ ಭಕ್ತಿ ಪರಾಕಾಷ್ಠೆ ಪ್ರಖರಗೊಂಡಿದ್ದು, ಸೋಮದೇವರಹಟ್ಟಿ ತಾಂಡಾದ ದುರ್ಗಾದೇವಿ ಬಂಜಾರಾ ಭಕ್ತರ ಪಾಲಿನ ಭಾಗ್ಯವಿಧಾತೆಯಾಗಿದ್ದಾಳೆ. ಪುಟ್ಟ ತಾಂಡಾದಲೊಂದು ದೇವಿ ತನ್ನ ದಿವ್ಯ ಶಕ್ತಿ, ಮಹಿಮೆಯಿಂದ ಇಂದು ಜಗದಗಲಕ್ಕೂ ಪ್ರಸಿದ್ಧಿಯಾಗಿರುವುದು ಧಾರ್ಮಿಕ ಪರಂಪರೆಗೆ ಪಾವನ ಸಾಕ್ಷಿಯಾಗಿದೆ. ರಾಜ್ಯದಲ್ಲಷ್ಟೇ ಅಲ್ಲದೆ ದೇಶ, ವಿದೇಶಗಳ ಗಣ್ಯರ ದೈವತ್ವದ ದಂಡು ಹರಿದು ಬರುತ್ತಿರುವುದು ದೇವಿಯ ಪ್ರಭಾವ ಸಾಕ್ಷೀಕರಿಸುವಂತಾಗಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ನಂ೧ ಎಂದಾಕ್ಷಣ ನೆನಪಾಗುವುದು ದುರ್ಗಾಮಾತೆಯ ಜಾತ್ರಾ ವೈಭವ! ಇದೇ ಜುಲೈ ೫ರಂದು ಲಕ್ಷಾಂತರ ಭಕ್ತರ ಮದ್ಯೆ ಸಡಗರ ಸಂಭ್ರಮದಿಂದ ಜರಗುವ ಜಾತ್ರಾಮಹೋತ್ಸವ ಐತಿಹಾಸಿಕವಾಗಿದೆ. ದೈತ್ಯ ಶಕ್ತಿ ದುರ್ಗೆಯ ದುಗ್ಧಕರುಣಾರಸ ಚರಿತ್ರೆ ಲಕ್ಷಾಂತರ ಭಕ್ತರ ಮನದಲ್ಲಿ ನೆಮ್ಮದಿ, ನಸುಗೆಂಪು ನಗೆ ಚೆಲ್ಲಿದೆ. ದೇವಿಯ ದರ್ಶನದಿಂದ ಅದೇನೋ ಸಾರ್ಥಕ್ಯಭಾವ, ಜೀವನ ಪಾವನ ಎಂಬ ಆಶಾಕಿರಣ ಭಕ್ತಂಗಣದಲ್ಲಿ ಕಾಣಿಸಿಕೊಂಡಿದೆ. ಪರಿಣಾಮ ಆಧ್ಯಾತ್ಮಿಕ, ಐತಿಹಾಸಿಕ ಮೆರುಗು ಈ ಪುಟ್ಟ ತಾಂಡಾಕ್ಕೆ ಒಲಿದು ಬರುತ್ತಿದೆ. ಜನಪ್ರಿಯತೆಯ ಜಾಡಿನಲ್ಲಿ ಎಲ್ಲರ ಚಿತ್ತ ತನ್ನತ್ತ ಆಕರ್ಷಿಸುತ್ತಿದೆ. ದೇವಿಯ ಆಧ್ಯಾತ್ಮ ಬಲದಿಂದ ಚಿಕ್ಕದಾದ ತಾಂಡಾ ಚೊಕ್ಕಾಗಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ದುರ್ಗಾದೇವಿಯ ಐತಿಹಾಸಿಕ ಹಿನ್ನೆಲೆ
ಧಾರ್ಮಿಕ ಮಹತ್ವದೊಂದಿಗೆ ಪವಿತ್ರ ಪುಣ್ಯ ಕ್ಷೇತ್ರ ಹೊಂದಿರುವ ಈ ತಾಂಡೆಯು ದುರ್ಗಾಮಾತೆಯ ಕೃಪೆಯಿಂದ ಭಕ್ತಿಯ ನೆಲೆಬೀಡಾಗಿದೆ. ಸುಮಾರು ೩೦೦ ವರ್ಷಗಳ ಹಿಂದೆ ಬಂಜಾರಾ ಸಮಾಜದ ನಿಶಾನಿಯಿರಿಸಿ ಪುಟ್ಟ ಗುಡಿಸಲೊಂದರಲ್ಲಿ ಪೂಜಿಸಲ್ಪಟ್ಟು ಸ್ಥಾಪನೆಯಾದ ದುರ್ಗಾದೇವಿಯ ಐತಿಹಾಸಿಕ ಹಿನ್ನೆಲೆ ರೋಚಕವಾಗಿದೆ. ಅಂದು ಬಂಜಾರಾ ಸಮಾಜದ ಗುರು ಹಿರಿಯರು ಇಲ್ಲಿಂದ ನಡಿಗೆ ಮೂಲಕ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದು ಮರಳಿ ಬರುತ್ತಿದ್ದರು. ಈ ನಡಿಗೆ ಪರ್ಯಟನ ಸಂಚಾರದ ಸಂಪ್ರದಾಯ ಆಗಾಗ ನಡೆಯುತ್ತಲೇ ಸಾಗಿತ್ತು. ಅದೊಂದು ದಿನ ಈ ಗುರು-ಹಿರಿಯರ ಭಕ್ತಿಯ ಪರಾಕಾಷ್ಠೆಗೆ ದುರ್ಗಾದೇವಿಯು ತಲೆದೂಗಿ ತಿರುಪತಿಯಿಂದ ಸೋಮದೇವರಹಟ್ಟಿ ತಾಂಡೆ ನಂ.೧ ರಲ್ಲಿ ಬಂದು ನೆಲೆಸಿದ್ದಾಳೆ ಎಂಬ ಪ್ರತೀತಿಯಿದೆ. ಅಗ ಸುತ್ತಲಿನ ಬಂಜಾರಾ ಜನ ಪೂಜ್ಯಭಾವನೆಯಿಂದ ನಿತ್ಯ ಪೂಜಿಸಿ ಆರಾಧಿಸಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಪೂಜಾ ಸಂಪ್ರದಾಯ ಐದನೇ ತಲೆಮಾರಿನವರು ಮುಂದುವರೆದುಕೊಂಡು ಬಂದ ಹಿನ್ನೆಲೆಯಲ್ಲಿಂದು ದೇಶದ ಗಮನ ಸೆಳೆಯುತ್ತಿದೆ ಎಂಬುದು ದುರ್ಗಾದೇವಿ ಟ್ರಸ್ಟ್ ಕಮೀಟಿ ಧರ್ಮದರ್ಶಿ ಡಾ. ಜಗನು ಮಹಾರಾಜ ಅನಿಸಿಕೆಯಾಗಿದೆ. ಜಾತ್ರಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಲಿರುವ ಜಗನು ಮಹಾರಾಜರ ತಂದೆ, ಅಜ್ಜ, ಮುತ್ತಜ್ಜ ಸೇರಿದಂತೆ ಹಿಂದಿನ ಹಳೆ ತಲೆಮಾರುಗಳ ಹಿರಿಯರು ದೇವಿಯ ಪೂಜೆ, ಪುರಸ್ಕಾರ ಮಾಡುತ್ತಾ ಬಂದಿದ್ದು ಈ ಪೂಜಾ ಕೈಂಕರ್ಯದ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಇಲ್ಲಿ ಸುಮಾರು ೨೦೦ ಲಂಬಾಣಿ ಕುಟುಂಬಗಳು ವಾಸಿಸುತ್ತಿವೆ.

ದುರ್ಗಾದೇವಿ ಈ ಭಾಗದ ಆಧ್ಯಾತ್ಮಿಕ ಜ್ಯೋತಿ
ತನ್ನ ದಿವ್ಯ ಶಕ್ತಿಯ ಪರಿಣಾಮ ಭಕ್ತರ ಹೃದಯದಲ್ಲಿ ಪ್ರವೇಶಿಸಿ ಬೆಳಕಿನ ಜ್ಯೋತಿಯ ಆಶಾವಾದ ಜ್ಞಾನಶಕ್ತಿ ಜಾಗೃತಗೊಳಿಸಿದ್ದಾಳೆ. ದುಷ್ಟ ಶಕ್ತಿಗಳನ್ನು ಸಂಹರಿಸಿ ಶಿಷ್ಟ ಸಂಸ್ಕೃತಿ ನೆಲೆಗೊಳ್ಳಲು ಕಾರಣಿಯಾಗಿದ್ದಾಳೆ. ಭಕ್ತರ ಬೇಡಿಕೆ ಮನ್ನಿಸುವ ದೇವಿಯಲ್ಲಿ ವಿಧವಾದ ಶಕ್ತಿ ಅಡಗಿದೆ. ಕಷ್ಟ-ಕೋಟಲೆಗಳಿಂದ ಭಕ್ತರಿಗೆ ಮುಕ್ತಿ ದೊರಕಿಸುತ್ತಾಳೆ, ಸಂಕಟ, ದುಃಖ, ಸಮಸ್ಯೆಗಳಿಗೆ ಸ್ಪಂದಿಸುತ್ತಾಳೆ, ಭಕ್ತರನ್ನು ಸಂರಕ್ಷಿಸುತ್ತಾಳೆ, ದುಷ್ಟ-ದುರ್ಗಣಗಳನ್ನು ಹೊಡೆದೊಡಿಸಿ ಬದುಕಿಗೆ ಬೆಳಕು ನೀಡುತ್ತಾಳೆಂಬ ಪ್ರತೀತಿ ಘಾಡವಾಗಿದೆ. ದುರ್ಗಾದೇವಿಯ ಅನುಗ್ರಹಕ್ಕಾಗಿ ಪ್ರೀತ್ಯರ್ಥವಾಗಿ ಪ್ರತಿ ಮಂಗಳವಾರ ಹಾಗು ಶುಕ್ರವಾರ ವಿವಿಧೆಡೆಯಿಂದ ಅಪಾರ ಸಂಖ್ಯೆ ಭಕ್ತ ಸಮೂಹ ದೇವಿಯ ದರ್ಶನಾನಂದ ಪಡೆಯಲು ಸೋಮದೇವರಹಟ್ಟಿ ತಾಂಡೆಯತ್ತ ಧಾವಿಸಿ ಬರುತ್ತಾರೆ. ಅದಕ್ಕಾಗಿಯೇ ದುರ್ಗಾದೇವಿ ಈ ಭಾಗದ ಆಧ್ಯಾತ್ಮಿಕ ಜ್ಯೋತಿಯಾಗಿದ್ದಾಳೆ. ದುರ್ಗಾದೇವಿಯ ಅನುಗ್ರಹದಿಂದ ಒಳಿತಾಗುತ್ತದೆಂಬ ಆಚಲ ನಂಬಿಕೆಯಿಂದ ಭಕ್ತರ ದಂಡು ಸದಾ ಕಾಣಸಿಗುತ್ತದೆ. ಹೀಗಾಗಿ ದೇವಸ್ಥಾನವು ಧಾರ್ಮಿಕ ಭಾವನೆಗಳ ಶಕ್ತಿ ಕೇಂದ್ರವಾಗಿ
ಬೆಳೆದುನಿಂತಿದೆ. ವಿಜಯಪುರದಿಂದ ಪಶ್ಚಿಮ ದಿಕ್ಕಿಗೆ ಸುಮಾರು ೨೫
ಕೀ.ಮೀ ದೂರದಲ್ಲಿರುವ ಸೋಮದೇವರಹಟ್ಟಿ ತಾಂಡಾ ನಂ. ೦೧ರಲ್ಲಿನ ದುರ್ಗಾದೇವಿಯ ಚರಿತ್ರಾರ್ಹ ಸಾಕ್ಷಾತ್ಕಾರ ನೆಲೆಯಿಂದ ಈ ನೆಲ, ಪರಿಸರ ಪಾವನಗೊಂಡಿದೆ.
ಜುಲೈ ೫ರಂದು ದುರ್ಗಾದೇವಿ ಜಾತ್ರಾಮಹೋತ್ಸವ:
ಪ್ರತಿ ವರ್ಷದಂತೆ ಈ ಸಲವೂ ನಡೆಯುವ ದುರ್ಗಾದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ದೇಶ ವಿದೇಶಗಳ ಗಣ್ಯರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಘನವೆತ್ತ ಮಂತ್ರಿಗಳು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಸಚಿವರು, ಶಾಸಕರು, ಗಣ್ಯರು ಆಗಮಿಸಲಿದ್ದಾರೆ. ಚಿತ್ರ ತಾರೆಯರು, ಕಲಾವಿದರು, ಖ್ಯಾತನಾಮರು ಜಾತ್ರಾ ಮಮಹೋತ್ಸವಕ್ಕೆ ಮೆರಗು ನೀಡಲಿದ್ದು, ಜನಾಕರ್ಷಣಿಯ ಕೇಂದ್ರವಾಗಿ ಗಮನ ಸೆಳೆಯುತ್ತದೆ. ಬನ್ನಿ ಐತಿಹಾಸಿಕ ದುರ್ಗಾದೇವಿ ಜಾತ್ರಾಮಹೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡು ಪುನಿತರಾಗೋಣ.


