ಜೂ.27 ರಿಂದ ಮೂರು ದಿನಗಳ ಕಾಲ ಹಾಜಿಮಸ್ತಾನ ಜಾತ್ರೆ ತನ್ನಿಮಿತ್ತ ಈ ಸಾಂದರ್ಭಿಕ ಲೇಖನ
-ಸೋಮಶೇಖರ ಜತ್ತಿ, ತಿಕೋಟ
ರಾಜ್ಯದ ಮುಖ್ಯ ಭಾವೈಕ್ಯದ ಕೇಂದ್ರಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ತಿಕೋಟಾದ ಹಾಜಿ ಮಸ್ತಾನ ದರ್ಗಾ ಮಾನವನ ಹಾಗೂ ದೈವಿ ಪ್ರೇಮದ ತಾಣವಾಗಿದೆ.
ಇಲ್ಲಿ ಬ್ರಾಹ್ಮಣರು, ಲಿಂಗಾಯತರು ಸೇರಿದಂತೆ ಎಲ್ಲ ಜಾತಿ, ಜನಾಂಗದವರು ಹಾಗೂ ಮುಸ್ಲಿಮರು ಒಂದಾಗಿ ಸೂಫಿ-ಸಂತ ಹಾಜಿಮಸ್ತಾನರ ಉರುಸ್ ಆಚರಣೆ ಮಾಡುತ್ತಾರೆ.
ವಿಜಯಪುರದಿಂದ 20 ಕಿ.ಮೀ. ಪಶ್ಚಿಮಕ್ಕೆ ಬಂದರೆ ವಿದೇಶಕ್ಕೆ ರಫ್ತಾಗುವ ಬೀಜ ರಹಿತ ದಾಕ್ಷಿ ಹಣ್ಣುಗಳನ್ನು ಬೆಳೆಯುವ ಖ್ಯಾತಿಯ ತಿಕೋಟಾ ಸಿಗುತ್ತದೆ.
ಕಪ್ಪು ಕಲ್ಲಿನ ತಾಜಮಹಲ ಎಂದು ಕರೆಯಿಸಿಕೊಳ್ಳುವ ವಿಜಯಪುರ ಇಬ್ರಾಹಿಂರೋಜಾದ ಶಿಲ್ಪಿ (ಇಂಜನೀಯರ) ಸಂದರ ಮಲೀಕನ ಸಮಾಧಿ ಹೊಂದಿದ ಈ ನಗರ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಭಾರತದಲ್ಲೇ ಪ್ರಪ್ರಥಮ ಸರ್ಕಸ್ ಕಂಪನಿ ತೆರೆದ ಗಣಪತರಾವ ಛತ್ರ, ಚೌಡಕಿ ಪದದ ಗೌರವ ಮಾದರ, ಖ್ಯಾತ ಪ್ರವಚನಕಾರ ದಾನಪ್ಪ ಜತ್ತಿ (ಶಾಸ್ತ್ರೀ)ತಿಕೋಟಾದ ಹೆಮ್ಮೆಯ ಮಕ್ಕಳು.
ಹಿಂದೆ ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ತಾಲೂಕಾ ಕೇಂದ್ರವಾಗಿದ್ದ ತಿಕೋಟಾಈಗ ತಾಲೂಕಾ ಕೇಂದ್ರವಾಗಿದೆ.
ಹೀಗೆ ಹಲವು ವಿಶೇಷಗಳ ಈ ನಗರದಲ್ಲಿ ಪ್ರತಿ ವರ್ಷ ಜಿಲ್ಲೇಜ (ಉರ್ದು) ತಿಂಗಳ 9ನೇ ದಿನಾಂಕದಂದು ಜರುಗುವ ಹಾಮಸ್ತಾನ ಉರುಸು (ಪುಣ್ಯತಿಥಿ) ಹಿಂದೂ ಮುಸ್ಲಿಮರ ಭಾವೈಕ್ಯದ ಪ್ರತೀಕವಾಗಿದೆ. ಇದು ಇದೇ ದಿ. 27 ರಿಂದ ಮೂರು ದಿನಗಳವರೆಗೆ ಜರುಗಲಿದೆ.
ಜಾತ್ರೆಯ ನಿಮಿತ್ತ 20 ದಿನಗಳವರೆಗೆ ಎಲ್ಲ ಜಾತಿಯವರು ರೋಜಾ (ಹಗಲು ಉಪವಾಸ) ವ್ರತ ಮಾಡುತ್ತಾರೆ. ಉರುಸಿನ ಮೊದಲದಿನ ಬ್ರಾಹ್ಮಣರಾದ ರಾಮರಾವ ದೇಸಾಯಿ ಅವರ ಮನೆಯಿಂದ ಅದ್ಭುರಿಯಾಗಿ ಸಂದಲ್ (ಗಂಧ) ಬರುವುದು. ಮರುದಿನ ನೈವೇದ್ಯದ ಜೊತೆ ಗಲೀಫ (ವಸ್ತ್ರ) ಬರುವುದು ಹಿಂದುಗಳಾದ ಮೋಲಿಸಪಾಟೀಲರಾದ ಡಾ. ಎಂ.ಎಂ. ಪಾಟೀಲ (ಚಿಕ್ಕಮಕ್ಕಳ ತಮ್ಮ ಅವರ ಮನೆಯಿಂದ ಮೂರು ದಿನಗಳ ಕಾಲ ಬಯಲಾಟ, ಕುಸ್ತಿರಿವಾಯತ ಪದಗಳು, ಸೇರಿದಂತೆ ಮುಂತಾದ ಮನರಂಜನಾ ಕಾರ್ಯಕ್ರಮಗಳಿರುತ್ತವೆ. ಲಕ್ಷಾಂತರ ಸಂಖ್ಯೆಯಲ್ಲಿ ಹಿಂದು-ಮುಸ್ಲಿಂ ಬಾಂಧವರು ಭಾಗವಹಿಸಿ ಸಂಭ್ರಮದಿಂದ ಜಾತ್ರೆಗೆ ಮೆರಗು ತರುತ್ತಾರೆ.
ಇಲ್ಲಿ ಜಾತಿ, ಮತ, ಪಂಥ, ಪಂಗಡಗಳ ಸೋಂಕಿಲ್ಲ ಮೇಲುಕೀಳೆಂಬ ಭೇದ-ಭಾವವಿಲ್ಲ ಭಕ್ತಿ. ಶ್ರದ್ಧೆಯಿಂದ ಒಂದಾಗಿ ಆ ದೇವನನ್ನು ಆರಾಧಿಸುತ್ತಾರೆ.
ಸುಮಾರು 200ರಿಂದ 250 ವರ್ಷಗಳ ಹಿಂದೆ ಇಲ್ಲಿಗೆ ಬಂದ ಹಾಜಿಮಸ್ತಾನ ಸ್ವಧರ್ಮದ ಬಗ್ಗೆ ಪ್ರೀತಿ ಹಾಗೂ ಪರಧರ್ಮಗಳ ಬಗ್ಗೆ ಗೌರವವಿದ್ದ ಇಸ್ಲಾಂ ಧರ್ಮದ ಸೂಫಿ-ಸಂತನಾಗಿದ್ದ ಸಾಧನೆಯ ಬಲದಿಂದ ಸಿದ್ದಿ ಪುರುಷನಾಗಿದ್ದ ಜಗವೇ ನನ್ನಮನೆ ಮಾನವ ಕುಲವೇ ನನ್ನ ಕುಟುಂಬ ಎಂಬ ವಿಶಾಲ ತತ್ವದಂತೆ ಎಲ್ಲರ ಕಲ್ಯಾಣ ಬಂತುಸಿ ಸಂತ ಶ್ರೇಷ್ಟನಾಗಿದ್ದ.
ಇಸ್ಲಾಂ ಧರ್ಮದ ಪಂಚ ಸೂತ್ರಗಳಾದ ಕಹೋ, ಕರ, ರಶ್ಯ ದೇ ಹಾಗೂ ಜಾ ಇವುಗಳಲ್ಲಿ ಕೊನೆಯದಾದ ಜಾ ಎಂದರೆ ಹಜ್ ಯಾತ್ರೆಗೆ ಹೋಗುವುದು ಇಂದಿನ ವೈಜ್ಞಾನಿಕ ಸುಲಭವಾಗಿರಬಹುದು. ಆದರೆ ಹಿಂದಿನ ಕಾಲದಲ್ಲಿ ಹಾಜಿ ಮಸ್ತಾನರಂಥ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ತಮ್ಮ ಯೋಗ ಸಾಧನೆಯಿಂದ ಹಜ್ ಯಾತ್ರೆ ಮಾಡಿ ಬಂದ ಕೀರ್ತಿ ಇವರಿಗಿದೆ ಎಂದು ಪ್ರತೀತಿ.
ಈ ದರ್ಗಾದ ಪಕ್ಕದಲ್ಲೇ ಬರಕಲ್ಲ ಸಾಹೇಬರ ದರ್ಗಾ ಇದೆ ದಿಗಂಬರರಾದ ಇವರ ನಿಜನಾಮ ಸಂಗೀನ್ ಶಾವಲಿ ಇವರ ಶಿಷ್ಯ ನೂರಜಿಸಾಬ ಬಡಕಲ್ಲನಿಂದಾಗಿ ಬಡಕಲ್ಲ ಸಾಹೇಬ
ಆಗಿದೆ.

ಏಳು ನದಿಗಳ ನೀರು ತಂದು ಒಂದೇ ದಿನದಲ್ಲಿ ಇಲ್ಲಿ ಮೇಲ್ಟಾವಣಿ ಕಟ್ಟಬೇಕೆಂಬ ಐತಿಹ್ಯವಿದೆ ಅದು ಇನ್ನೂ ಕೈಗೂಡಿಲ್ಲ.
ಲಿಂಗಾಯತರರಾದ ಪೀರಶೆಟ್ಟಿ ಮನೆತನದವರು ಹಾಜಿಮಸ್ತಾನ ದರ್ಗಾ ಕಟ್ಟಿಸಿದ್ದಾರೆ ಹೀಗಾಗಿ ಜಾತ್ರೆಯಂದು ಪ್ರಥಮ ಗಂಧ ಲೇಪಿಸುವ ಗೌರವದ ಸ್ಥಾನ ಅವರಿಗಿದೆ.
ಗುರುವಾರ ಹುಣ್ಣಿಮೆ, ಅಮವಾಸ್ಯೆಯಂದು ಸಾವಿರಾರು ಜನರು ಬಂದು ಹೋಗುವ ಈ ದರ್ಗಾಕ್ಕೆ ನೆರೆಯ ಮಹಾರಾಷ್ಟ್ರದದಿಂದ ಕೂಡ ಭಕ್ತರು ಸೇವೆ ಸಲ್ಲಿಸುವುದು ವಿಶೇಷ.
– ಸೋಮಶೇಖರ ಜತ್ತಿ, ತಿಕೋಟ

