“ವೀಣಾಂತರಂಗ*- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ
ನಮ್ಮ ಯೋಚನೆಗಳು ಮತ್ತು ನಮ್ಮ ನಂಬುಗೆಗಳು ನಮ್ಮ ಬದುಕಿನ ಮೇಲೆ ನೇರ ಮತ್ತು ಆಳವಾದ ಪ್ರಭಾವವನ್ನು ಬೀರುತ್ತವೆ. ಸಕಾರಾತ್ಮಕ ಆಲೋಚನೆಗಳನ್ನು ನಮ್ಮಲ್ಲಿ ನಾವು ಬೆಳೆಸಿಕೊಳ್ಳುವುದರ ಮೂಲಕ ನಮ್ಮ ಬದುಕನ್ನು ಉತ್ತಮವಾಗಿಸಿಕೊಳ್ಳಬಹುದು.

ಈ ಪುಸ್ತಕದ ರಚನಾಕಾರ ಪೀಲೆ ಪ್ರಾರಂಭದಲ್ಲಿ ಒಂದು ಕಥೆಯನ್ನು ಹೇಳುತ್ತಾನೆ… ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಓರ್ವ ವ್ಯಕ್ತಿ ಬದುಕಿ ಉಳಿಯುವುದು ಕೇವಲ ಆರು ತಿಂಗಳು ಎಂದು ಎಲ್ಲ ವೈದ್ಯರು ಹೇಳಿದ್ದರು. ಆದರೆ ನಂಬಿಕೆ ಕಳೆದುಕೊಳ್ಳದ ಆ ವ್ಯಕ್ತಿ ತಾನು ಕಾಯಿಲೆಯಿಂದ ಗುಣಮುಖನಾಗಿ ಮತ್ತೆ ಆರೋಗ್ಯವನ್ನು ಹೊಂದುವೆ ಎಂಬ ಕಡು ಭರವಸೆಯನ್ನು ಹೊಂದಿದ್ದು, ಮುಂದಿನ ಆರು ತಿಂಗಳುಗಳ ಕಾಲ ತಾನು ಗುಣವಾಗುತ್ತಿರುವಂತೆ ಕಲ್ಪಿಸಿಕೊಳ್ಳತೊಡಗಿದ ಪರಿಣಾಮವಾಗಿ ಆತ ನಿಜವಾಗಿಯೂ ತನ್ನ ಆರೋಗ್ಯದಲ್ಲಿ ಉತ್ತಮಿಕೆಯನ್ನು ಕಂಡುಕೊಂಡನು. ವೈದ್ಯರ ಎಲ್ಲ ನಕಾರಾತ್ಮಕ ಹೇಳಿಕೆಗಳನ್ನು ಸುಳ್ಳೆನಿಸುವಂತೆ ಪವಾಡಸದೃಶವಾಗಿ ಆತ ಗುಣಮುಖನಾಗಿ ಮುಂದೆ ಹಲವಾರು ವರ್ಷಗಳ ಕಾಲ ಜೀವಿಸಿದನು.
ಸಕಾರಾತ್ಮಕ ಚಿಂತನೆಗೆ ಈ ಕಥೆಯು ಒಂದು ಉತ್ತಮ ಉದಾಹರಣೆಯಾಗಿದ್ದು ಪೀಲೆಯ ಪ್ರಕಾರ ನಾವು ಸಕಾರಾತ್ಮಕವಾಗಿ ಚಿಂತಿಸತೊಡಗಿದಾಗ ಸಕಾರಾತ್ಮಕ ಪ್ರಭಾವಲಯವೊಂದು ಸೃಷ್ಟಿಯಾಗಿ ನಮಗಿರುವ ಅಡೆತಡೆಗಳನ್ನು ನಿವಾರಿಸಿ ನಮ್ಮ ಗುರಿಯನ್ನು ತಲುಪಿಸಲು ಸಹಾಯ ಮಾಡುತ್ತದೆ.
ಸಕಾರಾತ್ಮಕ ಚಿಂತನೆಗೆ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ. ನಮ್ಮಲ್ಲಿ ನಂಬಿಕೆ ಇದ್ದಾಗ ನಾವು ಎಂತಹದೇ ಸಂಕಟದ ಪರಿಸ್ಥಿತಿಯಲ್ಲಿಯೂ ಕೂಡ ನಮಗೆ ಶಕ್ತಿ ಮತ್ತು ಮುನ್ನುಗುವ ಸಾಮರ್ಥ್ಯವನ್ನು ನೀಡುತ್ತದೆ.
ಈ ಪುಸ್ತಕವು ಒಟ್ಟು 13 ಭಾಗಗಳನ್ನು ಹೊಂದಿದ್ದು
*ನಿನ್ನನ್ನು ನೀನು ನಂಬು….
ತನ್ನನ್ನು ತಾನು ನಂಬುವ ಮೂಲಕ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡ ವ್ಯಕ್ತಿ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಲ್ಲ.
ಮರದ ಮೇಲಿರುವ ಹಕ್ಕಿ ತನ್ನ ರೆಕ್ಕೆಗಳಲ್ಲಿನ ಹಾರುವ ಶಕ್ತಿಯನ್ನು ನಂಬುತ್ತದೆಯೇ ಹೊರತು ತಾನು ಕುಳಿತಿರುವ ಕೊಂಬೆಯನ್ನಲ್ಲ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.
- ಶಾಂತವಾದ ಮನಸ್ಸು ಶಕ್ತಿಯ ಉತ್ಪಾದಕ ಕೇಂದ್ರ….
ವಿವಿಧ ವಿಚಾರಗಳಿಂದ ತುಂಬಿದ ಮನಸ್ಸು ಭೋರ್ಗರೆಯುವ ಸಮುದ್ರದಂತೆ.ಅಲ್ಲಿ ಯಾವುದೇ ರೀತಿಯ ಶಕ್ತಿ ಸಂಚಯವಾಗುವುದಿಲ್ಲ. ಶಾಂತವಾದ ಮನಸ್ಸಿನಲ್ಲಿ ಅದ್ಭುತ ವಿಚಾರಗಳ ಮಂಥನವಾಗಿ ಶಕ್ತಿಯ ಅವಿರ್ಭಾವವಾಗುತ್ತದೆ. *ನಿರಂತರವಾಗಿ ಶಕ್ತಿಯನ್ನು ಹೊಂದುವ ಬಗೆ….
ಯಾವ ರೀತಿ ದೇಹಕ್ಕೆ ಆಹಾರವನ್ನು ಒದಗಿಸಿ ಶಕ್ತಿಯನ್ನು ತುಂಬುತ್ತೇವೆಯೋ ಅಂತೆಯೇ ಮನಸ್ಸಿನ ದೌರ್ಬಲ್ಯಗಳನ್ನು ಮೆಟ್ಟಿ ಸಬಲರಾಗಲು ನಮ್ಮ ಮನಸ್ಸಿಗೆ ಉನ್ನತ ವಿಚಾರಗಳ ಸಕಾರಾತ್ಮಕ ಶಕ್ತಿಯನ್ನು ನಿರಂತರವಾಗಿ ತುಂಬಬೇಕು. *ಪ್ರಾರ್ಥನೆಯ ಶಕ್ತಿ….. ಪ್ರಾರ್ಥನೆ ಒಂದು ರೀತಿಯ ಸಮರ್ಪಣಾ ಭಾವ. ಪ್ರಾರ್ಥನೆಯಲ್ಲಿರುವ ಶಕ್ತಿ ನಮ್ಮ ಮತ್ತು ದೇವರ ಕುರಿತ ನಮ್ಮ ನಂಬಿಕೆ, ಭಕ್ತಿ, ಶ್ರದ್ಧೆ ಮತ್ತು ಅಲೌಕಿಕ ಬಾಂಧವ್ಯವನ್ನು ಸೂಚಿಸುತ್ತದೆ.
*ಸ್ವಸಂತೋಷವನ್ನು ಹುಟ್ಟಿಸಿಕೊಳ್ಳುವ ಬಗೆ… ಬೊಜ್ಜು ಬಾಯರಳಿಸುವ ಮಗುವಿನ ಮುಗ್ಧ ನಗೆ, ಸುಂದರವಾಗಿ ಅರಳಿರುವ ಹೂವು, ಪ್ರಕೃತಿಯ ಸ್ನಿಗ್ದ ಸೌಂದರ್ಯ, ಕುಟುಂಬದಲ್ಲಿನ ಪ್ರೀತಿ ಮಮತೆ ಹಾಸ್ಯ ತಮಾಷೆ ನಗು ಹರಟೆ ಮುಂತಾದ ಸಣ್ಣ ಪುಟ್ಟ ಖುಷಿಗಳು ನಮ್ಮ ಸಂತೋಷವನ್ನು ಹೆಚ್ಚಿಸುತ್ತವೆ. ಎಲ್ಲರಿಗಾಗಿ ಎಲ್ಲವನ್ನು ಮಾಡುವ ನಾವು ನಮ್ಮ ಸಂತೋಷಕ್ಕಾಗಿಯೂ ಬದುಕಿನ ಕೆಲ ಘಳಿಗೆಗಳನ್ನು ಮೀಸಲಿಟ್ಟುಕೊಳ್ಳಬೇಕು - ಅತ್ಯುತ್ತಮವಾದನ್ನೇ ಬಯಸುವುದು ಮತ್ತು ಪಡೆಯುವುದು…
ಉನ್ನತ ಗುರಿಯಡೆಗೆ ನಮ್ಮ ಧ್ಯೇಯವನ್ನು ಇಟ್ಟುಕೊಂಡು ಅದಕ್ಕಾಗಿ ಸತತ ಪ್ರಯತ್ನ ಪಡುತ್ತಿರಬೇಕು. ಅತ್ಯುತ್ತಮವಾದದ್ದು ಎಂದರೆ ಐಹಿಕ ಸುಖ ಭೋಗಗಳಲ್ಲ ಎಂಬುದರ ಸ್ಪಷ್ಟ ಅರಿವನ್ನು ಹೊಂದಿ ಉನ್ನತ ವಿದ್ಯಾಭ್ಯಾಸ, ಒಳ್ಳೆಯ ನೌಕರಿ, ಗುರು ಹಿರಿಯರ ಆಶೀರ್ವಾದ, ಒಳ್ಳೆಯ ಸಾಂಗತ್ಯ, ಒಳ್ಳೆಯ ಗೆಳೆಯರು ಇವೆಲ್ಲ ಅತ್ಯುನ್ನತ ಬದುಕಿನ ಸಂಕೇತಗಳು - ಸೋಲನ್ನು ನಂಬದಿರುವುದು…
ಸೋಲು ನಾವು ಪ್ರಯತ್ನ ಪಟ್ಟದಕ್ಕೆ ಸಿಕ್ಕ ಫಲ ಎಂದು ಅರಿತು ನಿರಾಶರಾಗದೆ,ಇಂದಿನ ಸೋಲು ನಾಳೆಯ ಗೆಲುವಿಗೆ ಮೆಟ್ಟಿಲಾಗಬಹುದು ಎಂಬ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಾ ಪ್ರತಿಯೊಂದು ಸಣ್ಣ ಯಶಸ್ಸಿಗೂ ಸಂಭ್ರಮಿಸುತ್ತಾ ಸೋಲನ್ನು ಸೋಲಿಸುತ್ತಲೇ ಹೋಗಬೇಕು. - ಚಿಂತಿಸುವ ಚಟವನ್ನು ಬಿಡುವುದು ಹೇಗೆ…. ಚಿಂತೆಗು ಚಿತೆಗೂ ಇರುವುದು ಸೊನ್ನೆಯಷ್ಟೇ ವ್ಯತ್ಯಾಸ…. ಚಿತೆ ಸತ್ತ ವ್ಯಕ್ತಿಯನ್ನು ಸುಟ್ಟರೆ ಚಿಂತೆ ಜೀವಂತ ವ್ಯಕ್ತಿಯನ್ನು ದಹಿಸುತ್ತದೆ. ಬದುಕಿನಲ್ಲಿ ಬಂದೆರಗುವ ಸೋಲು ನಿರಾಶೆ ಅಪಮಾನಗಳಿಗೆ ಚಿಂತಿಸುತ್ತಾ ಕೂಡುವುದರ ಬದಲು ಪರಿಹಾರ ಮಾರ್ಗಗಳನ್ನು ಹುಡುಕುವುದು ಮತ್ತು ಸವಾಲುಗಳನ್ನು ಮತ್ತು ತೊಂದರೆಗಳನ್ನು ಎದುರಿಸುವುದು ಜಾಣ್ಮೆಯ ಲಕ್ಷಣ.
- ವೈಯಕ್ತಿಕ ತೊಂದರೆಗಳನ್ನು ನಿವಾರಿಸಿಕೊಳ್ಳುವ ಶಕ್ತಿ….
ಅನಿಶ್ಚಿತವಾದ ಬದುಕಿನಲ್ಲಿ ಬರುವ ತೊಂದರೆಗಳು ಕತ್ತಲೆ ಬೆಳಕಿನ ಕಣ್ಣ ಮುಚ್ಚಾಲೆ ಆಟವಿದ್ದಂತೆ… ಪ್ರತಿಯೊಂದು ಕಷ್ಟದ ಗಳಿಗೆಯೂ ಜಾರಿ ಹೋಗುತ್ತದೆ ಪ್ರತಿಯೊಂದು ಸುಖದ ಗಳಿಗೆಯು ಮರೆತು ಹೋಗುತ್ತದೆ… ಆದ್ದರಿಂದ ಬದುಕಿನಲ್ಲಿ ಬರುವ ಎಲ್ಲ ತೊಂದರೆಗಳನ್ನು ಜಾಣ್ಮೆಯಿಂದ ನಿವಾರಿಸಿಕೊಳ್ಳುವುದು, ಎದುರಿಸುವುದು ಬಹಳ ಮುಖ್ಯ. - ಚೈತನ್ಯ ಉಡುಗಿದಂತೆ ತೋರಿದಾಗ ಈ ಆರೋಗ್ಯ ಸೂತ್ರಗಳನ್ನು ಅಳವಡಿಸಿಕೊಳ್ಳಿ…
ಬದುಕೆಂಬ ಹಾವು ಏಣಿಯ ಆಟದಲ್ಲಿ ಕೆಲವೊಮ್ಮೆ ದೈಹಿಕವಾಗಿ, ಮಾನಸಿಕವಾಗಿ ದಣಿವಾಗುವುದು ಆರೋಗ್ಯ ಕುಂದುವುದು ಸಹಜ. ಆದ್ದರಿಂದ ನಮ್ಮ ಮನೋ ದೈಹಿಕ ಆರೋಗ್ಯವನ್ನು ಸದಾ ಕಾಯ್ದೆಟ್ಟುಕೊಳ್ಳುವ ನಿಟ್ಟಿನಲ್ಲಿ ಉತ್ತಮ ಹವ್ಯಾಸಗಳನ್ನು ಹೊಂದಬೇಕು.
ವ್ಯಾಯಾಮ, ವೇಗದ ನಡಿಗೆ, ನೃತ್ಯ ಮುಂತಾದವುಗಳು ದೈಹಿಕ ಆರೋಗ್ಯವನ್ನು ಕಾಪಾಡಿದರೆ ಧ್ಯಾನ, ಪ್ರಾಣಾಯಾಮ, ಭಜನೆ, ಪ್ರಾರ್ಥನೆ,ಸಂಗೀತ ಮುಂತಾದವುಗಳು ಮಾನಸಿಕ ನೆಮ್ಮದಿಯನ್ನು ಕಾಯ್ದುಕೊಳ್ಳಲು ಸಹಕರಿಸುತ್ತವೆ. ಇದರ ಜೊತೆಜೊತೆಗೆ ಪ್ರಕೃತಿಯೊಂದಿಗಿನ ಒಡನಾಟ, ಉತ್ತಮ ಕೌಟುಂಬಿಕ ಬಾಂಧವ್ಯ, ಒಳ್ಳೆಯ ಸ್ನೇಹಿತರು ಮತ್ತು ಉತ್ತಮ ಹವ್ಯಾಸಗಳು ಬದುಕನ್ನು ಚೇತೋಹಾರಿಯಾಗಿಸುತ್ತವೆ. - ಜನರು ನಿಮ್ಮನ್ನು ಇಷ್ಟಪಡುವಂತೆ ಮಾಡುವುದು ಹೇಗೆ…. ನಮ್ಮ ಸ್ನೇಹಪರ ನಡವಳಿಕೆ ಒಳ್ಳೆಯ ನಡತೆ ಉತ್ತಮ ಹವ್ಯಾಸಗಳು ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ನಿರ್ವಾಜ್ಯ ನಿಷ್ಪಕ್ಷಪಾತವಾದ ಮನಸ್ಥಿತಿ ಜನರು ನಮ್ಮನ್ನು ಇಷ್ಟಪಡುವಂತೆ ಮಾಡುತ್ತದೆ. ಪ್ರಯತ್ನಪೂರ್ವಕವಾಗಿ ಒಳ್ಳೆಯದನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳುತ್ತಾ ಸಾಗಬೇಕು.
- ಹೃದಯದ ನೋವಿಗೆ ಔಷಧಿ….
ಬದುಕಿನ ಎಲ್ಲಾ ದಿನಗಳು ನಮ್ಮ ಇಚ್ಛೆಯಂತೆ ಜರುಗುವುದಿಲ್ಲ. ಬದುಕಿನಲ್ಲಿ ಸೋಲು, ನಿರಾಶೆ, ಅವಮಾನಗಳು ನಮ್ಮನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುತ್ತಲೇ ಹೋಗುತ್ತವೆ. ಅಂತಹ ಸಮಯದಲ್ಲಿ ಧೃತಿಗೆಡದೆ ಈ ಸಮಯ ಕಳೆದು ಹೋಗುತ್ತದೆ ಎಂಬಂತೆ ಹಲ್ಲು ಕಚ್ಚಿ ಆ ಎಲ್ಲ ತೊಂದರೆಗಳನ್ನು ಸಹಿಸಿಕೊಳ್ಳಬೇಕು… ಸಾಧ್ಯವಾದರೆ ಅವುಗಳಿಂದ ಹೊರಬರುವ ಪ್ರಯತ್ನವನ್ನು ಮಾಡಬೇಕು. ಗಾಡಾಂಧಕಾರದಲ್ಲಿರುವವನಿಗೆ ಬೆಳಕಿನ ಅವಶ್ಯಕತೆಯಂತೆ, ಕಡು ಹಸಿವಿನಿಂದ ಬಳಲುತ್ತಿರುವವನಿಗೆ ಹಿಡಿ ಅನ್ನ ಸಿಕ್ಕಂತೆ, ನಿರಾಶೆಯ ಕೋಪದಲ್ಲಿರುವವನಿಗೆ ನಂಬಿಕೆಯ ಏಣಿ ದೊರೆತು ಬದುಕಿನ ಈ ಎಲ್ಲ ಸಂದರ್ಭಗಳು ಸಾಮಾನ್ಯ ಮತ್ತು ಸಹಜವಾದವು ಎಂಬಂತೆ ನಿರ್ಲಿಪ್ತ ಭಾವದಿಂದ ಸ್ವೀಕರಿಸಬೇಕು. - ಜಗತ್ತಿನ ಅತ್ಯುನ್ನತ ಶಕ್ತಿಯನ್ನು ಹೇಗೆ ಸೆಳೆದು ಕೊಳ್ಳುವುದು…
ನಕಾರಾತ್ಮಕ ಚಿಂತನೆಗಳು ನಮ್ಮನ್ನು ಸೆಳೆದಷ್ಟು ಬೇರಾವುದೂ ಸೆಳೆಯಲಾರದು. ಬದುಕಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು, ಕ್ರಿಯೆಗಳನ್ನು ಪಟ್ಟು ಬಿಡದೆ ಆಲಂಗಿಸಿಕೊಂಡು ದೈನಂದಿನ ಬದುಕಿನ ಭಾವವನ್ನಾಗಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳು ಒಮ್ಮೆ ಅಳವಡಿಸಲ್ಪಟ್ಟರೆ ಬದುಕಿನ ಯಾವುದೇ ಹಂತದಲ್ಲಿಯೂ ಕೂಡ ಮನುಷ್ಯ ತಪ್ಪು ದಾರಿಯೆಡೆ ಜಾರಲಾರ. ನಾರ್ಮನ್ ವಿನ್ಸೆಂಟ್ ಪೀಲೆ ಬರೆದಿರುವ ” ದ ಪವರ್ ಆಫ್ ಪಾಸಿಟಿವ್ ಥಿಂಕಿಂಗ್ ” ಎಂಬ ಕೃತಿ ಸಕಾರಾತ್ಮಕ ಶಕ್ತಿಯ ಕುರಿತಾದ ಜಗತ್ತಿನ ಶ್ರೇಷ್ಠ ಪುಸ್ತಕಗಳಲ್ಲಿ ಒಂದಾಗಿದೆ. ಅದರ ಭಾವಾನುವಾದ ಇಗೋ ನಿಮ್ಮ ಓದಿಗೆ. – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್.

