“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್
ಬದುಕಿನ ವೈಭವವನ್ನು ಕೈಯಲ್ಲಿ ಕಟ್ಟಿರುವ ದುಬಾರಿ ವಾಚುಗಳಲ್ಲಿ, ಹಿಡಿದಿರುವ ಮೊಬೈಲುಗಳಲ್ಲಿ ನೋಡಬೇಡ.
ವಾಚುಗಳು ಸಮಯವನ್ನು ತೋರಿಸುತ್ತವೆಯೇ ಹೊರತು ನಮ್ಮ ಬದುಕನ್ನು ಬದಲಿಸುವ ಶಕ್ತಿ ಇರುವುದು ಕೇವಲ ಸಮಯಕ್ಕೆ ಹೊರತು ನಾವು ಕಟ್ಟಿರುವ ವಾಚುಗಳಿಗಲ್ಲ. ಮೊಬೈಲ್ ಕೂಡ ಇರುವುದು ನಮ್ಮ ಉಪಯೋಗಕ್ಕೆ ಹೊರತು ತೋರಿಕೆಯ ಡಂಬಾಚಾರಕ್ಕಲ್ಲ

ಬದುಕಿನ ವೈಭವವನ್ನು ಐಷಾರಾಮಿ ಪ್ರಯಾಣಗಳಲ್ಲಿ ನೋಡಬೇಡ, ಐಷಾರಾಮಿ ವಾಹನ ನಮ್ಮನ್ನು ನಮ್ಮ ಗಮ್ಯಸ್ಥಾನಕ್ಕೆ ತಲುಪಿಸುತ್ತದೆಯೇ ಹೊರತು ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುವುದಿಲ್ಲ.
ಬದುಕಿನ ವೈಭವ ನೀನು ತಿನ್ನುವ ಆಹಾರದ ಉತ್ಕೃಷ್ಟತೆಯಲ್ಲಿಲ್ಲ… ಒಳ್ಳೆಯ ಭೋಜನ ನಿನ್ನ ಆರ್ಥಿಕತೆಯ ಔನ್ಯತ್ಯವನ್ನು ನಿರ್ಧರಿಸುತ್ತದೆಯೇ ಹೊರತು ನಿನ್ನ ಆರೋಗ್ಯವನ್ನು ಅಲ್ಲ.
ಬದುಕಿನ ವೈಭವವನ್ನು ಬ್ರಾಂಡೆಡ್ ಬಟ್ಟೆಗಳ ಮೇಲೆ, ಮೈಮೇಲೆ ಹೇರಿಕೊಂಡಿರುವ ಚಿನ್ನ ಮತ್ತು ವಜ್ರದ ಒಡವೆಗಳ, ಬ್ಯಾಂಕಿನಲ್ಲಿರುವ ಅಪಾರ ಮೊತ್ತದ ಹಣದ ಮೇಲೆ ಮೇಲೆ ನಿರ್ಧರಿಸದಿರು….. ಕ್ಷಣಿಕ ತೃಪ್ತಿಯನ್ನು, ತುಸು ಅಹಂಭಾವವನ್ನಲ್ಲದೆ ಅದಾವುದೂ ನಿನಗೆ ಮಾನಸಿಕ ತೃಪ್ತಿಯನ್ನು ತಂದುಕೊಡುವುದಿಲ್ಲ.
ಬದುಕಿನ ವೈಭವವನ್ನು ಬ್ರಾಂಡೆಡ್ ಶೂ ಚಪ್ಪಲಿಗಳಲ್ಲಿ ನೋಡಬೇಡ…. ಅದೆಷ್ಟೇ ಹಣ ಖರ್ಚು ಮಾಡಿ ದುಬಾರಿ ಹರಳುಗಳ ಅಲಂಕಾರ ಮಾಡಿದರೂ ಅವುಗಳನ್ನು ಕಾಲಲ್ಲಿ ಮೆಟ್ಟುತ್ತೇವೆಯೇ ಹೊರತು ತಲೆಯ ಮೇಲೆ ಇಟ್ಟುಕೊಳ್ಳುವುದಿಲ್ಲ.
ಬದುಕಿನ ವೈಭವವನ್ನು ಐಷಾರಾಮಿ ಹಾಸಿಗೆಗಳಲ್ಲಿ, ವಾತಾನುಕೂಲಿತ ಕೋಣೆಗಳಲ್ಲಿ ನೋಡಬೇಡ ಅವು ನಿನ್ನ ಸಿರಿವಂತಿಕೆಯನ್ನು ಸೂಚಿಸುತ್ತವೆಯೇ ಹೊಡೆದು ನಿರಾತಂಕವಾದ ಸೊಂಪಾದ ನಿದ್ರೆಯನ್ನಲ್ಲ.
ಬದುಕಿನ ಯಾವುದೇ ವೈಭವಗಳನ್ನು ಅಂಗಡಿಯಲ್ಲಿ ಕೊಳ್ಳಲಾಗುವುದಿಲ್ಲ!!!
ಬದುಕಿನ ಯಾವುದೇ ವೈಭವಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ!!!
ಬದುಕಿನ ಯಾವುದೇ ವೈಭವಗಳು ಐಷಾರಾಮಿ ಔತಣಕೂಟಗಳಲ್ಲಿ ಸಿಗುವುದಿಲ್ಲ!!!
ಬದುಕಿನ ಯಾವುದೇ ವೈಭವಗಳು ಐಷಾರಾಮಿ ವಸ್ತುಗಳಲ್ಲಿ ದೊರೆಯುವುದು ಸಾಧ್ಯವೇ ಇಲ್ಲ!!!
ಬದುಕಿನ ನಿಜವಾದ ವೈಭವ ಇರುವುದು ತಲೆಯ ಮೇಲೆ ಅಪ್ಪ ಅಮ್ಮನ ಆಶೀರ್ವಾದದಲ್ಲಿ, ತಲೆಯ ಮೇಲಿರುವ ನಮ್ಮದೇ ಪುಟ್ಟ ಸೂರಿನಲ್ಲಿ,ನಮ್ಮ ಆರೋಗ್ಯದಲ್ಲಿ, ನಮ್ಮ ಸೌಹಾರ್ದಯುತ ಸಂಬಂಧಗಳಲ್ಲಿ, ನಮ್ಮ ಸ್ನೇಹಿತರ ಜೊತೆಗಿನ ಆತ್ಮೀಯ ಒಡನಾಟದಲ್ಲಿ, ಸಂಗಾತಿಯೊಂದಿಗೆ ಸ್ನೇಹ ಪ್ರೇಮಗಳಲ್ಲಿ,ಮಕ್ಕಳೊಂದಿಗೆ ಆಟ ಪಾಠಗಳಲ್ಲಿ, ಸಂತಸದಲ್ಲಿ, ವೈಭವವಿರುವುದು ಆತ್ಮೀಯರ ಅಪ್ಪುಗೆಯಲ್ಲಿ, ವೈಭವ ಇರುವುದು ಸಂಗಾತಿಯ ಮತ್ತು ಮಕ್ಕಳ ಮುದ್ದಿನಲ್ಲಿ.

ಬದುಕಿನ ನಿಜವಾದ ವೈಭವ ಇರುವುದು ನಮ್ಮವರ ಪ್ರೀತಿಯಲ್ಲಿ, ನಾವು ಗಳಿಸುವ ಗೌರವದಲ್ಲಿ, ವೈಭವವಿರುವುದು ನಮ್ಮ ಮೊಮ್ಮಕ್ಕಳೊಂದಿಗೆ ಒಡನಾಡುವಲ್ಲಿ.
ಬದುಕಿನ ಐಷಾರಾಮಿ ವಸ್ತುಗಳು ಬಾಹ್ಯಾಡಂಬರದ ವಸ್ತುಗಳಲ್ಲಿಲ್ಲ… ಮನಸ್ಸಿಗೆ ಉಲ್ಲಾಸಕೊಡುವ ಚೇತೋಹಾರಿ ಬದುಕಿನಲ್ಲಿದೆ.
ಇದರ ಅರಿವಿಲ್ಲದ ಎಷ್ಟೋ ಜನ ತಮಗಿಲ್ಲದುದನ್ನು ಕಂಡು ಕರುಬುತ್ತಾರೆ, ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ಕವನದಲ್ಲಿನ ಸಾಲುಗಳಂತೆ
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಎಂಬಂತೆ ಹಲುಬುತ್ತಾರೆ.
94ರ ಹರೆಯದ ಹಾಲಿವುಡ್ ನ ಕ್ಲಿಂಟ್ ಈಸ್ಟ ವುಡ್ ಎಂಬ ನಟ ಹೇಳಿರುವ ಬದುಕಿನ ನಿಜವಾದ ವೈಭವ ನಮ್ಮವರ ಪ್ರೀತಿ ವಿಶ್ವಾಸ ಸ್ನೇಹಿತರ ಒಡನಾಟ ಆತ್ಮೀಯರ ಅಪ್ಪುಗೆ ಮತ್ತು ಮುದ್ದುಗಳಲ್ಲಿದೆ ಎಂಬ ಮಾತುಗಳು ನನ್ನನ್ನು ಈ ಚಿಂತನೆಗೆ ಈಡು ಮಾಡಿದವು…. ತಿಳಿದವರ, ಜ್ಞಾನಿಗಳ ಒಂದು ಮಾತು ಒಂದಿಡೀ ಲೇಖನಕ್ಕೆ ಆಕರವಾಗುತ್ತದೆ ಎಂದರೆ ಅಚ್ಚರಿಯೇನಲ್ಲ.
ಬಾಹ್ಯಾಡಂಬರದ ಸೆಳೆತಗಳನ್ನು ಬಿಟ್ಟು, ಇರುವುದನ್ನು ಇರುವಂತೆಯೇ
ಒಪ್ಪಿಕೊಂಡು ಅಪ್ಪಿಕೊಳ್ಳುವುದರಲ್ಲಿ ಮಾನವ ಜನ್ಮದ ಸಾರ್ಥಕತೆ ಇದೆ ಎಂಬುದನ್ನು ಅರಿತು ಅಂತೆಯೇ ಬಾಳಿ ಬದುಕೋಣ… ಅಲ್ಲವೇ?
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್

