ಪ್ರೊ.ಧರ್ಮರಾಜ ಎಸ್ ಕುಂಬಾರಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ, ಅಥಣಿ
ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಜಗತ್ತಿನ ಯಾವುದೇ ಒಂದು ಕ್ಷೇತ್ರದಿಂದ ತೆಗೆದುಕೊಂಡರು ಸಹ ಅಲ್ಲಿ ನಾಯಕನಿಗಾಗಿ ಒಂದು ವಿಶೇಷ ಸ್ಥಾನವಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ, ನಾಯಕನ ಸ್ಥಾನಕ್ಕೆ ಅತಿ ಹೆಚ್ಚಿನ ಮಹತ್ವ ಬಂದಿದೆ. ಇದರ ಬಗ್ಗೆ ವಿಶ್ಲೇಷಣೆ ಮಾಡಿದಾಗ ನಮಗೆ ತಿಳಿಯುವುದು ಏನೆಂದರೆ ಯಾವ ರೀತಿಯ ನಾಯಕ ನಮಗೆ ಬೇಕು, ನಾಯಕನಲ್ಲಿ ಎಷ್ಟು ಪ್ರಕಾರಗಳು?.
ನಾಯಕನಲ್ಲಿ ಪ್ರಕಾರಗಳು ಇಲ್ಲ ಕೆಟ್ಟ ನಾಯಕ, ಒಳ್ಳೆಯ ನಾಯಕ, ಬುದ್ಧಿವಂತ ನಾಯಕ ಎಂಬ ವಿಧಗಳು ಇಲ್ಲ. ನಾಯಕ ಎಂದ ಮೇಲೆ ನಾಯಕ ಅಷ್ಟೇ. ಆದರೆ ಬದಲಾವಣೆಗೊಳ್ಳುತ್ತಿರುವ ಈ 21ನೇ ಶತಮಾನದಲ್ಲಿ ನಾಯಕನಿಗೆ ಇರಬೇಕಾದ ಕೌಶಲ್ಯಗಳು ನವೀಕರಣಗೊಂಡಿವೆ ಎಂದರೆ ತಪ್ಪಾಗಲಾರದು.
ಉದ್ಯೋಗಿಗಳಲ್ಲಿ ಇರುವ ಕೌಶಲ್ಯವನ್ನು ಗುರುತಿಸಿ ಅವುಗಳನ್ನು ಬಳಸಿಕೊಂಡು ಸಂಸ್ಥೆಯನ್ನು ಅತ್ಯುನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಾಯಕರು ನಮಗೆ ಇವತ್ತು ಬೇಕಾಗಿದ್ದಾರೆ. ನಾಯಕನಾದವನು ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ಒಬ್ಬ ಅತ್ಯುತ್ತಮ ಆಲಿಸುವನಾಗಿರಬೇಕು ಮತ್ತು ಸಭೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ನೀಡುವ ಗುಣ ಹೊಂದಿರಬೇಕು. ಒಬ್ಬ ಉದ್ಯೋಗಿ ತನ್ನ ಕಾರ್ಯವನ್ನು ಮಾಡುವಾಗ ಪದೇ ಪದೇ ವಿಫಲವಾಗುತ್ತಿದ್ದಾನೆ ಎಂದರೆ ಅದರ ಅರ್ಥ ಆತ ಬೆಳೆಯುತ್ತಿದ್ದಾನೆ ಎಂಬುದು, ಇಲ್ಲಿ ನಾವು ಗಮನಿಸಬೇಕಾದದ್ದು ಏನೆಂದರೆ ನಾಯಕತ್ವ ಪಡೆಯುವಲ್ಲಿ ಬೇಕಾಗುವ ಕೌಶಲ್ಯಗಳೆ ಬೇರೆ, ನಾಯಕತ್ವ ವಹಿಸಿಕೊಂಡ ನಂತರ ಇರಬೇಕಾದ ಕೌಶಲ್ಯಗಳೆ ಬೇರೆ.

ಇವತ್ತು ನಮಗೆ ಉದ್ಯೋಗಿಗಳನ್ನು ಅತ್ಯುತ್ತಮ ರೀತಿಯಲ್ಲಿ ವಿಚಾರ ಮಾಡುವಂತೆ ಪ್ರೇರೇಪಿಸುವಂತಹ ನಾಯಕರು ಬೇಕಾಗಿದ್ದಾರೆ. ಉದ್ಯೋಗಿಗಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಅತ್ಯುನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಾಯಕರು ಬೇಕಾಗಿದ್ದಾರೆ. ನಿರ್ಧಾರ ಮಾಡಿ ವಿಚಾರ ಮಾಡುವಂತಹ ನಾಯಕ ನಮಗೆ ಬೇಕಾಗಿಲ್ಲ , ಬದಲಿಗೆ ವಿಚಾರ ಮಾಡಿ ನಿರ್ಧಾರ ಮಾಡುವ ನಾಯಕ ಬೇಕಾಗಿದ್ದಾನೆ. ಇತಿಹಾಸ ಬದಲಾಯಿಸಬಲ್ಲ ನಾಯಕ ಇವತ್ತು ನಮಗೆ ಬೇಕಾಗಿದ್ದಾನೆ. ಅತ್ಯುತ್ತಮ ಉದ್ಯೋಗಿಗಳು ಸಂಸ್ಥೆಯ ಆಸ್ತಿ ಅವರನ್ನು ಉಳಿಸಿಕೊಂಡು ಹೋಗುವ ಕಲೆ ಕೂಡ ನಾಯಕನಿಗೆ ಇರಬೇಕಾಗುತ್ತದೆ. ಇವತ್ತು ತಂತ್ರಜ್ಞಾನದ ಜ್ಞಾನ ಕೂಡ ಒಬ್ಬ ನಾಯಕನಿಗೆ ಇರಬೇಕಾದದ್ದು ಬಹಳ ಅವಶ್ಯಕ. ನಾಯಕತ್ವವು ಕ್ರಿಯಾತ್ಮಕ ಸ್ವಭಾವವನ್ನು ಹೊಂದಿದೆ, ನಾಯಕತ್ವವು ವಿಭಿನ್ನ ಕೌಶಲ್ಯಗಳ ಸಂಯೋಜನೆಯಾಗಿದೆ ಎಂದು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ನಾಯಕತ್ವದ ಶೈಲಿ ಬಹಳಷ್ಟು ಬದಲಾಗಿದೆ ಈ ಹಿಂದೆ ಅನುಭವಿ ನಿವೃತ್ತ ವ್ಯಕ್ತಿ ಯಾವುದೇ ಸಂಸ್ಥೆಯನ್ನು ಮುನ್ನಡೆಸಲು ಉತ್ತಮ ಎಂದು ನಾವು ಪರಿಗಣಿಸುತ್ತಿದ್ದೆವು. ಅದು ತಪ್ಪಲ್ಲ, ಆದರೆ ಈಗ ಅದು ಬದಲಾಗಿದೆ. ಆದಷ್ಟು ನಾಯಕತ್ವವನ್ನು ಯುವಕರಿಗೆ ನೀಡಿದಷ್ಟು ಉತ್ತಮ ಏಕೆಂದರೆ ಅವರು ತಂತ್ರಜ್ಞಾನವನ್ನು ಬಲ್ಲವರಾಗಿರುತ್ತಾರೆ,ಏನಾದರೂ ಜೀವನದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವನ್ನು ಹೊಂದಿರುತ್ತಾರೆ. ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಒಂದು ಸಂಘ ಸಂಸ್ಥೆಯ ನಾಯಕತ್ವ ವಹಿಸಿಕೊಂಡವರಿಗೆ ಆ ಸಂಸ್ಥೆಯ ಬಗ್ಗೆ ಆಳವಾದ ಅಧ್ಯಯನ ಬಹಳ ಅವಶ್ಯಕ ಏಕೆಂದರೆ ಎಷ್ಟು ಆಳವಾಗಿ ಆ ಸಂಸ್ಥೆಯ ಬಗ್ಗೆ ಅವನು ಬಹಳ ತಿಳಿದುಕೊಂಡಿರುತ್ತಾನೋ ಅಷ್ಟೇ ಚೆನ್ನಾಗಿ ಆ ಸಂಘ ಸಂಸ್ಥೆಯ ನಾಯಕತ್ವವನ್ನು ಮುಂದುವರಿಸಿಕೊಂಡು ಎತ್ತರಕ್ಕೆ ತೆಗೆದು ಕೊಂಡು ಹೋಗಬಲ್ಲ.ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ.
- ನಿಮ್ಮ ಉದ್ಯೋಗಿಗಳು ಕೆಲಸ ಮಾಡಲು ಕಷ್ಟ ಪಡುವುದನ್ನು ನೋಡಲು ನೀವು ಇಷ್ಟಪಡುವದಿಲ್ಲವೇ? ಮತ್ತು ಅವರು ಕಷ್ಟಪಡುವವರನ್ನು ಕಂಡು ನೀವೇ ಮುಂದಾಗಿ ಆ ಕೆಲಸವನ್ನು ಮಾಡಿ ಮುಗಿಸುತ್ತೀರಿ. ಈ ಪ್ರಶ್ನೆಗೆ ನೀವು ಉತ್ತರ ಹೌದು ಎಂದಾದರೆ ಇದು ಉತ್ತಮ ನಾಯಕನ ಲಕ್ಷಣವಲ್ಲ, ಏಕೆಂದರೆ ಒಬ್ಬ ಉದ್ಯೋಗಿ ತನಗೆ ವಹಿಸಿಕೊಟ್ಟ ಕೆಲಸವನ್ನು ಮುಗಿಸಲು ಹೆಣಗಾಡುತ್ತಿದ್ದಾನೆ ಎಂದರೆ ಅದರ ಅರ್ಥ ಬೆಳೆಯುತ್ತಿದ್ದಾನೆ ಎಂದು ಮತ್ತು ಅವರ ಕೆಲಸವನ್ನು ನೀವೇ ಮಾಡಿ ಮುಗಿಸುತಿದ್ದೀರಿ ಅಂದರೆ ಅವರಿಗೆ ಕಲಿಯಲು ನೀವು ಸಂಪೂರ್ಣ ಸಹಕಾರ ನೀಡುತ್ತಿಲ್ಲ ಎಂಬುದೇ ಅದರ ಅರ್ಥ.
- ಒಬ್ಬ ನಾಯಕ ಸಭೆಗೆ ಆಗಮಿಸಿದಾಗ ಅಲ್ಲಿ ಚರ್ಚೆ ಆಗಬೇಕೆ ಹೊರತು ವಾದಗಳಿಗೆ ಮತ್ತು ಜಗಳಗಳಿಗೆ ಅವಕಾಶ ಇರಬಾರದು. ಏಕೆಂದರೆ ವಾದಗಳಿಗೆ ಮತ್ತು ಜಗಳಗಳಿಗೆ ಅವಕಾಶ ಮಾಡಿಕೊಟ್ಟಂತ ನಾಯಕ ಆ ಸಂಸ್ಥೆಯನ್ನು ಎಂದೂ ಯಶಸ್ವಿಯಾಗಿ ಮುನ್ನಡೆಸಲಾರ. ಹೌದು ಒಂದು ಸಭೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಲಾರದ ನಾಯಕ, ಅದೇಗೆ ತಾನೇ ಒಂದು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾನೆ. ಇಂತಹ ನಾಯಕ ದಯವಿಟ್ಟು ಮನೆಯಲ್ಲಿ ಕೂತುಕೊಳ್ಳುವುದು ಒಳಿತು.
- ನೀವು ಮಾಹಿತಿಯ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತೀರಾ? ನಾಯಕನಾದವನು ಕೇವಲ ಮಾಹಿತಿ(Information) ಮೇಲೆ ಮಾತ್ರ ಗಮನಹರಿಸಬಾರದು, ಅದರಲ್ಲಿ ಬರುವ ಅಂಕೆ ಸಂಖ್ಯೆಗಳ(Data) ಮೇಲೆ ಅವನು ನಮನ ಹರಿಸಬೇಕು.ಏಕೆಂದರೆ ನಮಗೆಲ್ಲ ತಿಳಿದಿರುವ ಹಾಗೆ Picture speeks more then words ಹೇಗೋ ಅದೇ ರೀತಿ Data speeks more then information. ಏಕೆಂದರೆ ಅಂಕೆ ಸಂಖ್ಯೆಗಳು ಗುಣಮಟ್ಟದ ನಿರ್ಧಾರ ತೆಗೆದುಕೊಳ್ಳಲು ಮತ್ತು ಕಾರ್ಯತಂತ್ರ ರೂಪಿಸಲು ಬಹಳ ಸಹಕಾರಿಯಾಗಿದೆ.
ಒಟ್ಟಿನಲ್ಲಿ ಇದರ ಜೊತೆಗೆ ಒಬ್ಬ ನಾಯಕನಿಗೆ ಉತ್ತಮ ಸಂಸ್ಕಾರ,ಅತ್ಯುತ್ತಮ ಮೌಲ್ಯಗಳು,ತಾಳ್ಮೆ, ದೂರ ದೃಷ್ಟಿ ಇರಲೇಬೇಕು, ನಾಯಕತ್ವ ಇದೊಂದು ಪ್ರಯಾಣ ಹೌದು,ನಾಯಕತ್ವವು ಉಡುಗೊರೆಯಾಗಿದೆ.

– ಪ್ರೊ.ಧರ್ಮರಾಜ ಎಸ್ ಕುಂಬಾರ
ಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ, ಅಥಣಿ

