-ಪ್ರೊ.ಧರ್ಮರಾಜ ಕುಂಬಾರ ಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ
ಒಬ್ಬ ನಾಯಕನಾಗಲಿ, ವಿದ್ಯಾರ್ಥಿಯಾಗಲಿ, ಅಥವಾ ಒಂದು ಸಂಸ್ಥೆಯ ಚುಕ್ಕಾಣಿ ಹಿಡಿದಂತ ನಾಯಕನೇ ಆಗಲಿ ಯಾವತ್ತೂ ಚೌಕಟ್ಟನ್ನು ಮೀರಿ ಯೋಚಿಸುವ ಶಕ್ತಿ ಹೊಂದಿರಬೇಕು ಅದನ್ನೇ ನಾವು Thinking out of box ಎನ್ನುತ್ತೇವೆ.
ಏಕೆಂದರೆ ಚೌಕಟ್ಟಿನ ಹೊರಗೆ ಯೋಚಿಸುವುದು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ನಮ್ಮೊಳಗೆ ನಮ್ಮ ಅರಿವಿಲ್ಲದಂತೆಯೇ ಬೆಳೆಯಲು ನಮಗೆ ಸಹಾಯ ಮಾಡುತ್ತದೆ, ಇದು ಸಾಮಾನ್ಯವಾಗಿ ಹೊಸ ಮತ್ತು ಸುಧಾರಿತ ಯೋಚನೆಗಳೊಂದಿಗೆ ಅತ್ಯುತ್ತಮ ಸೇವೆ ನೀಡಲು ಕಾರಣವಾಗುತ್ತದೆ. ಅದಲ್ಲದೆ ಸಮಸ್ಯೆಗಳನ್ನು ಅತ್ಯುತ್ತಮ ರೀತಿಯಲ್ಲಿ ಪರಿಹರಿಸುವ ಮೂಲಕ ಸಂವಹನ ಕೌಶಲ್ಯವನ್ನು ಕೂಡ ಪರಿಣಾಮಕಾರಿಯಾಗಿಸುತ್ತದೆ.Thinking out of Box ಎನ್ನುವುದು ಸುಲಭವಲ್ಲ ಏಕೆಂದರೆ ನಾವು ನಮ್ಮ comfort zone ಇಂದ ಮೊದಲು ಹೊರಗೆ ಬರಬೇಕು. ಚೌಕಟ್ಟಿನೊಳಗೆ ಎಲ್ಲರೂ ಆರಾಮವಾಗಿ ಇರುತ್ತಾರೆ. ಒಬ್ಬ ಮನುಷ್ಯ ಚೌಕಟ್ಟನ್ನು ಮೀರಿ ಹೊರಗೆ ಬಂದಾಗ ಸಮಸ್ಯೆಗಳಿಗೆ ವಿಭಿನ್ನ ರೀತಿಯಲ್ಲಿ ಪರಿಹಾರ ಕೊಂಡುಕೊಳ್ಳುತ್ತಾನೆ. ಅದೇ ರೀತಿ ಒಬ್ಬ ನಾಯಕ ಯಶಸ್ವಿ ನಾಯಕನಾಗುತ್ತಾನೆ. ಹೆಚ್ಚಿನ ಜನರು ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡದ ಕಾರಣ ಚೌಕಟ್ಟನ್ನು ಮೀರಿ ಯೋಚಿಸಲು ಹಿಂದೇಟು ಹಾಕುತ್ತಾರೆ. ಚೌಕಟ್ಟನ್ನು ಮೀರಿ ಯೋಚಿಸುವುದು ಅಷ್ಟು ಸುಲಭವಲ್ಲ ಏಕೆಂದರೆ ಅದಕ್ಕೆ ಪೂರಕವಾದ ವಾತಾವರಣ ಮತ್ತು ಮೇಲಾಧಿಕಾರಿಗಳ ಬೆಂಬಲ ಕೂಡ ಅಷ್ಟೇ ಅತ್ಯಗತ್ಯ. ಅದಲ್ಲದೆ ಸಮಾಜವು ಅಲಿಖಿತ ನಿಯಮಗಳಿಂದ ತುಂಬಿದೆ, ಅದನ್ನು ನಮ್ಮಲ್ಲಿ ಅನೇಕರು ಚಿಕ್ಕ ವಯಸ್ಸಿನಿಂದಲೇ ಅನುಸರಿಸಲು ಕಲಿಸುತ್ತಾರೆ.

ಚೌಕಟ್ಟನ ಮೀರಿ ಯೋಚಿಸುವುದರಿಂದ ನಮಗೆ ಹಲವಾರು ಲಾಭಗಳು ಇವೆ-
1.ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡುತ್ತದೆ.
2.ನಮಗೆ ಅರಿವಿಲ್ಲದೆ ನಮ್ಮ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.
3.ತಂಡದ ಸದಸ್ಯರೊಂದಿಗೆ ಸಂವಹನ ಕಲೆಯನ್ನು ಉತ್ತಮಗೊಳಿಸುತ್ತದೆ
4.ನಮ್ಮ ಸ್ಪರ್ಧಿಗಳಿಗಿಂತ ಬಲಶಾಲಿಯಾಗಿ ಕಾಣುತ್ತೇವೆ.
ಉದಾಹರಣೆಗೆ ನೀವು ಈಗ ಶೇರು ಮಾರುಕಟ್ಟೆಯಲ್ಲಿ ಕೆಲವೊಂದು ಶೇರುಗಳನ್ನು ತೆಗೆದುಕೊಂಡಿದ್ದೀರಿ ಎಂದು ತಿಳಿದುಕೊಳ್ಳಿ, ಆದರೆ ಕೆಲವು ಸಮಯಗಳ ನಂತರ ಶೇರು ಮಾರುಕಟ್ಟೆಯಲ್ಲಿ ಶೇರುಗಳ ಬೆಲೆ ಕುಸಿಯುತ್ತದೆ ಎಂದಿಟ್ಟುಕೊಳ್ಳಿ. ಈಗ ನೀವು ಷೇರುಗಳನ್ನು ಹೆಚ್ಚಿನ ಬೆಲೆ ಮಾರುವದಗೋಸ್ಕರ ಕಾಯುತ್ತಾ ಕುಳಿತುಕೊಳ್ಳುವುದು ಮೂರ್ಖತನ ಅದರ ಬದಲಿಗೆ ನೀವು ನಷ್ಟವನ್ನು ಸರಿದೂಗಿಸಲು ಕಡಿಮೆ ಬೆಲೆಗೆ ಇನ್ನಷ್ಟು ಷೇರುಗಳನ್ನು ಕೊಂಡುಕೊಂಡರೆ ಅದು ಜಾಣತನ. ಮುಂದೆ ಅತಿ ಕಡಿಮೆ ಅವಧಿಯಲ್ಲಿ ನೀವು ಷೇರುಗಳನ್ನು ಮಾರುವ ಮೂಲಕ ಲಾಭಾಂಶವನ್ನು ಪಡೆದುಕೊಳ್ಳಬಹುದು.
ಹಾಗಾದ್ರೆ ಚೌಕಟ್ಟನ್ನು ಮೀರಿ ಯೋಚಿಸುವ ಸಲುವಾಗಿ ನಾವೇನು ಮಾಡಬೇಕು-
1.ಇತರರು ಏನು ಯೋಚಿಸುತ್ತಾರೆ ಎಂಬುದನ್ನು ನಿರ್ಲಕ್ಷಿಸಿ.
2.ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.
3.ವಿವಿಧ ಕ್ಷೇತ್ರಗಳ ನಾಯಕರ ಬಗ್ಗೆ ಅಧ್ಯಯನ ಮಾಡಿ ಮತ್ತು ಅವರು ಯಶಸ್ವಿಯಾಗಲು ಏನು ಮಾಡಿದರು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ನಾವು ಯಾಕೆ ವಿಫಲಗೊಳ್ಳುತ್ತೇವೆ ಎಂದರೆ ಒಂದು ಸಮಸ್ಯೆ ಎದುರಾದಾಗ ಅದನ್ನು ನಾವು ಹಿಂದೆ ಹೇಗೆ ಸಮಸ್ಯೆಯನ್ನು ಪರಿಹರಿಸಿದ್ದೇವೆ ಎಂಬುವುದನ್ನು ನೋಡಿಕೊಂಡು ಅದೇ ಮಾದರಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಪ್ರಾರಂಭಿಸುತ್ತೇವೆ ಆದರೆ ಅದು ತಪ್ಪು. ಏಕೆಂದರೆ ಸಮಸ್ಯೆ ಅದೇ ಇರಬಹುದು ಆದರೆ ಸನ್ನಿವೇಶ ಮತ್ತು ಸಮಯ ಎಲ್ಲವೂ ಬದಲಾಗಿದೆ ಎಂಬುದನ್ನು ಮರೆಯುತ್ತೇವೆ.

– ಪ್ರೊ.ಧರ್ಮರಾಜ ಕುಂಬಾರ
ಉಪನ್ಯಾಸಕರು ಮತ್ತು ಉದ್ಯೋಗ ತರಬೇತಿ ಅಧಿಕಾರಿ

