ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡುತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆಂದು ಯೋಚಿಸಿ ಅದರಂತೆಯೇ ಬೆಳೆಯಿತು, ಮತ್ತು ಎಲ್ಲರಿಗೂ ಬೇಕಾದ ಮರ ಮತ್ತು ಹಣ್ಣಾಗಿ ಪರೋಪಕಾರಿಯಾಗಿ ಬಾಳಿ ಬದುಕಿತು.
ಅದರ ಪಕ್ಕದಲ್ಲೇ ಇದ್ದ ಎರಡನೆಯ ಗೊರಟು ನನ್ನ ಬೇರುಗಳಿಗೆ ಅಂತರ್ಜಲ ಸಿಗದಿದ್ದರೆ? ಪೌಷ್ಟಿಕಾಂಶ ಸಿಗದಿದ್ದರೆ? ಗಿಡವಾದಾಗ ಹಸು, ಕುರಿ ಮೇಕೆಗಳು ಬಂದು ತಿಂದರೆ, ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ನನಗೆ ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿದು ಬಿಟ್ಟಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊರಟೂ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು.

ಮೊದಲನೆಯ ಗೊರಟಿನ ಮನೋಭಾವ ಸಕಾರಾತ್ಮಕವಾಗಿತ್ತು. ಎರಡನೆಯ ಗೊರಟಿನ ಮನೋಭಾವ ನಕಾರಾತ್ಮಕವಾಗಿತ್ತು. ಸಕಾರಾತ್ಮಕವಾಗಿ ಯೋಚಿಸಿದ ಗೊರಟು ಮೊಳಕೆಯೊಡೆದು, ಗಿಡವಾಗಿ, ಮರವಾಗಿ ಬೆಳೆದು ದಶಕಗಳ ಕಾಲ ಬದುಕಿತು. ಆದರೆ ಕೇವಲ ನಕಾರಾತ್ಮಕವಾಗಿಯೇ ಯೋಚಿಸುತ್ತಿದ್ದ ಗೊರಟು ಒಂದೆರಡು ವಾರಗಳಲ್ಲೇ ತನ್ನ ಅಸ್ತಿತ್ವವೇ ಇಲ್ಲದಂತೆ ಮರೆಯಾಗಿ ಹೋಯಿತು. ನಮ್ಮ ಜೀವನದಲ್ಲೂ ಸಹ ನಮ್ಮ ಬಳಿ ಬುದ್ದಿವಂತಿಕೆ, ಜ್ಞಾನ, ಪ್ರತಿಭೆ, ಅವಕಾಶಗಳು ಎಲ್ಲವೂ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಸಕಾರಾತ್ಮಕ ಮನೋಭಾವವೇ ಇಲ್ಲದಿದ್ದರೆ, ಏನಿದ್ದರೂ ಅವೆಲ್ಲವೂ ವ್ಯರ್ಥವಾಗುತ್ತವೆ.
ಗಾಳಿಪಟಕ್ಕೆ ಆಕಾಶದೆತ್ತರಕ್ಕೆ ಏರುವ ಮನೋಭಾವವೇ ಗಾಳಿಪಟಕ್ಕೆ ಇಲ್ಲದಿದ್ದರೆ ಒಳ್ಳೆಯ ಹವಾಮಾನವಿದ್ದರೆ ಏನೂ ಫಲವಿಲ್ಲ ಮತ್ತು ಅದು ಮೇಲೇರಲು ಸಾಧ್ಯವಿಲ್ಲ. ಅವಕಾಶಗಳು ಎಲ್ಲರ ಜೀವನದಲ್ಲೂ ಬಂದೇ ಬರುತ್ತವೆ. ಆದರೆ ಸಕಾರಾತ್ಮಕವಾಗಿ ಬದುಕುವವರು ಅವಕಾಶಗಳನ್ನು ಹುಡುಕುತ್ತಾರೆ, ಹುಡುಕಿ ಗಳಿಸಿಕೊಳ್ಳುತ್ತಾರೆ. ನಕಾರಾತ್ಮಕವಾಗಿ ಯೋಚಿಸುವವರು ಸದಾ ಪ್ರತಿಯೊಂದನ್ನೂ ಸಂಶಯದಿಂದ ನೋಡುತ್ತಾರೆ. ಸಮಸ್ಯೆಗಳು ಪ್ರತಿಯೊಬ್ಬರಿಗೂ ಇದ್ದಿದ್ದೇ, ಬದುಕಲ್ಲಿ ಸೋಲುಗಳು ಎದುರಾಗುತ್ತವೆ ಆದರೆ ಸಕಾರಾತ್ಮಕವಾಗಿ ಯೋಚಿಸುವವರು ಬಿದ್ದಲ್ಲೇ ಮತ್ತೆ ಎದ್ದು ಏನೂ ಆಗಿಲ್ಲವೆಂಬಂತೆ ಮುಂದುವರೆಯುತ್ತಾರೆ. ಕವಿ ಶ್ರೀ ಅಸಾದುಲ್ಲಾ ಬೇಗ್ರವರು ತನ್ನ ಕವನದಲ್ಲಿ ಹೇಳುತ್ತಾರೆ ಹವ್ಯಾಸವನ್ನು ಬದಲಿಸಿಕೊಂಡರೆ ಹಣೆಬರಹ ಬದಲಾದೀತು. ನೋಡುವ ದೃಷ್ಟಿಯನ್ನು ಬದಲಿಸಿಕೊಂಡರೆ ಕಾಣುವ ದೃಶ್ಯವೇ ಬದಲಾದೀತು, ದೋಣಿಯನ್ನೇ ಬದಲಿಸಬೇಕಾಗಿಲ್ಲ ಬದಲಿಗೆ ಸಾಗುವ ದಿಕ್ಕನ್ನು ಬದಲಿಸಿಕೊಂಡರೆ ಸಾಕು ದಡವನ್ನು ತಲುಪಬಹದು ಎಂದು. ನಾವೂ ನಮ್ಮ ವೃತ್ತಿ ಮತ್ತು ವೈಯಕ್ತಿಕ ಜಿವನದಲ್ಲಿ ಸಕಾರಾತ್ಮಕವಾಗಿ ಯೋಚಿಸಿ ಕೆಲಸ ಮಾಡಿದರೆ ನಮ್ಮ ಫಲಿತಾಂಶವೂ ಧನಾತ್ಮಕವಾಗಿ ಬದಲಾಗುತ್ತದೆ. ಆದ್ದರಿಂದಲೇ ನಮ್ಮ ಹವ್ಯಾಸವನ್ನು ಬದಲಿಸಿಕೊಂಡರೆ ನಮ್ಮ ಹಣೆಬರಹವೇ ಬದಲಾಗಬಹುದು ಎಂದು ತಿಳಿದವರು ಹೇಳಿದ್ದಾರೆ.
ಲೇಖನ:
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

