ವಿಜಯಪುರದ ಎಪಿಎಂಸಿಯಲ್ಲಿ ನಡೆದ ವ್ಯಾಪಾರಿಗಳ & ವಿವಿಧ ಸಂಘಗಳ ಪ್ರತಿನಿಧಿಗಳ ಸಭೆ
ವಿಜಯಪುರ: ಕಾಂಗ್ರೆಸ್ ಪಕ್ಷ ಯಾವತ್ತೂ ಆರ್ಥಿಕತೆ ಮೂಲವಾದ ವ್ಯಾಪಾರ-ವಹಿವಾಟಿನ ಪರವಿರುವುದರಿಂದ ನಾವು ವ್ಯಾಪಾರಿಗಳ ಹಿತ ಕಾಪಾಡುತ್ತ ಬಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ, ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆದ ವ್ಯಾಪಾರಿಗಳ ಹಾಗೂ ಎಲ್ಲ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ದೇಶ ಈ ಹತ್ತು ವರ್ಷಗಳಲ್ಲಿ ಏನೇನು ಅನುಭವಿಸಿದೆ ನಿಮಗೆ ಗೊತ್ತಿದೆ. ಎಲ್ಲದರ ಮೇಲೆ ಜಿಎಸ್ಟಿ ದಾಳಿಯನ್ನು ವ್ಯಾಪಾರಿಗಳಾದ ನೀವು ಅನುಭವಿಸಿದ್ದೀರಿ. ಮನಮೋಹನ್ ಸಿಂಗ್ ಅವರು ಇದ್ದಾಗ ದೇಶದ ಆರ್ಥಿಕ ಸ್ಥಿತಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಮೋದಿ ಆಡಳಿತ ಬಂದ ಮೇಲೆ ಅದು ಕುಸಿಯುತ್ತ ಬಂದಿದೆ. ಇದರ ನೇರ ಪರಿಣಾಮವನ್ನು ನೀವು ಉಂಡಿದ್ದೀರಿ ಎಂದು ವಿವರಿಸಿದರು.
ಚುನಾವಣಾ ಬಾಂಡ್ ಮೂಲಕ ಅನಧಿಕೃತವಾಗಿ ಹಣ ಎತ್ತಲಾಗಿದೆ. ಹೆದರಿಸಿ ಬೆದರಿಸಿ ವ್ಯಾಪಾರಿಗಳ, ಉದ್ಯೋಗಪತಿಗಳಿಂದ ವಸೂಲಿ ಮಾಡಲಾಗಿದೆ. ಇದೆಲ್ಲವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯ ತೋಟಗಾರಿಕೆ, ಎಲ್ಲ ಬೆಳೆಗಳ ಹಿತ, ಅಭಿವೃದ್ಧಿಗೆ ಹಾಗೂ ನಿಮ್ಮ ವ್ಯಾಪಾರ-ವಹಿವಾಟಿನ ಉಳಿವಿಗಾಗಿ ಯೋಚಿಸಿ ಮತ ನೀಡಿ. ಶರದ್ ಪವಾರ ಅವರ ಬಾರಾಮತಿಯಂತೆ ವಿಜಯಪುರವನ್ನು ಬೆಳೆಸೋಣ ಎಂದು ಹೇಳಿದರು.
ಮಾರುಕಟ್ಟೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಮಾತನಾಡಿ,
ಎಪಿಎಂಸಿಗಾಗಿ ಕೇಂದ್ರ ಸರಕಾರವನ್ನು ಮೀರಿ ನಿಮ್ಮೊಂದಿಗೆ ನಿಂತಿದ್ದು ರಾಜ್ಯ ಸರ್ಕಾರ. ಇದರಿಂದ ನಿಮಗೆ ಬಹುಪಯೋಗವಾಗಿದೆ. ಯಾರು ಯಾರೋ ಬಂದು ನಮ್ಮನ್ನು ಬೈದು ಮತ ಕೇಳುವವರ ಮಾತು ಕೇಳಬೇಡಿ. ಸದ್ಯದ ಸಂಸದನಿಗೆ ಪದೇ ಪದೇ ಅಧಿಕಾರ ನೀಡಿದರೂ ನಿಮ್ಮ ಹಣೆ ಬರಹ ಬದಲಾಗಿಲ್ಲ. ದೇಶವನ್ನು ಮೋದಿ-ಶಾ ಮಾತ್ರ ಆಳುತ್ತಿದ್ದಾರೆ. ನೀವೆಲ್ಲ ತಿಳಿದವರು. ಹಮಾಲರು ಊಟಕ್ಕೂ ಪರದಾಡುತ್ತಿದ್ದಾರೆ. ಮೋದಿ ದೊಡ್ಡವರ ಪರ ಇದ್ದಾರೆ. ಸಣ್ಣ ವ್ಯಾಪಾರಿಗಳ ಕಾಳಜಿ ಅವರಿಗಿಲ್ಲ ಎಂದರು.
ಇಲ್ಲಿಂದ ಸರಿಯಾದ ರೈಲು, ವಿಮಾನಯಾನ ಇಲ್ಲ. ಆಲಗೂರ್ ದೂರ ದೃಷ್ಟಿ ಇಟ್ಟುಕೊಂಡಿದ್ದಾರೆ. ರಾಜ್ಯ ಸರಕಾರವೂ ನಿಮ್ಮೊಂದಿಗೆ ಇದೆ. ಈ ಸಲ ಬದಲಾವಣೆ ತನ್ನಿ ಎಂದು ಕೋರಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ಮಾರುಕಟ್ಟೆಯ ಗತ ವೈಭವವನ್ನು ಮತ್ತೆ ತರಬೇಕಿದೆ ಎಂದರು.
ಎಐಸಿಸಿ ವೀಕ್ಷಕ ಸಯೀದ್ ಬುರಾನುದ್ದೀನ ಮಾತನಾಡಿದರು.
ಶಾಸಕರಾದ ಪ್ರಕಾಶ ರಾಠೋಡ, ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಹಮೀದ್ ಮುಶ್ರೀಫ್, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ವೀಕ್ಷಕ ಸಯೀದ್ ಬುರಾನ್, ಡಾ. ಮಕ್ಬೂಲ್ ಬಾಗವಾನ, ಸೈಯ್ಯದ ನೂರುದ್ದೀನ್, ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ವೈಜನಾಥ ಕರ್ಪೂರಮಠ, ಪಕ್ಷದ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಗುಡ್ಡೂ ಮಹೀಂದ್ರಕರ, ಫಾರೂಖ ಬಾಗವಾನ, ಸಂಗಪ್ಪ ಹೇರಲಗಿ, ಸುರೇಶ ಗಚ್ಚಿನಕಟ್ಟಿ, ಅರುಣ ಹುಂಡೆಕಾರ ಅನೇಕರಿದ್ದರು.

