ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸ್ತುತ ಇಂದಿನ ದಿನಗಳಲ್ಲಿ ಮಕ್ಕಳಿಗೆ ಆತ್ಮರಕ್ಷಣೆಯ ಅವಶಕ್ಯತೆಯಿದೆ. ಜೀವನ ಸಂಕೀರ್ಣಮಯವಾಗುತ್ತಿದ್ದು, ಅನೇಕ ಸಂದರ್ಭಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಮಾನಸಿಕ ಮತ್ತು ದೈಹಿಕ ಹಿಂಸೆಯಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಆದ್ದರಿಂದ ಮಕ್ಕಳಲ್ಲಿ ಆತ್ಮಸ್ಥೆöÊರ್ಯ, ಆತ್ಮರಕ್ಷಣೆ ಮತ್ತು ಮಾನಸಿಕ ಆತ್ಮಬಲವನ್ನು ಹೆಚ್ಚಿಸುವದರೊಂದಿಗೆ ಸಾಮಾಜಿಕವಾಗಿ ಜಾಗರೂಕರನ್ನಾಗಿ ಮಾಡಲು ಕರಾಟೆ ತರಬೇತಿ ಅತಿ ಅವಶ್ಯಕವಾಗಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜು.೨೫ ರಂದು ವಾರಿಯರ್ಸ ವೇ ಮಾರ್ಷಲ್ ಆರ್ಟ್ಸ್ ಇವರು ಆಯೋಜಿಸಿದ ೩ ನೇಯ ಓಪನ್ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಅಮೋಘ ಸಾಧನೆಗೈದ ಮಕ್ಕಳಿಗೆ ಪ್ರಶಸ್ತಿ ಮತ್ತು ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಶಾಲೆ, ಪಾಠ-ಪ್ರವಚನ, ಹೋಮ್ ವರ್ಕ, ಟ್ಯೂಷನ್ ಹೀಗೆ ಶಿಕ್ಷಣ ಕೇವಲ ಜ್ಞಾನಾರ್ಜನೆಗಾಗಿ ಎನ್ನುವಂತಾಗಿದೆ. ಮಕ್ಕಳು ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಾಗ ಮಾತ್ರ ಸರ್ವಾಂಗೀಣ ಪ್ರಗತಿ ಹೊಂದುವರು. ಆದ್ದರಿಂದ ತರಬೇತಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಇದು ಕೇವಲ ಹೋರಾಟದ ಕಲೆ ಅಲ್ಲ. ಬದಲಾಗಿ ಜೀವನದಲ್ಲಿ ಶಿಸ್ತು ಮತ್ತು ನಮ್ರತೆಯನ್ನು ಕಲಿಸುತ್ತದೆ. ಸಂಭಾವ್ಯ ಅಪಾಯಗಳನ್ನು ಗುರುತಿಸಲು ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಕಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮೀತಿ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯು ಜ್ಞಾನದ ಜತೆಗೆ ಕ್ರೀಡೆ ಮತ್ತು ಇನ್ನಿತರ ದೈಹಿಕ ಕಸರತ್ತು ನೀಡುವ ಚಟುವಟಿಕೆಗಳು ಅವಶ್ಯಕವಾಗಿದೆ. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳಿಗೆ ಕರಾಟೆ ತರಬೇತಿ ನೀಡಿ, ಆತ್ಮರಕ್ಷಣೆಗಾಗಿ ಸದೃಢರನ್ನಾಗಿಸಬೇಕು ಎಂದು ಹೇಳಿದರು.
ಕರಾಟೆ ಪಟುಗಳ ವಿಶೇಷ ಸಾಧನೆ: ಇದೇ ಸಂದರ್ಭದಲ್ಲಿ ಜು.೧೯ ರಂದು ಗದಗದಲ್ಲಿ ಜರುಗಿದ ೩ನೇಯ ಓಪನ್ ನ್ಯಾಶನಲ್ ಲೆವೆಲ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಅಮೋಘ ಸಾಧನೆಗೈದ ಪ್ರಥಮ ಮೇಲಿನಮನಿ ಮತ್ತು ಧನ್ಯಾ ಕೊಣ್ಣೂರ ಕುಮಿಟೆ ಮತ್ತು ಕಟಾದಲ್ಲಿ ಪ್ರಥಮ ಸ್ಥಾನ, ಗಗನ ಬಜಂತ್ರಿ, ಸ್ವರೂಪ ಬೆನಕನಹಳ್ಳಿ, ಆಕಾಶ ಬಿರಾದಾರ ಇವರು ಕುಮಿಟೆಯಲ್ಲಿ ಪ್ರಥಮ ಸ್ಥಾನ, ಗಿರಿವಾನ್ ಅಥರ್ಗಾ ಮತ್ತು ಶ್ರೀಹರಿ ಶಿವಗೊಂಡ ಇವರು ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಮತ್ತು ರಜತ್ ಹಳ್ಳಿ ಈತನು ಕಟಾದಲ್ಲಿ ತೃತೀಯ ಸ್ಥಾನ ಈ ಎಲ್ಲ ಮಕ್ಕಳು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಎಲ್ಲ ಕರಾಟೆ ಪಟುಗಳ ಸಾಧನೆಗೆ ಕರಾಟೆ ತರಬೇತುದಾರ ಶ್ರೀ ಪ್ರವೀಣ ವಠಾರ, ಶಿವಶರಣ ಹಾಗೂ ನವೀನ ಇವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಬಿ.ಆರ್.ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಬಾಬು ಕೋಲಕಾರ, ಶ್ರೀರಾಮ ದೇಶಪಾಂಡೆ ಸಹ ಉಪಸ್ಥಿತರಿದ್ದರು.

