ವಿಜಯಪುರದಲ್ಲಿ ನಡೆದ ವೈದ್ಯರು, ಸಹಕಾರ ಪ್ರತಿನಿಧಿಗಳು, ಹಾಗೂ ನ್ಯಾಯವಾದಿಗಳ ಸಭೆ
ವಿಜಯಪುರ: ಚುನಾವಣೆಯ ಈ ಸಂದರ್ಭದಲ್ಲಿ ದೇಶದಲ್ಲಿರುವ ಸಧ್ಯದ ಪರಿಸ್ಥಿತಿಯ ಕುರಿತು ಶಿಕ್ಷಣ ತಜ್ಞರು, ವೈದ್ಯರು, ಸಹಕಾರ ಪ್ರತಿನಿಧಿಗಳು ಜನಜಾಗೃತಿ ಮೂಡಿಸಿ ಪ್ರಜಾಪ್ರಭುತ್ವ ಉಳಿಸಲು ಮುಂದಾಗಬೇಕು ಎಂದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ಸಂಜೆ ನಗರದಲ್ಲಿ ನಡೆದ ವೈದ್ಯರು, ಸಹಕಾರ ಪ್ರತಿನಿಧಿಗಳು, ಹಾಗೂ ನ್ಯಾಯವಾದಿಗಳೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಇಂದಿನ ಪರಿಸ್ಥಿತಿಯ ಕುರಿತು ಜನಜಾಗೃತಿ ಮೂಡಿಸದಿದ್ದರೆ ದೇಶ ಸರ್ವಾಧಿಕಾರ ಆಡಳಿತದ ಕಡೆಗೆ ಸಾಗಲಿದೆ. ಈ ಸಭೆಯಲ್ಲಿ ಸೇರಿರುವ ನಾನಾ ಕ್ಷೇತ್ರಗಳ ಗಣ್ಯರಾದ ತಾವು ಮತದಾರರು ಮಾತ್ರವಲ್ಲ. ಸಮಾಜವನ್ನು ಮುನ್ನಡೆಸುವ ಗಣ್ಯರಾಗಿದ್ದೀರಿ. ಪ್ರತಿಯೊಬ್ಬರು ಕನಿಷ್ಠ 100 ಕುಟುಂಬಗಳ ಮೇಲೆ ಹಾಗೂ ತಲಾ 500 ಮತದಾರರ ಮೇಲೆ ಪರಿಣಾಮ ಬೀರುವವರಾಗಿದ್ದೀರಿ. ತಾವು ಸಮಾಜಕ್ಕೆ ಮಾರ್ಗದರ್ಶನ ಮಾಡಿ ಪ್ರಜಾಪ್ರಭುತ್ವದ ಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿಸಬೇಕು ಎಂದು ಸಚಿವರು ಕರೆ ನೀಡಿದರು.
ಸಧ್ಯದ ಆಡಳಿತದಲ್ಲಿ ನಮ್ಮ ಪ್ರಜಾಪ್ರಭುತ್ವ ಸಾಗಿರುವ ದಿಕ್ಕಿನ ಕುರಿತು ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಎಲೆಕ್ಟ್ರಾಲ್ ಬಾಂಡ್ ಸ್ಕೀಂ ಜಾರಿ ಮಾಡಿ ಹಣ ಸಂಗ್ರಸಿದ್ದಾರೆ. ಅಲ್ಲದೇ, ಇದನ್ನು ಮಾಹಿತಿ ಹಕ್ಕಿನಡಿ ಬಾರದಂತೆ ವ್ಯವಸ್ಥೆ ರೂಪಿಸಿದ್ದರು. ದೇಶದ ಪ್ರತಿಷ್ಠಿತ ಎಸ್.ಬಿ.ಐ ನ್ನು ನ್ನೂ ಕೂಡ ದುರ್ಬಳಕೆ ಮಾಡಿಕೊಂಡರು. ಆದರೆ, ಸುಪ್ರೀಂ ಕೋರ್ಟ್ ತನ್ನ ಖಡಕ್ ಸೂಚನೆ ಮೂಲಕ ಮಾಹಿತಿಯನ್ನು ನೀಡುವಂತೆ ಸೂಚಿಸಿ ನಮ್ಮ ಸಂವಿಧಾನ ಜೀವಂತವಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಎಲೆಕ್ಟ್ರಾಲ್ ಬಾಂಡ್ ನಡಿ ಸಂಗ್ರಹಿಸಲಾದ ರೂ. 16000 ಕೋ. ಗೂ ಹೆಚ್ಚು ಹಣದಲ್ಲಿ ರೂ. 6000 ಕೋ. ಗಿಂತಲೂ ಹೆಚ್ಚು ಹಣ ಐಟಿ, ಇಡಿ, ಸಿಬಿಐ ಧಾಳಿಗೆ ಒಳಗಾದ ವ್ಯಕ್ತಿಗಳಿಂದ ಸಂಗ್ರಹಿಸಿದ್ದಾರೆ. ಭೂಗತ ಡಾನ್ ಗಳು, ರೌಡಿಗಳು ಹಣ ಸುಲಿಗೆ ಮಾಡುವುದಕ್ಕೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ನಮ್ಮ ಪ್ರದಾನಿ ಸುದ್ದಿಗೋಷ್ಠಿ ನಡೆಸುವುದಿಲ್ಲ. ಯಾರ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ. ಅಧಿವೇಶನಕ್ಕೂ ಸರಿಯಾಗಿ ಬಾರದೆ ಸಂಸತ್ತಿನಲ್ಲಿ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ ಎಂದಾದರೆ ಅವರು ಎಲ್ಲಿಗೆ ಹೋಗುತ್ತಾರೆ? ಇದು ಎಂಥ ವ್ಯವಸ್ಥೆ? ಈ ವಿಷಯಗಳು ಪ್ರಸ್ತುತ ಚುನಾವಣೆಯಲ್ಲಿ ಚರ್ಚೆಯಾಗಬೇಕು. ಆದರೆ, ಇಂದು ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ನಡೆದಿದೆ. ಈ ದುರ್ದೈವದ ಸ್ಥಿತಿ ಬದಲಾವಣೆ ನಮ್ಮ ಧ್ಯೇಯವಾಗಬೇಕು. ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಬದ್ಧತೆ ಹೊಂದಿದೆ. ಈ ಕುರಿತು ಜನಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ನಮ್ಮ ದೇಶ ಪ್ರಜಾಪ್ರಭುತ್ವದಿಂದ ಸರ್ವಾಧಿಕಾರಿಯ ಆಡಳಿತದತ್ತ ಹೋಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.10 ಕೋಟಿ ಬಡ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆ ಎತ್ತಿದೆ. ನಾವು ಸರಕಾರಿ ಯೋಜನೆಯ ಶೇ. 99.20ಕ್ಕಿಂತಲೂ ಹೆಚ್ಚು ಹಣ ಫಲಾನುಭವಿಗಳನ್ನು ತಲುಪಿಸಿದ್ದೇವೆ. ದಲ್ಲಾಳಿಗಳ ಕಾಟ ತಪ್ಪಿಸಿ ಶೋಷಣೆ ಮುಕ್ತವಾದ ಯೋಜನೆ ಜಾರಿಗೆ ತಂದಿದ್ದೇವೆ. ಅಷ್ಟೇ ಅಲ್ಲ, ನ್ಯಾಯಾಲಯಗಳಲ್ಲಿ ಬಡವರ ಪ್ರಕರಣಗಳು ಆರು ತಿಂಗಳೊಳಗೆ ಇತ್ಯರ್ಥವಾಗಲು ಸಿವಿಲ್ ಪ್ರೊಸಿಜರ್ ಕೋಡ್ ಗೆ ತಿದ್ದುಪಡಿ ತಂದಿದ್ದೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿ ನಿಮ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಸಂಸದ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ದ್ರಾಕ್ಷಿ ಸಂಶೋಧನೆ ಕೇಂದ್ರ, ಆಲಮಟ್ಟಿ ಜಲಾಷಯ ಎತ್ತರ ಹೆಚ್ಚಳ ಗೆಜೆಟ್ ನೊಟಿಫಿಕೇಶನ್, ಸಮಯಕ್ಕೆ ಸರಿಯಾದ ರೇಲ್ವೆ ಸಂಚಾರ, ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಶ್ರಮಿಸುತ್ತೇನೆ. ತಾವೆಲ್ಲರೂ ಒಂದು ಬಾರಿ ಬದಲಾವಣೆ ಮಾಡಿ ಕಾಂಗ್ರೆಸ್ಸಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಪ್ರಾಸ್ತಾವಿವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಪ್ರೊ. ರಾಜು ಆಲಗೂರ ವಿದ್ಯಾವಂತರು. ಪ್ರೊಫೆಸರ್ ಅಗಿ ರಾಜಕೀಯ ಶಾಸ್ತ್ರ ಬೋಧಿಸಿದ್ದಾರೆ. ಅವರ ತಾಯಿ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ. ಅವರ ಅಜ್ಜಿ ಸಾಯವ್ವ ಕೂಡ ಸ್ವಾತಂತ್ರ್ಯ ಪೂರ್ವದಲ್ಲಿ ಕೇರಿಗಳಿಗೆ ಹೋಗಿ ಮಕ್ಕಳಿಗೆ ಬೋಧಿಸಿದ್ದಾರೆ. ಪ್ರಗತಿಪರ ಚಿಂತಕ, ಪ್ರಾಮಾಣಿಕ, ಸಚ್ಚರಿತ್ರ ವ್ಯಕ್ತಿತ್ವದ ಪ್ರೊ. ಆಲಗೂರ ಆಯ್ಕೆ ಅಗತ್ಯವಾಗಿದೆ. ಸಂಸದ ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಿಂದ ಮೌನವಾಗಿದ್ದಾರೆ. ಸಂಸತ್ತಿನಲ್ಲಿ ನಮ್ಮ ಧ್ವನಿ ಎತ್ತಲು ಅವರ ಆಯ್ಕೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಎಐಸಿಸಿ ವೀಕ್ಷಕ ಸಯ್ಯದ ಬುರಾನುದ್ದೀನ್, ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು.
ಇದೇ ವೇಳೆ ಸಚಿವರಿಗೆ ಮಹಾಂತೇಶ ಬಿರಾದಾರ ಅವರು ವಚನಗಳ ಕಟ್ಟನ್ನು ನೀಡಿ ಗೌರವಿಸಿದರು.

