ವಿಜಯಪುರ: ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ, ಕರ್ನಾಟಕವು ‘ವಿದ್ಯಾರ್ಥಿ-ಯುವಜನರ ಪ್ರಣಾಳಿಕೆ: ಲೋಕಸಭಾ ಚುನಾವಣೆ ೨೦೨೪’ ಅನ್ನು ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಬಿಡುಗಡೆ ಮಾಡಲಾಯಿತು.
ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ,
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು ಈ ಸಧ್ಯ ನಡೆಯುತ್ತಿರುವ ಎಲ್ಲಾ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಅವರನ್ನು ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಕೆ ನೀಡಿದರು.
ಕಳೆದ ಐದು ವರ್ಷಗಳಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ವಿಫಲವಾಗಿದ್ದು, ಗಾಢನಿದ್ರೆಗೆ ಜಾರಿದ್ದವು. ಈಗ, ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ದಿಢೀರನೆ ಎಚ್ಚರಗೊಂಡು ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ಇದ್ದಕ್ಕಿದಂತೆ ಪ್ರಯತ್ನಿಸುತ್ತಿವೆ. ಹೀಗಿದ್ದರೂ, ವಿದ್ಯಾರ್ಥಿಗಳು ಮತ್ತು ಯುವಜನರು ಜನರ ಸಮಸ್ಯೆಗಳ ಮೇಲೆಯೇ ಚುನಾವಣೆ ಎದುರಿಸಬೇಕು ಎಂಬ ಆಶಯ ಹೊಂದಿದ್ದರು. ಆದರೆ, ಚುನಾವಣೆಯ ಮುನ್ನವೇ ಎಲ್ಲಾ ರಾಜಕೀಯ ಪಕ್ಷಗಳು, ಈ ಚುನಾವಣೆಯಲ್ಲಿ ಜನರ ಯಾವುದೇ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದನ್ನು ನಿವಾರಿಸುವ ಬಗ್ಗೆ ಚಿಂತಿಸುವುದು ಬೇಡ ಎಂದು ಪರಸ್ಪರ ಒಪ್ಪಂದ ಮಾಡಿಕೊಂಡಂತಿದೆ. ಇಲ್ಲಿ ರಾಜಕೀಯ ಹಣಬಲ ಮತ್ತು ಮದ್ಯ ಹಂಚುವಿಕೆಯೇ ಮುಖ್ಯವಾಗುತ್ತಿದ್ದು, ಅದರೊಟ್ಟಿಗೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷವನ್ನು ಹರಡುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿರುವ ಕಾರಣ, ಯುವಜನರು ಮಧ್ಯಪ್ರವೇಶಿಸಲೇ ಬೇಕಾದ ತುರ್ತು ಎದುರಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿ-ಯುವಜನರ ಸಮುದಾಯದ ಮೇಲೆ ಆಳವಾದ ಪರಿಣಾಮ ಬೀರುವ ಶಿಕ್ಷಣ ಮತ್ತು ಉದ್ಯೋಗ – ಈ ಅವಳಿ ಸಮಸ್ಯೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ವಿದ್ಯಾರ್ಥಿ-ಯುವಜನರ ಪ್ರಣಾಳಿಕೆ ಮುಂದಿಟ್ಟಿವೆ. ಈ ಅವಳಿ ಬೇಡಿಕೆಗಳನ್ನು ಪರಿಹರಿಸುವುದು ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ಕಲ್ಯಾಣ ರಾಜ್ಯವಾಗಬೇಕೆಂಬ ಆಶಯದ ಉಲ್ಲೇಖ ಸಂವಿಧಾನದಲ್ಲಿಯೇ ಇದೆ. ದೇಶದ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ಒದಗಿಸುವ ಮತ್ತು ಉದ್ಯೋಗದ ವಿಚಾರದಲ್ಲಿ ಎಲ್ಲಾ ನಾಗರಿಕರಿಗು ಸಮಾನ ಅವಕಾಶವನ್ನು ಕಲ್ಪಿಸುವ ಸಂವಿಧಾನದ ಪರಿಚ್ಛೇದ ೪೫ ಮತ್ತು ಪರಿಚ್ಛೇದ ೧೬ ರಲ್ಲಿ ಈ ಆಶಯ ಅಡಗಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಗೋಷ್ಠಿಯಲ್ಲಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್, ವಿದ್ಯಾರ್ಥಿ ಮುಖಂಡರಾದ ಗುರುಪ್ರಸಾದ್, ಸಾಹೇಬಿ, ವಿಜಯಲಕ್ಷ್ಮಿ, ಅಬ್ದುಲ್ ಮತ್ತು ದಾನೀಶ್ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

