-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಸ್ವತಂತ್ರ ಭಾರತದ ಅತಿ ದೊಡ್ಡ ಹಬ್ಬ ಚುನಾವಣೆ. ಪ್ರತಿ ಐದು ವರ್ಷಕ್ಕೊಮ್ಮೆ ವಿಧಾನಸಭೆ ಮತ್ತು ಲೋಕಸಭೆಗಳಿಗೆ ನಡೆಯುವ ಈ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಭಾರತೀಯ ಪ್ರಜೆಗಳು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವಾಗಿದ್ದು, ಇದೀಗ ಲೋಕಸಭಾ ಚುನಾವಣೆಯು ಸನ್ನಿಹಿತವಾಗಿದ್ದು ಇಡೀ ಜಗತ್ತಿನ ಕಣ್ಣು ಭಾರತದೆಡೆಗಿದೆ.
ನಮ್ಮ ಸಂವಿಧಾನವು ರೂಪಿಸಿರುವ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜೆಗಳೇ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಈ ಮಹತ್ತರ ಜವಾಬ್ದಾರಿಯ ಕಾರ್ಯ ಇದೀಗ ಭಾರತದ ಸರ್ವ ನಾಗರಿಕರ ಕೈಯಲ್ಲಿದೆ.
ನಮ್ಮ ದೇಶದಲ್ಲಿ ಆಡಳಿತಾತ್ಮಕ ವ್ಯವಸ್ಥೆಯು ಸುಗಮವಾಗಿ ಸಾಗಲು ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ವಿಧಾನಸಭಾ ಮತ್ತು ಲೋಕಸಭಾ ವ್ಯಾಪ್ತಿಯಲ್ಲಿ ಚುನಾವಣೆಗಳು ನಡೆಯುತ್ತವೆ. ಇಲ್ಲಿ ತಮ್ಮದೇ ಆದ
ಆಶೋತ್ತರಗಳನ್ನು ಹೊಂದಿರುವ ಪಕ್ಷಗಳು ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಅಭಿವೃದ್ಧಿಯನ್ನು ಕೈಗೊಳ್ಳಲು ತಾವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಸೂಚಿಸುವ ವಿಷಯಗಳನ್ನು ಹೊಂದಿರುವ ಪ್ರಣಾಳಿಕೆಗಳನ್ನು ಚುನಾವಣೆ ಪೂರ್ವದಲ್ಲಿ ಬಿಡುಗಡೆ ಮಾಡುತ್ತವೆ. ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಮತ್ತು ಜೀವನಮಟ್ಟ ಸುಧಾರಿಸಲು ಈ ಚುನಾವಣೆಗಳಲ್ಲಿ ತಂತಮ್ಮ ಪಕ್ಷಗಳಿಂದ ಭಾಗವಹಿಸುವ ಅಭ್ಯರ್ಥಿಗಳಲ್ಲಿ ಸೂಕ್ತವಾದ ಮತ್ತು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಗುರುತರ ಜವಾಬ್ದಾರಿ ನಾವು ಪ್ರಜೆಗಳ ಮೇಲೆ ಇರುತ್ತದೆ.
ಸ್ವತಂತ್ರ ಭಾರತವನ್ನು ಕಟ್ಟಲು ನಮ್ಮ ಹಲವಾರು ನಾಯಕರು ಶ್ರಮಿಸಿದ್ದರು. ಭಾರತದಂತಹ ಬೃಹತ್ ದೇಶದ ಆಡಳಿತ ಸುಗಮವಾಗಿ ಸಾಗಲು ಚುನಾವಣೆಗಳ ಅವಶ್ಯಕತೆಯನ್ನು ಮನಗಂಡ ಅವರು ಸುಸ್ಥಿರ ಸರ್ಕಾರದ ಆಯ್ಕೆಗಾಗಿ ಚುನಾವಣೆಗಳನ್ನು ಪ್ರಾರಂಭಿಸಿದರು. ಇಂದಿಗೆ ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿ ರೂಪಗೊಳ್ಳುವಲ್ಲಿ ಈ ಚುನಾವಣೆಗಳು ಬಹುದೊಡ್ಡ ಪಾತ್ರವನ್ನು ವಹಿಸಿವೆ.
ಇದು ಸರ್ಕಾರದ ಕಾರ್ಯವೈಖರಿಯಾದರೆ ಸಾರ್ವಜನಿಕರಾಗಿ, ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಪ್ರಜ್ಞೆ ಕೂಡ ಅಷ್ಟೇ ಪ್ರಮುಖವಾದದ್ದು.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಅವರ ಜಾತಿ, ಮತ, ಪಂಥಗಳನ್ನು ಪರಿಗಣಿಸದೆ ಅಭ್ಯರ್ಥಿಯ ವಿದ್ಯಾರ್ಹತೆ, ನಂಬಿಕೊಂಡ ಮೌಲ್ಯಗಳು, ಸಾಮಾಜಿಕ ಬದ್ಧತೆ ಮತ್ತು ಕಳಕಳಿಯನ್ನು, ರಾಜಕೀಯವಾಗಿ ಸಮಾಜವನ್ನು ಮುನ್ನಡೆಸುವ ಚಾಣಾಕ್ಷತೆಯನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಕೈಗೊಳ್ಳಬಹುದಾದ ಕಾರ್ಯಗಳನ್ನು ಮನಗಾಣುವ ಮೂಲಕ ಗುರುತಿಸಬೇಕು. ಅಂತಹ ವ್ಯಕ್ತಿ ಯಾವುದೇ ಪಕ್ಷದಲ್ಲಿ ಇದ್ದರೂ ಕೂಡ ಆತನಿಗೆ ಮತ ಹಾಕುವ ಮೂಲಕ ನಿಮ್ಮ ಮತದ ಮೌಲ್ಯವನ್ನು ಕಾಪಾಡಿಕೊಳ್ಳಬೇಕು. ನಿಜವಾಗಿ ಕಾರ್ಯನಿರ್ವಹಿಸುವವರು ಮತದಾರರಿಗೆ ಹಣ ಹೆಂಡಗಳ, ಬೆಲೆಬಾಳುವ ವಸ್ತುಗಳ ಆಮಿಷವನ್ನು ತೋರುವುದಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಚುನಾವಣೆಗಳು ಅಧಿಕಾರದ ಚುಕ್ಕಾಣಿ ಹಿಡಿಯುವ ಕೇಂದ್ರ ಸ್ಥಾನಗಳಾಗಿದ್ದು ಜನರ, ಪಕ್ಷಗಳ ಬೆಂಬಲದಿಂದ ಗೆದ್ದು ಬರುವ ಅಭ್ಯರ್ಥಿಗಳು ಅಧಿಕಾರ ಸಿಕ್ಕ ಕೂಡಲೇ ತಮ್ಮ ಕರ್ತವ್ಯಗಳನ್ನು ಮರೆತು ಅಧಿಕಾರ ಮದದಿಂದ ಮೆರೆಯುವುದು ಕಾಣಸಿಗುತ್ತದೆ. ಮತ ಪಡೆಯುವ ಮುನ್ನ ಬೆನ್ನು ಬಾಗಿಸಿ ಎರಡು ಕೈಗಳನ್ನು ಮುಗಿದು ಮತಯಾಚಿಸುವ ಅಭ್ಯರ್ಥಿಗಳು ಚುನಾವಣೆಯ ನಂತರ ತಾವು ಪ್ರಜಾ ಪ್ರತಿನಿಧಿಗಳು ಎಂಬುದನ್ನು ಮರೆತು ಎದೆ ಸೆಟೆಸಿ ಸರ್ವಾಧಿಕಾರಿಗಳಂತೆ ಮೆರೆಯುತ್ತಾರೆ. ಅವರ ಬಳಿ ಅಹವಾಲು ಸಲ್ಲಿಸಲು ಬರುವ ಜನರನ್ನು ನಿಕೃಷ್ಟವಾಗಿ ಕಾಣುತ್ತಾರೆ. ಅವರ ಕೆಲಸದ ವ್ಯಾಪ್ತಿ, ಕಾರ್ಯಬಾಹುಳ್ಯ ಬಹಳ ದೊಡ್ಡದು ಒಪ್ಪಿಕೊಳ್ಳೋಣ, ಆದರೆ ಸೌಜನ್ಯದಿಂದ ಕೂರಿಸಿ ಅವರ ಅಹವಾಲುಗಳನ್ನು ಸ್ವೀಕರಿಸುವ, ಸಮಾಧಾನವಾಗಿ ಮಾತನಾಡುವ ಔಚಿತ್ಯವನ್ನು ಕೂಡ ಅವರು ಮರೆತುಬಿಡುತ್ತಾರೆ. ಇದು ಖಂಡನೀಯ. ಕೆಲವೊಮ್ಮೆ ಕೆಲ ಪಕ್ಷದ ಕಾರ್ಯಕರ್ತರು ತಮ್ಮ ಹಿಂಬಾಲಕರನ್ನು ಒಗ್ಗೂಡಿಸಿಕೊಂಡು ತಮ್ಮ ಧ್ಯೇಯ ಸಾಧನೆಗಾಗಿ ಅವರನ್ನು ಪೀಡಿಸಬಹುದು ನಿಜ… ಆದರೆ ಚುನಾವಣೆಯ ಸಮಯದಲ್ಲಿ ಅವರು ಮಾಡಿರುವ ಸಹಾಯವನ್ನು ನೆನೆದು ಅಕೃತ್ಯಗಳಿಗೆ ಅವಕಾಶ ಮಾಡಿಕೊಡಬಾರದು. ಎಲ್ಲಕ್ಕೂ ಮಿಗಿಲಾಗಿ ಜನತಾ ಜನಾರ್ಧನನ ಕಲ್ಯಾಣವೇ ಅವರ ಮುಖ್ಯ ಧ್ಯೇಯವಾಗಬೇಕು.

ಸಮಾಜದ ಪ್ರತಿಯೊಬ್ಬ ನಾಗರಿಕರು ತಮ್ಮ ಮತ ಚಲಾಯಿಸುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ದುಕೊಳ್ಳಲು ಎಂದೇ ಚುನಾವಣೆಯ ದಿನ ರಜೆ ಘೋಷಿಸುವುದು ಎಲ್ಲರೂ ತಮ್ಮ ಮತಗಳನ್ನು ಚಲಾಯಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಹೊರತು ಎರಡು ಮೂರು ದಿನಗಳ ರಜೆಗಳನ್ನು ಒಟ್ಟುಗೂಡಿಸಿಕೊಂಡು ಪಿಕ್ನಿಕ್ ಪ್ರವಾಸ ಎಂದು ಸುತ್ತಾಟಕ್ಕೆ ಹೋಗುವುದಕ್ಕಲ್ಲ.
ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸುವುದು ನಮ್ಮ ಪರಮ ಕರ್ತವ್ಯ ಎಂಬುದನ್ನು ಅರಿತು ಮತ ಚಲಾಯಿಸುವ ಮೂಲಕ ಸಂವಿಧಾನವು ನಮಗೆ ನೀಡಿರುವ ಹಕ್ಕನ್ನು ಪುರಸ್ಕರಿಸಬೇಕು.
ನನ್ನೊಬ್ಬನ ಓಟಿನಿಂದ ಏನಾಗುತ್ತದೆ ಎಂದು ಮತ ಚಲಾಯಿಸುವುದನ್ನು ಅಸಡ್ಡೆ ಮಾಡಬಾರದು. “ಎವರಿ ಓಟ್ ಕೌಂಟ್ಸ್ ” ಒಂದೇ ಮತದ ಅಂತರದಿಂದ ಎಷ್ಟೋ ಬಾರಿ ಸೋಲು ಗೆಲುವುಗಳ ನಡುವೆ ತೂಗುಯ್ಯಾಲೆ ಆಡುತ್ತದೆ. ಉತ್ತಮ ಅಭ್ಯರ್ಥಿ ಕೇವಲ ಒಂದೆರಡು ಮತಗಳ ಅಂತರದಲ್ಲಿ ಸೋಲಬಹುದು
ಯೋಗ್ಯವಲ್ಲದ ವ್ಯಕ್ತಿ ಚುನಾವಣೆಯಲ್ಲಿ ಗೆಲುವು ಗಳಿಸಲು ಒಂದೆರಡು ಮತಗಳ ಅಂತರವು ಸಾಕಾಗಬಹುದು. ಆದ್ದರಿಂದ ನಿಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಭಾರತ ದೇಶದ ಪ್ರಜಾತಂತ್ರವನ್ನು ರೂಪಿಸುವಲ್ಲಿ ನಿಮ್ಮ ಕರ್ತವ್ಯವನ್ನು ನಿರ್ವಹಿಸಬೇಕು.
ಭಾರತ ಸರ್ಕಾರವು 2009 ರಿಂದ ಸ್ವೀಪ ಸಂಸ್ಥೆಯ ಸಹಯೋಗದಲ್ಲಿ ಮತದಾನ ಜಾಗೃತಿ ಶಿಬಿರಗಳನ್ನು ನಡೆಸುತ್ತಿದ್ದು ಮತದಾನ ಪ್ರಕ್ರಿಯೆಯ ಕರ್ತವ್ಯಗಳನ್ನು ಮತ್ತು ಚುನಾವಣೆಯ ಮೂಲಭೂತ ಜ್ಞಾನವನ್ನು ಜನರಿಗೆ ನೀಡುವ ಮೂಲಕ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರ ಪ್ರಾಥಮಿಕ ಗುರಿಯು ಎಲ್ಲಾ ಅರ್ಹ ನಾಗರಿಕರನ್ನು ಮತದಾನ ಮಾಡಲು ಮತ್ತು ಚುನಾವಣೆಯ ಸಮಯದಲ್ಲಿ ತಿಳುವಳಿಕೆಯುಳ್ಳ ನಿರ್ಧಾರವನ್ನು ಮಾಡಲು ಪ್ರೋತ್ಸಾಹಿಸುವ ಮೂಲಕ ಭಾರತದಲ್ಲಿ ನಿಜವಾದ ಭಾಗವಹಿಸುವಿಕೆಯ ಪ್ರಜಾಪ್ರಭುತ್ವವನ್ನು ನಿರ್ಮಿಸುವುದು. ಕಾರ್ಯಕ್ರಮವು ರಾಜ್ಯದ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಜನಸಂಖ್ಯಾ ಪ್ರೊಫೈಲ್ ಮತ್ತು ಹಿಂದಿನ ಸುತ್ತಿನ ಚುನಾವಣೆಗಳಲ್ಲಿ ಚುನಾವಣಾ ಭಾಗವಹಿಸುವಿಕೆಯ ಇತಿಹಾಸ ಮತ್ತು ಅದರ ಕಲಿಕೆಯ ಪ್ರಕಾರ ವಿನ್ಯಾಸಗೊಳಿಸಲಾದ ಬಹು ಸಾಮಾನ್ಯ ಮತ್ತು ಉದ್ದೇಶಿತ ಮಧ್ಯಸ್ಥಿಕೆಗಳನ್ನು ಆಧರಿಸಿದೆ.
ಆದ್ದರಿಂದ ಭಾರತದ ಪ್ರಜ್ಞಾವಂತ ನಾಗರಿಕರೇ ನಿಮ್ಮ ಮತ ನಿಮ್ಮ ಹಕ್ಕು… ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿಮ್ಮ ಹಕ್ಕನ್ನು ಮಾರಿಕೊಳ್ಳದೆ ಸೂಕ್ತ ಅಭ್ಯರ್ಥಿಗೆ ಮತ ನೀಡುವ ಮೂಲಕ ಪ್ರಜಾತಂತ್ರವನ್ನು ಗೆಲ್ಲಿಸಿ, ಸದೃಢ ಭಾರತವನ್ನು ಕಟ್ಟುವಲ್ಲಿ ನಿಮ್ಮ ಸಹ ಯೋಗವನ್ನು ನೀಡಿ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

