ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

ಗಡಿಯಾರವನ್ನು ನೋಡದೇ ದುಡಿಯುವವನು ವ್ಯವಸ್ಥೆಯ ಒಳಗಡೆ ಮಾಲೀಕನಾಗಿ ಬೆಳೆಯುತ್ತಾನೆ.
‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಕಾಲವೊಂದಿತ್ತು, ಆದರೆ ಇದು ಇಂದು ಬದಲಾಗಿದ್ದು, ‘ಉದ್ಯೋಗಂ ಸರ್ವ ಲಕ್ಷಣಂ’ ಎಂದು ಬದಲಾಗಿದೆ ಎಂದರೆ ತಪ್ಪಾಗದು. ಏಕೆಂದರೆ ಇಂದು ಉದ್ಯೋಗವು ಕೇವಲ ಪುರುಷರಿಗಷ್ಟೇ ಅಲ್ಲದೇ ಮಹಿಳೆಯರಿಗೂ ಅತ್ಯಂತ ಅನಿವಾರ್ಯವಾಗಿದೆ. ಉದ್ಯೋಗವೇನೋ ಎಲ್ಲರಿಗೂ ಬೇಕು ಆದರೆ ಉದ್ಯೋಗದ ಆಳವನ್ನು ಮತ್ತು ಉದ್ಯೋಗದಾತನ ಆಶಯಗಳನ್ನು ಅರಿತು ಕೆಲಸ ಮಾಡುವ ಕೆಲಸಗಾರರು ಎಷ್ಟು ಮಂದಿ ಇದ್ದಾರೆ ಎಂದು ವ್ಯವಸ್ಥೆಯ ಒಳಗೆ ಅಧ್ಯಯನ ಏನಾದರೂ ಮಾಡಿದರೆ ಸಿಗುವ ಉತ್ತರವು ನಿರಾಶಾದಾಯಕ ಆಗಿರಬಹುದು.
ಏಕೆಂದರೆ ಎಲ್ಲರಿಗೂ ಉದ್ಯೋಗ ಅತ್ಯಂತ ಅಗತ್ಯವಾಗಿ ಬೇಕು, ಉದ್ಯೋಗದಾತನು ನೀಡುವ ಸಂಬಳವಂತೂ ಬೇಕೇ ಬೇಕು, ಆದರೆ ಉದ್ಯೋಗದಾತನು ನೀಡುವ ಸಂಬಳಕ್ಕೆ ನೀಡುವ ಕೆಲಸದ ರೂಪದ ಪ್ರತಿಫಲದ ಕುರಿತು ಯೋಚಿಸುವವರು ತೀರಾ ವಿರಳ. ಸಾಮಾನ್ಯವಾಗಿ ಕೆಲಸಗಾರರಲ್ಲಿ ಪ್ರತಿದಿನವೂ ಬೆಳಗಾಗಿ ಮಧ್ಯಾಹ್ನವಾದರೆ ಸಾಕು, ಸಂಜೆಯಾದರೆ ಸಾಕಪ್ಪಾ ಎನ್ನುವ ಮನೋಭಾವ ಇರುತ್ತದೆ. ಬೆಳಗಿನಿಂದ ಸಂಜೆಯ ನಡುವಿನ ಕೆಲಸದ ಅವಧಿಯಲ್ಲಿ ಕೆಲಸಗಾರನಾಗಿ ನಾನು ಮಾಡಿದ ಕೆಲಸಗಳೇನು? ಉದ್ಯೋಗದಾತನ ಆಶಯಗಳನ್ನು ಕೆಲಸಗಾರನಾಗಿ ನಾನು ತಕ್ಕಮಟ್ಟಿಗಾದರೂ ಈ ದಿನ ಪೂರೈಸಿದ್ದೇನೆಯೇ? ನನಗೆ ನೀಡುವ ಸಂಬಳಕ್ಕೆ ಪ್ರತಿಯಾಗಿ ನಾನು ನನಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ನನ್ನ ಉದ್ಯೋಗದಾತನಿಗೆ ನಾನು ಸಹಾಯ ಮಾಡಿದ್ದೇನೆಯೇ ಎಂದು ಯಾವ ಕೆಲಸಗಾರನೂ ಯೋಚನೆಯನ್ನು ಮಾಡುವುದಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಸಂಬಳ ಬರಲೇ ಬೇಕು, ಲಭಿಸಬೇಕಾದ ಸೌಲಭ್ಯಗಳು ಮತ್ತು ಭತ್ತೆಗಳು ದೊರೆಯಲೇ ಬೇಕು ಎಂಬ ಅಪೇಕ್ಷೆಯಷ್ಟೇ ಇರುತ್ತದೆ.
ಹೆಚ್ಚಿನ ಕೆಲಸಗಾರರಲ್ಲಿ ‘ಹಾಕಿದ ಊಟ, ಮಾಡಿದ ಕೆಲಸ’ ಎನ್ನುವ ಗಾದೆಯ ಮನಃಸ್ಥಿತಿಯೇ ಇರುತ್ತದೆ. ಅಂದರೆ ಉದ್ಯೋಗದಾತ ನನಗೆಷ್ಟು ಸಂಬಳವನ್ನು ಕೊಡುತ್ತಾನೋ ಅದಕ್ಕೆ ಸರಿಯಾದ ಮೌಲ್ಯವಿರುವ ಕೆಲಸವನ್ನು ಮಾತ್ರ ನಾನು ಮಾಡಬೇಕು (ಉದಾ: ಸಂಸ್ಥೆಯು ದಿನಕ್ಕೆ ರೂ.೨೫೦/- ಸಂಬಳ ನೀಡಿದರೆ, ಅಷ್ಟೇ ಮೌಲ್ಯವಿರುವ ಕೆಲಸವನ್ನು ನಾನು ಮಾಡಬೇಕು, ಹೆಚ್ಚುವರಿ ಕೆಲಸ ಮಾಡಬಾರದು) ಎನ್ನುವ ಧೋರಣೆ ಇರುತ್ತದೆ. ಅದರ ಜೊತೆಗೆ ‘ಪ್ರತಿ ಕ್ಷಣವೂ ಗಡಿಯಾರವನ್ನು ನೋಡಿಕೊಂಡು ಸಮಯಕ್ಕಷ್ಟೇ ಮಹತ್ವವನ್ನು ಕೊಡುತ್ತಾ ದಿನದ ಕೆಲಸದ ಅವಧಿಯನ್ನು ವ್ಯರ್ಥವಾಗಿ ಕಳೆಯುತ್ತಾ ಇರುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ಸಂಬಳವನ್ನು ಅಪೇಕ್ಷಿಸುತ್ತಾರೆ. ಈ ಗುಣವು ಒಳ್ಳೆಯದಲ್ಲ ಮತ್ತು ಇಂತಹ ವ್ಯಕ್ತಿಗಳು ಸಂಸ್ಥೆಯ ಒಳಗಡೆ ಕೇವಲ ಕಾರ್ಮಿಕರಾಗಿಯೇ ಉಳಿದು ಬಿಡುತ್ತಾರೆ. ಯಾರು ಸಮಯ ಮತ್ತು ತನಗೆ ಲಭಿಸುವ ಸಂಬಳದ ಮಿತಿಯನ್ನು ನೋಡದೇ ಇದು ನನ್ನ ಜವಾಬ್ದಾರಿ, ನನಗೆ ನೀಡಿದ ಜವಾಬ್ದಾರಿಯನ್ನು ನಾನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎನ್ನುವ ಯೋಚನೆಯೊಂದಿಗೆ ಕೆಲಸ ಮಾಡುತ್ತಾರೋ ಅವರು ವ್ಯವಸ್ಥೆಯ ಒಳಗಡೆ ಮಾಲೀಕರಾಗಿ ಬೆಳೆಯುತ್ತಾರೆ.’
– ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

