ಬೇಸಿಗೆ ಮಳೆ ವೇಳೆ ಜೀವಹಾನಿ ಹೆಚ್ಚು | ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಕಿವಿಮಾತು
ಇಂಡಿ: ಬೇಸಿಗೆಯ ಮಳೆ ವೇಳೆ ಬಡಿಯುವ ಸಿಡಿಲಿನಿಂದ ಆಗುತ್ತಿರುವ ಜೀವ ಹಾನಿ ಪ್ರಕರಣಗಳಿಂದ ಎಚ್ಚೆತ್ತು ಕೊಂಡಿರುವ ರಾಜ್ಯ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಜೀವಹಾನಿ ತಪ್ಪಿಸಲು ಮಾರ್ಗಸೂಚಿ ಪ್ರಕಟಿಸಿ ತಾಲೂಕಿನ ಜನರಿಗೆ ಮುನ್ನಚ್ಚರಿಕೆ ವಹಿಸಲು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಸೂಚಿಸಿದ್ದಾರೆ.
ತಾಲೂಕಿನಲ್ಲಿ ಸಧ್ಯ ಮಳೆ ಕೊರತೆ ಇದ್ದರೂ ಮುಂಬರುವ ಪೂರ್ವ ಮುಂಗಾರು ಸಮಯದಲ್ಲಿ ಗುಡುಗು ಸಿಡಿಲಿನ ಅಬ್ಬರ ಹೆಚ್ಚಿರುವ ಮುನ್ನಸೂಚನೆಯಿದೆ. ಆದ್ದರಿಂದ ಸಾರ್ವಜನಿಕರು ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಸಲಹೆಗಳನ್ನು ಪ್ರಕಟಿಸಿದೆ.
ಸಿಡಿಲು ಸಾಮಾನ್ಯವಾಗಿ ಮಧಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ವೇಳೆ ಅನಿವಾರ್ಯವಿದ್ದಲ್ಲಿ ಮಾತ್ರ ಹೊರಗೆ ಹೋಗಬೇಕು.
ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಜಾನುವಾರು ಮೇಯಿಸುವವರು, ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು ಒಳ್ಳೆಯದು.
ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಸುರಕ್ಷಿತವಾದ ಕಟ್ಟಡಗಳಾದ ಮನೆ, ಕಚೇರಿ, ಅಂಗಡಿಗಳು ಮತ್ತು ಕಿಟಕಿ ಮುಚ್ಚಿರುವಂತಹ ವಾಹನಗಳಲ್ಲಿ ಆಶ್ರಯ ಪಡೆಯುವದು ಒಳ್ಳೆಯದು.
ಕೆರೆ ಮತ್ತು ನದಿಗಳು ಹಾಗೂ ಇನ್ನಿತರ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವದು, ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟಾವರ್, ಪವನ ವಿದ್ಯುತ್ ಗೋಪುರ, ಹಾಗೂ ರೈಲು ಹಳಿಗಳಿಂದ ದೂರವಿರುವದು, ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ಕಿಟಕಿಗಳನ್ನು ಮುಚ್ಚಿ ಒಳಗೆ ಇರುವುದು ಸೇರಿದಂತೆ ಹಲವು ಮೂನ್ಸೂಚನೆ ನೀಡಿದ್ದಾರೆ.
ಗುಡುಗು ಮಿಂಚಿನ ಸಂದರ್ಭದಲ್ಲಿ ಮೋಬೈಲ್ ಫೋನು, ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿ ಬಳಸಬಾರದು.
ಕಬ್ಬಿಣದ ಸರಕುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಕಿಟಕಿ ಬಾಗಿಲುಗಳನ್ನು ಮುಚ್ಚಿ ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರಬೇಕು. ಮಕ್ಕಳು, ವಯೋವೃದ್ದರು, ಜಾನುವಾರು ಹಾಗೂ ಸಾಕುಪ್ರಾಣಿ ಗಳು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಗಮನ ಹರಿಸಬೇಕು.
ಸಿಡಿಲು ವೇಳೆ ಕೋಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವದರಿಂದ ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶಾವರ್ ಬಾಥ್ ತೆಗೆದುಕೊಳ್ಳಬಾರದು. ಬಟ್ಟೆ ಒಗೆಯಬಾರದು, ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ ತಕ್ಷಣವೇ ಹತ್ತಿರದಲ್ಲಿ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗಬೇಕು.
ಮಿಂಚು ಬರುವ ಸಂದರ್ಭಗಳಲ್ಲಿ ಕಬ್ಬಿಣ ಹೋವ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರ ಇರಬೇಕು.
ವಿದ್ಯುತ್ ಸಂಪರ್ಕ ಹೊಂದಿರುವಂತಹ ವಿದ್ಯುತ್ ಇಲೆಕ್ಟ್ರಿಕಲ್ ಉಪಕರಣಗಳಾದ ಕಂಪ್ಯೂಟರ್, ಲ್ಯಾಪಟಾಪ್, ವಿಡಿಯೋ ಗೇಮ್ ಸಾಧನಗಳು ಮೋಬೈಲ್ ಫೊನು, ವಾಷಿಂಗ ಮಸೀನು ಇತರೆ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. ಬಾಕಿಲುಗಳು, ಕಿಟಕಿಗಳು, ಮಂಟಪಗಳು ಕಾಂಕ್ರೀಟ್ ನೆಲ, ಬೆಂಕಿಯ ಸ್ಥಳಗಳು, ಇತರೆ ವಿದ್ಯುತ್ ಉಪಕರಣಗಳಿಂದ ದೂರವಿರುವುದು ಒಳ್ಳೆಯದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ ಎಂದು ಗದ್ಯಾಳ ಹೇಳಿದರು.

