ಅನ್ಯಾಯ ಸರಿಪಡಿಸಲು ಪ್ರೆಸ್ ಕ್ಲಬ್ ಜಮಖಂಡಿ ಘಟಕದ ಅಧ್ಯಕ್ಷ ಕೇದಾರಪ್ಪ ರಾವಳೋಜಿ ಮನವಿ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, 2026ರ ಕರಡು ಅಧಿಸೂಚನೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ರೂಪಿಸಿರುವ ಪರೀಕ್ಷಾ ನಿಯಮಗಳು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿ, ಪತ್ರಿಕೆ–3ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ 50 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವುದನ್ನು ಕಡ್ಡಾಯಗೊಳಿಸಿರುವ ನಿಯಮವನ್ನು ಕೂಡಲೇ ಹಿಂಪಡೆಯುವಂತೆ ಕರ್ನಾಟಕ ಪ್ರೆಸ್ ಕ್ಲಬ್ ಜಮಖಂಡಿ ಘಟಕದ ಅಧ್ಯಕ್ಷ ಕೇದಾರಪ್ಪ ರಾವಳೋಜಿ ಅವರು ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ಒಟ್ಟು 400 ಅಂಕಗಳ ಮೂರು ಪತ್ರಿಕೆಗಳನ್ನು ಬರೆಯುವಂತೆ ನಿಯಮ ರೂಪಿಸಿದೆ. ಆದರೆ ಮೂರನೇ ಪತ್ರಿಕೆಯನ್ನು ಭಾಷಾ ಪ್ರಾವೀಣ್ಯತೆಗೆ ಮೀಸಲಿಟ್ಟು, ಅದರಲ್ಲಿ 50 ಅಂಕಗಳ ಕನ್ನಡ ಹಾಗೂ 50 ಅಂಕಗಳ ಇಂಗ್ಲಿಷ್ ಭಾಷೆಯಲ್ಲಿ ವಿವರಣಾತ್ಮಕ ಉತ್ತರ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಅಭ್ಯರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ 50 ಅಂಕಗಳ ವಿವರಣಾತ್ಮಕ ಉತ್ತರ ಬರೆಯುವುದು ಅತ್ಯಂತ ಕಷ್ಟಕರವಾಗಿದ್ದು, ಇದರಿಂದ ಅರ್ಹ ಅಭ್ಯರ್ಥಿಗಳು ಶಿಕ್ಷಕರ ಹುದ್ದೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಸರ್ಕಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮವನ್ನು ತಕ್ಷಣವೇ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕೆ–3 ಅನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು. ಒಂದು ವೇಳೆ ಅದನ್ನು ಮುಂದುವರಿಸುವುದಾದರೆ, ಇಂಗ್ಲಿಷ್ ಭಾಷೆಯ 50 ಅಂಕಗಳ ಬದಲಿಗೆ 100 ಅಂಕಗಳ ಕನ್ನಡ ಭಾಷಾ ಪರೀಕ್ಷೆಯನ್ನು ಜಾರಿಗೆ ತರಬೇಕು. ಇದರಿಂದ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಲಿದೆ ಎಂದು ಹೇಳಿದರು.
ಒಂದರಿಂದ ಐದನೇ ತರಗತಿ ಶಿಕ್ಷಕರ ಅಭ್ಯರ್ಥಿಗಳಿಗೆ ಆತಂಕ: ಸುಮಾರು 17 ವರ್ಷಗಳ ಬಳಿಕ ಸರ್ಕಾರವು ಒಂದರಿಂದ ಐದನೇ ತರಗತಿ ಶಿಕ್ಷಕರ ನೇಮಕಾತಿಗೆ ಮುಂದಾಗಿರುವುದು ಸ್ವಾಗತಾರ್ಹವಾದರೂ, ಕರಡು ಅಧಿಸೂಚನೆಯಲ್ಲಿ ಭಾಷಾ ಶಿಕ್ಷಕರ ಅರ್ಹತೆಗೆ ಪಿಯುಸಿಯಲ್ಲಿ ಕನ್ನಡ ವಿಷಯಕ್ಕೆ 50 ಅಂಕಗಳು ಹಾಗೂ ಇಂಗ್ಲಿಷ್ ವಿಷಯಕ್ಕೂ 50 ಅಂಕಗಳನ್ನು ಕಡ್ಡಾಯಗೊಳಿಸಿರುವುದು ಸಾವಿರಾರು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ ಎಂದು ಕೇದಾರಪ್ಪ ರಾವಳೋಜಿ ತಿಳಿಸಿದರು.
ಇಂಗ್ಲಿಷ್ ವಿಷಯದ 50 ಅಂಕಗಳ ಕಡ್ಡಾಯ ನಿಯಮವನ್ನು ಕೈಬಿಟ್ಟು, ಪಿಯುಸಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಶೇಕಡಾ 50ರಷ್ಟು ಅಂಕಗಳನ್ನು ಪರಿಗಣಿಸಿ ಅರ್ಹತೆ ನಿಗದಿಪಡಿಸಬೇಕು. ಅಲ್ಲದೆ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸುಮಾರು 2,500 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನೂ ಕೂಡಲೇ ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ರಾಜಕುಮಾರ್ ಪಾಟೀಲ್, ಉಪಾಧ್ಯಕ್ಷ ಭರತೇಶ್ ಪಾನಕ್ಕನ್ನವರ, ಸಂಘಟನಾ ಕಾರ್ಯದರ್ಶಿ ಗುಲಾಬ್ ತೇರದಾಳ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

