ವಿಜಯಪುರದಲ್ಲಿ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ರಾಜ್ಯ ಸಮಿತಿ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ರಾಜ್ಯ ಸಮಿತಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ವಿಜಯಪುರದಲ್ಲಿ ರಾಜ್ಯಾಧ್ಯಕ್ಷ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಮಂಜುನಾಥ ಅವರು, ಸಂಘದ ಬೆಳವಣಿಗೆ, ಇದುವರೆಗೆ ಸಂಘ ನಡೆದು ಬಂದಿರುವ ಹಾದಿ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ರಾಜ್ಯದ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಪಾದಕರ ಹಿತಾಸಕ್ತಿಯನ್ನು ಕಾಪಾಡುವ ಆಶಾದಾಯಕ ಸಂಘವಾಗಿ ಸಂಘವು ಬೆಳೆದಿದ್ದು, ಎಲ್ಲ ಸಂಪಾದಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘವನ್ನು ಇನ್ನಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ಪ್ರತಿಯೊಂದು ಜಿಲ್ಲೆಯಲ್ಲಿ ಶೀಘ್ರದಲ್ಲೇ ಜಿಲ್ಲಾ ಘಟಕಗಳನ್ನು ರಚಿಸಿ ಸಂಘಟನೆಯನ್ನು ತಳಮಟ್ಟದಿಂದ ಸದೃಢಗೊಳಿಸುವಂತೆ ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಅವರು ಸಭೆಯ ಉದ್ದೇಶ ಹಾಗೂ ಸಂಘದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಪಾದಕರನ್ನು ಸ್ವಾಗತಿಸಿದರು.
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನೂತನ ರಾಜ್ಯ ಪದಾಧಿಕಾರಿಗಳನ್ನು ಅಧಿಕೃತವಾಗಿ ಪದಗ್ರಹಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ನೀಲಕಂಡ ದಾತಾರ ಹಾಗೂ ವಿಜಯಪುರ ಜಿಲ್ಲೆಯ ಸಂಪಾದಕರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅನೇಕ ಸಂಪಾದಕರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದು, ಸಂಘದ ಬಲವರ್ಧನೆ ಹಾಗೂ ಪತ್ರಿಕಾ ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳು
ರಾಜ್ಯಾಧ್ಯಕ್ಷ – ಶ್ರೀ ಮಂಜುನಾಥ (ಚಿತ್ರದುರ್ಗ), ಉಪಾಧ್ಯಕ್ಷರು- ಮುರುಘೇಶ ಬಾಬೂರಾವ್ ಶಿವಪೂಜಿ (ಬೆಳಗಾವಿ), ಆನಂದ್ ಪಿ. ಮಣ್ಣೂರು (ಕಲಬುರಗಿ), ಪ್ರಧಾನ ಕಾರ್ಯದರ್ಶಿ – ಮೋಹನ ಕುಲಕರ್ಣಿ (ವಿಜಯಪುರ), ಕಾರ್ಯದರ್ಶಿ – ರಾಜಾಸಾಬ್ ಎಂ. ಹೆಬ್ಬಳ್ಳಿ (ಗದಗ), ಖಜಾಂಚಿ – ಎಚ್.ಎಲ್. ಸುರೇಶ್ (ಬಂಗಾರಪೇಟೆ), ನಿಕಟಪೂರ್ವ ಅಧ್ಯಕ್ಷರು ಹಾಗೂ ಆಹ್ವಾನಿತ ಸದಸ್ಯರು- ಸಿದ್ದು ಸುಬೇದಾರ್ (ಕಲಬುರಗಿ)
ಕಾರ್ಯಕಾರಿ ಸಮಿತಿ ಸದಸ್ಯರು
ಶ್ರೀಮತಿ ರಶ್ಮಿ ಪಾಟೀಲ (ವಿಜಯಪುರ), ವಿಜಯಕುಮಾರ ಒಡೆಯರ್ (ರಾಮನಗರ, ಬೆಂಗಳೂರು ಗ್ರಾಮಾಂತರ), ಗುರುರಾಜ್ ಕುಲಕರ್ಣಿ (ಕಲಬುರಗಿ), ಶ್ರೀಮತಿ ಡಿ.ಎನ್. ಶಾಂಭವಿ (ಹರಿಹರ, ದಾವಣಗೆರೆ), ಪಿ.ಎನ್.ಎ. ಮೊದಲಿಯಾರ್ (ಕಡೂರು, ಚಿಕ್ಕಮಗಳೂರು), ಲಕ್ಷ್ಮಣ ಎಂ. (ಶ್ರೀನಿವಾಸಪುರ, ಕೋಲಾರ) ಹಾಗೂ ರಮೇಶ್ ಭಜಂತ್ರಿ (ಗದಗ) ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಘೋಷಿಸಲಾಯಿತು.

