ಪ್ರವಾಹ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿಯ www.merakify.ai ಎಂಬ ಆನ್ಲೈನ್ ಬುದ್ದಿಮತ್ತೆ(AI) ವೇದಿಕೆಯನ್ನು ಉದ್ಘಾಟಿಸಿದ ಸಚಿವ ಎಂ. ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವ ಪ್ರತಿಭೆಗಳು ನವೋದ್ಯಮಗಳ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ ತಮ್ಮ ಯುವ ಸ್ನೇಹಿತರೊಂದಿಗೆ ಸೇರಿ ಪ್ರಾರಂಭಿಸಿರುವ ಪ್ರವಾಹ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿಯ www.merakify.ai ಎಂಬ ಆನ್ಲೈನ್ ಬುದ್ದಿಮತ್ತೆ(AI) ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಥ ಕೃತಕ ಬುದ್ದಿಮತ್ತೆ ವೇದಿಕೆಗಳು ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುತ್ತವೆ. ಈ ನವೋದ್ಯಮ ತಂತ್ರಜ್ಞಾನ ಆಧಾರಿತವಾಗಿದ್ದು, ಕಥೆಗಾರರು, ಸಿನಿಮಾ ನಿರ್ಮಾಪಕರು, ಲೇಖಕರು, ಸೃಜನಶೀಲರು ಹಾಗೂ ಉದ್ಯಮಿಗಳಿಗೆ ಅತ್ಯಂತ ಉಪಯುಕ್ತ ವೇದಿಕೆಯಾಗಿದೆ. ನಮ್ಮ ಮನದಲ್ಲಿರುವ ಹೊಸ ಆಲೋಚನೆಗಳನ್ನು ಕೃತಕ ಬುದ್ಧಿಮತ್ತೆಯ ನೆರವಿನಿಂದ ಗುಣಮಟ್ಟದ ವಿಡಿಯೋಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಈ ವೇದಿಕೆ ಹೊಂದಿದೆ. ಶಿಕ್ಷಣ, ಜಾಹೀರಾತು, ಉದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಅಗತ್ಯವಾದ ವಿವಿಧ ರೀತಿಯ ವಿಡಿಯೋ ಕಂಟೆಂಟ್ಗಳನ್ನು ಸುಲಭವಾಗಿ ಸೃಷ್ಟಿಸಲು ಇದು ನೆರವಾಗಲಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಯುವಕರ ಈ ಹೊಸ ಪ್ರಯತ್ನ ವಿನುತನವಾಗಿದ್ದು, ಅವರು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಇದೆ ವೇಳೆ www.merakify.ai ರೂಪಿಸಿರುವ ಬಂಥನಾಳ ಸಂಗನಬಸವ ಶಿವಯೋಗಿಗಳು, ಶಿಕ್ಷಣ ಪ್ರೇಮಿ ದಿ. ಬಿ. ಎಂ. ಪಾಟೀಲರ ಹಾಗೂ ಬಿ.ಎಲ್.ಡಿ.ಇ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಜೀವನ ಕುರಿತು ಎಐ ನಲ್ಲಿ ರಚಿಸಿದ ಕಿರುಚಿತ್ರ ಪ್ರದರ್ಶನಕ್ಕೆ ಸಚಿವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಕ್ಕಿನ ಕಲ್ಮಠ-ಶಿವಮೊಗ್ಗ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಾಗರದ ಸಂಸ್ಥಾನ ಮಠ, ಜಡೆ ಡಾ. ಮಹಾಂತ ಸ್ವಾಮಿಗಳು, ವಿಜಯಪುರ ಶಾಂತಾಶ್ರಮ, ಹುಬ್ಬಳ್ಳಿಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು, ಹುಬ್ಬಳ್ಳಿ- ನಿಡೋಣಿ ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮಣಕವಾಡ ದೇವ ಮಂದಿರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮಿಗಳು, ಮಾಜಿ ಶಾಸಕ ಪ್ರೊ. ರಾಜು ಆಲಗೂರ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಹಮೀದ್ ಮುಶ್ರಿಫ್, ಪ್ರವಾಹ ಲ್ಯಾಬ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕಿ ಸಾನ್ವಿ ಪಾಟೀಲ, ಪ್ರದೀಪ ಮಳಜಿ, ವಿಜಯ ಜತ್ತಿ, ಸಮರ್ಥ ದತ್ತರಗಾವಿ, ದತ್ತಾ ಕಂಬಾಗಿ, ಹರೀಶ ಅವರನ್ನೊಳಗೊಂಡ ಮುಂತಾದವರು ಉಪಸ್ಥಿತರಿದ್ದರು.

