ಕೇವಲ ಟಿಎ, ಡಿಎ ಗೆ ಸೀಮಿತವಾಗಿರುವ ಜಿಗಜಿಣಗಿ
ವಿಜಯಪುರ: ಕೇವಲ ಟಿಎ, ಡಿಎ ಗಾಗಿ ಸೀಮಿತವಾಗಿರುವ ಸಂಸದ ರಮೇಶ ಜಿಗಜಿಣಗಿ ಬದಲು ಸಂಸತ್ತಿನಲ್ಲಿ ಬಸವ ನಾಡಿನ ಜನರ ಪರ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸಬೇಕಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬುಧವಾರ ತಿಕೋಟಾ ತಾಲೂಕಿನ ಮುಮ್ಮೆಟಿಗುಡ್ಡದ ಬಳಿ ಅರ್ಜುನ ರಾಠೊಡ ಅವರ ತೋಟದಲ್ಲಿ ನಡೆದ ಅರಕೇರಿ ಜಿ. ಪಂ. ವ್ಯಾಪ್ತಿಯ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಂಸತ್ತಿನಲ್ಲಿ ಎಂದೂ ಜನರ ಸಮಸ್ಯೆಗಳ ಪರ ಪ್ರಶ್ನೆ ಕೇಳದವರು ಕೇವಲ ಟಿಎ, ಡಿಎ ಪಡೆಯಲು ಎಂಪಿ ಆಗಬೇಕಾ? ಅಥವಾ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಮತ ಹಾಕಬೇಕಾ ಎಂಬುದರ ಕುರಿತು ಯೋಚಿಸಬೇಕು. ಪ್ರೊ. ರಾಜು ಆಲಗೂರ ಅವರು ಆಯ್ಕೆಯಾದ ಬಳಿಕ ಜಿಲ್ಲೆಯ ನೀರಾವರಿ, ರೈಲು, ತೋಟಗಾರಿಕೆ, ಪ್ರವಾಸೋದ್ಯಮ, ಪ್ರಾಚೀನ ಸ್ಮಾರಕಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕೆಲಸ ಮಾಡಲಿದ್ದಾರೆ. ಅಷ್ಟೇ ಅಲ್ಲ, ಶರದ ಪವಾರ ಅವರ ಬಾರಾಮತಿ ಕ್ಷೇತ್ರದಂತೆ ವಿಜಯಪುರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಆಲಗೂರ ಅವರಿಗೆ ಹಾಕಿದರೆ ಆ ಮತ ನನಗೆ ಹಾಕಿದಂತೆ ಎಂದು ಸಚಿವರು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ತಮಗೆ ಬಂಜಾರಾ ಮತಗಳು ಬೇಡ ಎಂದಿದ್ದಾರೆ. ಬೇಡ ಎಂದವರಿಗೆ ಯಾರಾದರೂ ಮತ ಹಾಕುತ್ತಾರಾ? ಎಂದು ಪ್ರಶ್ನಿಸಿದ ಅವರು, ಬೆಲೆ ಏರಿಕೆ, ಉದ್ಯೋಗ ನಷ್ಟ, ರೈತರ ಆದಾಯ ಕುಸಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಡ್ರದ ಜನರಿಗೆ ನೀಡಿರುವ ಅಚ್ಛೆ ದಿನ್ ಆಗಿವೆ. ಎಲೆಕ್ಟ್ರಾಲ್ ಬಾಂಡ್ ಪ್ರಕರಣದಲ್ಲಿ ಮೋದಿಯವರ ಬಂಡವಾಳ ಬಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಸುಳ್ಳುಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದಷ್ಟೇ ಅಲ್ಲ, ಇನ್ನೂ ಯಾವ್ಯಾವ ಹಗರಣಗಳಿವೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯುವನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ಯೋಜನೆಯಡಿ ಸರ್ವ ಜನಾಂಗದ ಕಲ್ಯಾಣ ಯೋಜನೆಗಳು ಜಾರಿಗೆ ಬರಲಿವೆ. ಈಗ ನಾವು ನುಡಿದಂತೆ ನಡೆಯುತ್ತಿದ್ದು, ಮುಂದೆಯೂ ನಡೆಯಲಿದ್ದೇವೆ ಎಂದು ಎಂ. ಬಿ. ಪಾಟೀಲ ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಅಮೀತ್ ಶಾ ರಾಜ್ಯದಲ್ಲಿ ಹಾಲುಮತದ ಯಾವ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ. ಸಂಸದ ಜಿಗಜಿಣಗಿ ಬಂಜಾರ ಸಮಾಜದ ಮತಗಳು ತಮಗೆ ಬೇಡ ಎಂದು ಹೇಳಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಕೇಂದ್ರ ಸರಕಾರದ ಗಮನ ಸೆಳೆದಿಲ್ಲ. ಕೊರೊನಾ ಸಂಕಷ್ಟ ಸಮಯದಲ್ಲೂ ಯಾರಿಗೂ ಸ್ಪಂದಿಸಿಲ್ಲ. ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ನನ್ನ ಮುಖ ನೋಡದೇ ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಮೂಲಕ ಸಂಸದರು ಮುಖಗೇಡಿ ಆಗಿದ್ದಾರೆ. ಕೇಂದ್ರ ರೈತರ ಹೋರಾಟ ಹತ್ತಿಕ್ಕುತ್ತಿದ್ದರೆ, ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ಜಿಗಜಿಣಗಿ ಮಾತಿಗೆ ಮರುಳಾಗದೇ ನನಗೆ ಮತಹಾಕಿ ಅವಕಾಶ ಮಾಡಿಕೊಡಿ. ನಿಮ್ಮ ಪರವಾಗಿ ಕೇಂದ್ರದಲ್ಲಿ ಕೆಲಸ ಮಾಡಲು ನನಗೆ ಅವಕಾಶ ನೀಡಿ ಎಂದು ಹೇಳಿದರು.
ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಕಾಂಗ್ರೆಸ್ ಹಿರಿಯ ಮುಖಂಡ ಡಿ. ಎಲ್. ಚವ್ಹಾಣ ಮಾತನಾಡಿದರು.
ಮುಖಂಡರಾದ ಗೋವಿಂದ ಶಿಂಧೆ, ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಗೀತಾಂಜಲಿ ಪಾಟೀಲ, ಎಪಿಎಂಸಿ ಮಾಜಿ ನಿರ್ದೇಶಕ ಸಿದ್ದಣ್ಣ ಸಕ್ರಿ, ರಾಜುಗೌಡ ಪೊಲೀಸ್ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಅಶೋಕ ದಳವಾಯಿ, ಪೋಪಟ ಮಹಾರಾಜರು, ಶಂಕರ ಮಹಾರಾಜರು, ಹುಸೇನಿ ಮನಗೂಳಿ, ಮುದಕಪ್ಪ ಚಲವಾದಿ, ರಾಜಶೇಖರ ಪವಾರ, ಧನಸಿಂಗ್ ಚವ್ಹಾಣ, ಸುಭಾಸ ರಜಪೂತ, ಸತೀಶ ನಾಯಕ, ಅಣ್ಣಪ್ಪ ಮಾಣವರ, ಪೀರ ಪಟೇಲ, ವಾಮನ ಚವ್ಹಾಣ, ನಿಂಗಪ್ಪ ಬೆಳ್ಳುಬ್ಬಿ, ಸುಭಾಷ ರಾಠೋಡ, ಓಗೆಪ್ಪ ಗೋಪಣೆ, ಶಿವಪ್ಪ ಚಲವಾದಿ, ಪೂಜಾರಿ, ಚನ್ನಪ್ಪ ದಳವಾಯಿ, ಪ್ರಶಾಂತ ಝಂಡೆ, ಅರಕೇರಿ ಜಿ. ಪಂ. ವ್ಯಾಪ್ತಿಯ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

