ಬಸವನಬಾಗೇವಾಡಿ: ಜಗತ್ತಿನ ಯಾವ ಧರ್ಮಪರಂಪರೆಯಲ್ಲಿ ಸಿಗದೇ ಇರುವ ಅಮೂಲ್ಯ ತತ್ವಗಳಾದ ಕಾಯಕ-ದಾಸೋಹ-ಇಷ್ಟಲಿಂಗ ಪೂಜೆ ಶರಣಧರ್ಮದಲ್ಲಿದೆ. ಶರಣಧರ್ಮ ಪರಂಪರೆ ನೀಡಿರುವ ಮೌಲ್ಯಗಳನ್ನು ಜಗತ್ತು ಅಳವಡಿಸಿಕೊಂಡರೆ ಪ್ರಗತಿಯಾಗಲು ಸಾಧ್ಯ ಎಂದು ಮುದಗಲ್ದ ಕಲ್ಯಾಣ ಆಶ್ರಮ, ಮಹಾಂತೇಶ್ವರಮಠದ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಶುಕ್ರವಾರ ಸಂಜೆ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಮನುಷ್ಯನಿಗೆ ಅನೇಕ ದಾಹಗಳಿವೆ. ಶರಣರು ಈ ದಾಹಕ್ಕೆ ಸೋ ಎಂಬ ಶಬ್ಧ ಸೇರಿಸಿ ವಿಶಾಲವಾದ ದಾಸೋಹದ ಕಲ್ಪನೆ ನೀಡಿದ್ದಾರೆ. ದಾಸೋಹವೆಂದರೆ ಕೇವಲ ಶ್ರೀಮಠಗಳಿಗೆ ಸೀಮಿತವಲ್ಲ. ಇಡೀ ವಿಶ್ವವನ್ನು ಗಮನದಲ್ಲಿಕೊಂಡು ವಿಶಾಲಾರ್ಥದಲ್ಲಿ ಶರಣರು ದಾಸೋಹದ ಪರಿಕಲ್ಪನೆ ನೀಡಿದ್ದಾರೆ. ಈ ತತ್ವವನ್ನು ಅಳವಡಿಸಿಕೊಂಡರೆ ಇಡೀ ಜಗತ್ತು ಸಮೃದ್ಧಿಯಾಗುತ್ತದೆ. ಬಸವಾದಿ ಶರಣರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳದೇ ಹೋದರೆ ಜಗತ್ತು ಅಭಿವೃದ್ಧಿಯಾಗುವದಿಲ್ಲ. ಇಂದು ಎಲ್ಲರೂ ತಮ್ಮ ಸ್ವಾರ್ಥ ಜೀವನದಿಂದಾಗಿ ಮನುಷ್ಯತ್ವ ಕಳೆದುಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಎಲ್ಲರೂ ಶರಣ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣವಾಗಿ ಎಲ್ಲರೂ ಶಾಂತಿ,ನೆಮ್ಮದಿಯಿಂದ ಇರಲು ಸಾಧ್ಯ ಎಂದರು.
ಜಗತ್ತಿನಲ್ಲಿ ಲೌಕಿಕವಾಗಿ ಅನೇಕರು ತಮ್ಮ ಜನ್ಮದಿನಾಚರಣೆಯನ್ನು ಕೇಕ್ ಕತ್ತರಿಸಿ ಆಚರಿಸುವುದನ್ನು ನೋಡುತ್ತೇವೆ. ಈ ಶ್ರೀಮಠದ ಶ್ರೀಗಳು ತಮ್ಮ ಜನ್ಮದಿನಾಚರಣೆಯಲ್ಲಿ ವೈಶಿಷ್ಟ್ಯಪೂರ್ವ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಜೊತೆಗೆ ಪ್ರತಿಭಾವಂತರಿಗೆ ಪುರಸ್ಕಾರ ನೀಡುತ್ತಿರುವುದು ಇತರರಿಗೆ ಆದರ್ಶಪ್ರಾಯ.ಬಂಥನಾಳದ ಸಂಗನಬಸವ ಸ್ವಾಮೀಜಿಯವರ ಪ್ರವಚನದ ಹಾದಿಯಲ್ಲಿ ನಾವು ಪ್ರವಚನಗೈಯುತ್ತಿರುವ ಸೇವೆಯನ್ನು ಗುರುತಿಸಿ ನಮಗೆ ಸುವರ್ಣ ಪ್ರಶಸ್ತಿಯನ್ನು ಪ್ರದಾನ ಮಾಡಿರುವದು ಸಂತಸ ತಂದಿದೆ. ಇಂದು ಪ್ರಶಸ್ತಿಗಳು ನಿಜವಾದ ಪ್ರತಿಭಾವಂತರಿಗೆ ಸಿಗದೇ ಮಾರಾಟವಾಗುತ್ತಿರುವುದು ಕಾಣುತ್ತಿದ್ದೇವೆ ಎಂದರು.
ಸುವರ್ಣ ಪ್ರಶಸ್ತಿ ಸ್ವೀಕರಿಸಿದ ಚಿಂತಕ,ವಿಮರ್ಶಕ ಪ್ರೊ.ಎಸ್.ಜಿ,ಸಿದ್ದರಾಮಯ್ಯ ಮಾತನಾಡಿ, ಕನ್ನಡ ನೆಲದಲ್ಲಿ ಹುಟ್ಟಿದ ಕನ್ನಡದ ವಚನಧರ್ಮ ಲಿಂಗಾಯತ ಧರ್ಮ. ಇದು ಕಾಯಕ ಜೀವಿಗಳು ಸಂಘಟಿತರಾಗಿ ಕನ್ನಡ ಧರ್ಮ. ಇದರ ನೇತೃತ್ವವನ್ನು ವಹಿಸಿಕೊಂಡಿದ್ದ ಮಹಾ ಮಾನವತಾಜೀವಿ ಬಸವಣ್ಣನವರು. ಇವರು ಕನ್ನಡ ನೆಲದ ಕನ್ನಡ ಭಾಷೆಯ ಸಾಂಸ್ಕ್ರತಿಕ ವಕ್ತಾರರಾಗಿದ್ದಾರೆ. ಕಾಯಕದ ಬೆವರಿನ ಬೆಲೆಯನ್ನು ಸತ್ಯಶುದ್ಧ ಘನತೆಯಲ್ಲಿ ಎತ್ತಿಹಿಡಿದಂತೆ ಕಾಯಕವೇ ಕೈಲಾಸವೆಂದು ಕರೆದದ್ದು ವಚನಧರ್ಮ ಎಂದರು.
ಇಂಗಳೇಶ್ವರದ ಡಾ.ಸಿದ್ದಲಿಂಗ ಸ್ವಾಮೀಜಿ, ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸುವರ್ಣ ಪ್ರಶಸ್ತಿ ಸ್ವೀಕರಿಸಿದ ಶಂಕರಯ್ಯ ಘಂಟಿ, ಸಾಹಿತಿ ಡಾ.ಸಿ.ಸಿ.ಲಿಂಗಣ್ಣ ಮಾತನಾಡಿದರು.
ಸಾನಿಧ್ಯವನ್ನು ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಶಿವಪ್ರಸಾದ ದೇವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗನಗೌಡ ಬಿಕಾದಾರ, ರವಿ ಪಟ್ಟಣಶೆಟ್ಟಿ, ಅಮರಪ್ಪಗೌಡ ಪಾಟೀಲ, ಬಸವರಾಜ ಬಿರಾದಾರ ದಂಪತಿಗಳನ್ನು ಆದರ್ಶ ದಂಪತಿಗಳೆಂದು ಗೌರವಿಸಲಾಯಿತು. ಶ್ರೀಗಳ ಜನ್ಮಸುವರ್ಣ ಮಹೋತ್ಸವದಂಗವಾಗಿ ವಿದ್ಯಾರ್ಥಿದೇವೋಭವದಂಗವಾಗಿ ಬಡವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಿಸಲಾಯಿತು. ಸಾಕ್ಷಿ ಹಿರೇಮಠ ಪ್ರಾರ್ಥಿಸಿದರು. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಗಿರಿಜಾ ಪಾಟೀಲ, ಪುಷ್ಪಾ ಗುಳೇದ, ಶರಣಬಸು ಹಳಮನಿ ನಿರೂಪಿಸಿದರು. ಅಂತರಾಷ್ಟ್ರೀಯ ಕಲಾವಿದರಾದ ದೀಶಾ ಬಿಸೆ, ದಿವ್ಯಾ ಬಿಸೆ ಹಾಗೂ ಸಂಗಡಿಗರಿಂದ ವಚನ ನೃತ್ಯ, ಹಾಸ್ಯ ನಟ ಪ್ರವೀಣ ಗಸ್ತಿ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು.
Subscribe to Updates
Get the latest creative news from FooBar about art, design and business.
Related Posts
Add A Comment

