ಇಂಡಿಯಲ್ಲಿ ಸಿಡಿಲಿಗೆ ಇಬ್ಬರ ಬಲಿ
ಇಂಡಿ: ಸಿಡಿಲು ಅಪ್ಪಳಿಸಿ ಇಬ್ಬರ ದಾರುಣ ಸಾವು. ಬಿರುಗಾಳಿ ಮಳೆಗೆ ಮರಗಳು ಧರೆಗುರುಳಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಗುರುವಾರ ಸಂಜೆ ವೇಳೆ ಬಿರುಗಾಳಿ ಸಮೇತ ಮಳೆಯಾಗಿದ್ದು ರೈತರಲ್ಲಿ ಸ್ವಲ್ಪ ಸಂತಸ ಮೂಡಿಸಿದ್ದರೆ, ಹಲವರ ದುಃಖಕ್ಕೆ ಕಾರಣವಾಗಿದೆ. ಪಟ್ಟಣದ ಮಾವಿನಹಳ್ಳಿ ರಸ್ತೆಯ ಜಲ ದೇವಪ್ಪ ಕೆರೆ ಹತ್ತಿರ ಇರುವ ಪೂಜಾರಿ ವಸ್ತಿಯಲ್ಲಿ 16 ವರ್ಷದ ಬಾಲಕ ಭೀರಪ್ಪ ನಿಂಗಪ್ಪ ಅವರಾದಿ ಮಳೆ ಬರುತ್ತಿದೆ ಎಂದು ಬೇವಿನ ಮರದ ಆಶ್ರಯದಲ್ಲಿ ಪಡೆಯುತ್ತಿದ್ದಂತೆ ಏಕಾಏಕಿ ಬಡಿದ ಸಿಡಿಲಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅದರಂತೆ ತಾಲ್ಲೂಕಿನ ಹಿರೇ ಮಸಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ 43 ವರ್ಷದ ಸೋಮಶೇಖರ್ ಕಾಶಿಕನಾಥ ಪಟ್ಟಣಶೆಟ್ಟಿ ಸಿಡಿಲಿಗೆ ಜೀವ ತೆತ್ತಿದ್ದಾರೆ. ಇಷ್ಟಲ್ಲದೆ ಹಿರೇ ಮಸಳಿ ಗ್ರಾಮದ ಸುತ್ತಮುತ್ತ ಹಾಗೂ ಅಂಬಣ್ಣ ಸುಣಗಾರ ಇವರ ತೋಟದಲ್ಲಿ ಫಲಕೊಡಬೇಕಾದ ಲಿಂಬೆ ಗಿಡಗಳು ಹಾಗೂ ಇತರೆ ಮರಗಳು ನೆಲಕಚ್ಚಿವೆ. ಒಟ್ಟಾರೆಯಾಗಿ ಸಿಡಿಲು ಬಡಿದು ದುರಂತದಲ್ಲಿರುವ ಕುಟುಂಬಕ್ಕೆ ಪರಿಹಾರ ಹಾಗೂ ಹಾಗೂ ಹಾನಿಗೊಳಗಾದ ರೈತ ಕುಟುಂಬಕ್ಕೆ ಸರಕಾರ ಸಹಾಯ ಮಾಡಬೇಕಾಗಿದೆ.

