ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಂ ಜನತೆ ತಮ್ಮ ಕುಟುಂಬ ಸಮೇತ ಭೇಟಿ ನೀಡುವುದು ವಾಡಿಕೆ
ಸಂಪದಾ ಹಿರೇಮಠ
ಆಲಮಟ್ಟಿ: ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಶುಕ್ರವಾರ, ಆಲಮಟ್ಟಿಗೆ ಸಹಸ್ರಾರು ಪ್ರವಾಸಿಗರು ಲಗ್ಗೆ ಇಟ್ಟಿದ್ದರು.
ಈದ್ ಉಲ್ ಫಿತ್ರ್ ಹಬ್ಬದ ಮರುದಿನ ಮುಸ್ಲಿಂ ಜನತೆ ತಮ್ಮ ತಮ್ಮ ಕುಟುಂಬ ಸಮೇತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ವಾಡಿಕೆ. ಕಳೆದ ಒಂದು ದಶಕಗಳಿಂದಲೂ ಆಲಮಟ್ಟಿಗೆ ಹಬ್ಬದ ಮರುದಿನ ಸಹಸ್ರಾರು ಸಂಖ್ಯೆಯ ಜನ ಬರುವುದು ಸಾಮಾನ್ಯವಾಗಿದೆ.
ಹೀಗಾಗಿ ಈ ವರ್ಷವೂ ಆಲಮಟ್ಟಿಯ ಎಲ್ಲಾ ಉದ್ಯಾನಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿಯಿಂದ ಹಿಡಿದು ಆಲಮಟ್ಟಿ ಜಲಾಶಯದವರೆಗೆ ಎರಡು ರಸ್ತೆಯುದ್ದಕ್ಕೂ ಜನವೋ ಜನ ಹಾಗೂ ವಾಹನಗಳ ಭರಾಟೆ ಜೋರಾಗಿತ್ತು. ಅವಳಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಲಮಟ್ಟಿಗೆ ಆಗಮಿಸಿದ್ದರು.
ರೈಲು, ಬಸ್, ಖಾಸಗಿ ವಾಹನಗಳ ಮೂಲಕ ಆಲಮಟ್ಟಿಗೆ ಜನ ಸಂಜೆಯವರೆಗೂ ಬರುತ್ತಿದ್ದವು. ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಪುತ್ಥಳಿಯಿಂದ ಡ್ಯಾಂ ವೃತ್ತದವರೆಗೂ ವಾಹನಗಳ ಭರಾಟೆ ಜೋರಾಗಿತ್ತು. ಬೆಳಿಗ್ಗೆಯಿಂದ ರಾಕ್ ಉದ್ಯಾನ, ಕೃಷ್ಣಾ ಉದ್ಯಾನ, ನದಿ ತೀರ, ಲವಕುಶ ಉದ್ಯಾನದತ್ತ ಸಂಚರಿಸಿದರೆ ಸಂಜೆಯಾದೊಡಣೆ ವಿವಿಧ ಕಾರಂಜಿಗಳುಳ್ಳ 77 ಎಕರೆ ಸಮುಚ್ಛಯದ ಉದ್ಯಾನಕ್ಕೆ ಲಗ್ಗೆ ಇಟ್ಟರು.
ಆಲಮಟ್ಟಿಯ ನಾನಾ ಕಡೆ ಪ್ರವಾಸಿಗರು ಕುಳಿತು ತಾವು ತಂದ ಬುತ್ತಿ (ಹಬ್ಬಕ್ಕೆ ಮಾಡಿದ ಮಾಂಸಾಹಾರ ಊಟ) ತೆಗೆದು ಊಟ ಸೇವಿಸುತ್ತಿದ್ದ ದೃಶ್ಯವೂ ಕಂಡು ಬಂತು.
ಉದ್ಯಾನದ ಜೋಕಾಲಿ ಸೇರಿದಂತೆ ನಾನಾ ಕಡೆ ಮಹಿಳೆ, ಮಕ್ಕಳಾದಿಯಾಗಿ ಹಿರಿಯರು ಸಂತಸದಿಂದ ಕಾಲ ಕಳೆದರು. ಎಲ್ಲಾ ಉದ್ಯಾನದ ಕೌಂಟರ್ ಗಳ ಮುಂದೆ ಟಿಕೆಟ್ ಪಡೆಯಲು ದೊಡ್ಡ ಸರದಿ ಕಂಡು ಬಂತು. ಮುಸ್ಲಿಂ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ಮನಗಂಡಿದ್ದ ಹಲವು ವ್ಯಾಪಾರಿಗಳು ನಾನಾ ಸಂಚಾರಿ ಹೋಟೆಲ್ ತಂದು ನಿಲ್ಲಿಸಿ, ಬಿರಿಯಾನಿ, ಕುಷ್ಕಾ ಮಾರಾಟ ಮಾಡುತ್ತಿರುವುದು ಕಂಡು ಬಂತು. ತಂಪು ಪಾನಿಯಗಳ ವ್ಯಾಪಾರ ಭರಾಟೆಯೂ ಜೋರಾಗಿತ್ತು.
ಹೆಚ್ಚುವರಿ ಪೊಲೀಸ್:
ಹೆಚ್ಚು ಪ್ರವಾಸಿಗರು ಆಗಮಿಸುವುದನ್ನು ಮೊದಲೇ ಅರಿತಿದ್ದ ನಿಡಗುಂದಿ, ಆಲಮಟ್ಟಿ ಹಾಗೂ ಡಿಆರ್ ಪೊಲೀಸರು ಹಾಗೂ ಕೆಎಸ್ ಐಎಸ್ ಎಫ್ ಪೊಲೀಸರು ಜಂಟಿಯಾಗಿ ಭದ್ರತೆ ಒದಗಿಸಿದರು.
ಜತೆಗೆ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಡಿಎಫ್ ಓ ನಾಗಶೆಟ್ಟಿ ರಾಜಣ್ಣ, ಆರ್ ಎಫ್ ಓ ಮಹೇಶ ಪಾಟೀಲ ನೇತೃತ್ವದಲ್ಲಿ ಅರಣ್ಯ ದಿನಗೂಲಿಗಳು ಪ್ರವಾಸಿಗರು ವ್ಯವಸ್ಥೆಯಲ್ಲಿ ಸಹಕರಿಸಿದರು.

