– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಗುರುವಾರ ಜಾತ್ರೆಯಲ್ಲಿ ಕಂಡುಬಂದವು. ಬರಗಾಲದಲ್ಲಿಯೂ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತ್ತು.
ಈ ಸಲದ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳು ರೂ.೧.೫೦ ರಿಂದ ೨ ಲಕ್ಷ ಅಧಿಕದವರೆಗೂ ಮಾರಾಟವಾದವು. ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳು ಸಹ ಮಾರಾಟಕ್ಕೆ ಬಂದಿದ್ದವು. ರೈತ ಬಾಂಧವರು ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುವ ಜೊತೆಗೆ ಜಾನುವಾರುಗಳಿಗೆ ಬೇಕಾದ ಹಗ್ಗ, ಗೆಜ್ಜೆ ಸರ, ಹಣೆಕಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.
ಬುಧವಾರದಿಂದ ಆರಂಭವಾಗಿರುವ ಜಾನುವಾರುಗಳ ಜಾತ್ರೆಗೆ ಜಿಲ್ಲೆ ಸೇರಿದಂತೆ ಶಹಾಪೂರ, ಯಾದಗಿರಿ, ಬಾಗಲಕೋಟ, ರಾಯಚೂರ ವಿವಿಧ ಜಿಲ್ಲೆಯ ರೈತ ಬಾಂಧವರು ಮಾರಾಟ ಮಾಡುವ ಉದ್ದೇಶದಿಂದ ಅವುಗಳಿಗೆ ಅಗತ್ಯವಿರುವ ಮೇವಿನೊಂದಿಗೆ ಬಂದು ಬಿಡು ಬಿಟ್ಟಿದ್ದಾರೆ. ಬಿರು ಬಿಸಿಲಿನಿಂದಾಗಿ ಬಸವಳಿಯುತ್ತಿರುವ ಎತ್ತುಗಳಿಗೆ ಕೆಲ ರೈತರು ನೆರಳು ಮಾಡಿರುವುದು ಕಂಡುಬಂದಿತ್ತು.
ರೂಡಗಿ ರೈತರೊಬ್ಬರು ಎರಡು ಹಲ್ಲಿನ ಹೋರಿಗೆ ರೂ. ೨೫ ಸಾವಿರ ನೀಡಿ ಖರೀದಿಸಿರುವುದಾಗಿ ಹೇಳಿದರು. ತಮದಡ್ಡಿಯ ಬಸವರಾಜ ಘತ್ತರಗಿ ಅವರನ್ನು ಮಾತನಾಡಿಸಿದಾಗ ನಮ್ಮ ಎತ್ತುಗಳನ್ನು ರೂ.೧ ಲಕ್ಷಕ್ಕೆ ಕೇಳುತ್ತಿದ್ದಾರೆ. ನಾನು ರೂ. ೧.೨೦ ಲಕ್ಷ ಬಂದರೆ ಮಾರಾಟ ಮಾಡುವೆ. ನನ್ನ ಹೋರಿಯನ್ನು ರೂ. ೨೦ ಸಾವಿರ ಮೇಲೆ ಬಂದರೆ ಮಾತ್ರ ಮಾರಾಟ ಮಾಡುವುದಾಗಿ ಹೇಳಿದರು.
ಕಾನ್ನಾಳದ ಗುರು ಸಜ್ಜನ ಅವರು ಈ ಜಾನುವಾರು ಜಾತ್ರೆಯು ಈ ಭಾಗದಲ್ಲಿಯೇ ದೊಡ್ಡ ಜಾನುವಾರು ಜಾತ್ರೆಯಾಗಿದೆ. ಈ ಸಲ ಆಕಳುಗಳಿಗೆ ಬಹಳ ಬೇಡಿಕೆ ಕಂಡು ಬರುತ್ತಿದೆ. ನಾನು ರೂ. ೩೧ ಸಾವಿರ ಕೊಟ್ಟು ಒಂದು ಆಕಳು ಖರೀದಿಸಿದ್ದೇನೆ. ಬಹಳ ಜನರು ಆಕಳು ಕೇಳಿದರೂ ಸಿಗುತ್ತಿಲ್ಲ. ಕಳೆದ ಸಲಕ್ಕಿಂತಲೂ ಈ ಸಲ ಜಾನುವಾರುಗಳು ಹೆಚ್ಚು ಬಂದಿವೆ. ಅಷ್ಟೇ ಮಾರಾಟವಾಗುತ್ತಿವೆ ಎಂದು ಹೇಳಿದರು.
ಈ ಜಾತ್ರೆಯಲ್ಲಿ ಅಥಣಿ, ಗೋಟೆ,ಬೆನಕದಿನ್ನಿಯಿಂದ ಎತ್ತಿನ ಗಾಡಿಗಳು ಮಾರಾಟಕ್ಕೆ ಬಂದಿವೆ. ಎರಢೂವರೆ ಪೂಟ್ನಿಂದ ಹಿಡಿದು ಆರು ಪೂಟ್ದವರೆಗೂ ಇರುವ ಎತ್ತಿನ ಗಾಡಿಗಳು ಕಂಡುಬಂದವು. ರೈತರು ಚೌಕಾಸಿ ಮಾಡಿ ಎತ್ತಿನ ಗಾಡಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.
ಎತ್ತಿನ ಗಾಡಿ ಮಾರಾಟಗಾರ ಅಥಣಿಯ ರಾಜು ಬಡಿಗೇರ ಅವರನ್ನು ಮಾತನಾಡಿಸಿದಾಗ ನಾನು ಎರಢೂವರೆ ಪೂಟ್ದಿಂದ ಹಿಡಿದು ನಾಲ್ಕು ಪೂಟ್ದವರೆಗೂ ಇರುವ ಎತ್ತಿನ ಗಾಡಿಗಳನ್ನು ಮಾರಾಟಕ್ಕೆ ತಂದಿದ್ದೇನೆ. ನಿನ್ನೆ ೫-೬ ಮಾರಾಟವಾಗಿವೆ. ನಾಳೆ ಒಂದು ದಿನ ಇದ್ದು ಎಷ್ಟು ಮಾರಾಟವಾಗುತ್ತವೋ ಅಷ್ಟು ಮಾರಾಟ ಮಾಡುವುದಾಗಿ ಹೇಳಿದರು.
ಜಾತ್ರಾ ಉತ್ಸವ ಸಮಿತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜೊತೆಗೆ ರೈತರು ಇರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡುತ್ತಿರುವುದು ಕಂಡುಬಂದಿತ್ತು. ರೈತರು ಜಾನುವಾರುಗಳ ಮಾರಾಟ, ಖರೀದಿಸಿದ ನಂತರ ಜಾತ್ರಾ ಉತ್ಸವ ಸಮಿತಿಯಲ್ಲಿ ತಾವು ತೆಗೆದುಕೊಂಡು ಜಾನುವಾರು ವಿವರ, ಜಾನುವಾರುಗಳ ಖರೀದಿಸಿದ ಬೆಲೆ ಮಾಹಿತಿ ನೀಡಿ ರೂ.೫೦ ನೀಡಿ ರಸೀದಿ ಮಾಡಿಸಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

