ವಿಜಯಪುರ: ತೊರವಿ ಭಾಗಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ತವರೂರಿನ ಋಣ ತೀರಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ತೊರವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಬುಧವಾರ ರಾತ್ರಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ರಾಜ್ಯ ಸರಕಾರ ಪ್ರತಿಯೊಬ್ಬರ ಮನೆಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ. ಆದರೆ, ಕೇಂದ್ರ ಸರಕಾರ ಜನರ ಜೀವನವನ್ನು ಬೆಲೆ ಏರಿಕೆಯಿಂದ ದುರ್ಭರಗೊಳಿಸಿದೆ. ಪೆಟ್ರೋಲ್, ಅಡುಗೆ ಅನಿಲ ಬೆಲೆ ಹೆಚ್ಚಳವಾದಾಗ ಗದ್ದಲ ಉಂಟು ಮಾಡುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಂಥವರು ಈಗ ಮೌನ ವಹಿಸಿದ್ದಾರೆ. ಚುನಾವಣೆ ಬಾಂಡ್ ಇವರ ನಿಜವಾದ ಮುಖವಾಡವನ್ನು ಬಯಲು ಮಾಡಿದೆ ಎಂದು ಅವರು ಹೇಳಿದರು.
ನಾವು ಕೊಟ್ಟ ಭರವಸೆ ಈಡೇರಿಸಿ ಮತ ಕೇಳಲು ಬಂದಿದ್ದೇವೆ. ಸಬ್ ಕಾ ಸಾಥ್ ಎಂದವರು ಈಗ ದೇಶದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಈ ಸಲ ಅವರಿಗೆ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲ. ಯಾವ ಗಾಳಿಯೂ ಇಲ್ಲ. ನಿಮ್ಮೂರಿನ ಮಗನಾದ ಪ್ರೊ. ರಾಜು ಆಲಗೂರ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ತೊರವಿ ಭಾಗಕ್ಕೂ ನೀರು ನೀಡುವ ಯೋಜನೆ ರೂಪಿಸುತ್ತಿದ್ದೇವೆ. ನಮ್ಮೂರಿನ ಋಣ ತೀರಿಸುವೆ. ಆಲಮಟ್ಟಿ ಅಣೆಕಟ್ಟು ಎತ್ತರಿಸಲು ಗೆಜೆಟ್ ನೋಟಿಫಿಕೇಷನ್ ಆದರೆ ಇಡೀ ಜಿಲ್ಲೆ ದೇಶದಲ್ಲಿಯೇ ಶ್ರೀಮಂತವಾಗಲಿದೆ. ಈ ಕೆಲಸ ಜಾರಿಯಾಗಬೇಕಾದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ಪಕ್ಷಾತೀತವಾಗಿ ಗ್ರಾಮದವರು ತಮಗೆ ಬೆಂಬಲಿಸಬೇಕು. ಲೋಕಸಭೆಯಲ್ಲಿ ನಿಮ್ಮ ಭರವಸೆಗೆ ತಕ್ಕಂತೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು ನಮ್ಮ ಬೆನ್ನಿಗಿವೆ. ಜಿಲ್ಲೆಯಲ್ಲಿ ಪಕ್ಷದ ಪರ ಅಲೆ ಇದೆ. ಕಳೆದ 25 ವರ್ಷಗಳ ನಂತರ ಈಗ ಬದಲಾವಣೆ ಗಾಳಿ ಬೀಸಿದೆ. ತೊರವಿ ಗ್ರಾಮಸ್ಥರು ಕಾಂಗ್ರೆಸ್ಸಿಗೆ ಸಂಪೂರ್ಣ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಮುಖಂಡ ಎನ್.ಎಸ್. ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹಮೀದ್ ಮುಶ್ರೀಫ್, ನರಸಿಂಗ ಮಹಾರಾಜರು, ಭೀಮು ಮಹಾರಾಜರು, ಸುರೇಶಗೌಡ ಪಾಟೀಲ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

