ವಿಜಯಪುರ: ಸುಳ್ಳು ಹೇಳುವವರನ್ನು ನಂಬದೇ ಸತ್ಯದ ಪರ ಇರುವವರಿಗೆ ಮತಹಾಕಿ ಗೆಲ್ಲಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತದಾರರಿಗೆ ಕರೆ ನೀಡಿದ್ದಾರೆ.
ವಿಜಯಪುರ ನಗರದಲ್ಲಿ ಇಂದು ಬುಧವಾರ ಮುಸ್ಸಂಜೆ ನಡೆದ ನಾಗಠಾಣ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊ.ರಾಜು ಆಲಗೂರ ಎರಡು ಬಾರಿ ಶಾಸಕರಾಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಟ್ಟಾ ಕಾಂಗ್ರೆಸ್ಸಿಗರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಸಲ ಜೆಡಿಎಸ್ ಗೆ ಟಿಕೇಟ್ ನೀಡಿದ ಹಿನ್ನೆಲೆ ಆಲಗೂರ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಈ ಬಾರಿ ಒಮ್ಮತದ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಶಾಸಕರಾಗಿ ವಿಧಾನಸಭೆಯಲ್ಲಿ ಮಾಡಿದಂತೆ ಲೋಕಸಭೆಯಲ್ಲಿ ವಿಜಯಪುರದ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಅವರು ಯಾವುದೇ ಕೆಲಸ ಮಾಡಿಲ್ಲ. ರೇಲ್ವೆ ಮೇಲ್ಸೇತುವೆ ಕುರಿತು ಅವರು ಪ್ರಸ್ತಾಪಿಸುತ್ತಾರೆ. ಆದರೆ, ಈ ರೇಲ್ವೆ ಮೇಲ್ಸೇತುವೆಯಲ್ಲಿ ರಾಜ್ಯ ಸರಕಾರವೂ ಶೇ. 50 ರಷ್ಟು ಅನುದಾನ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
2014 ರಲ್ಲಿ ಮೋದಿ ದೊಡ್ಡ ಬದಲಾವಣೆ ತರುವುದಾಗಿ ಪ್ರಚಾರ ಮಾಡಿದರು. ಆದರೆ, ಕಪ್ಪು ಹಣ ವಾಪಸ್ ತರುವುದು ಸೇರಿದಂತೆ ಯಾರ ಅಕೌಂಟಿಗೂ ರೂ. 15 ಲಕ್ಷ ಹಾಕಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ನೋಟ್ ಬ್ಯಾನ್ ನಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತೆ ಮಾಡಿದರು. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ನಾವು ನೀರಾವರಿ ಮೂಲಕ ರೈತರ ಆದಾಯ ಹೆಚ್ಚಿಸಿದ್ದೇವೆ. ಭೂಮಿಯ ಬೆಲೆ ಈಗ 10 ಪಟ್ಟು ಹೆಚ್ಚಾಗಿದೆ. ತೈಲ ಮತ್ತು ಗ್ಯಾಸ್ ಬೆಲೆ ಏರಿಕೆ ಇವರು ನೀಡಿರುವ ಅಚ್ಛೆದಿನ್ ಆಗಿವೆ. ತಿನ್ನುವ ಆಹಾರ ಸೇರಿ ಎಲ್ಲ ವಸ್ತುಗಳ ಮೇಲೆ ಜಿ.ಎಸ್.ಟಿ ಹಾಕಿದ್ದಾರೆ. ಎಲೆಕ್ಟ್ರಾಲ್ ಬಾಂಡ್ ನಲ್ಲಿ ಇವರ ಎಲ್ಲ ಕೆಲಸಗಳು ಬಹಿರಂಗವಾಗಿವೆ. ಕೇಂದ್ರದಲ್ಲಿ ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಮನಮೋಹನಸಿಂಗ್ ಸೇರಿದಂತೆ ಕಾಂಗ್ರೆಸ್ ಪ್ರಧಾನಿಗಳ ಅವಧಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳನ್ನು ಈ ಬಿಜೆಪಿ ಸರಕಾರ ಖಾಸಗೀಕರಣ ಮಾಡುತ್ತಿದೆ. ಕಳಂಕಿತರು ಬಿಜೆಪಿಗೆ ಸೇರ್ಪಡೆಯಾದರೆ ಕಳಂಕ ರಹಿತರಾಗುತ್ತಿದ್ದಾರೆ. ಸುಳ್ಳು ಹೇಳುವವರನ್ನು ನಂಬದೇ ಸತ್ಯವಂತರ ಪರ ಮತ ಹಾಕಿ ಎಂದು ಹೇಳಿದರು.
ಭೂತ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಮತದಾನ ಪ್ರಮಾಣ ಹೆಚ್ಚಿಸಬೇಕು. ಆಲಗೂರ ಅವರಿಗೆ ಹಾಕುವ ಮತ ಖರ್ಗೆ,ಸೊನಿಯಾ, ರಾಹುಲ, ಸಿದ್ಧರಾಮಯ್ಯ, ಶಿವಕುಮಾರ, ನನಗೆ ಹಾಕಿದಂತೆ ಎಂದು ಎಂ. ಬಿ. ಪಾಟೀಲ ಹೇಳಿದರು.
ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಟೀಕಿಸುವ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪ್ರವಾಸಿ ತಾಣವಾಗಿರುವ ವಿಜಯಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಂಸದರು ಯಾವುದೇ ಕೆಲಸ ಮಾಡಿಲ್ಲ. ಮೂರು ಅವಧಿಯಲ್ಲಿ ಸಂಸದರ ಅಭಿವೃದ್ಧಿ ಶೂನ್ಯವಾಗಿದೆ. ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳಿಲ್ಲ. ಬಿಜೆಪಿ ಸಂಸದರು ಪ್ರಧಾನಿ ಮೋದಿ ಎದುರು ಮಾತನಾಡುವುದಿಲ್ಲ. ಜಲಸಂಪನ್ಮೂಲ ಸಚಿವರಾಗಿ ಎಂ. ಬಿ. ಪಾಟೀಲ ಮಾಡಿರುವ ಯೋಜನೆಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಾಗಿ ನೀರಿನ ಬವಣೆ ತಪ್ಪಿದೆ. ನೀರಿಗಾಗಿ ಮತ ಹಾಕಿ. ಪ್ರೊ. ರಾಜು ಆಲಗೂರ ಮತದಾರರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಮತ ಕೇಳುವ ನೈತಿಕತೆ ನನಗಿದೆ. ಆದರೆ, ಬಿಜೆಪಿಯವರಿಗೆ ಮತ ಕೇಳುವ ನೈತಿಕತೆ ಇಲ್ಲ. 2013ರಿಂದ 2018ರ ಅವಧಿಯಲ್ಲಿ ಜಿಲ್ಲೆಯಲ್ಲಿ ಎಂ. ಬಿ. ಪಾಟೀಲ ನೀರಾವರಿ ಮಾಡಿದ್ದಾರೆ. ಎಂಬಿಪಿ ಅವರ ಅಭಿವೃದ್ಧಿ ಯೋಜನೆಗಳು ನನ್ನ ಕೈಹಿಡಿಯಲಿವೆ. ಅಲ್ಲದೇ, ನಾನು ಎರಡು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಸಂಸದರು ಕಳೆಷ 15 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ದೇಶದಲ್ಲಿಯೇ ಒಂದೂ ಕೆಲಸ ಮಾಡದ ಸಂಸದ ರಮೇಶ ಜಿಗಜಿಣಗಿ ಆಗಿದ್ದಾರೆ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಯೋಚನೆ ಮಾಡಿ ಮತ ಹಾಕಿ. ಜನರಿಗೆ ಕೈಗೆ ಸಿಗುವ ಜನಪ್ರತಿನಿಧಿಗೆ ಮತ ಹಾಕಿ. ನಾಗಠಾಣ ಮತಕ್ಷೇತ್ರದಿಂದ 50 ಸಾವಿರ ಲೀಡ್ ಕೊಡಿಸಿ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ಜಿಗಜಿಣಗಿ ಹಠಾವೋ, ತಾಂಡಾ ಬಚಾವೋ. ನಮ್ಮ ಓಟು ಬೇಡ ಎಂದ ಅವರನ್ನು ಮನೆಗೆ ಕಳುಹಿಸಿ ನಮ್ಮ ಸ್ವಾಭಿಮಾನ ಎತ್ತಿ ಹಿಡಿಯೋಣ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಸ್. ಲೋಣಿ, ಮುಖಂಡರಾದ ಎಂ. ಆರ್. ಪಾಟೀಲ, ಡಿ. ಎಲ್. ಚವ್ಹಾಣ ಮಾತನಾಡಿ, ರಾಜು ಆಲಗೂರ ಆಯ್ಕೆ ಖಚಿತವಾಗಿದ್ದು, ಎಲ್ಲ ಕಾರ್ಯಕರ್ತರು ಮತದಾರರ ಮನೆಮನೆಗಳಿಗೆ ತೆರಳಿ ಮತಯಾಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ಗುಲ್ ಹಮೀದ ಮುಶ್ರಿಫ್, ಡಾ. ಗಂಗಾಧರ ಸಂಬಣ್ಣಿ, ಷಹಜಹಾನ ಮುಲ್ಲಾ, ಶ್ರೀದೇವಿ ಉತ್ಲಾಸರ, ಎಂ. ಆರ್. ಪಾಟೀಲ, ಷಹಜಹಾನ್ ಧುಂಡಸಿ ಮುಂತಾದವರು ಉಪಸ್ಖಿತರಿದ್ದರು.
ಸುರೇಶ ಬಿಜಾಪೂರ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಸತ್ಯದ ಪರ ಇರುವವರಿಗೆ ಮತಹಾಕಿ ಗೆಲ್ಲಿಸಿ :ಸಚಿವ ಎಂ.ಬಿ.ಪಾಟೀಲ
Related Posts
Add A Comment

