– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ತಾಲೂಕಿನ ಕರಭಂಟನಾಳ ಗ್ರಾಮದ ರೈತ ನೀಲಕಂಠರಾಯ ಲಿಂಗರೆಡ್ಡಿ ಅವರ ಎರಡನೇ ಸುಪುತ್ರಿ ಶ್ರೀಲತಾ ಲಿಂಗರೆಡ್ಡಿ ಅವಳು ಹೂವಿನಹಿಪ್ಪರಗಿಯ ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಹೂವಿನಹಿಪ್ಪರಗಿಯ ಬಾಲಕಿಯರ ವಸತಿ ನಿಲಯದಲ್ಲಿದ್ದುಕೊಂಡು ನಿರಂತರ ಅಧ್ಯಯನದಿಂದ ಪಿಯುಸಿ ಕಲಾ ವಿಭಾಗದಲ್ಲಿ ೫೯೨ ಅಂಕ(ಶೇ.೯೮.೬೬) ಪಡೆಯುವ ಮೂಲಕ ರಾಜ್ಯಕ್ಕೆ ಹದಿನೇಳನೇ ಸ್ಥಾನ ಪಡೆದುಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.
ಶ್ರೀಲತಾ ಲಿಂಗರೆಡ್ಡಿ ಅವಳು ಇತಿಹಾಸ, ಸಮಾಜಶಾಸ್ತ್ರ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ, ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯದಲ್ಲಿ ೧೦೦ ಕ್ಕೆ ೯೯ ಅಂಕ, ಆಂಗ್ಲ ವಿಷಯಕ್ಕೆ ೧೦೦ಕ್ಕೆ ೯೫ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಪ್ರಾಥಮಿಕ ಶಾಲೆಯಿಂದಲೂ ನಿರಂತರ ಅಧ್ಯಯನ ಶೀಲತೆ ಬೆಳೆಸಿಕೊಂಡಿದ್ದ ಶ್ರೀಲತಾ ಎಸ್ಎಸ್ಎಲ್ಸಿಯಲ್ಲಿಯೂ ಉತ್ತಮ ಸಾಧನೆಯನ್ನು ಮಾಡಿದ್ದಾಳೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ.
ಶ್ರೀಲತಾ ಲಿಂಗರೆಡ್ಡಿ ಅವಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ನಾನು ಕಾಲೇಜು ಆರಂಭವಾದ ದಿನದಿಂದಲೂ ನಿರಂತರ ಅಧ್ಯಯನ ಮಾಡುತ್ತಿದ್ದೆ. ನನಗೆ ತಂದೆ-ತಾಯಿ, ಕಾಲೇಜಿನ ಎಲ್ಲ ಉಪನ್ಯಾಸಕರು, ವಸತಿ ನಿಲಯದ ಪಾಲಕರು ಸೇರಿದಂತೆ ಎಲ್ಲರೂ ನನ್ನ ಅಧ್ಯಯನಕ್ಕೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಾನು ಎರಡು ವರ್ಷಗಳ ಕಾಲ ವಸತಿ ನಿಲಯದಲ್ಲಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡಿರುವೆ. ನಾನು ಯಾವುದೇ ವಿಶೇಷ ತರಬೇತಿಗೆ ಹೋಗಿಲ್ಲ. ನಿತ್ಯ ೪-೫ ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ನಾನು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಳ್ಳಬೇಕೆಂದು ಆಸೆಯನ್ನು ಹೊಂದಿದ್ದೆ. ಇದೀಗ ನಾನು ರಾಜ್ಯದಲ್ಲಿ ೧೭ ನೇ ಸ್ಥಾನ ಪಡೆದುಕೊಂಡಿರುವದು ತುಂಬಾ ಸಂತಸ ತಂದಿದೆ. ಮುಂದೆ ನಾನು ಶಿಕ್ಷಕನಾಗುವ ಗುರಿ ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆಸೆಯನ್ನು ಇಟ್ಟುಕೊಂಡಿರುವದಾಗಿ ಹೇಳಿದರು.
ಶ್ರೀಲತಾ ಲಿಂಗರೆಡ್ಡಿ ಅವಳ ತಂದೆ ನೀಲಕಂಠರಾಯ ಲಿಂಗರೆಡ್ಡಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ನನ್ನ ಮಗಳು ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಚುರುಕುತನ ಹೊಂದಿದ್ದಾಳೆ. ಮೊದಲ ಮಗಳಾದ ಮಧುವತಿ ಸಹ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಈಗ ಎರಡನೇ ಮಗಳು ಸಾಧನೆ ಮಾಡಿದ್ದು ತುಂಬಾ ಖುಷಿ ತಂದಿದೆ. ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.
ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಭಜಂತ್ರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಶ್ರೀಲತಾ ಲಿಂಗರೆಡ್ಡಿ ಅವಳು ನಿರಂತರ ಅಧ್ಯಯನ ಮಾಡುತ್ತಿದ್ದಳು. ನಮ್ಮ ಕಾಲೇಜಿನ ಎಲ್ಲ ಉಪನ್ಯಾಸಕರು ಇವಳು ಉತ್ತಮ ಸಾಧನೆ ಮಾಡುತ್ತಾಳೆ ಎಂಬ ನಂಬಿಕೆ ಇಟ್ಟುಕೊಂಡಿದ್ದರು. ನಮ್ಮ ನಿರೀಕ್ಷೆಯಂತೆ ಉತ್ತಮ ಸಾಧನೆ ಮಾಡಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

