ಬರದ ಛಾಯೆ ಮಧ್ಯೆ ಸಂಭ್ರಮದ ಯುಗಾದಿ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ ಯುಗಾದಿ ಪಾಡ್ಯ ಹಬ್ಬವನ್ನು ಬರದ ಛಾಯೆ ಮಧ್ಯೆಯೂ ಸಡಗರ, ಸಂಭ್ರಮದಿಂದ ಜನರು ಆಚರಣೆ ಮಾಡಿದರು.
ಹಬ್ಬದಂಗವಾಗಿ ಅಮವಾಸ್ಯೆ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವಗಳು ಜರುಗಿದವು. ಯುಗಾದಿ ಪಾಡ್ಯದಂದು ಹೊಸ ಬಟ್ಟೆ ತೊಟ್ಟ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಜನರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಯುಗಾದಿ ಪಾಡ್ಯದಂದು ಜನರು ತಮ್ಮ ಮನೆಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಬೇವು ವಿತರಿಸಿ ಯುಗಾದಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬೇವನ್ನು ಸವಿದ ಜನರು ಜೀವನದಲ್ಲಿ ಸಿಹಿ-ಕಹಿ ಅನುಭವವನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಸಾರಿದರು.
ಪಂಚಾಂಗ ವಾಚನ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ರವೀಂದ್ರ ಆಚಾರ್ಯ ಅವರು ಪಂಚಾಂಗ ಪೂಜೆ ನೆರವೇರಿಸಿ ಕ್ರೋದಿನಾಮ ಸಂವತ್ಸರ ಫಲಾಫಲ ವಾಚಿಸಿದರು. ಈ ವರ್ಷದ ಮಳೆ-ಬೆಳೆ, ರಾಶಿ ಫಲ ಸೇರಿದಂತೆ ನವ ಸಂವತ್ಸರ ಪಂಚಾಂಗದ ಸಾರವನ್ನು ವಾಚಿಸಿದರು. ಅನೇಕ ಜನರು ಪಂಚಾಂಗವನ್ನು ಶ್ರವಣ ಮಾಡಿದರು.
ಈ ಸಂದರ್ಭದಲ್ಲಿ ಗುರುಬಸಯ್ಯ ತೆಗ್ಗಿನಮಠ, ಗುರಯ್ಯ ಸಾರಂಗಮಠ, ದೇವಸ್ಥಾನದ ಅರ್ಚಕ ಗೌರಿಶಂಕರ ಚರಂತಿಮಠ, ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಬಸಣ್ಣ ದೇಸಾಯಿ, ನಿಂಗಪ್ಪ ಅಂಗಡಿ, ಬಸವಂತ ಅಡಗಿಮನಿ, ಮಲ್ಲಪ್ಪ ಗುಂಡಿ ಇತರರು ಇದ್ದರು.
ಪಾಡ್ಯದ ಹೇಳಿಕೆಗಳು: ಪಟ್ಟಣದ ಸಂಗೊಳ್ಳಿ ರಾಯಣ್ಣ ಗಲ್ಲಿಯಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರು ಬುಧವಾರ ತೃತ ರೋಹಿಣಿ ಮಿರಗದ ಮಳಿಗಿ ಮಂಡಿ ಕಟ್ಟಿಸಿನಿ, ಮುಂಗಾರಿ ಪುಷ್ಯಾ, ಪುರ್ನವಸ್ಸು ಮಳಿಗಿ ಕೂರಗಿ ಕಡಿಯ್ಯಾಕ ಆಯ್ತು, ಆರಿದ್ರ ಮಳಿ ಬಂದು ಮೂಲಿ ಕಸರ ಉಳಿತು, ಮುಂಗಾರಿ ಬೆಳಿ ಸೋಸಿ ನೋಡುವದರೊಳಗ ಚಜ್ಜಿಕಟ್ಟಿಗೆ ಮಕ್ಕಳ ಆಯಿತು, ಹಿಂಗಾರಿ ಹುಬ್ಬಿ, ಉತ್ತರಿ ಮಳಿಗಿ ಮಂಡಿ ಕಟ್ಟಿಸಿನಿ, ಹತ್ತು ಕಾಳಿನಲ್ಲಿ ಬಿಳಿಕಾಳು ಮೇಲು, ಹತ್ತು ಮಳಿಗಳನ್ನು ಉಡಿಕಟ್ಟಿ ಆಡಿನಿ, ಗೋಧಿ, ಕುಸಬಿ, ಕಡ್ಲಿ, ಜೋಳದ ಬೆನ್ನ ಹತ್ಯಾವ, ಹತ್ತಿ ಸಾಲಾಗ ಹಮಣಿ ಒಗದಿನಿ, ವಕ್ಕಲಿಗ್ಯಾ ನಂಬಿಗಿ ಇಟ್ಟು ನಡೆದವರ ಮನಿಯಾಗ ಬಂಗಾರ ಕಂಬಿ ಆಗಿ ಇರತೀನಿ ಎಂದು ಯುಗಾದಿ ಪಾಡ್ಯದ ಹೇಳಿಕೆಗಳನ್ನು ನುಡಿದರು.
ಈ ಸಂದರ್ಭದಲ್ಲಿ ಬಸವರಾಜ ಹಾರಿವಾಳ, ಸಿದ್ದಣ್ಣ ಹೆರಕಲ್, ಶಿವಪ್ಪ ಯರನಾಳ, ಸಂಗಯ್ಯ ಒಡೆಯರ, ಶಾಂತಪ್ಪ ಪಡಶೆಟ್ಟಿ, ಬಸನಗೌಡ ಪಾಟೀಲ, ಮಲ್ಲಯ್ಯ ನರಸಲಗಿಮಠ, ಶರಣು ಉಕ್ಕಲಿ, ಮುತ್ತು ಉಕ್ಕಲಿ, ಬಸಪ್ಪ ಉಕ್ಕಲಿ, ಬಸಪ್ಪ ಹೆರಕಲ್ ಇತರರು ಇದ್ದರು.

