– ಜಯಶ್ರೀ.ಜೆ. ಅಬ್ಬಿಗೇರಿ,
ಉಪನ್ಯಾಸಕರು, ಸ ಪ ಪೂ ಕಾಲೇಜು, ಹಿರೇಬಾಗೇವಾಡಿ, ಬೆಳಗಾವಿ

ಮೊದಲೆಲ್ಲ ಮುಂಜಾನೆದ್ದು ಪರಿಚಿತ ಮುಖಗಳು ಕಂಡಾಕ್ಷಣ ಮುಗುಳ್ನಗೆಯಿಂದ ನಮಸ್ಕರಿಸಿ, ಮುಂದೆ ಸಾಗುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಕೆಲ ಸ್ನೇಹಿತರು ಬೆಳಿಗ್ಗೆ ಬೆಳಿಗ್ಗೆನೆ ಕೈ ಹಿಡಿದುಕೊಂಡು ಕುಶಲೋಪರಿಯ ಮಾತಿಗಿಳಿದು, ಒಂದಿಷ್ಟು ಹರಟೆಗೂ ಚಾಲನೆ ನೀಡುತ್ತಿದ್ದರು. ಹಳ್ಳದ ದಡದಲ್ಲಿ, ಊರ ಹೊರಗಿನ ದೇವರ ಸನ್ನಿಧಿಯಲ್ಲಿ, ದೇವರ ಜಾತ್ರೆಯಲ್ಲಿ ಸ್ನೇಹಿತರು ಸಿಕ್ಕರಂತೂ ಸ್ವರ್ಗ ಮೂರೇ ಗೇಣು. ಕಾಲ ಕಳೇದಂತೆ ಜೀವನೋಪಾಯದ ಅನಿವಾರ್ಯತೆಯ ಹೆಸರಿನಲ್ಲಿ ಊರಿನಿಂದಾಚೆ ಹೋದವರೆಲ್ಲ ಒಟ್ಟಿಗೆ ಸೇರುವುದು ದೊಡ್ಡ ದೊಡ್ಡ ಹಬ್ಬ ಜಾತ್ರೆಗಳಲ್ಲಿ ಮಾತ್ರ. ನಡೆಯಿತು. ಉಳಿದ ದಿನಗಳಲ್ಲಿ ಕೂಡೋದು ಕಡಿಮೆ ಆಯಿತು. ಆದರೆ, ಸಿಕ್ಕಾಗ ಮಾತ್ರ ನಲಿವಿನ ಕ್ಷಣಗಳನ್ನು ಬದುಕಿನ ಪುಟಗಳಲ್ಲಿ ಅಚ್ಚೊತ್ತಿದಂತೆ ಬರೆದುಕೊಂಡು ಹೋಗುತ್ತಿದ್ದರು.
ಇತ್ತೀಚಿನ ಆಧುನಿಕತೆಯ ಏದುಸಿರಿನ ಜೀವನದಲ್ಲಿ ಸ್ವಂತ ಊರಿಗೆ ಹೋಗುವುದಿರಲಿ, ಮನೆಯ ಹೊರಗಿನ ಅಂಗಳದಲ್ಲಿ ಕುಳಿತು ಪಕ್ಕದ ಮನೆಯವರೊಂದಿಗೆ ಎರಡು ಮಾತನಾಡಲೂ ಸಮಯ ಸಿಗುತ್ತಿಲ್ಲ. ನೋಡ ನೋಡುತ್ತಿದ್ದಂತೆಯೇ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮೆಲ್ಲರ ಸಂಬಂಧಗಳ ನಡುವೆ ದೊಡ್ಡದೊಂದು ಎತ್ತರದ ಗೋಡೆ ನಿರ್ಮಾಣವಾಗಿ ಬಿಟ್ಟಿದೆ. ಹೃದಯದ ತಂಪಾದ ಭಾವನೆಗಳ ಆಳ ಅಗಲಗಳನ್ನು ಹಣ ಕೀರ್ತಿಯೆಂಬ ಆಕರ್ಷಣೀಯ ಕಡ್ಡಿಗಳಿಂದ ತುಂಬುತ್ತಿದ್ದೇವೆ. ಕೆಲವು ಸಲ ಈ ಕಡ್ಡಿಗಳ ಮಧ್ಯದಲ್ಲಿ ಏನೋ ಕದಲಿಸಿದ ನೋವು.. ಆಲೋಚಿಸಿದಾಗ ತಾಯಿಯ ಮಡಿಲು, ಅಪ್ಪನ ಹೆಗಲು, ಪುಟ್ಟ ಮಗುವಿನ ನಗು ಮನದನ್ನೆಯ ಹಸಿರು ಬಳೆಯ ಒಲವಿನ ಸದ್ದು, ಗೆಳೆಯನ ರಕ್ಷೆ ಎಲ್ಲೋ ಕಳೆದು ಹೋಗಿವೆ ಎಂದು ಆತಂರ್ಯದಲ್ಲಿ ಕಳವಳವುಂಟಾಗುವುದು. ನಾವು ಹೀಗೇಕೆ ಶೋಕಿ ಲೋಕದಲ್ಲಿ ಜೀವಿಸುತ್ತಿದ್ದೇವೆ? ಎಂಬ ಪ್ರಶ್ನೆ ಧುತ್ತೆಂದು ಎದ್ದು ನಮ್ಮೆದುರಿಗೆ ನಿಲ್ಲುತ್ತದೆ.. ಚಂದ್ರಲೋಕಕ್ಕೆ ಮಂಗಳ ಯಾನಕ್ಕೆ ದಾರಿ ಕಂಡು ಹಿಡಿದ ನಮಗೆ ಈ ಪ್ರಶ್ನೆಗೆ ಸರಳ ಭಾಷೆಯಲ್ಲಿ ಉತ್ತರಿಸಲು ಆಗುವುದೇ ಇಲ್ಲ. ಸರಳ ಬಾಷೆಯಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂದು ಉತ್ತರಿಸಲಾಗದಿದ್ದರೆ ನಾವು ಏನೋ ತಪ್ಪು ಮಾಡುತ್ತಿದ್ದೇವೆ ಎಂತಲೇ ಅರ್ಥ.
ನಮ್ಮ ಚಿತ್ತ ಬರಿ ಅತ್ತ ಇತ್ತ ಹೆಣ್ಣು ಹೊನ್ನು ಮಣ್ಣುಗಳನ್ನು ಹುಡುಕುವುದರಲ್ಲಿಯೇ ಮಗ್ನವಾಗಿದೆ. ಬದುಕಿನುದ್ದಕ್ಕೂ ವಾಮ ಮಾರ್ಗದಲ್ಲಿಯೇ ನಡೆದು, ಯಮನು ಸನಿಹ ಬಂದು ನಿಲ್ಲುವಾಗ ದೇವನಾಮ ಜಪಿಸಿದ ಮಾತ್ರಕ್ಕೆ ಆವರೆಗಿನ ಪಾಪಕರ್ಮಗಳೆಲ್ಲ ಕಳೆದು ಬಿಡಲಾರವು. ಮನದಲ್ಲಿ ಮಂಡಿಗೆ ತಿಂದರೆ ನಿಜದಲ್ಲಿ ತಿಂದಂತಾಗದು. ಹಾಗೆಯೇ ಕತ್ತಲಲ್ಲಿ ಕುಳಿತು ಬೆಳಕು ನೆನೆದ ಮಾತ್ರಕ್ಕೆ ಅಲ್ಲಿ ಹಚ್ಚಿದ ಹಣತೆ ಹತ್ತಿರಕ್ಕೆ ಬಂದು ನಿಲ್ಲಲಾರದು..’ನೀವು ಪ್ರತಿಯೊಬ್ಬರೂ ಮಹಾನುಭಾವರಾಗಿದ್ದೀರಿ. -ನೀವು ಅನಂತ ಆತ್ಮನೇ ಆಗಿದ್ದೀರಿ. ನೀವು ಹಾಗೆ ಆಗಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ನಮ್ಮ ಪೂರ್ವಜರಂತೆ ಆಚಾರ ವಿಚಾರ ಪ್ರಧಾನವಾಗಿರುವ ಸುಂದರ ಜೀವನ ನಡೆಸಲು, ಸತ್ಯದ ದಾರಿಯಲ್ಲಿ ಸಾಗಬೇಕು. ಕಡು ಕಷ್ಟಮಯವಾದ ಸತ್ಯದ ದಾರಿಯಲ್ಲಿ ಸಾಗಬೇಕೆಂದರೆ ಅಂತರಂಗ ಬಹಿರಂಗಗಳೆರಡನ್ನೂ ಶುದ್ಧವಾಗಿಟ್ಟುಕೊಳ್ಳಬೇಕು. ದಾರಿಯೇ ನೀನಾಗದ ಹೊರತು ನೀನು ಆ ದಾರಿಯಲ್ಲಿ ಸಾಗಲಾರೆ ಎಂದಿದ್ದಾರೆ ಬಲ್ಲವರು. ಹಾಗಾದರೆ ನಾವೇ ದಾರಿಯಾಗಿ ಆ ದಾರಿಯಲ್ಲಿ ದಿಟ್ಟ ಹೆಜ್ಜೆ ಇಡುತ್ತ ಸಾರ್ಥಕ ಜೀವನದತ್ತ ಸಾಗೋಣವಲ್ಲವೇ?

