’ವಿಶೇಷ ಲೇಖನ’- ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦

ಯಾರು ಬದುಕಿನಲ್ಲಿ ಯಾವುದೇ ವಿಷಯದ ಕುರಿತಾಗಿ ಕಠಿಣ ಪರಿಶ್ರಮವನ್ನು ಮಾಡುತ್ತಾರೋ ಅವರು ಆಯಾ ಕ್ಷೇತ್ರದಲ್ಲಿ ಸಾಧಕರಾಗಿ ಮೂಡಿ ಬರುತ್ತಾರೆ. ಯಾರು ಸೋಮಾರಿಗಳಾಗಿ ಕಾಲಹರಣ ಮಾಡುತ್ತಾರೋ ಅವರು ಸಾಧಕರ ಸಾಲಿಗೆ ಸೇರಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಯಾವುದೇ ಶ್ರಮವನ್ನು ಹಾಕದೆ ಮಹಾನ್ ಸಾಧಕರಾಗಿ ಗುರುತಿಸಿಕೊಳ್ಳಲು ಯಾವುದೇ ಸುಲಭದ ದಾರಿಗಳು (ಶಾರ್ಟ್ಕಟ್) ಇಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ.
ಒಂದು ವ್ಯವಸ್ಥೆಯಲ್ಲಿ ಒಬ್ಬರು ಕಠಿಣ ಪರಿಶ್ರಮಿ ಮತ್ತು ಇನ್ನೊಬ್ಬರು ಸೋಮಾರಿ ಇದ್ದು, ಪರಿಶ್ರಮಿಯ ನಿರಂತರ ಸಾಧನೆಗಳು ಮತ್ತು ಸದಾ ಗುರುತಿಸಿಕೊಳ್ಳುವ ರೀತಿಯನ್ನು ನೋಡಿದಾಗ ಸೋಮಾರಿಗೆ ತಾನು ಸಾಧನೆಯಲ್ಲಿ ಹಿಂದೆ ಉಳಿದಿರುವುದಕ್ಕೆ ಬೇಸರ ಆಗುವುದು ಸಹಜ. ಈಗ ಸೋಮಾರಿಯು ಪರಿಶ್ರಮಿಯನ್ನು ಮೀರಿ ಸಾಧಕನಾಗಲು ಏನು ಮಾಡಬೇಕೆಂಬ ಪ್ರಶ್ನೆಯು ಸೋಮಾರಿಯ ಮನಸ್ಸಿನಲ್ಲಿ ಮೂಡುತ್ತದೆ. ಕೆಲವು ಸೋಮಾರಿಗಳು ತಮ್ಮಿಂದ ಮುಂದಿರುವ ಪರಿಶ್ರಮಿ ಸಾಧಕರಿಗಿಂತ ದೊಡ್ಡವರಾಗಿ ಗುರುತಿಸಿಕೊಳ್ಳಲು ಪರಿಶ್ರಮಿಗಳ ಸಾಧನೆಯ ಹಾದಿಗೇ ಅಡ್ಡಗಾಲು ಹಾಕಿ ಅವರಿಗೆ ಕೊಡಬಾರದ ತೊಂದರೆಯನ್ನು ಕೊಟ್ಟು, ಅವರ ಸಾಧನೆಯ ವೇಗಕ್ಕೆ ನಿಯಂತ್ರಣವನ್ನು ಹಾಕುವ ಮೂಲಕ ತಮ್ಮಿಂದಲೂ ಹಿಂದೆ ಬೀಳುವಂತೆ ಮಾಡುತ್ತಾರೆ ಮತ್ತು ಇದರಿಂದ ತಾವು ಗುರುತಿಸಿಕೊಳ್ಳುತ್ತಾರೆ. ಆದರೆ ಇದು ನಿಜವಾಗಿಯೂ ಒಂದು ವ್ಯವಸ್ಥೆ ಮತ್ತು ವ್ಯಕ್ತಿಯ ಬೆಳವಣಿಗೆಯ ದೃಷ್ಟಿಯಿಂದ ಉತ್ತಮವೇ ಎಂದು ಕೇಳಿದರೆ ಖಂಡಿತಾ ಅಲ್ಲ. ಏಕೆಂದರೆ ಸೋಮಾರಿಯು ತಾನು ಕಠಿಣ ಪರಿಶ್ರಮಿಗಿಂತ ಹೆಚ್ಚಿನ ಪ್ರಯತ್ನವನ್ನು ಮಾಡಿ ಗುರುತಿಸಿಕೊಂಡಿಲ್ಲ. ಬದಲಿಗೆ ತನಗಿಂತ ಕಡಿಮೆ ಸಾಧನೆಯನ್ನು ಕಠಿಣ ಪರಿಶ್ರಮಿಯು ಮಾಡುವಂತೆ ಆತನಿಗೆ ತೊಂದರೆ ಕೊಟ್ಟು ತಾನು ಈ ಹಿಂದೆ ಇದ್ದಂತೆಯೇ ಇದ್ದು ಗುರುತಿಸಿಕೊಳ್ಳುವ ಕೆಲಸವನ್ನು ಮಾಡಿದ್ದಾನೆ.
ಇಲ್ಲಿ ಸೋಮಾರಿಯು ಪರಿಶ್ರಮಿಯ ಶ್ರಮ ಮತ್ತು ಬದ್ಧತೆಯನ್ನು ಮೀರಿ ನಿಲ್ಲಲು ಯಾವುದೇ ವಿಶೇಷ ಶ್ರಮವಾಗಲೀ, ಕೆಲಸದ ಯಶಸ್ಸಿನ ಯೋಜನೆಯನ್ನು ಆಗಲೀ ಮಾಡಿಲ್ಲ. ಬದಲಿಗೆ ಪರಿಶ್ರಮಿಯ ಓಡುವ ಕುದುರೆಯ ಕಾಲನ್ನು ಮುರಿದು ಅಥವಾ ಕಾಲಿನ ಲಾಳವನ್ನು ಕಿತ್ತು ನಿಧಾನವಾಗಿ ಓಡುತ್ತಿರುವ ಸೋಮಾರಿಯ ಕುದುರೆಯು ತನ್ನದೇ ಸಹಜವಾದ ವೇಗದಲ್ಲಿ ಗೆಲುವಿನ ಗೆರೆಯನ್ನು ತಲುಪುವಂತೆ ಮಾಡಲಾಗಿದೆ. ಇದರಿಂದ ಸೋಮಾರಿಯ ಕುದುರೆಯ ಓಡುವ ವೇಗವು ಪರಿಶ್ರಮಿಯ ಕುದುರೆಯ ವೇಗಕ್ಕಿಂತ ಕಿಂಚಿತ್ತೂ ಹೆಚ್ಚಾಗಿಲ್ಲ ಮತ್ತು ಹಾಗೆಯೇ ಇತ್ತು ಅಥವಾ ವೇಗವು ಮತ್ತಷ್ಟು ಕಡಿಮೆ ಆಗಿತ್ತು.
ಓಡುವ ಕುದುರೆಯನ್ನು ಓಡದಂತೆ ಅದರ ವೇಗಕ್ಕೆ ಕಡಿವಾಣವನ್ನು ಹಾಕಿ, ನಿಧಾನವಾಗಿ ಓಡುವ ಕುದುರೆಯನ್ನು ಗೆಲ್ಲುವಂತೆ ಮಾಡುವ ವಾಮಮಾರ್ಗವನ್ನು ಅನುಸರಿಸುವ ಬದಲಿಗೆ ಸೋಮಾರಿಯು ಪರಿಶ್ರಮಿಯ ಶ್ರಮಕ್ಕಿಂತ ಹೆಚ್ಚಿನ ಶ್ರಮವನ್ನು ಹಾಕಿ ಯಾ ವಿಭಿನ್ನವಾದ ಕಾರ್ಯಯೋಜನೆಯನ್ನು ಹಾಕಿಕೊಂಡು ಪರಿಶ್ರಮಿಯನ್ನು ಹಿಂದಿಕ್ಕಿ ಮುಂದೆ ಸಾಗಿ ಯಶಸ್ಸನ್ನು ತನ್ನದಾಗಿ ಮಾಡಿಕೊಂಡಾಗ ಮಾತ್ರ ವ್ಯವಸ್ಥೆಯಲ್ಲಿ ಇಬ್ಬರು ಸಾಧಕರು ಹಾಗೂ ಪೈಪೋಟಿದಾರರು ಮೂಡಿ ಬರಲು ಸಾಧ್ಯ ಆಗುತ್ತದೆ.
ಉದಾಹರಣೆ: ೬ ಸೆಂ.ಮೀ ಮತ್ತು ೪ ಸೆಂ.ಮೀ ಅಳತೆಯ ಎರಡು ಸರಳ ರೇಖೆಗಳ ಪೈಕಿ ಯಾವುದು ಉದ್ದವಿದೆ ಎಂದರೆ ಮೊದಲಿನದ್ದು ಸಹಜವಾಗಿಯೇ ಉದ್ದವಿದೆ ಮತ್ತು ಎರಡನೆಯದ್ದು ಅಳತೆಯಲ್ಲಿ ಸಹಜವಾಗಿಯೇ ಗಿಡ್ಡವಿದೆ ಎನ್ನಬಹುದು. ಈಗ ಎರಡೂ ಸರಳರೇಖೆಗಳು ಅಳತೆಯಲ್ಲಿ ಪರಸ್ಪರ ಸಮಾನ ಆಗಬೇಕು ಎಂದರೆ ಏನು ಮಾಡಬೇಕು? ಇದಕ್ಕೆ ಎರಡು ಸಾಧ್ಯತೆಗಳು ಇವೆ. ಮೊದಲನೆಯ ಸಾಧ್ಯತೆಯಲ್ಲಿ ೬ ಸೆಂ.ಮೀ ಅಳತೆಯ ರೇಖೆಯನ್ನು ೨ ಸೆಂ.ಮೀ ಕತ್ತರಿಸಿ ೪ ಸೆಂ.ಮೀ ಅಳತೆಯ ರೇಖೆಗೆ ಸಮಾನ ಮಾಡುವುದು. ಎರಡನೆಯ ಸಾಧ್ಯತೆಯಲ್ಲಿ ೪ ಸೆಂ.ಮೀ ಅಳತೆಯ ರೇಖೆಯನ್ನು ೨ ಸೆಂ.ಮೀ ಹೆಚ್ಚಿಸಿ ೬ ಸೆಂ.ಮೀ ಅಳತೆಯ ರೇಖೆಗೆ ಸಮಾನ ಮಾಡುವುದು. ಈ ಎರಡು ರೀತಿಯ ಸಾಧ್ಯತೆಗಳಲ್ಲಿ ಎರಡನೆಯ ವಿಧಾನವು ಒಂದು ವ್ಯವಸ್ಥೆಯ ಅಭಿವೃದ್ಧಿ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಏಕೆಂದರೆ ಅಳತೆಯಲ್ಲಿ ಹೆಚ್ಚು ಸಾಧನೆಯನ್ನು ಮಾಡಿದ ಮೊದಲನೆಯ ಸರಳ ರೇಖೆಯನ್ನು ಕಡಿಮೆ ಸಾಧನೆ ಮಾಡಿದ ರೇಖೆಯ ಅಳತೆಗೆ ಕುಂಠಿತಗೊಳಿಸಿ ಎರಡನ್ನೂ ಸಮಾನ ಮಾಡುವುದಕ್ಕಿಂತ ಕಡಿಮೆ ಸಾಧನೆ ಮಾಡಿದ ರೇಖೆಯನ್ನು ಹೆಚ್ಚು ಸಾಧನೆ ಮಾಡಿದ ರೇಖೆಯ ಮಟ್ಟಕ್ಕೆ ಹೆಚ್ಚಿಸುವುದು ಉತ್ತಮ. ಇದರಿಂದ ಧನಾತ್ಮಕವಾದ ಸಾಧನೆ ಆಗಲು ಸಾಧ್ಯವಾಗುತ್ತದೆ. ಆದ್ದರಿಂದ ಇತರರ ಸಾಧನೆಯನ್ನು ಕಂಡು ಅಯ್ಯೋ ನನ್ನಿಂದ ಆಗಲಿಲ್ಲವಲ್ಲಾ ಎಂದು ಅಸೂಯೆ ಪಡುವ ಬದಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ವಿಭಿನ್ನ ಕಾರ್ಯತಂತ್ರದ ಮೂಲಕ ಸ್ವ ಸಾಧನೆಯ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು.

– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

