“ವ್ಯಂಗೋತ್ಸವ”- ಶ್ರೀನಿವಾಸ ಜಾಲವಾದಿ, ಸುರಪುರ
‘ಏನಲೇ ಬುಕಡ್ಯಾ ಎಲ್ಲಿ ಹೋಗಿದ್ದೆಲೆ? ಕಂಡೇ ಇಲ್ಲ?’ ಗುಡುಮ್ಯಾ ಕೇಳ್ದ
‘ಏ ನಾ ಸೀಟ ಹಿಡ್ಯಾಕ ಹೋಗಿದ್ನs…. ಹಿಂಗಾಗಿ ಕಂಡಿಲ್ಲ’ ಎಂದ ಬುಕುಡ್ಯಾ
‘ಯಾವ ಸೀಟಪಾ? ಬಸ್ನಾಗ ಸೀಟ ಹಿಡ್ಯಾಕ ಹೋಗಿದ್ಯಾ?’ ವ್ಯಂಗವಾಗಿ ಕೇಳಿದ ಶೌರಿ
‘ಇಲ್ಲಾ ಇಮಾನದಾಗ ಹಿಡ್ಯಾಕ ಹೋಗಿದ್ನ್ಯಾ, ಮಗನ ಏನ ಮಾತಾಡ್ತಿರಲೇ? ಮನಸಿಗಿ ಬಂದದ್ದ ಆಡೂದೇನು ಹಂಗs?’ ಎಂದು ಸಿಡುಕಿದ ಬುಕಡ್ಯಾ
‘ ಏ ತಮ್ಮಾ, ಯಾಕ ಸಿಟ್ಟಿಗೇರ್ತಿ? ಎಲ್ಲಿ ಹೋಗಿದ್ದಿ ಹೇಳು ಸರಿಯಾಗಿ’ ಅಂತ ಕಾಕಾ ಕೇಳಿದ
‘ಅದೇ ಕಾಕಾ, ಈಗ ಇಲೆಕ್ಷನ್ ಡಿಕ್ಲೇರ ಆಗ್ಯಾವಲಾ, ಅದ್ಕ ಸೀಟ ಹಿಡ್ಯಾಕ ಹೋಗಿದ್ನ್ಯಾ, ಅದೇ ಕೋಲಾರದ್ದು’ ಅಂದ ಬುಕಡ್ಯಾ
‘ಕೋಲಾರದಾಗ ಜಂಗಿ ನಿಕಾಲಿ ಕುಸ್ತಿ ನಡಿದಿತ್ತs, ಎಲ್ಲಾರೂ ರಾಜಿನಾಮೆ ಪತ್ರ ಕಿಸೆದಾಗ ಇಟ್ಗೊಂಡೆ ಅಡ್ಡಾಡಕತ್ತಿದ್ರು, ಅಂಥಾದ್ರಾಗ ನೀ ಯಾವ ಪುಟಗೋಸಿಯಪಾ ಸೀಟ ಹೊಡ್ಕೊಂಡು ಬರಾಂವಾ?’ ಎಂದು ನಕ್ಕ ಗುಂಡ್ಯಾ
‘ಹೌಂದಪಾ, ಅಲ್ಲಿ ಮುನಿ,ರಮೇಶ ನಡಕ ಯಾವಾಗ್ಲೂ ಫೈಟ್! ಅದ್ಕs ನಂಗೇ ಚಾನ್ಸ ಇತ್ತ ಅಲ್ಲಿ’ ಎಂದ ಬುಕಡ್ಯಾ
‘ಏನಲೇ ಇಂವಾ ಅದೇನ ಮುನ್ಸಿಪಾಲ್ಟಿ ಇಲೆಕ್ಷನಂತ ತಿಳದಾನೇನ? ಎಂದ ರಬಡ್ಯಾ
‘ಅಲ್ಲಪಾ ನಿನ್ನ ಕಡಿ ನಿಂಗs ಚಾ ಕುಡ್ಯಾಕ ರೊಕ್ಕ ಇಲ್ಲ, ನಿಂಗೇನ ಸೀಟಪಾ ಅಲ್ಲಿ?’ ಎಂದಳು ರಾಣಿ
‘ಏ ಹಂಗ ಐತಿ ಅಲ್ಲಿ, ನ್ಯೂಟ್ರಲ್ ಕ್ಯಾಂಡಿಡೇಟ್ ಹುಡಕಕತ್ತಾರಂತ ಸುದ್ಧಿ ಟಿವ್ಯಾಗ ನೋಡಿನೇ ನಾ ಹೋಗಿದ್ನಿ ಅಲ್ಲಿ’ ಎಂದ ಬುಕಡ್ಯಾ
‘ ಏನ ಅಲ್ಲೇಪಾಕ ಮಾರಾಕ ಹೋಗಿದ್ದೇನಲ್ಲಿ? ಅಲ್ಲಿ ಕೋಟಿ ಕುಳಗಳು ಒದ್ದಾಡಕತ್ತಿದ್ರು ಟಿಕೇಟ್ ಸಲಾಗಿ, ನೀ ಬ್ಯಾರೇ ಅಡ್ಡ ಬಂದೇನ ಮಂಗ್ಯಾನಗತ್ಲೆ?’ ಎಂದ ಗುಡುಮ್ಯಾ
‘ಏ ಖರೇನೇ ನಂಗ ಅಲ್ಲಿ ಸೀಟಿನ ಯವಸ್ಥಾ ಆಗಿತ್ತು, ಅಷ್ಟೊತ್ತಿಗಿ ಈ ಬಾಗಲಕೋಟಿ ಗದ್ಲ ಎತ್ತು ನೋಡು’ ಅಂದ ಬುಕುಡ್ಯಾ
‘ಏ ಹೋಗ್ಲಿ ಬಿಡ್ರಪಾ ಅಂವಂದೇನ ಹಚ್ಚಿರಿ, ಈ ಮರಿ ಬಂಡೆ ಮತ್ತ ಹೃದಯೇಶ್ವರನ ಕಾಳಗ ರೋಚಕ ಐತಿ ನೋಡ್ರಿ’ ಎಂದಳು ರಾಶಿ
‘ಏ ಅಲ್ಲಿ ಜಂಗಿ ನಿಕಾಲಿ ಕುಸ್ತಿ ಐತಿ, ಹಂಗೇ ಬಳ್ಳಾರಿ ಗಣಿ ಧಣಿ, ‘ತವರಿಗೆ ಬಾ ತಂಗಿ ‘ಅಂತ ಮತ್ತ ಹೊಳ್ಳಿ ಬಂದಾನು’ ಎಂದ ಶೌರಿ
‘ರಾಜ್ಯಸಭಾ ಎಲೇಕ್ಷನ್ಕ ‘ಕೈ’ಯಪ್ಪಾ, ಈಗ ಕಮಲೇಶ್ವರ ಸುಪ್ರಭಾತ! ಹಂಗೈತಿ ಜನ್ನಿ ಕತಿ’ ಅಂದ ಟುಮ್ಯಾ
‘ ಎಲ್ಲಾ ‘ಶ್ಯಾಣ್ಯಾ’ನ ಮಹಿಮಾ, ಅಂವಾ ಇವಗs ಏನ ‘ಗ್ಯಾರಂಟಿ’ ಕೊಟ್ಟಾನೇನ ಯಾರಿಗಿ ಗೊತ್ತ?’ ಅಂದ ರಬಡ್ಯಾ
‘ಏ ನಿಮ್ಮು ಬ್ಯಾರೇ ಗ್ಯಾರಂಟಿ ಇದ್ರs, ನಮ್ಗ ನಮ್ಮ ‘ನಮೋ’ನೇ ದೊಡ್ಡ ಗ್ಯಾರಂಟಿ ಅಂತ ಅನಾಕತ್ತಾರು ಆ ಮೂಲಿಮನಿ ಕಮಲಕ್ಕನ ಮನ್ಯಾಗ’ ಅಂದಳು ರಾಶಿ
‘ಎಲ್ಲಾರೂ ಕ್ಯಾಂಡಿಡೇಟ ಹಾಕೂದ್ರಾಗೇ ಹೈರಾಣ ಆಗ್ಯಾರು’ ಎಂದ ಕಾಕಾ
‘ಎಲ್ಲಿ ನೋಡಿದಲ್ಲಿ ಭಿನ್ನಮತ, ಗೋಬ್ಯಾಕ…….ಅಂತ ಶುರು ಆಗಿತ್ತು ನೋಡು’ ಎಂದ ಶೌರಿ
‘ಕುಂದಾ ನಗರದಾಗ ಷಟರ್ ಎತ್ಯಾರು, ಚಿಕ್ಕ ಓಡಿಯಾಗ ಚಿಕ್ಕ ಹುಡುಗಿ ಪ್ರಚಾರ ಶುರು ಮಾಡೈತಿ, ಬಾಗಿಲು ತೆಗೆದು ಕೋಟೆ ಹೊಕ್ಕೊಂಡಾಳು ಸಹಕಾರಿ ಪುತ್ರಿ ‘ ಎಂದಳು ರಾಣಿ
‘ಬೆಣ್ಣಿನಗರಿಯ ಶ್ಯಾಮನ ಊರಿನ ಸಾವ್ಕಾರ ‘ಗಾಯತ್ರಿ’ ಮಂತ್ರ ಹೇಳಿ, ಹೆಂಗಸೂರು ಅಡಗಿ ಮನ್ಯಾಗೇ ಇರಬೇಕು ಅಂತ ಅಂದಾನು’ ಅಂದ ಬುಕಡ್ಯಾ
‘ಏ ಆ ಮುತ್ಯಾ ಹೆಣ್ಮಕ್ಕಳಂದ್ರ ಏನಂತ ತಿಳಿದಾನು’? ಅಂತ
ರಾಣಿ ಒಮ್ಮೆಲೆ ರಾಂಗ್ ಆದಳು
‘ಏ ಹೆಣ್ಮಕ್ಳು ಭಾರಿ ಸ್ಟ್ರಾಂಗ್ ಗುರು, ಮೊನ್ನೆ ಆ ಜೇವರ್ಗಿಯ ಕೊಳಕೂರ ಕುವರಿ ಶ್ರೇಯಾಂಕ ಪಾಟೀಲ ಹ್ಯಾಂಗ ಆಡ್ಯಾಳು ಗೊತೈತಿಲ್ಲ?’ ಎಂದು ಮೆಚ್ಚುಗೆಯಿಂದ ಹೇಳಿದ ಕಾಕಾ
‘ಏ ಹೌಂದು ನಾಕ ವಿಕೆಟ್ ತಗೊಂಡು ಕ್ರಿಕೇಟ್ಕ ಘನತೆ ತಂದ ಕೊಟ್ಟಾಳು’ ಎಂದ ಟುಮ್ಯಾ
‘ಶಿಮೊಗ್ಗ ಏನ ಅಂತೇತಿ? ಸಿಟ್ಟೂರಿ ಮಗ ಮತ್ತ ‘ಬಂ’ಪುತ್ರಿ
ಪರಸ್ಪರ ಪಾಶುಪತಾಸ್ತ್ರ ಹೂಡ್ಯಾರಂತ?’ ಕೇಳಿದ ಬುಕುಡ್ಯಾ
‘ನಡಬರಕ ಈಸ್ಪೂರಿ ಲಡೆಂಗೆ ಹಮ್ ಇದರ್ ಅಂತ ಶುರು ಹಚ್ಚಿದ್ದ ಗಾನಾ ಇನ್ನಾ ಮುಗ್ಯಾವಲ್ತು ನೋಡು’ ಅಂದಳು ರಾಣಿ
‘ಏ ಅದು ಹಂಗ ಸರಳ ಮುಗ್ಯಾಕ ಸಾಧ್ಯ ಇಲ್ಲ ಬಿಡು, ಸಿಟ್ಟೂರಿ ಜೇಷ್ಠಮರಿನ್ನ ಮಲಗಿಸೇ ಮನಿಗ ಹೊಕ್ಕಿನಿ ಅಂತ ಅಂದಾನು ಈಸ್ಪೂರಿ’ ಎಂದ ಟುಮ್ಯಾ
‘ಈಸ್ಪೂರಿನ್ನ ಶ್ಯಾಣ್ಯಾ ದಿಲ್ಲಿಗಿ ಬಾರಪಾ ಕುಂತು ಮಾತಾಡೂಮು ಅಂತ ಕರದಿದ್ನs, ಇಂವಾ ಇದ್ರs ಊರ ಮಂದಿ ಮುಂದ ಡಂಗರಾ ಹೊಡ್ಡು ದಿಲ್ಲಿಗಿ ಹ್ವಾದ್ರs, ನೋ ಎಂಟ್ರಿ ಬೋರ್ಡ್ ಹಾಕಿ ಮಕ್ಕೊಂಡಿದ್ದ ಶ್ಯಾಣ್ಯಾ’ ಎಂದ ಬುಕುಡ್ಯಾ
‘ ಅದಕ್ಕs ಅಂಜಲಿಲ್ಲ ಅಳಿಕಲಿಲ್ಲ ನಮ್ಮ ಈಸ್ಪೂರಿ, ಮಳ್ಯಾಗ ತೋಸಿಕೊಂಡವಗ ಯಾತರ ಅಂಜಕಿ? ನನ್ಗ ಫೈಟ್ ಮಾಡಿ ಗೆದ್ದ ಬಾ, ಆ ಸಿಟ್ಟೂರಿ ಗ್ಯಾಂಗ್ ಅಡ್ಡಡ್ಡ ಮಲಿಗಿಸಿ ಬಾ ಅಂತ ಸೂಚನಾ ಕೊಟ್ಟತಿ ಟಕಳು ಆ್ಯಂಡ್ ಗ್ಯಾಂಗ್ ಅಂತ ಎಲ್ಲಾ ಚಾನೆಲ್ದವರಿಗಿ ಹೇಳೇ ಫ್ಲೈಟ್ ಹತ್ತಿದಾ ಈ ಅಂಜದ ಗಂಡು’ ಎಂದ ರಬಡ್ಯಾ
‘ಈ ಕಡಿ ಹಿಂಹುಲಿತ್ನಾಳ, ಆ ಕಡೆ ಅಂಜದ ಗಂಡು ಹೀಂಗ ಗುಮ್ಮಿದ್ರs…..ಎಲ್ಲಿ ಹೋಗಿ ಯಾ ಬಂಡೆಗೆ ತಲಿ ಬಡಕೊಬೇಕು ಸಿಟ್ಟೂರಿ?’ ಎಂದ ಟುಮ್ಯಾ
‘ಏ ಆ ಬಂಡೆ ಕನಕಪುರದ ಕಡೆ ಹೋಗೇತಿ, ಇಂವಗೆಲ್ಲಿ ಸಿಕ್ತೈತಿ ತಲಿಗೆ ಹೊಡ್ಕೊಳ್ಳಿಕಿ?’ ಎಂದಳು ರಾಶಿ
‘ಆ ಕಡಿ ಕುಮ್ಮಿ ಅಳು,ಈ ಕಡಿ ಕುಮ್ಮಿ ಪುತ್ರ ಆ್ಯಂಡ್ ಡಾಕ್ಟರ್ ಚಿಕ್ಕಬಳ್ಳಾಪುರ ಅಳು!………ಆಹಾಹಾ …. ಸೆಂಟಿಮೆಂಟ್ ಪಿಚ್ಚರ್’ ಅಂದಳು ರಾಣಿ
‘ ಎಲ್ಲಾ ಕಡಿ ಫೈಟಿಂಗ್ ಶುರು ಆಗೈತಿ, ಅಭಿ ಪಿಚ್ಚರ ಬಾಕಿ ಹೈ’ ಎಂದ ಬಾಶಾ
‘ಮಂಡ್ಯ ಗೌಡ್ತಿನ್ನ ಕುಮ್ಮಣ್ಣ ಭೆಟ್ಟ್ಯಾದ, ಗೌಡ್ತಿ ಕಮಲ ಮುಡಿದ್ಳು, ದರ್ಶನ ಬಂದ ಯಶ್ ಬರಲಿಲ್ಲ ಶೆಟಗೊಂಡಾನಲಾ” ಎಂದು ಕೇಳಿದ ಬುಕಡ್ಯಾ
‘ಯಾರಿಗಿ ಯಾರೋ ಮೈಲಾರಲಿಂಗಾ ಹಂಗs ಆಗೇತಿಲ್ಲಿ’ ಅಂದಳು ರಾಶಿ
‘ಸಬ್ ಕೋ ಸನ್ಮತಿ ದೇ ಭಗವಾನ್’ ಅಂತ ಕಾಕಾ ಅಂದ
‘ಕೇಜ್ರಿನ್ನ ಜೇಲಿಗಿ ಹಾಕ್ಯಾರಂತಲಾ ದಿಲ್ಯಾಗ’ ಅಂತ ಕೇಳ್ದ
ಕಾಳ್ಯಾ
‘ಹಗರಣಗಳ ದುಡ್ಡು ಒಯ್ದು ಬಡವರಗಿ ಹಾಕ್ಕಿನಿ ಅಂದಾನು ನಮೋ’ ಅಂತ ಹೇಳಿದ ರಬಡ್ಯಾ
‘ತಂಗಳಗಿಡಿ ಎಲ್ಲಾರ ಕಪಾಳಕ ಹೊಡಿರಿ ಅಂತ ಅಂದತಿ ಅಂತಲಾ ಹೌದ?’ ಕೇಳಿದ ಗುಡುಮ್ಯಾ
‘ಕನಕಗಿರಿಯ ಕಂದ ಎಲ್ಲಾರಿಗೂ ಕಪಾಳಕ್ಕ ಬಾರಿಸಿರಿ ಅನ್ನೂದನ್ನ ದೊಡ್ಡ ಡೈಲಾಗ್ ಮಾಡ್ಕಂಡರಂತ’ ಅಂದ ಗುಂಡ್ಯಾ
‘ಕರಿಮಣಿ ಮಾಲಿಕ ನೀನಲ್ಲಾ ನೀನಲ್ಲಾ ಅಂತ ರೇಣು ಹಾಡಕತ್ತಾನ ಹರ ಹರಾ ಶ್ರೀಸಿದ್ಧೇಶ್ವರಾ’ ಅಂತ ಹೇಳಿ ನಕ್ಕ
ಬುಕಡ್ಯಾ
‘ರೇಣು ಆ್ಯಂಡ್ ಕಂಪನಿಗಿ ಮಸ್ತ ಆಪರೇಶನ್ ಮಾಡಿ ಹೋಗ್ಯಾನ ಶ್ಯಾಣ್ಯಾ ಬೆಂಗಳೂರಿಗಿ ಬಂದು’ ಎಂದು ನಕ್ಕ ಟುಮ್ಯಾ
‘ಯಾರರೇ ಏನ್ಯಾಕ ಅನ್ಲಿ ಮಿಸ್ಸಳಬಾಜಿಗಳಾ, ಈಗ ಸೀಟಿನ ಮಾಲಕ ಬುಕಡ್ಯಾ ಎಲ್ಲಾರಿಗೂ ಚಾ ಕುಡಸ್ತಾನ ಎಲ್ಲಾರೂ ಬರ್ರಿ ಬರ್ರಿ’ ಅಂದ ಗುಂಡ್ಯಾ
‘ನಂಗ ಸೀಟ ಸಿಕ್ಕಿತ್ತಂದ್ರs ಈಗಲೇ ಚಾ ಕುಡಸ್ತಿನಿ, ಇಲ್ಲಾಂದ್ರs ನೋ ‘ಅಂತಂದ ಬುಕಡ್ಯಾ
‘ನಡ್ರಿ ಎಲ್ಲಾರೂ ಸೇರಿ ಇವಗ ಸೀಟ ಕೊಡಸೂಣ ಬರ್ರಿ’ ಅಂದಳು ರಾಣಿ
‘ಯಾವ ಸೀಟು?’
‘ಅದೇ ಡಕ್ಕಂಪಲ್ಲಿ ಬಸ್….. ಡಕೋಟಾ ಎಕ್ಷಪ್ರೆಸ್ ಸೀಟು’
ಅಂತ ರಾಣಿ ನಕ್ಕಳು
‘ಬುಕುಡ್ಯಾ ಗಡಗಡ ನಡಗುತ್ತ ಹೋದ ಲಾಲೂನಗತ್ಲೆ’
– ಶ್ರೀನಿವಾಸ ಜಾಲವಾದಿ, ಸುರಪುರ

