ಬಸವನಬಾಗೇವಾಡಿ: ರಾಜ್ಯದಲ್ಲಿ ಕೆಲವು ಮಠಾಧೀಶರು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರಾಜ್ಯದ ಕೆಲವೇ ಮಠಾಧೀಶರು ಲಿಂಗಾಯತರ ಪರವಾಗಿ ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿರುವುದನ್ನು ನೋಡಿದ್ದೇವೆ. ಇತ್ತೀಚೆಗೆ ಮಠಾಧೀಶರು ಸಕ್ರಿಯವಾಗಿ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಬಸವನಬಾಗೇವಾಡಿ ತಾಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಕೀಯ ಪಕ್ಷಗಳ ಟಿಕೆಟ್ ಅನ್ನು ಕೊಡಿಸುವುದು ಸೇರಿದಂತೆ ಹಲವಾರು ವಿಷಯದಲ್ಲಿ ಮಠಾಧೀಶರರು ಮೂಗು ತೂರಿಸುವುದು ಸರಿಯಾದ ಕ್ರಮವಲ್ಲ. ಇದರಲ್ಲಿ ಕೆಲವು ಮಠಾಧೀಶರು ಸ್ವತಂತ್ರ ಲಿಂಗಾಯತ ಧರ್ಮವನ್ನು ವಿರೋಧಿಸುತ್ತಿದ್ದಾರೆ. ಕೆಲವು ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದಿದ್ದಾರೆ ಎನ್ನುವುದು ರಾಜ್ಯದ ಜನತೆ ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಮತದಾರರ ಹಕ್ಕು ಆಗಿರುತ್ತದೆ. ಲಿಂಗಾಯತ ಧರ್ಮಕ್ಕೆ ಯಾವುದೇ ಕೊಡುಗೆ ನೀಡದ ಮಠಾಧೀಶರು ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದಿಂಗಾಲೇಶ್ವರ ಸ್ವಾಮಿಗಳು ಚುನಾವಣೆಗೆ ನಿಲ್ಲಲು ಸ್ವತಂತ್ರರಾಗಿದ್ದಾರೆ. ಆದರೆ ಲಿಂಗಾಯತ ಧರ್ಮದ ಬಗ್ಗೆ ಒಂದು ಪೈಸೆ ಕೆಲಸ ಮಾಡದ ಅವರು ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಹಿಂದೊಮ್ಮೆ ಪ್ರಭಾವಿಯಾಗಿದ್ದ ಮಾತೆ ಮಹಾದೇವಿಯರು ಇದೇ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿಯನ್ನು ಕಳೆದುಕೊಂಡ ಉದಾಹರಣೆ ಇದೆ ಎನ್ನುವುದು ದಿಂಗಾಲೇಶ್ವರ ಸ್ವಾಮಿಗಳಿಗೆ ಗೊತ್ತಿರಬೇಕು. ದಯವಿಟ್ಟು ಲಿಂಗಾಯತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಬಾರದು. ಲಿಂಗಾಯತರು ಜಾಗೃತರು ಇದ್ದಾರೆ ಎನ್ನುವ ಸಾಮಾನ್ಯ ಜ್ಞಾನ ಸ್ವಾಮಿಗಳಿಗೆ ಇರಬೇಕೆಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

