ಅಫಜಲಪುರ: ರೈತರು, ಸಾರ್ವಜನಿಕರು ನೀರಿಗಾಗಿ ಕೊರೆಸುವ ಕೊಳವೆ ಬಾವಿಗಳು ನೀರಿಲ್ಲದಿದ್ದರೆ ಬಾಯಿ ತೆರೆದು ಬಿಡುವ ಬದಲಿಗೆ ಮುಚ್ಚುವ ಕೆಲಸಮಾಡಿ ಎಂದು ತಹಸೀಲ್ದಾರ ಸಂಜೀವಕುಮಾರ ದಾಸರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಬಾಬುರಾವ್ ಜ್ಯೋತಿ ಮನವಿ ಮಾಡಿದರು.
ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡುತ್ತಾ, ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಮಗು ಜೀವನ್ಮರಣ ಹೋರಾಟ ನಡೆಸಿ ಬದುಕಿ ಉಳಿದ ಘಟನೆ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಅಂತಹ ಘಟನೆ ಬೇರೆ ಎಲ್ಲೂ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಬರಗಾಲ ಆವರಿಸಿ ಎಲ್ಲಾ ಜಲಮೂಲಗಳು ಬತ್ತಿ ಹೋಗುತ್ತಿವೆ. ಅನೇಕ ರೈತರು, ಸಾರ್ವಜನಿಕರು ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದೀರಿ. ಜಲಮೂಲ ಲಭ್ಯವಾಗದಿದ್ದರೆ ಅವುಗಳನ್ನು ಕೂಡಲೇ ಮುಚ್ಚಿಸುವ ಕೆಲಸ ಮಾಡಿ. ಅನೇಕ ಕಡೆ ಹೀಗೆ ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳು ಜೀವ ಕಳೆದುಕೊಂಡಿರುವ ಸಾಕಷ್ಟು ಘಟನೆಗಳು ಇವೆ. ಆದ್ದರಿಂದ ಅಮೂಲ್ಯ ಜೀವಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಮಕ್ಕಳು, ಯಾವುದೇ ಪ್ರಾಣಿ ಪಕ್ಷಿಗಳು ತೆರೆದ ಕೊಳವೆ ಬಾವಿಗಳಲ್ಲಿ ಬಿದ್ದು ಜೀವ ಕಳೆದುಕೊಳ್ಳದಂತೆ ನೋಡಿಕೊಳ್ಳಲು ಎಲ್ಲಾ ಸಾರ್ವಜನಿಕರು ಜವಾಬ್ದಾರಿತನದಿಂದ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿ ಇಲ್ಲವಾದರೆ ಯಾವುದೇ ಸ್ಥಳದಲ್ಲಿ ತೆರೆದ ಕೊಳವೆ ಬಾವಿ ಕಂಡು ಬಂದರೆ ಹತ್ತಿರದ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡುವ ಕೆಲಸವಾದರೂ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

