ಇಂದು ವಿಶ್ವ ಆರೋಗ್ಯ ದಿನ
ಲೇಖನ: ಸಂತೋಷ ಎಸ್ ಬಂಡೆ,ಶಿಕ್ಷಕರು, ನಾಗಠಾಣ
ಆರೋಗ್ಯ ಒಂದಿದ್ದರೆ, ಸಕಲವು ನಮ್ಮ ಅಂಗೈಯಲ್ಲಿ ಇದ್ದ ಹಾಗೆ. ʼಆರೋಗ್ಯವೇ ಭಾಗ್ಯʼ ಈ ನುಡಿಮುತ್ತನ್ನು ನಾವು ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಜೀವನದ ಗುಣಮಟ್ಟವನ್ನು ಸುಧಾರಿಸಲು ಆರೋಗ್ಯ ಬಹಳ ಮುಖ್ಯ ಎಂದು ಈ ನುಡಿಮುತ್ತು ಒತ್ತಿಹೇಳುತ್ತದೆ. ಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಒಳಗೊಂಡಿರುತ್ತದೆ. ಆರೋಗ್ಯ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವೆಂದು ಆಚರಿಸುತ್ತದೆ.
ಆರೋಗ್ಯ ಮತ್ತು ಸ್ವಾಸ್ಥ್ಯದ ಅರಿವು ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸುವಂತೆ ಆಗಬೇಕು. ಜನಸಾಮಾನ್ಯರಿಗೆ ಆರೋಗ್ಯದ ಕಾಳಜಿ ತಿಳಿಹೇಳುವದು ಇಂದಿನ ಅಗತ್ಯವಾಗಿದೆ.
ಜನರು ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ಸಂರಕ್ಷಣೆ, ಪರಿಸರದ ಸ್ವಚ್ಛತೆಯಂತಹ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡಲಾಗುವುದು. ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ.
ಆರೋಗ್ಯಕರ ಜೀವನಕ್ಕಾಗಿ ಸಮತೋಲಿತ ಆಹಾರ ಅತ್ಯಗತ್ಯ. ಊಟವು ತರಕಾರಿಗಳು, ಧಾನ್ಯಗಳು, ಹಣ್ಣುಗಳು ಮತ್ತು ಪ್ರೋಟೀನ್ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಇತರ ಆಹಾರಗಳನ್ನು ಒಳಗೊಂಡಿರಬೇಕು.
ಪ್ರಪಂಚದಾದ್ಯಂತ ವೈದ್ಯರು ಮತ್ತು ಆರೋಗ್ಯ ತಜ್ಞರ ಪ್ರಕಾರ, ಹೃದ್ರೋಗ, ಸ್ಥೂಲಕಾಯತೆಯಂತಹ ಹಲವಾರು ಕಾಯಿಲೆಗಳಿಗೆ ನಿದ್ರೆಯ ಕೊರತೆಯು ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ, ದಿನಕ್ಕೆ ಕನಿಷ್ಠ 6-8 ಗಂಟೆಗಳ ಕಾಲ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಪ್ರಯತ್ನಿಸಬೇಕು.
ನಿಯಮಿತ ವ್ಯಾಯಾಮ, ಯೋಗ, ಧ್ಯಾನದ ಮೂಲಕಒತ್ತಡದ ಮಟ್ಟವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಮತ್ತು ಸಕ್ರಿಯವಾಗಿರಲು ವ್ಯಾಯಾಮವು ಅತ್ಯುತ್ತಮ ಮಾರ್ಗವಾಗಿದೆ. ಅದು ಓಟ, ಈಜು, ಯೋಗ, ನೃತ್ಯ, ಹೈಕಿಂಗ್ ಆಗಿರಬಹುದು. ಈ ವಿಶ್ವ ಆರೋಗ್ಯ ದಿನದಂದು, ನಿಮ್ಮ ದೈನಂದಿನ ದಿನಚರಿಗೆ ವ್ಯಾಯಾಮವನ್ನು ಸೇರಿಸಿ, ಮತ್ತು ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ನೀವು ವ್ಯತ್ಯಾಸವನ್ನು ಅನುಭವಿಸುವಿರಿ.
‘ಆರೋಗ್ಯ ನಿಜವಾದ ಸಂಪತ್ತೇ ಹೊರತು, ಚಿನ್ನ, ಬೆಳ್ಳಿಯ ತುಂಡುಗಳಲ್ಲ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
– ಸಂತೋಷ ಎಸ್ ಬಂಡೆ,
ಶಿಕ್ಷಕರು, ನಾಗಠಾಣ.

